Sunday, November 15, 2009

ಮಾಯಾಂಗನೆಯ ಸೆರಗು ಹಿಡಿದು

i am leaving the hell. that means benglore

ನಾನು ನರಕವನ್ನು ಬಿಡುತ್ತಿದ್ದೇನೆ. ಅಂದರೆ ಬೆಂಗಳೂರಿಂದ ಹೊರಗಡೆ ಹೋಗುತ್ತಿದ್ದೇನೆ. ಇದು ಟ್ವಿಟರ್‌ ಎನ್ನುವ ಅಂತರ್ಜಾಲ ತಾಣದಲ್ಲಿ ಕಂಡ ವಾಕ್ಯ.

ನಿಜ, ಬೆಂಗಳೂರು ಸ್ವರ್ಗ ಎಂದು ತಿಳಿದು ಬಂದ ಅದೆಷ್ಟೋ ಮಂದಿಗೆ ಹೀಗೆ ಅನ್ನಿಸುತ್ತಿದ್ದರೆ ಸುಳ್ಳಲ್ಲ. ದೇವಲೋಕದ ಸ್ವರ್ಗದ ಕಲ್ಪನೆಯಲ್ಲೇ ಬೆಂಗಳೂರನ್ನು ಗ್ರಹಿಸಿ ಬಂದವರ ಸಂಖ್ಯೆ ಅಧಿಕ. ನಾನು ನನ್ನಂಥ ಅನೇಕ ಮಂದಿ ಕೆಲಸವನ್ನು ಅರಸಿ ಇಲ್ಲಿಗೆ ಬರುವಾಗ ಹೊರಲಾದಷ್ಟು ಭಾರದ ಕನಸಿನ ಮೂಟೆ ಹೊತ್ತು ಕೊಂಡೇ ಬಂದೆವು. ಆ ಕನಸಿನ ಮೂಟೆಯ ಭಾರ ಮಾತ್ರ ಇನ್ನೂ ಕಡಿಮೆಯಾಗಲಿಲ್ಲ. ವಜ್ಜೆ ತಡೆದುಕೊಳ್ಳಲಿಕ್ಕೂ ಆಗುತ್ತಿಲ್ಲ.
ಬೆಂಗಳೂರು ಬದುಕುವುದನ್ನು ಕಲಿಸುತ್ತದೆ. ಸತ್ಯ, ಆದರೆ ಜೀವನ ಅನುಭವಿಸುವುದನ್ನು ಕಲಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.
ರಾಜಧಾನಿಗೆ ಬರುವ ಪೂರ್ವದ ಕತೆಗಳನ್ನು ಸ್ವಲ್ಪ ಹೇಳಬೇಕಾಗುತ್ತದೆ. ಪದವಿಯನ್ನು ಮುಗಿಸಿದ ಆ ದಿನಗಳಲ್ಲಿ ಬೆಂಗಳೂರು ಸೇರಿದ ಅನೇಕ ಮಂದಿ ಮಿತ್ರರು ಹೇಳುತ್ತಿದ್ದರು `ಇಲ್ಲಿಗೆ ಬಾರಯ್ಯ, ಸಕತ್ತಾಗಿದೆ. ಬ್ರಿಗೇಡ್‌, ಎಂ.ಜಿ. ರೋಡ್‌ ವೀಕೆಂಡ್‌ ಮಜಾ ಮಾಡಬಹುದು. ಬೇಸರ ಆದಾಗಲೆಲ್ಲ ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ಓಡಾಡಲಿಕ್ಕೆ ಆಗುತ್ತೆ. ತಿಂಗಳ ಕೊನೆಗೆ ಸಂಬಳ. ಹಣಕ್ಕಾಗಿ ಬೇರೆಯವರನ್ನು ಕೇಳುವ ಕೆಲಸವಿರಲ್ಲ, ಎಂಬೆಲ್ಲ ಕನಸನ್ನು ಕಟ್ಟಿದರು. ಯಾವುದೋ ಹಳ್ಳಿಯ ಮೂಲೆಯಲ್ಲಿರುವ ನಾನು, ನನ್ನಂತಹ ಅನೇಕ ಮಂದಿಗೆ ಮಿತ್ರರ ಮಾತು ವಜ್ರದ ಹರಳಿನಂತೆ ಹೊಳೆಯಿತು.
ಜಾಗರೂಕನಾಗಿರುವವ ಒಂದು ಕೆಲಸ ಹುಡುಕಿ ಇಲ್ಲಿಗೆ ಬರುತ್ತಾನೆ. ಬೆಂಗಳುರು ಆದಷ್ಟು ಬೇಗನೆ ಸೇರಬೇಕು ಎಂಬ ಉಮೇದಿ ಇರುವವನು ಬಂದು ಹುಡುಕಿದರಾಯಿತು ಎಂದು ಬಸ್‌ ಹತ್ತುತ್ತಾನೆ. ಇಲ್ಲಿಗೆ ಬಂದ ಮೇಲೆ ಮಾಯಾನಗರಿಯ ವಿಲಾಸ ತಿಳಿಯುತ್ತದೆ. ಮೆಜೆಸ್ಟಿಕ್‌ಗೆ ಬಂದು `ಗೆಳೆಯನೊಬ್ಬ ಇದ್ದಾನೆ, ಅವನಿಗೆ ಫೋನ್‌ ಮಾಡುವ ಎಂದು ಕೊಯ್ನ್‌ ಬಾಕ್ಸ್‌ಗೆ ಹೋಗಿ ಕಾಲ್‌ ಮಾಡಿದರೆ `ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಯನ್ನು ಸ್ವೀಕರಸುತ್ತಿಲ್ಲ' ಎಂಬ ಅಶರೀರ ವಾಣಿ ಕೇಳ ಬೇಕಾದ ಸ್ಥಿತಿಯೂ ಬರುತ್ತದೆ. ಒಮ್ಮೆ ಕರೆ ಸ್ವೀಕಾರ ಮಾಡಿದರೆ ನಾನು ಹೊಸ್ಕೆರೆಹಳ್ಳಿಯಲ್ಲಿರುವುದು. ಇಂತ ನಂಬರ್‌ ಬಸ್‌ ಹತ್ತಿ ಬಾ, ನಾನು ಅಲ್ಲಿ ನಿನ್ನ ಪಿಕ್‌ಅಪ್‌ ಮಾಡುತ್ತೇನೆ ಅನ್ನುತ್ತಾನೆ.
`ನಮ್ಮ ರಾಜ್ಯಧಾನಿ ಬೆಂಗಳೂರು' ಎಂದು ಪ್ರಾಥಮಿಕ ಶಾಲೆಯಲ್ಲಿ ಮೇಸ್ಟ್ರು ಹೇಳಿದನ್ನು ಕೇಳಿದ ಅನುಭವವಿರುವ ಹೊಸಮುಖ ಕಪ್ಪಿಡುತ್ತದೆ. ಯಾರ ಹತ್ತಿರವಾದರೂ ಕೇಳುವ ಎಂದರೆ ಅಲ್ಲಿರುವ ಎಲ್ಲರೂ ಗಡಬಿಡಿಯಲ್ಲಿ ಓಡಾಡುತ್ತಿರುತ್ತಾರೆ. ಆದರೂ ಕೇಳಿದ ಅಂತಿಟ್ಕೋಳಿ, ಅವರೆನೋ ಅನ್ನುತ್ತಾರೆ. ಇವನಿಗೆ ಎನೋ ಕೇಳುತ್ತದೆ. ಇದು ಬೆಂಗಳೂರಿಗೆ ಬಂದಾಗ ಆಗುವ ಮೊದಲ ಅನುಭವ.
ಆದರೂ ಬೆಂಗಳೂರು ಸುಂದರ. ನಂತರ ಜ್ಞಾನೋದಯವಾಗುತ್ತ ಹೋಗುತ್ತದೆ. ಬೆಂಗಳೂರು ಎಂದರೆ ರಭಸವಾಗಿ ಹರಿಯುವ ನೀರು. ಇಲ್ಲಿನ ಸುಳಿಯಲ್ಲಿ ಜೀವನ ಕೊಚ್ಚಿ ಹೋಗುತ್ತದೆ. ನಾವು ಎಲ್ಲಿದ್ದೇವೆ ಎಂದು ಯೋಚಿಸುವ ಹೊತ್ತಿಗೆ ಎಲ್ಲಿಗೆ ಹೋಗಿ ತಲುಪಿರುತ್ತೇವೆ. ಅಂದರೆ ಇಲ್ಲಿಗೆ ಬಂದ ವ್ಯಕ್ತಿ ಬೇಗನೆ ಹಣ ಸಮಪಾದನೆ ಮಾಡಬಹುದು, ಒಳ್ಳೆಯ ಹೆಸರನ್ನು ಗಳಿಸಬಹುದು, ಕೆಟ್ಟ ಕೆಲಸ ಮಾಡಿ ಕುಖ್ಯಾತಿಯನ್ನೂ ಗಳಿಸಬಹುದು. ಬೆಳವಣಿಗೆ, ಪತನ, ಸಂಪಾದನೆ ಎಲ್ಲವೂ ಇಲ್ಲಿ ಸಾಧ್ಯ. ನೆಮ್ಮದಿಯ ಜೀವನವೊಂದನ್ನು ಬಿಟ್ಟು.
`ನನಗೆ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಮನೆ ಇತ್ತು. ಅಲ್ಲಿ ಗಲಾಟೆ ಎಂದು ಕತ್ರಿಗುಪ್ಪೆಯಲ್ಲಿ ಮನೆ ಮಾಡಿದೆ. ಈಗ ಅಲ್ಲಿಯೂ ಗೌಜು ಅದಕ್ಕಾಗಿ ಇಲ್ಲಿ ಮನೆ ಮಾಡುತ್ತಿದ್ದೇವೆ ' ಎನ್ನುವ ಮಾತನ್ನು ಉತ್ತರಹಳ್ಳಿಯಲ್ಲಿ ಮನೆಕಟ್ಟುತ್ತಿರುವ ಒಬ್ಬರ ಮಾತು. ಇಲ್ಲೇ ಹುಟ್ಟಿ ಬೆಳದವರಿಗೆ ಇಲ್ಲಿನ ವಾತಾವರಣ `ಗಲಾಟೆ' ಎಂದಾಗ ಹಳ್ಳಿಯಲ್ಲಿ ಹುಟ್ಟಿ ಬೆಳೆದವರ ಕತೆ ಎನಾಗಬಹುದು? ಅದಕ್ಕೆ ಬೆಟ್ಟದಾ ಮೇಲೊಂದು ಮನೆಯ ಮಾಡಿ ವಚನವೇ ಸಾಂತ್ವಾನ ಹೇಳುತ್ತದೆ
ಇಲ್ಲಿನ ವಾತಾವರಣ ಕಲುಷಿತ ಗೊಳ್ಳುತ್ತಿದೆ. ಮೂರು ದಿನ ಕಣ್ಮುಚ್ಚಿ ಮಳೆಹೊಯ್ದರೆ ಮಹಾನಗರಿ ತತ್ತರಿಸುತ್ತದೆ. ತಾಪ ಹೆಚ್ಚಾಗ ತೊಡಗಿದೆ. ದೂಳು ಯಥೇಚ್ಚ. ಇದು ಪ್ರಾಕೃತಿಕ ತೊಂದರೆಯಾದರೆ, ಸಮಾಜದೊಡನೆ ಬದುಕುವ ಮನುಷ್ಯ ಮನುಷ್ಯನ ಸಂಬಂಧವೇ ಹಳಸುತ್ತಿದೆ. ಪಕ್ಕದ ಮನೆಯವರ ಪರಿಚಯ ಇಲ್ಲದ ಸ್ಥಿತಿ ಇದೆ. ಎಲ್ಲರಿಗೂ ಅವರರವರ ಕೆಲಸವೇ ಮುಖ್ಯವಾಗುತ್ತಿದೆ. ಸಾವಿರ ಸಾವಿರ ಮನೆಗಳ ಮಧ್ಯೆ ಒಂಟಿ ಮನೆ. ಲಕ್ಷಾಂತರ ಜನರಿದ್ದರು ಎಕಾಂಗಿ ಎನ್ನುವ ಸ್ಥಿತಿ ಇಲ್ಲಿದೆ.
ಒಂದು ಕಡೆಯಲ್ಲಿ ರಾಜಧಾನಿಗೆ ಸಹಸ್ರದ ಲೆಕ್ಕಾಚಾರದಲ್ಲಿ ಜನರು ಬರುತ್ತಿದ್ದರೆ, ಮತ್ತೊಂದೆಡೆ ಇಲ್ಲಿಂದ ಬೇರೆಡೆ ಹೋಗಬೇಕು ಎಂದು ದಿನವೂ ಯೋಚಿಸುತ್ತ ಇಲ್ಲೇ ಇದ್ದವರಿದ್ದಾರೆ. ಹೊಟ್ಟೆಪಾಡಿಗಾಗಿ ಬಂದು ಬೇರೆಡೆ ಹೋಗಲಾರದ ಸ್ಥಿತಿಯಲ್ಲಿರುವವರು ಇಲ್ಲಿನ ಬದಲಾವಣೆಗೆ ಒಳಗೊಳಗೆ ಬಯ್ದುಕೊಳ್ಳುತ್ತಾ ಇಲ್ಲೆ ಇರಬೇಕಾಗುತ್ತದೆ. ಅಂದರೆ ಸಾವಿರ ಲೆಕ್ಕದಲ್ಲಿ ಕನಸು ಕಂಡು ಇಲ್ಲಿಗೆ ಬಂದವರು ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಇರಬೇಕಾಗುತ್ತದೆ. ಅದೇ ಇಂಜನಿಯರಿಂಗ್‌ ಕಲಿತು ಬಂದವರು ಲಕ್ಷಾಂತರ ಗಳ ಕನಸು ಕಂಡು ಬಂದವರು ನಗರದ ಹೊರವಲಯದಲ್ಲಿ ಅಥವಾ ಯಾವುದಾದರೂ ಹಳ್ಳಿಯಲ್ಲಿ ಭೂಮಿ ಖರೀದಿಸಿ ತಂಪನೆ ಜೀವನ ಸಾಗಿಸಲಿಕ್ಕೆ ಹೊರಡುತ್ತಾರೆ. ಇನ್ನೂ ಕೆಲವರು ಹೇಳುತ್ತಾರೆ ` ಇನ್ನೊಂದು ನಾಲ್ಕು ವರ್ಷ ಎಲ್ಲಿಯಾದರೂ ಹಳ್ಳಿಯಲ್ಲಿ ಸ್ವಲ್ಪ ಜಮೀನು ತೆಗೆದುಕೊಂಡು ಆರಾಮ ಇದ್ದುಬಿಡ್ತೀನಿ' ಎಂದು.
ಶೇಕಡಾ 80ಕ್ಕೂ ಹೆಚ್ಚು ಜನರಿಗೆ ಅಲ್ಲದೆ ನಮ್ಮನೆ ಅವರೆಲ್ಲ ಇಲ್ಲಿರುವುದು ಸುಮ್ಮನೆ ಅಷ್ಟೇ. ಹೀಗಾಗಿ ಬೆಂಗಳೂರಿಂದ ಹೋಗುವವರು ಹೋಗುತ್ತಾರೆ. ಬರವವರು ಬರುತ್ತಾರೆ.

Wednesday, November 4, 2009

ವೈವಾ­ಹಿಕ ಅಂಕ­ಣವು.. ಅವಿ­ವಾ­ಹಿತ ಹುಡು­ಗರು

ನನಗೆ ಇತ್ತೀ­ಚೆಗೆ ವೈವಾ­ಹಿಕ ಅಂಕಣ ನೋಡು­ವುದು ಒಂದು ಹವ್ಯಾ­ಸ­ವಾ­ಗಿದೆ. ಅಲ್ಲಲ್ಲ ಚಟವೇ ಆಗಿದೆ. ನೀವು ಉಹಿ­ಸ­ಬ­ಹುದು ಇವ­ನೇನು ಮದುವೆ ಗಂಡೇ? ನಿಜ, ಮದುವೆ ಯಾಗುವ ಹೊಸ್ತಿ­ಲ­ಲ್ಲಿ­ರುವ ಹಲ­ವಾರು ಗಂಡು ಮಕ್ಕ­ಳಲ್ಲಿ ನಾನೂ ಒಬ್ಬ. ಮುಂಚೂ­ಣಿ­ಯಲ್ಲಿ ಇಲ್ಲ­ದಿ­ದ್ದರೂ, ಸರದಿ ಸಾಲಿ­ನಲ್ಲಿ ನಿಂತಿ­ದ್ದೇನೆ. ಆದರೆ ಹೆಣ್ಣು ಸಿಗು­ವು­ದೆಂ­ದರೆ ಮಾಯಾ­ಜಿಂಕೆ ಹಿಡಿದ ಹಾಗೆ ಎನ್ನು­ವುದು ಮದು­ವೆ­ಯಾ­ಗ­ಬೇ­ಕೆಂ­ದಿ­ರುವ ಬಹು­ತೇಕ ಗಂಡು ಮಕ್ಕಳ ಅನು­ಭವ.
ಹಿಂದೊಂದು ಕಾಲ ಇತ್ತಂತೆ, ಯಾವ ಗಂಡು ಎಷ್ಟು ಮನೆಯ ಸಿರಾ (ರವೆ­ಯಿಂದ ಮಾಡುವ ಸ್ವೀಟ್‌) ತಿನ್ನು­ತ್ತಾ­ನೆಂದು. ಒಂದು ಗಂಡಗೆ ಐವತ್ತು ಜಾತ­ಕ­ದ­ವ­ರೆಗೆ ಬರು­ತ್ತಿ­ತ್ತಂತೆ. ಅಶ್ವ­ಮೇಧ ಯಾಗದ ಕುದು­ರೆಯ ಬೆನ್ನು ಹತ್ತಿ ಹೊರಟ ಯೋಧ­ನಂತೆ ಒಂದು ದಿನಕ್ಕೆ ಹತ್ತು ಹೆಣ್ಣು ಮಕ್ಕ­ಳನ್ನು ನೋಡಿ, ಹತ್ತು ಮನೆಯ ಸಿರಾ ತಿಂದು ಬರು­ತ್ತಿ­ದ್ದ­ರಂತೆ. ಆದರೆ ಕಾಲ ಬದ­ಲಾ­ಗಿದೆ. ಎಷ್ಟೋ ಜನ ಗಂಡು ಮಕ್ಕಳು ಹೆಣ್ಣು ಸಿಗದೇ ಅನಿ­ವಾ­ರ್ಯದ ಬ್ರಹ್ಮ­ಚರ್ಯ ಪಾಲಿ­ಸಿ­ದ್ದಾರೆ. ಮದುವೆ ಎಂದರೆ ಆಸೆ­ಯಾ­ದರೂ ಬೆಚ್ಚಿ­ಬೀ­ಳುವ ಸ್ಥಿತಿಗೆ ತಲು­ಪಿ­ದ್ದಾರೆ.
ನಾನೂ ಇವರ ಸಾಲಿಗೆ ಸೇರು­ವುದು ಬೇಡ ಎಂದು ಎಲ್ಲಿ­ಯಾ­ದರೂ ನನಗೆ ಹೊಂದಾ­ಣಿ­ಕೆ­ಯಾ­ಗುವ ಅಲ್ಲಲ್ಲ ಯಾವು­ದಾ­ದರೂ ಹೆಣ್ಣಿಗೆ ನಾನು ಹೊಂದಾ­ಣಿಕೆ ಯಾಗ­ಬ­ಹು­ದೆಂದು ಪ್ರತಿ ಪತ್ರಿ­ಕೆಯ ವೈವಾ­ಹಿಕ ಅಂಕಣ ನೋಡು­ತ್ತೇನೆ. ನೋಡುತ್ತಾ ಇದ್ದೇನೆ. ನನ್ನಂತೆ ಬಹಳ ಹುಡು­ಗರು ವೈವಾ­ಹಿಕ ಅಂಕಣ ನೋಡು­ತ್ತಾಂತೆ. ಕೆಲಸ ಹುಡು­ಕುವ ಮಂದಿ ಕ್ಲಾಸಿ­ಫೈಡ್‌ ನೋಡಿ­ದಂತೆ.
ಅದ­ರಲ್ಲೂ ಹವ್ಯಕ ಹುಡು­ಗರು ಒಂದು ಪತ್ರಿ­ಕೆ­ಯನ್ನು ಬಿಡದೆ ವೈವಾ­ಹಿಕ ಅಂಕಣ ನೋಡು­ತ್ತಾ­ರಂತೆ. `ಹು' ಅಥವಾ `ಕೂ' ಎಂದರೆ ಹುಡುಗಿ/ ಕೂಸು ಎಂದು ನೇರ ಜಾತಕ ಕೇಳಿ, ವಿಳಾಸ ವಿಚಾ­ರಿ­ಸುವ ಹಪ­ಹ­ಪಿ­ಕೆಗೆ ಪಾಪ ಮಾಣಿ­ಗಳು ತಲು­ಪಿ­ದ್ದಾರೆ. ಅದಕ್ಕೆ ಕಾರ­ಣವೂ ಇದೆ. ಹವ್ಯ­ಕ­ರಲ್ಲಿ ಹೆಣ್ಣು ಮಕ್ಕಳ ತೀವ್ರ ಕೊರತೆ. ಮರು­ಭೂ­ಮಿ­ಯಲ್ಲಿ ನೀರಿನ ಕೊರತೆ ಇದ್ದಂತೆ. ಅದಕ್ಕೆ ಸಿಕ್ಕಿ­ದನ್ನು ಬಿಡ­ಬಾ­ರದು ಎಂಬ ದೂ(ದು)ರಾಲೋ­ಚನೆ.
ಹಾಗಂತ ಹೆಣ್ಣು ಮಕ್ಕಳು ಇಲ್ಲ ಎಂದಲ್ಲ. ಇದ್ದ ಹೆಣ್ಣು ಮಕ್ಕಳ ಕೊರ­ತೆಯ ಸೃಷ್ಠಿ­ಯಾ­ಗಿದೆ. ಅರ್ಥ­ಶಾ­ಸ್ತ್ರದ ಪ್ರಕಾರ ಡಿಮ್ಯಾಂಡ್‌ ಹೆಚ್ಚು ಮಾಡ­ಲಿಕ್ಕೆ ವಸ್ತು­ಗ­ಳನ್ನು ಉದ್ದೇಶ ಪೂರ್ವ­ಕ­ವಾಗಿ ತಡೆ ಹಿಡಿ­ಯು­ವಂತೆ ಹವ್ಯ­ಕ­ರಲ್ಲೂ ಉದ್ದೇಶ ಪೂರ್ವ­ಕ­ವಾಗಿ ಹೆಣ್ಣು ಮಕ್ಕಳ ಕೊರ­ತೆ­ಯಾ­ಗಿದೆ.
ಈಗ ವೈವಾ­ಹಿಕ ಅಂಕಣ ವಿಚಾ­ರಕ್ಕೆ ಬರುವ...
ಬಿ.ಇ ಓದಿ­ರುವ ಸುಸಂ­ಸ್ಕೃತ ಕನ್ಯೆಗೆ ಬಿ. ಇ, ಎಂಟೆಕ್‌ ಮಾಡಿ­ರುವ ಯೋಗ್ಯ ವರ ಬೇಕಾ­ಗಿ­ದ್ದಾರೆ. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ, ಕೈತುಂಬ ಸಂಬಳ, ವಯಸ್ಸು 28 ಮೀರಿ­ರ­ಬಾ­ರದು. ಆಸ­ಕ್ತರು 94482.... ಸಂಪ­ರ್ಕ­ಸ­ಬ­ಹುದು.
ಅಲ್ಲ ಕಣ್ರಿ, 28 ನೇ ವರ್ಷಕ್ಕೆ ಎಲ್ಲ­ವನ್ನು ಸಂಪಾ­ದನೆ ಮಾಡಿ­ರುವ ಯುವಕ ಬೇಕು ಎಂದರೆ ಹ್ಯಾಗೆ ಸಾಧ್ಯ. ಯುವ­ಕ­ರಿ­ರು­ವಾ­ಗಲೇ ಸುಖದ ಸುಪ್ಪ­ತ್ತಿ­ಗೆ­ಯ­ಲ್ಲಿ­ದ್ದರೆ ಜೀವನ ಎಂಬುದು ಅಂತ್ಯ ಅಲ್ವೇನ್ರಿ? ಇರಲಿ ಬಿಡಿ. ಇದ­ಕ್ಕಿಂತ ಮಜಾ­ವೆಂ­ದರೆ ಹಳ್ಳಿ­ಯಿಂದ ಬಂದ ಒಂದು ವೈವಾ­ಹಿಕ ಮಾಹಿತಿ...ಪಿಯು­ಸಿ­ಯನ್ನು ಮೊದಲ ದರ್ಜೆ­ಯಲ್ಲಿ ಪಾಸಾದ ಕನ್ಯೆಗೆ ಯೋಗ್ಯ ವರ­ಬೇ­ಕಾ­ಗಿ­ದ್ದಾರೆ. ಮುಂದೆ ಕಲಿ­ಯುವ ಆಸಕ್ತಿ ಹೊಂದಿ­ರುವ ಈ ಕನ್ಯೆ ಮುಂದೆ ಕಲಿ­ಸುವ ಮನ­ಸ್ಸು­ಳ್ಳ­ವರು ಬೇಕು. ವರ­ನಿಗೆ ಉತ್ತಮ ಆದಾ­ಯ­ವಿ­ರ­ಬೇಕು. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ.... ಹೀಗೆ ಸಾಗು­ತ್ತದೆ ಜಾಹೀ­ರಾತು. ಎಲ್ಲ ಹೆಣ್ಣು ಮಕ್ಕ­ಳಿಗೂ ಇಂತ­ಹದೇ ವರ ಬೇಕೆಂ­ದಾರೆ ನಮ್ಮಂ­ತ­ವರ ಕತೆ ಗೋವಿಂದಾ....ಗೋವಿಂದಾ.
ಇದು ಹೆಣ್ಣು­ಮ­ಕ್ಕಳ ಒತ್ತಾ­ಯ­ವಲ್ಲ. ಅವರ ಪಾಲ­ಕ­ರಿಗೆ ಬೆಂಗ­ಳೂ­ರಿನ ಹುಚ್ಚು ಹಿಡಿದು ಬಿಟ್ಟಿದೆ. ಎಂಬ ಮಾತು ಕೇಳಿ ಬರು­ತ್ತಿದೆ. ಅಲ್ರಿ ಎಲ್ಲರೂ ಬೆಂಗ­ಳೂರು, ವಿದೇಶ ಅಂತಿದ್ರೆ ಹಳ್ಳಿ­ಗಳು ಮುದು­ಕರ ಸಂತೆ­ಯಾ­ಗು­ವು­ದ­ರಲ್ಲಿ ಸಂದೇ­ಹ­ವಿಲ್ಲ. ಇದೇ ಜಾಹೀ­ರಾತು ನೀಡಿದ ಪಾಲ­ಕರು ಕೊನೆ­ಗಾ­ಲ­ದಲ್ಲಿ ಹತ್ತಿ­ರ­ದಲ್ಲಿ ಯಾರೂ ಇಲ್ಲದೇ ಅನಾ­ಥ­ರಾ­ಗು­ವು­ದ­ರಲ್ಲಿ ಸಂದೇ­ಹವೆ ಇಲ್ಲ.
ಗಂಡು ಮಕ್ಕಳೋ ಇದೆ ಅಪ್ಪ ಅಮ್ಮನ ಒತ್ತಾ­ಯಕ್ಕೆ ನಗರ ಸೇರಿ­ರು­ತ್ತಾರೆ. ಬೆಂಗ­ಳೂ­ರಿ­ನಲ್ಲಿ ಇರುವ ಕಾರ­ಣಕ್ಕೆ ಒಂದು ಮದು­ವೆ­ಯಾ­ದರೂ ಆಶ್ಚ­ರ್ಯ­ವಿಲ್ಲ. ಮದುವೆ ಆದ ಮೇಲೆ ಮನೆ ಕಡೆ ಮುಖ ಹಾಕುವ ಮನಸ್ಸು ಇಲ್ಲದೆ ಇಲ್ಲೆ ಸೆಟ್ಲಾಗಿ ಬಿಡು­ತ್ತಾರೆ. ಮದು­ವೆಯ ಕಷ್ಟ ಏನೆಲ್ಲಾ ಬಾನ­ಗಡಿ ಮಾಡು­ತ್ತದೆ. ಮುಂದೊಂದು ದಿನ `ನಮ್ಮ ಮನೆ' ಎಂಬುದು ಇಲ್ಲದೆ ಪರಿ­ತ­ಪಿಸ ಬೇಕಾ­ಬ­ಹುದು ಅನ್ನಿ­ಸು­ತ್ತಿದೆ.
ಇಲ್ಲಿ ಯಾರ ತಪ್ಪು ಎಂದು ಹೇಳ­ಲಿಕ್ಕೆ ಆಗು­ವು­ದಿಲ್ಲ. ತಮ್ಮ ಹೆಣ್ಣು ಮಕ್ಕಳು ಸುಖ­ವಾ­ಗಿ­ರಲಿ ಎಂಬುದು ಹೆಣ್ಣು ಮಕ್ಕಳ ತಂದೆ ತಾಯಿ­ಗಳ ಆಶ­ಯ­ವಾ­ದರೆ, ತಮ್ಮ ಗಂಡು ಮಕ್ಕ­ಳಿಗೆ ಮದು­ವೆ­ಯಾಗಿ ವಂಶ ವೃದ್ಧಿ­ಯಾ­ಗಲಿ ಎಂಬುದು ಗಂಡು ಮಕ್ಕಳ ತಂದೆ ತಾಯಿ­ಗಳ ಆಶಯ. ಅಪ್ಪ- ಅಮ್ಮಂ­ದಿರ ಆಶ­ಯಕ್ಕೆ ವಿರು­ದ್ಧ­ವಾ­ಗ­ಬಾ­ರ­ದೆಂದು ಸಹಿ­ಸು­ತ್ತಿ­ರುವ ಸ್ಥಿತಿ ಮಕ್ಕ­ಳ­ದಾ­ಗಿದೆ.

Thursday, October 15, 2009

ಬ್ಲಾಗ್ ಮಂದಿ ಬಾವಿಯೊಳಗಿನ ಕಪ್ಪೆ

blag ಬಗ್ಗೆ ನನ್ನ ಮಿತ್ರರೊಬ್ಬರು ಗಮ್ಮತ್ತಾಗಿ ಬೈದರು. ನನಗೆಂತು ಯದ್ವಾತದ್ವಾ ಖುಷಿಯಾಯಿತು. ಅವರು ಬೈದಿರುವ ವ್ಯಂಗ್ಯ ಮಾಡಿರುವುದನ್ನು ಹಾಗೇಯೆ ಬರೆದಿದ್ದೇನೆ. ಓದಿ ಮಜಾ ತೆಗೆದುಕೊಳ್ಳುವವರು ತೆಗೆದುಕೊಳ್ಳಬಹುದು. ಬಯ್ಯುವವರು ಬಯ್ಯಲು ಬಹುದು. ನಾನು ಅನ್ಕೋತಿನಿ ಕೆಲವರಾದರು ಇಲ್ಲಿರುವ ವಿಚಾರಗಳನ್ನು ಒಪ್ಪಿಕೊಳ್ಳಬಹುದು ಎಂದು.....



ಮೊನ್ನೆ ನನ್ನ ಪತ್ರಕರ್ತ ಮಿತ್ರರೊಬ್ಬರೊಂದಿಗೆ ಮಾತಾನುಡುತ್ತಾ ಇದ್ದೆ. ಮಿತ್ರಇರುವುದುತ್ತರ ಕರ್ನಾಟಕದಲ್ಲಿ . ನನಗೆ ನೆರೆಯ ಬಗ್ಗೆ ಮಾಹಿತಿ ಕೆಳಬೇಕಿತ್ತು. ಫೋನ್ ಮಾಡಿದ್ದೆ. ಮೊದಲು ನಮ್ಮ ಮಾತು ನೆರೆಯ ಬಗ್ಗೆ ಇತ್ತು. ಮಾತು ಹಾಗೇ ಸಾಗುತ್ತಾ ಬ್ಲಾಗ್ಗಳ ಬಗ್ಗೆ ಬಂತು. ಆಗ ನನ್ನ ಮಿತ್ರನ ಧಾಟಿ ವ್ಯಂಗ್ಯದ ಕಡೆ ತಿರುಗಿತು.
ಎನ್ರಪ್ಪಾ ನಿಮ್ಮ ಬ್ಲಾಗ್ ಲೋಕ ಹ್ಯಾಂಗಿದೆ ಎಂದ. ಏನೋಪ್ಪಾ ಏನೋ ನಡಿತಿದೆ ಮತ್ತು ಏನೀನೋ ನಡಿತಿದೆ ಎಂದೆ. ಅಲ್ರಪ್ಪಾ ಇಲ್ಲಿ ಈ ರೀತಿ ನೆರೆ ಬಂದು ಜನಗಳು ಗೋನ್ಯಾಗೆ ಒದ್ದಾಡತ್ತಾ ಇದಾರ. ಒಂದು ಬ್ಲಾಗ್ನರು ಬರ್ದೆ ಇಲ್ಲಾ. ಅದ್ಯಾರೋ ತನ್ನ ಬ್ಲಾಗ್ ನಿಲ್ಸಿದಕ್ಕೆ ಆಕಾಶನೇ ಕೆಳಕ್ಕ ಬಿತ್ತು ಅನ್ನಾಂಗ ಹೊಯ್ಯಕ್ಯಂಡ್ರಿ. ಅನ್ನ ನೀಡೋರು ನೆಲ ಕಚ್ಚಿ ಹೋದರೆ ಒಬ್ಬರು ಬರಯಾಂಗ್ ಇಲ್ಲ.
ನನಗೆ ನಿಮ್ಮ ಬ್ಲಾಗಿಗಳನ್ನು ನೋಡಿದರೆ ಬಾಳಾ ಹಾಸ್ಯ ಅನ್ಸುತ್ತೆ. ಪತ್ರಿಕೋದ್ಯಮದಲ್ಲಿ ಒಳ್ಳೆ ಹೆಸರು ಮಾಡಿರೋ ಮಿತ್ರರು ಯಾರ್ಯಾರೋ ಕಮೆಂಟ್ ಹಾಕಿದಕ್ಕೆ ಬೇಸರ ಮಾಡಿಕೊಂಡು ಬ್ಲಾಗ್ ನಿಲ್ಲಿಸಿದರು ಎಂದು ಮತ್ತೊಂದು ಬ್ಲಾಗನ್ಯಾಗ ಬರೆದ್ರು. ಅಪಾಪಾ...ಬ್ಲಾಗ್ ಓದುಗರು ಹೋಯ್ಯಕೊಂಡ್ರು. ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಬರೆದುಕೊಟ್ಟ ಹಾಗೇ ಆಡಿದ್ರಪ್ಪಾ. ಯಾವುದೋ ಹೆಣ್ಣ ಮಗಳು ಬಾಳಾ ಚೋಲೋ ಬರಿತಿದ್ಲಂತೆ. ನನ್ನ ಬೆಂಗಳೂರು ಇತರ ಮಿತ್ರರು ಅವಳನ್ನು ಪಂಚ ಪತಿವೃತೆಯರೊಂದಿಗೆ ಮತ್ತೊಂದು ಪತಿವೃತೆ ಎನ್ನುವ ರೀತಿ ಬಿಂಬಿಸಿದರು. ಅವರ ಸ್ಥಿತಿ ಹ್ಯಾಂಗ್ಯಾಗಿತಪ್ಪಾ ಅಂದರ `ಸ್ಮರೆ ನಿತ್ಯಂ ಷದ ಕನ್ಯಾ ಎನ್ನುವ ಸ್ತಿತಿಗೆ ತಲುಪಿದರು. ಕೊನೆ ಅವಳನ್ನು ದೊಪ್ಪೆಮದು ಕೆಳಕ್ಕೆ ಕೆಡಗಿ ಅವಳನ್ನು ಆರೆಸ್ಸೆಸ್ ಮುಖವಾಣಿ ಎಂಬತೆ ಬಿಂಬಿಸಿದರು, ನಂತರ ಅವಲನ್ನು ಏನೆಲ್ಲಾ ಮಾಡಿದ್ರಪಾ ಕೊಳಕು ಜನ.
ನಮ್ಮ ಕಡಿ ಈಗ ಹ್ಯಾಂಗಾಗೈತಿ ಅಂದ್ರ ನೆರೆ ಸಂತ್ರಸ್ತ ಆಹಾರಕ್ಕೆ ಯಾವ ರೀತಿ ಪರಿ ತಪಿಸುತ್ತಿದ್ದರೆ ಎಂದರೆ ಕರಳು ಚಿವ್ ಅಂತತ್ತೈ. ಈ ಬ್ಲಾಗ್ ಎನ್ನುವುದು ಬೆಂಗಳೂರಿಂದ ನೆಲಮಂಗಲ ದಾಟಾಂಗಿಲ್ಲ. ಯಾರೋ ಬ್ಲಾಗಿಗಳು ಅಂತಿದ್ರಪಾ. ನನ್ನ ಬ್ಲಾಗನ್ನು ಸಾವಿರ ಜನ ನೋಡಿದ್ರು. ಈ ಲೇಖನಕ್ಕೆ ನೂರು ಹಿಟ್ ಆಯಿತು ಅಂತಾರೆ. ಏನೋ ಕಾರ್ಗಿಲ್ ಯುದ್ಧ ಮಾಡಿದ ಯೋಧರ ಹಾಗೆ. ಒಂದು ಅನ್ಯಾವನೋ ಹೇಳಿದ `ದಿನ ಪತ್ರಕೆಯ ಸಾಪ್ತಾಹಿಕ ಎನ್ನುವುದು ಅಪ್ರಸ್ತುತ. ಈಗೆನೀದ್ರು ಬ್ಲಾಗ್ ಮಾತ್ರ' ಅಂತ. ಅಲ್ರಿ ನಮ್ಮ ಆಪೀಸನ್ಯಾಗ್ ಇಪ್ಪತ್ ಮಂದಿ ಇದಾರ ಅದ್ರಾಗ 15 ಮಂದಿಗೆ ಬ್ಲಾಗ್ ಅಂದ್ರನ ಗೊತ್ತಿಲ್ಲ. ನಮ್ಮ ಅಗದಿ ಬೆಸ್ಟ್ ರಿಪೋರ್ಟರ್ಂಗ ಸ್ವಂತ ಮೇಲ್ ಐಡಿ ಇಲ್ಲ. ಯಾರೋ ನಿಮ್ಮ ಮೇಲ್ ಐಡಿ ಕೊಡು ಅಂದ್ರ ಅದೇನೊ www. ....com ಬರಕೊಳ್ರಿ ಅಂದ ಬಂದಾನ. ಇಂತ ಮಕ್ಳ ಇರೋವಾಗ ಈ ಬ್ಲಾಗ್ ಯಾವಾಂಗ ಬೇಕ್ರಿ? ನಮ್ಮಲ್ಲಿ ಒಬ್ಬ ರೈತ ನ್ಯಾಚುರಲ್ ಯೂರ್ಯ ಗೊಬ್ಬರಾ ಮಾಡ್ತಾನ ಅವನ ಬಗ್ಗೆ ಬರ್ದಾಗ ನೂರಾರು ಫೋನ್ ಕಾಲ್ಸ್ ಬಂದಾವ. ಬಾಳಟ ಮಂದಿ ಬಂದ ಹೋಗ್ಯಾರ. ಅಂದ್ರ ನಾವ್ ಏನ್ ಹೇಳ್ಬೇಕಾತ್ರಿ. ನೂರ್ಯಾರ್ ಮಂದಿ ನಮ್ಮ ರೈತನ್ನ ಹಿಟ್ ಮಾಡ್ಯಾರ್ ಅನ್ಬೋಕಾತ.
ನೆರೆ ಸಂತ್ರಸ್ತರಿಗೆ ಈ ಬ್ಲಾಗ್ನ ಮಂದಿಏನ್ ಮಾಡ್ಯಾರ್ರಿ? ಒಟ್ಟು ನಂದ ಹಾಂಗ.. ಇವಂದ ಹಿಂಗ.. ನಮ್ಮ ಬ್ಲಾಗ್ ಅಂತವರು ಬಂದಾರ.. ಇವ್ನ ಬ್ಲಾಗ್ಗೆ ಇಂತವರು ಬಂದ್ಯಾರ್.. ಅಂವ ಚೆಡ್ಡಿ, ಇಂವ ಕಮ್ಯುನಿಸ್ಟ್, ಇಂವ ಜನಿವಾರ ಹಾಕ್ಯುಂಡೆ ಬರ್ಯಾಕ್ ಕುಂತಾನ. ಸೋನಿಯಾ ಗಾಂಧಿನ ಬಿಜೆಪಿ ಸೇರಿಸಿ, ಆಡ್ವಾಣಿನ ಸಿಪಿ ಎಂಗೆ ಸೇರಿಸೋ ಮಂದಿನೆ ಅಲ್ಲಿದಾರ.
ಹೊತ್ತೊಗದ ಮಂದಿ ಹಿಂಗ ಮಾಡ್ತಾರ್. ಅಲ್ಲಿ ಒಂದು ಸ್ವಸ್ತ ಸಮಾಜ ನಿರ್ಮಾಣ ಆಗಬೇಕು. ರಚನಾತ್ಮಕ ವಿಮರ್ಶೆ ಇರಬೇಕು. ಅದಬಿಟ್ಟು ಬ್ಯಾಡದೆ ಹೋದ ಮಾಡಿಕೊಳ್ತಾ. ಬಾವಿಯೊಳಗಿನ ಕಪ್ಪೆ ತರ ಆಡ್ತಾರ. ಎನ್ ಮಂದಿನಪಾ ಇವರು. ಎನ್ನುತ್ತಾ ಮಿತ್ರ ಮಾತಿಗೆ ವಿರಾಮ ನೀಡಿದ ನಾನು ಅಂದೇ ನನ್ನ ಬ್ಲಾಗಿಗೆ ಒಳ್ಳೆ ಬರವಣಿಗೆ ಆತು ನಿನ್ನ ಮಾತು ಅಂತ.


ಸಣ್ಣ ಮಾಹಿತಿ ಉಷೆ ಉದಯ ಬ್ಲಾಗಿನಲ್ಲಿ ನೆರೆಯ ಬಗ್ಗೆ ಬರೆದಿದ್ದಾರೆ ಬ್ಲಾಗಿಗಳು ಸಂತೋಷ ಪಡಬಹುದು

Saturday, September 19, 2009

“ಸಾಲ ’ದ ಕತೆ

ಬೆಂಗಳೂರಿನ ಜಂಜಾಟ, ಏಕಾಂಗಿತನ ಸಾಕಾಗಿ ಹೋಗಿತ್ತು. ಅಂಖಡ ಒಂದು ವಾರ ರಜೆ ಹಾಕಿ ಊರಿಗೆ ಹೋಗಿದ್ದೆ. ಶಿವಮೊಗ್ಗ ದಾಟುತ್ತಿದ0ತೆ ಮಳೆಗಾಲದ ಇಫೆಕ್ಟ್ ಪ್ರಾರಂಭವಾಗಿತ್ತು.ಊರಿಗೆ ಹೋಗಿ ಇಳಿದೆ. ಜಡಿ ಮಳೆಯಲ್ಲ ಜಬ್ಬರ್ ಮಳೆ ನನ್ನನ್ನು ಸ್ವಾಗತಿಸಿತು. ಮಳೆ ನಿಲ್ಲಬಹುದೆಂಬ ನಂಬಿಕೆ ಇತ್ತು.
ನನ್ನ ನಂಬಿಕೆ ನೂರಕ್ಕೆ ನೂರು ಸುಳ್ಳಾಯಿತು. ಎಡಬಿಡದೆ ಜಡಿಮಳೆ ಸುರಿಯುತ್ತಲೇ ಇತ್ತು. ಯಾವ ಕಾರಣಕ್ಕೂ ಮನೆಯಿಂದ ಹೊರಬರಲಾರದ ಸ್ಥಿತಿ. ಹೊತ್ತು ಕಳೆಯಬೇಕಲ್ಲ?! ಹೆಬ್ಬಾಗಿಲ ಬಾಂಕನ್ನು ಬಿಸಿ ಮಾಡುವ ಯೋಚನೆ ಮಾಡಿದೆ.
ಸಾಮಾನ್ಯವಾಗಿ ನಮ್ಮ ಮನೆಯ ಬಾಂಕಿನ ಮೇಲೆ ಒಂದು ಕಡೆ ಅಮ್ಮಮ್ಮ( ಅಜ್ಜಿ), ಮತ್ತೊಂದು ಕಡೆ ನನ್ನ ಅಪ್ಪ ಕುಳಿತುಕೊಳ್ಳುವುದು ರೂಢಿ. ಆದರೆ ಅಮ್ಮಮ್ಮನಿಗೆ ಚಿಕೂನ್ ಗುನ್ಯ ಅಟಕಾಯಿಸಿಕೊಂಡಿತ್ತು. ಅದಕ್ಕಾಗಿ ಬಾಂಕೆ ಅಪ್ಪನೊಬ್ಬನೇ ವಾರಸುದಾರನಾಗಿದ್ದ. ನಾನು ಅಮ್ಮಮ್ಮನ ಜಾಗವನ್ನು ಆಕ್ರಮಿಸಿಕೊಂಡು ಅಪ್ಪನ ಜೊತೆ ಹರಟೆ ಹೊಡೆಯಲು ಕುಳಿತೆ. ನನ್ನ ಅಪ್ಪನ ಮಧ್ಯೆ ಎಲೆಅಡಿಕೆ ತಬಕು ಸ್ಥಾನ ಪಡೆದಿತ್ತು.
ನನ್ನ ಬೆಂಗಳೂರು ಜೀವನದ ಕಥೆಯನ್ನು ಹೇಳಲಿಕ್ಕೆ ಪ್ರಾರಂಭಿಸಿದೆ. ಯಾಕೋ ಅಪ್ಪನಿಗೆ ಇಷ್ಟವಾಗಲಿಲ್ಲ. ನನು ಬಿಡಬೇಕಲ್ಲ?`ಮೊದಲೇ ಆರಿಂಚಿನ ಮೊಳೆ ನಾನು' ಹೊಡೆಯದೇ ಬಿಟ್ಟೆನೆ? `ಅಪ್ಪ ಏನೇ ಹೇಳು, ಈ ಪೇಪರ್ ಕೆಲ್ಸಾ ಮಾತ್ರ ಬಾಳಾ ಗಮ್ಮತ್ತು ಇರ್ತು' ಎಂದು ಇಲ್ಲಿನ ಕೆಲವು ಪೋಲಿ ಜೋಕುಗಳನ್ನು ಹೇಳಿದೆ. ಆದರೆ ಅಪ್ಪ ನಗೆಯಾಡಲಿಲ್ಲ. ಹತ್ತಿರ ಹೋಗಿ ಕುಳಿತೆ. `ಎಂತಾ ಯೋಚನೆ ಮಾಡ್ತಾ ಇದ್ದೆ ಅಪ್ಪ' ಎಂದೆ.
ಅವನು ಖಿನ್ನ¬ನಾಗಿ ` ಆ ಇಂವ ಆತ್ಮಹತ್ಯೆ ಮಾಡ್ಕ್ಯ ಬಿಡ್ನಲಾ' ಎಂದ ನನಗೆ ಯಾರು ಎಂದು ಗೊತ್ತಾಗಲಿಲ್ಲ. `ಯಾರು' ಎಂದೆ. `ಅವ್ನೆ.. ಗಮಿನಗುಡ್ಡದಂವ', `ಓ.. ಸರಿ ಸರಿ ನಾನು ಸುದ್ದಿ ನೋಡಿದ್ದಿ. ನಂಗವು ಮೊದಲನೇ ಪುಟಕ್ಕೆ ಸುದ್ದಿ ಹಾಕಿದ್ಯ' ಎಂದೇ. ` ಹೌದಾ!.. ಆದ್ರೆ ಸಾಯಕಾಯಿತ್ತಿಲೆ, ಐದು ಲಕ್ಷ ಲೋನ್ಗೆ ಹೆದರಿ ಸತ್ತರೆ ಹೆಂಡತಿ ಮಕ್ಕಳ ಗತಿ ಎಂತು?. ಮತ್ತೊಂದು ಈ ಬಾರಿ ಇಂವ ಸ್ಯಾಂಪಲ್, ಮುಂದಿನ ವರ್ಷ ಅಡಿಕೆ ಸ್ಥಿತಿ ಹಿಂಗೆ ಇದ್ರೆ ಸುಮಾರಷ್ಟು ಜನ ಆತ್ಮಹತ್ಯೆ ಮಾಡಿಕೊಂಬದ್ರಲ್ಲಿ ಅನುಮಾನವೇ ಇಲ್ಲೆ' ಎಂದು
ಅಪ್ಪನ ಮಾತು ನನಗೆ ಹೊಟ್ಟೆಯಲ್ಲಿ ಬೆಂಕಿಯನ್ನು ಇಟ್ಟ ಹಾಗೇ ಆಯಿತು. `ಷೇ... ಅನ್ನದಾತನ ಸ್ಥಿತಿಯೇ ಹಿಂಗಾದ್ರೆ ದೇಶದ ಕತೆ ಎಂ. ಐಟಿ ಉದ್ಯಮ ಬೆಳೆದರೆ ಹೊಟ್ಟೆ ತುಂಬ್ತ.. ಸ್ಥಿತಿವಂತರು ಎಂದುಕೊಳ್ಳುವ ಅಡಿಕೆ ಬೆಳೆಗಾರರೇ ಸತ್ತರೆ, ಇನ್ನೂ ಭತ್ತ, ರಾಗಿ, ಬೆಳೆಯುವವರ ಕತೆ ಎನಾಗಬಹುದು.. ಹೀಗೆ ನಮ್ಮ ಕತೆ ಸಾಗಿತ್ತು. ಅಷ್ಟೋತ್ತಿಗೆ ಬಕ್ಕೇಮನೆ ಮಧಣ್ಣ ಬಂದ. ಅವನು ಬಂದರೆ ಒಂದಷ್ಟು ಗಮ್ಮತ್ತು ನಿಕ್ಕಿ.
ಮಧಣ್ಣನಿಗೆ 38 ವರ್ಷ ಆಗಿರಬಹುದು. ಆದರೆ ಕತೆ ಹೇಳು ಸ್ಟೈಲು 60 ಪ್ರಾಯದವರ ತರಹ. ತುಂಬಾ ವಿಡಂಭಣೆ ಇರುತ್ತದೆ. ಇರಲಿ, ಬಂದವರಿಗೆ ಆಸ್ರಿಗೆ (ಉಪಚಾರ) ಕೇಳುವ ಪದ್ಧತಿ ಬಿಡಲಿಕ್ಕೆ ಆಗುತ್ಯೆ? `ಚಹಾನೆ' ಈ ಸಮಯಕ್ಕೆ ಬೆಚ್ಚಗೆ. ಮಳೆ ಬೇರೆ ಬರುತ್ತಿದೆ ಎಂದು ತಿರ್ಮಾನಿಸಿ ಚಹಾನೆ ಓಕೆ ಎಂದಾಯಿತು. ಚಹಾ ಸೇವನೆ ಮಾಡುತ್ತಾ ಮಧಣ್ಣ ` ನೆಂಟರ ಮನೆಗೆ ಹೋದಲ್ಲಿ ಈ ಬಾಯಾರಿಕೆ ಕೇಳುವ ಪದ್ಧತಿ ಏಷ್ಟು ಉತ್ತಮವಾದದ್ದು. ಅಲ್ಲಾ ಅವರು ಕೇಳುವುದುದ ಪದ್ದತಿ. ಬೇಡ ಬೇಡ ಎನ್ನುವುದು ಸೌಜನ್ಯ. ಆಸ್ರಿಗೆ ಕೊಟ್ಟ ಮೇಲೆ ಕುಡಿಯುವುದು ಕರ್ತವ್ಯ' ಎನ್ನುವ ಮಾತಿನೊ0ದಿಗೆ ಕತಾಪೂರ್ವ ಪಿಠೀಕೆ ಹಾಕಿದ. ಹಾಗೇ ಕತೆ ಹೇಳುತ್ತಾ.. ಹೇಳುತ್ತಾ..`ಅಚ್ಚಣ್ಣ' ಎನ್ನುವ ಹಿರಿ¬ಯನ ಕತೆ ಪ್ರಾರಂಭವಾಯಿತು.
ಈ ಅಚ್ಚಣ್ಣ ಹಾಲ್ಕಣಿಯವನು. ತುಂಬಾ ಒಳ್ಳೆಯವ ಮತ್ತು ಅಷ್ಟೇ ಜಿಪುಣ. ಇವನ ಜಿಪುಣತನಕ್ಕೆ ಒಂದು ಉದಾಹರಣೆ ಎಂದರೆ `ಇವನು ಪ್ಲಾಸ್ಟಿಕ್ ಪಾದರಕ್ಷೆ ಹಾಕುತ್ತಿದ್ದರಂತೆ. ಎರಡನೇ ವರ್ಷಕ್ಕೆ ಇದು ನಾರಿನ ಪಾದರಕ್ಷೆಯಾಗಿರುತ್ತಿತ್ತಂತೆ. ಅದೇ ಚಪ್ಪಲಿ ಹರಿದ ಹಾಗೆ ಹೊಲಿಗೆ ಹಾಕಿ ಹಾಕಿ ಮೂರ್ನಾಲ್ಕು ವರ್ಷ ಅದೇ ಚಪ್ಪಲಿ ಬಳಸಿತ್ತಿದ್ದರಂತೆ. ಇನ್ನೂ ಇವರು ಉಟ್ಟುಕೊಳ್ಳುವ ಪಾಣಿ ಪಂಜೆ ಬಿಳಿಯ ಬಣ್ಣದ ಬದಲು ಕಪ್ಪು ಬಣ್ಣದಾಗಿರುತ್ತಂತೆ. ಇಂತಿಪ್ಪ ಅಚ್ಚಣ್ಣ ತುಂಬಾ ಹಣವನ್ನು ಕೂಡಿ ಹಾಕಿಟ್ಟಿದ್ದನಂತೆ. ಈ ಹಣವನ್ನೆಲ್ಲ ಹಿಂದುರಿಗಿಸದ ವ್ಯಕ್ತಿಳಿಗೆ ಬಡ್ಡಿಗೆ ನೀಡಿ ದಿವಾಳಿಯಾದನಂತೆ. ಒಳ್ಳೆಯವರಿಗೆ ಎಂದೂ ಹಣ ನೀಡಿ ಗೊತ್ತಿರಲಿಲ್ವಂತೆ. ದೊಡ್ಡ ಮನೆ ಇದ್ದದ್ದು ಹಿಸ್ಸೆ ಆಗಿ ನಾಲ್ಕು ಮನೆಯಾಯ್ತಂತೆ.
ಇವನ ಕತೆ ಹೇಳಿ ಮುಗಿಸುವವರೆಗೆ ಬಾವಯ್ಯ ಬಂದ. ಇವನು ನನ್ನ ಅಪ್ಪನಿಗೆ ಬಾವಯ್ಯ. ಆದರೆ ಎಲ್ಲರಿಗೂ ಬಾವಯ್ಯನೆ ಆಗಿದ್ದ. ಅದು ಇದು ಕತೆ ಆದ ನಂತರ ಕೇರಿ ಊರುಗಳ ಕತೆ ಪ್ರಾರಂಭವಾಯಿತು.
ಹರೀಶೆ ಒಂದೇ ಕೋಳಲ್ಲಿ ಐವತ್ತು ಮನೆ ಇದ್ದಿಕ್ಕೂ ಅಲ್ದನಾ? ಎಂಬ ಪ್ರಶ್ನೆಯನ್ನು ಬಾವಯ್ಯ ಬಿಸಾಕಿದ.
ಕೋಡಳ್ಳಿ( ಹೆಸರು ಬದಲಿಸಿದೆ)ನು ಹಾಂಗೆಯಲಾ. ಇಪ್ಪತ್ತೈದು ಮನೆ ಸಾಲಾಗಿ. ಎದುರಿಗೆ ತೋಟ. ಆ ಊರು ಮಜಾ ಇದ್ದು. ಆದ್ರೆ ಈ ಊರಲ್ಲಿ ಎಲ್ಲರ ಮನೆ ಬಚ್ಚಲು (ಬಾತ್ ರೂಂ ) ತೋಟ! ಸಾಲಾಗಿ ಮನೆ, ಸಾಲಾಗಿ ಬಚ್ಚಲು. ಊರಿಗೆ ಯಾರೇ ನೆಂಟರು ಬಂದರೂ ಮಧ್ಯಾಹ್ನ ಜಗುಲಿ ಮೇಲೆ ಕುಳಿತ್ಕತ್ತಿದ್ದರು. ಯಂತಕೆ ಹೇಳು? ಎಂಬ ಪ್ರಶ್ನೆಯನ್ನು ಮಧಣ್ಣ ಇಟ್ಟ. ಎಲ್ಲರ ಮುಖದಲ್ಲೂ ಕೊಶ್ಚನ್ ಮಾರ್ಕ್.
ಅಲ್ದಾ ಹೆಂಗಸರೂ ಸ್ನಾನಕ್ಕೆ ಹೋಪ ಟೈಮ್ ಅದೇ ಅಲ್ದನಾ' ಎಂದ. ಎಲ್ಲರೂ ಹೊಟ್ಟೆ ಹುಣ್ಣಾಗುವವರೆಗೆ ನಕ್ಕೆವು. ತೋಟದಲ್ಲಿ ಬಚ್ಚಲು ಇದ್ರೆ ಯಾರ್ಯಾರೂ ಹೆಂಗಸರು ಸ್ನಾನ ಮಾಡದು ನೋಡಿ ಮಜಾ ತಗತ್ವನ ಎಂಬ ಶರಾವನ್ನು ಬರೆದ.
ಹೀಗೆ ಕತೆ ಸಾಗುತ್ತಾ ಸಾಗುತ್ತಾ ಪುನಃ ಸಾಲದ ವಿಚಾರಕ್ಕೆ ಬಂದು ನಿಂತಿತು.
`ಸಾಲ' ಎಂಬುದು ಇಷ್ಟು ಭಯಾನಕವಾಗಿ ಕಾಡ ತೊಡಗಿದೆ ಎನ್ನುವುದು ಅರಿವಾದಾಗ ಬಹಳ ಬೇಸರವಾಯಿತು. ಆದ್ರೆ ಎನ್ಮಾಡೋದು ಸಾಲ ಮಾಡದೇ ಬದುವ ಮಂದಿ ಊರಿಗೆ ಒಬ್ಬರೋ.. ಇಬ್ಬರೋ.. ಅಷ್ಟೇ ಉಳಿದವರೆಲ್ಲ ಸಾಲದಲ್ಲೇ ಸಾಯ ಬೇಕಲ್ಲ.
ಸಾಲ... ಸಾಲ.. ಸದಾ ಹಸನ್ಮುಖಿಯಾಗಿ ಅನ್ನ ನೀಡುವ ರೈತನ ಊಟದ ಬಟ್ಟಲಿನಲ್ಲಿ ವಿಷ , ಹಗ್ಗ ಬಂದು ಕುಳಿತಿದೆ. ಅದನ್ನು ಬದಿಗಿಟ್ಟು ಅನ್ನವನ್ನೇ ನೀಡುವ ಕೆಲಸ ಆಗಬೇಕಿದೆ ಪರಿಹಾರವೇನು.

Sunday, August 9, 2009

ಸೋತ ಹುಡುಗ

ಜೋರು ಜಗಳ
ಹುಡುಗ-ಹುಡುಗಿಯದ್ದು
ಹುಡುಗ ಸೋತಿದ್ದ
ಕಾರಣವಿತ್ತು.........
ಒಮ್ಮಲೆ ಹುಡುಗಿ ಎಂದಳು "ಎದೆಯೆತ್ತಿ"
"ನನಗೂ ಧೈರ್ಯವಿದೆ" ಎಂದು
ತನ್ನ ಧೈರ್ಯ ತೋರಿಸುವ ಜಾಗ
ಕಾಣದ ಹುಡುಗ ಸೋತಿದ್ದ

Wednesday, August 5, 2009

ಹೃದಯಂತರಾಳದ ಪ್ರೇಮಾಲಾಪ

ಯಾಕೋ, ಎನೋ, ಇತ್ತೀಚೆಗೆ ಮನಸ್ಸು ಭಾರವಾಗುತ್ತಿದೆ. ಒಂಟಿ ಎನ್ನುವ ಭಾವ. ಎಲ್ಲೋ ಒಂದು ಕಡೆ ಸಂಗಾತಿ ಬೇಕೆಂಬ ಬಯಕೆ, ರಾಜರ ಕತೆ ಬೇಡ ರಾಣಿಯರ ಕತೆಯೇ ಇಷ್ಟವಾಗುತ್ತಿದೆ. ಸುಖದ ಬಗ್ಗೆ ಆತುರ. ದೇಹದ ಸುಖಕ್ಕಿಂತ ಮನಸ್ಸು ಮನಸ್ಸು ಬೆಸೆಯುವ ಸುಖ ಬೇಕು.
ಅಂತರಂಗದ ಭಾವವನ್ನು ಬಿಚ್ಚಿಟ್ಟರೆ ಕಣ್ತುಂಬ ನೋಡುವ, ಅರ್ಥೈಯಿಸಿ ಕೊಳ್ಳುವ ಸಮಾನ ಮನಸ್ಕಳು ಬೇಕು. ಎಲ್ಲಿದ್ದಾಳೆ ಅವಳು? ಹುಡುಕಾಡಿದೆ. ಕಣ್ಣೆದುರಿಗೆ ಇದ್ದಳು, ಸಿಕ್ಕಳು, ನನಗಿಂತ ಚಿಕ್ಕವಳು, ಮಾತು ಕಡಿಮೆ, ಒಳ್ಳೆಯ ಮನಸ್ಸು. ಚೆಲುವಿ. ನನಗೆ ಕಂಡಿರುವುದು ಹಾಗೆ ಉಳಿದವರಿಗೆ ಅವಳು ಚೆಲುವೆ. ನನಗೆ ಕಂಡಿರುವುದು ಅವಳ ಬಾಹ್ಯ ಸೌಂದರ್ಯ ಒಂದೇ ಅಲ್ಲ; ಆಂತರಂಗಿಕ ಸೌಂದರ್ಯ. ನನ್ನೆದುರು ಅವಳು ಹಾಯ್ದೆರೆ ಮಿಂಚಿನ ಸಂಚಲನ ನನ್ನೊಳಗೆ. ನನ್ನ ಉನ್ಮಾದತೆಯನ್ನು ಹೊರಚೆಲ್ಲದೆ ಸ್ಥಿಮಿತದಲ್ಲಿದ್ದೆ. ದಿನಾಲೂ ಕಾಲೇಜಿನಲ್ಲಿ ಐದು ನಿಮಿಷ ಮಾತುಕತೆ. ಅದು ಉಭಯ ಕುಶಲೋಪರಿಗೆ ಸೀಮಿತವಾಗಿತ್ತು. ನನ್ನೆದುರು ಅವಳು ನಿಂತಾಗ, ಅವಳ ಗುಂಡುಗಿನ ಆ ಕಣ್ಣ ದರ್ಪಣದಲ್ಲಿ ನನ್ನ ಬಿಂಬ ಕಾಣುವಾಗ, ಆ ಬಿಂಬ ಸದಾ ನನ್ನದೇ ಆಗಿರಬೇಕೆಂಬ ಆಕಾಂಕ್ಷೆ ನನ್ನದು. ನನಗೆ ಅನ್ನಿಸಿದ್ದನ್ನು ಅವಳಿಗೆ ನೇರವಾಗಿ ಹೇಳಲಿಕ್ಕೆ ಆಗಲಿಲ್ಲ. ಅದಕ್ಕಾಗಿ ಈ ಪತ್ರ....
ಗೆಳತಿ..
ಎಲ್ಲಿಂದಲೋ ತೇಲಿ ಬರುವ ಆ ಮಗುಳು ನಗೆಯ ಅಲೆ, ನನ್ನ ಹೃದಯ ಕಡಲಿಗೆ ಅಪ್ಪಳಿಸುತ್ತಿದೆ. ನಿನ್ನ ಕಣ್ಣೆಂಬ ಕತ್ತಿ ನನ್ನ ಹೃದಯವನ್ನು, ಸೀಳಿದೆ. ಅಲ್ಲಾ ಇರಿದಿದೆ. ಆ ನಿನ್ನ ನೋಟವೇ ಹಾಗೆಂದು ಕಾಣುತ್ತದೆ. ಅದಕ್ಕೆ ಖಡ್ಗದ ಹರಿತವಿದೆ. ಸೀಳುವ ಸಾಮರ್ಥ್ಯವಿದೆ. ಅದು ಪ್ರೇಮದ ಇರಿತ. ನನಗ್ಯಾಕೋ ಇದೇ ಹಿತವೆನಿಸಲಿಕ್ಕೆ ತೊಡಗಿದೆ ಗೆಳತಿ. ಅಂದು ನೀ ನಿನ್ನ ಗೆಳೆಯರ ಬಳಗದ ನಡುವೆ ನಿಂತು ಕೊಂಡಾಗ ಅವರು ಮುಳ್ಳುಗಳ ತೆರದಿಂ ಕಂಡರೂ ನೀ ಮಾತ್ರ ಗುಲಾಬಿಯಂತೆ ಕಂಡೆ. ನಿಜ ಗೆಳತಿ ನಮಗೆ ಇಷ್ಟವಾಗುವುದೆಲ್ಲ ಸುಂದರವೆಂದು ಕಾಣುತ್ತೆ.
ಒಮ್ಮೊಮ್ಮೆ ಅನ್ಸುತ್ತೆ ಅತಿ ಕುಲವತಿ ನೀನು, ಪೃಥ್ವಿ ಪಾಲಕ ನಾನು, ಹಸನಾದ ನೆಲ ನೀನು. ಹೆಣ್ಣನ್ನು ನೆಲಕ್ಕೆ ಹೊಲಿಸುತ್ತಾರೆ. ಅಂತಹ ಭೂಮಿಯ ಒಡೆಯ ನಾನಾಗ ಬೇಕು. ಇದು ಸ್ವಲ್ಪ ಹೆಚ್ಚಾಯಿತೆನೋ ಅಲ್ವಾ? ತಲಾತಲಾಂತರದಿಂದ ಬಂದ ಭ್ರಮೆ ನಾನು ಗಂಡಸು. ನನ್ನದೇ ನಡೆಯಬೇಕೆಂದು. ತಪ್ಪಾಯಿತು. ಆದರೂ ನಿನ್ನಲ್ಲಿ ಬೇಡಿಕೊಳ್ಳುತ್ತೇನೆ. ನಿನ್ನ ಹೊಲಕ್ಕೆ ನನ್ನನ್ನೇ ಒಡೆಯನಾಗಿ ಮಾಡಿಕೋ ಗೆಳತಿ.
ನೀನಿಲ್ಲದ ಬಾಳನ್ನು ಕಲ್ಪಿಸಿಕೊಳ್ಳಲಿಕ್ಕೂ ಆಗುತ್ತಿಲ್ಲ. ಮುಂಜಾನೆ ರವಿ ಮೂಡುವ ವೇಳೆಯಲ್ಲಿ, ಚಿಲಿಪಿಲಿ ಎಂದು ಹಕ್ಕಿಗಳು ಗೂಡು ಬಿಡುವ ಕಾಲದಲ್ಲಿ, ನೀ ನಡೆದು ಬರುವ ಹಾದಿಯಲ್ಲಿ, ನನ್ನ ಹೃದಯ ಕುಸುಮವನ್ನು ಹಾಸಿರುವೆ ಡಿಯರ್‌. ನಿನ್ನ ಹೃದಯದಲ್ಲಿ ನನ್ನ ಹೃದಯ ಸೇರಿಸಿಕೋ ಒಂಚೂರು ಕೈ ನೀಡು. ಪ್ರೇಮ ಪಾಶಕ್ಕೆ ಬಿದ್ದಿರುವ ನನ್ನನ್ನು ಬಚಾವ್‌ ಮಾಡು ಸಖಿ.
ಯಾಕೆ ಇಷ್ಟು ಮೌನ ? ಮಾತನಾಡು ಮೊಗ್ಗೆ ನೀನು ಮೌನ ಒಡೆದು ನನ್ನಲ್ಲಿ ಮಾತಿನ ಮುತ್ತನ್ನು ಉದುರಿಸು. ಆ ಮುತ್ತನ್ನು ಹಿಡಿಯುವುದಕ್ಕಾಗಿ ಕೈ ಚಾಚಿ ಕಾಯುತ್ತಿದ್ದೇನೆ. ನಿನ್ನ ಮೌನಕ್ಕೆ ನನ್ನ ಕೂನಿ ಮಾಡುವ ತಾಕತ್ತಿದೆ. ಸುಮ್ಮನಿದ್ದು ಸಾಯಿಸಬೇಡ. ಸತಾಯಿಸಬೇಡ. ನನ್ನನ್ನು ಒಪ್ಪು, ಬಿಗಿದಪ್ಪು ಅನ್ನುವುದಿಲ್ಲ. ನಿನ್ನ ಸಾಂಗತ್ಯವಷ್ಟೇ ಸಾಕು.
ಗೊತ್ತಾ ಗೆಳತಿ ನಿನಗೆ? ಎಂದು ನೀನು ನನ್ನೆದೆಯ ಕದವನ್ನು ತೆಗೆದು ಒಳಬಂದೆಯೋ ಅಂದೆ ನನ್ನ ನಿದ್ದೆಯನ್ನು ಕದ್ದೆಯಲ್ಲೆ! ಕನಸಲ್ಲೂ ನಾನು ನಿನ್ನ ನೋಡಬಾರದೇನೆ? ಹ್ಞಾಂ ನೀನು ನಿದ್ದೆ ಕದ್ದದ್ದೆ ಚೊಲೋ ಆಯಿತು ಚೆಲುವೆ! ನೀನೆಂದು ನನ್ನೊಳಗೆ ಬಂದೆಯೋ ಅಂದೇ ನಾನೇ ನಿದ್ದೆ ಬಿಟ್ಟಿದ್ದೆ. ನೀನು ದಿಂಬಿಗೆ ಕೆನ್ನೆ ಅನಿಸುವಾಗ ನನ್ನನ್ನೊಮ್ಮೆ ನೆನಸಿಕೋ. ಯಾಕೆ ಗೊತ್ತಾ? ನನ್ನ ಕೋಣೆಯ ಕಿಟಿಕಿಯ ಕಂಡಿಯಲ್ಲಿ ನೀ ಬರುತ್ತೀಯಾ ಎಂದು ಕಾಯುತ್ತಾ ಕುಳಿತಿರುತ್ತೇನೆ. ನಿದ್ದೆ ಮಾಡಿ ಕನಸು ಬಿದ್ದು, ಆ ಕನಸಿನಲ್ಲಿ ನೀ ಬಂದು, ಕಣ್ಣುಬಿಟ್ಟಾಗ ನೀನಿಲ್ಲದೇ ಹೋದರೇ? ನಿರಾಶೆ. ಅದಕ್ಕೆ ಗೆಳತಿ ಕಣ್ರೆಪ್ಪೆಯನ್ನು ಮುಚ್ಚದೆ ಕುಳಿತಿರುತ್ತೇನೆ.
ಇತ್ತೀಚೆಗೆ ನನ್ನ ಗಮನಿಸಿದ್ದೀಯಾ ? ಮೊದಲೆಲ್ಲ ನಾನು ಅಶಿಸ್ತಿನ ಮುದ್ದ್ಡೆಯಾಗಿದ್ದೆ. ಮುಖದ ಮೇಲೆ ಕೂದಲು ಹುಟ್ಟಿದ ಮೇಲೆ ಬ್ಲೇಡನ್ನೇ ತಾಗಿಸದೆ ಇದ್ದ ನಾನು ಈಗ ದಿನಾಲೂ ಶೇವಿಂಗ್‌ ಮಾಡ್ತೇನೆ. ಉಡುಗೆ ತೊಡುಗೆಗಳು ಮಾರ್ಡನ್‌ ಆಗಿದೆ. ನಿನ್ನಿಂದಾಗಿಯೇ ಇವೆಲ್ಲ ಪ್ರಿಯೆ. ನಾನು ಹೇಳುವುದೆಲ್ಲ ನಿನಗೆ ನಾಟಕ, ಸಿನಿಮಾ ಡೈಲಾಗಿನಂತೆ ಕಾಣಬಹುದು. ಆದರೆ ಇದು ನನ್ನ ಒಳಗಿನ ಭಾವನೆ ಗೆಳತಿ.
ನಾನೊಂದು ರೀತಿ ನೀರಾಗಿ ಬಿಟ್ಟಿದ್ದೇನೆ. ಅದು ಪ್ರೇಮವೆಂಬ ಅಮೃತದ ನೀರು. ಯಾವ ಪಾತ್ರೆಯಲ್ಲೂ ಹಿಡಿಯುತ್ತದೆ ನೀರು. ಅದನ್ನು ನಿನ್ನ ಪಾತ್ರೆಗೆ ಹಾಕಿಕೋ. ಪ್ರೇಮ ಜ್ಯೋತಿಯನ್ನು ಬೆಳಗಿಸುವುದು ನಿನ್ನ ಕೈಯಲ್ಲಿದೆ. ಆ ಜ್ಯೋತಿಗೆ ನೀನು ಎಣ್ಣೆಯಾಗು. ನಾ ಉರಿವ ನೆಣೆಯಾಗಿರುವೆ. ನೀನಿಲ್ಲದೆ ನನಗೇನಿದೆ. ನೀ ಹೂಂ ಎಂದರೆ ಸ್ವರ್ಗ. ಅದುವೇ ನನಗೆ ಸ್ವರ್ಗ ಇಲ್ಲಾಂದ್ರೆ ನನ್ನ ಬದುಕೆಲ್ಲ ನರಕ ಗೆಳತಿ. ಕೈ ಚಾಚಿದ್ದೇನೆ. ಮಂಡಿಯೂರಿ ತಲೆ ಬಾಗಿದ್ದೇನೆ. ನಿನ್ನ ಕೋಮಲ ಕರದಿಂದ ಶಿರವನ್ನೊಮ್ಮೆ ನೇವರಿಸಿ ಕೈ ಹಿಡಿದೆತ್ತು. ಎತ್ತುತ್ತೀಯಾ? ಎತ್ತೇ ಎತ್ತುತ್ತೀಯಾ, ಬಂಡೆಯಂತಹ ಭರವಸೆಯಿಂದ ಬೇಡುವೆ ನೀಡು ನೀ ಪ್ರೇಮ ಭಿಕ್ಷೆ.
ನಿನ್ನ ಉತ್ತರಕ್ಕಾಗಿ ಕಾಯುವ ಪ್ರೇಮ ಭಿಕ್ಷು.

Friday, July 31, 2009

ಅಂದಿನ ಪುಂಡಾಟ ಇಂದು ಅನಿಸಿದ್ದು ಹೀಗೆ

ಮನೆಯಿಂದ ಹೊರಗೆ ಬೀಳಲು ಆಸ್ಪದವಿಲ್ಲದಷ್ಟು ಮಳೆ. ’ಆಕಾಶಕ್ಕೆ ತೂತು ಬಿದ್ದಿದೆಯೋ’ ಎಂಬಂತೆ ಭಾಸವಾಗುತ್ತಿತ್ತು. ! ಅದು ಆರಿದ್ರಾ ಮಳೆ ಆರ್ಭಟ : ಇಗೊಂದು ನಾಲ್ಕೈದು ವರ್ಷದಿಂದ ಆದ್ರೆ ಮಾತ್ರ ಮಳೆಯಾಗಿತ್ತು ! ಈ ಬಾರಿ ಮಾತ್ರ ಪಕ್ಕಾ ಪಕ್ಕಾ ಆರಿದ್ರಾ ಮಳೆಯೇ ಸುರಿಯುತ್ತಿತ್ತು !! "ಮೂರ್ಖರ ಪೆಟ್ಟಿಗೆ’ ಎಂಬ ಅನ್ವರ್ಥನಾಮ ಪಡೆದು ತನಗೆ ಆ ಹೆಸರಿಟ್ಟವರನ್ನು ಬಿಡದೇ ತನ್ನ ಮುಂದೇ ಬಂದು ನಿಲ್ಲುವಂತೆ ಮಾಡಿದ ಸಮ್ಮೋಹಿನಿ ಯಾ ಮೋಹಿನಿ ರೂಪಿನ ಟಿ.ವಿ.ಯನ್ನು ನೋಡೋಣವೆಂದರೆ, ಕರೆಂಟೆಂಬ ಮಾಯಾಂಗನೆ ಒಮ್ಮೊಮ್ಮೆ ಮಾತ್ರ ಪ್ರತ್ಯಕ್ಷವಾಗಿ ಕೊನೆಯಲ್ಲಿ ಮಸುಕಾಗಿ ನಿಂತು ಮಾಯವಾಗಿತ್ತು. ಪುನಃ ದರ್ಶನ ಕೊಡದೆ ವಾರಗಳೇ ಸಂದಿದ್ದವು. ಎಂಬಿತ್ಯಾದಿ ಕಾರಣಗಳಿಂದ . . . . . . . ಯಾವ ಕಾರ್ಯಗಳನ್ನು ಮಾಡಲಾಗದೆ, ಹೆಬ್ಬಾಗಿಲಿನಲ್ಲಿ ಇರುವ ಏಕೈಕ್ ಬಾಂಕಿನ ಮಣೆಯನ್ನು ಬಿಸಿ ಮಾಡುವ ಕಾಯಕದಲ್ಲಿ ತೊಡಗಿದ್ದೆ. ಬಾಯಲ್ಲಿ ರಸಗವಳ ಮೆಲಿಯುತ್ತಿದ್ದೆ. ಅದು ಕರಗುತ್ತ ಬಂದಂತೆ, ಅಡಿಕೆ ಚೂರನ್ನು ಬಾಯಿಗೆ ಒಗೆಯುತ್ತ ಜೊತೆಯಲ್ಲಿ ತಂಬಾಕನ್ನು ಉಂಡೆ ಮಾಡಿ ಹೇಗೆಂದರೆ, ’ಘನ ಘೋರ ಸಮರ ನಡೆಯುತ್ತಿರುವಾಗ ಸೈನಿಕರು ತುಪಾಕಿಗೆ ಗುಂಡನ್ನು ತುಂಬುವ ತೆರದಿಂ ಬಾಯಿಗೆ ಒಗೆಯುತ್ತಿದ್ದೆ. ಈಡನ್ನು ಭರ್ತಿ ಮಾಡಿಕೊಳ್ಳುತ್ತಿದೆ.
ಈಂತಿಪ್ಪ ಸಮಯದೊಳ್ . . . . ಯಾಕೋ . . . . ಏನೋ . . . . ಮನಸ್ಸು ಭೂತಕಾಲದ ಬಾಲ್ಯದ ನೆನಪಿನ ಜಾಡನ್ನು ಕೆದಕಲು ಪ್ರಾರಂಭ ಮಾಡಿತ್ತು. ಎದುರಿಗೆ ಅಡ್ಡುದ್ದ ಬಿದ್ದುಕೊಂಡು ಬರೆಯುತ್ತಿದ್ದ ಅಣ್ಣಂದಿರ ಮಕ್ಕಳ ಪರದಾಟ, ಪಿಕಲಾಟ, ಹೋಮ್ ವರ್ಕ್ಸ್ ಮಾಡಿ ಮುಗಿಸಲೇ ಬೇಕೆಂಬ ಒತ್ತಡ. ಇದನ್ನೆಲ್ಲ ನೋಡುತ್ತಿರುವ ಕಾರಣದಿಂದಾಗಿಯೇ ನನ್ನ ಮನಸ್ಸು ಭೂತನ ಕಡೆಗೆ ವಾಲಿತ್ತು, ಓಡಿತ್ತು ಅಂತ ಕಾಣ್ಸುತ್ತೆ.
ಆ ನೆನಪು ಸರಿಸುಮಾರು ಇಪ್ಪತ್ತು ವರ್ಷ ರಿವರ್ಸ್‌ಗೆ ಹೋಗಿತ್ತು. ಅಂದು ನಮಗೆ ಈ ರೀತಿಯ ಪರದಾಟ, ಪಿಕಲಾಟ, ಒತ್ತಡ, . . . . . ಊಹೂಂ . . . . . ದೇವರಾಣೆ ಹಾಕಿ ಹೇಳ್ತೆನೆ, ನಾವ್ ಹ್ಯಾಂಗಪ್ಪಾ ಎಂದರೆ ಏಕ್‌ದಂ ಬಿಂದಾಸ್. ಅಂದು ಕಬ್ಬಡ್ಡಿ ಲಗೋರಿಯ ಗಮ್ಮತ್ತು ಇತ್ತು. ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ ಮೋಜಿತ್ತು. ಕಳ್ಳಾ ಪೋಲಿಸ್, ಮುಟ್ಟಾಟದ ಮಜವಿತ್ತು. ಹುಡುಗಿಯರ ಜಡೆಗೆ ಬಾಲ ಕಟ್ಟುವ ಕಿಲಾಡಿಯಿತ್ತು. ಹುಡುಗಿಯರನ್ನು ಮರ ಹತ್ತಿಸಿ ಲಂಗದೊಳಗೆ ಇಣಕುವ ಪೋಲಿತನವಿತ್ತು. ಬಿಕ್ಕೆ ಗುಡ್ಡ, ನೇರಳೆ ಮರ, ಸಂಪಿಗೆ, ಕಾಳಿಗಿಡ, ಹಲಿಗೆ ಹಣ್ಣಿನ ಮಟ್ಟಿ, ಗುಡ್ಡೆಗೇರು, ಚಳ್ಳೆಹಣ್ಣು . . . . ಒಂದೇ ಎರಡೇ ಹತ್ತು ಹಲವು ಕಾಡು ಹಣ್ಣುಗಳ ರುಚಿಯನ್ನು ನೋಡುವ ಚಪಲ ನಾಲಿಗೆಯಿತ್ತು. ಅದನ್ನು ಹುಡುಕಿ ತಿರುಗಲು ನಮ್ಮ ಕಾಲಲ್ಲಿ ನಾಯಿಗೆರೆ ಇತ್ತು. ಪ್ರಾಥಮಿಕ ಶಾಲೆಯ ಲಿಗಾಡಿ ಬದುಕಿನ ದಿನಗಳು ’ಹಸಿಗೋಡೆಯ ಮೇಲೆ ಹರಳಿಟ್ಟಂತೆ’ ಸ್ಪಷ್ಟವಾಗಿ ನೆನಪು ನನ್ನ ಚಿತ್ತ ಪಟಲದಲ್ಲಿತ್ತು.
ಆ ದಿನಗಳು
ಸುತ್ತಣ ಮೂವತ್ತಕ್ಕೂ ಹೆಚ್ಚಿಗೆ ಊರಿಗೆ ನಮ್ಮೂರ ಶಾಲೆ ಒಂದೇ. ಈ ಶಾಲೆಗೆ ಒಂದೇ ಮಾಸ್ತರು. ಹಾಗೂ ಅವರ ಹೆಂಡತಿ ಮಂಡೆ ಸರಿಯಿಲ್ಲದ ಅಕ್ಕೋರು ಯಾನೆ ಮಳ್ಳಕೊರು ಅಲಿಯಾಸ್ ಮೇಡಂ. ಗುರೂಜಿ ಅಂದರೆ ಮಾಸ್ತರು ಹೈ ಬಿ.ಪಿ. ಇರೋ ಜನ. ಅಕ್ಕೋರು ಅಮಾವಾಸ್ಯೆ ಒಂದು ರೀತಿ, ಹುಣ್ಣಿಮೆಗೆ ಒಂದು ಥರಾ ವರ್ತನೆ. ಬದಲಾವಣೆಯಾಗುತ್ತಿತ್ತು. ತಲೆ ಸರಿಯಿಲ್ಲದ ಅಕ್ಕೋರು ಗುಳಿಗೆ ಮೇಲೆ ತಲೆ ಅಲ್ಲಾಡದಂತೆ ಇಟ್ಟುಕೊಂಡಿದ್ದರು. ಅಕ್ಕೋರು ಮಳ್ಳಿ, ತಲೆ ಹಾಳಾದವಳು ಎಂಬುದು ಸುತ್ತಣ ಮೂವತ್ತು ಊರಿಗೂ ಜಗಜ್ಜಾಹಿರಾಗಿತ್ತು. ಏಕೈಕ ಧರ್ಮ ಪತ್ನಿ, ತನ್ನ ಮಕ್ಕಳ ತಾಯಿಗೆ ತಲೆ ನೆಟ್ಟಗೆ ಇಲ್ಲ ಎಂದು ಮೂವತ್ತು ಹಳ್ಳಿಯಲ್ಲಿ ಲೋಕ ಪ್ರಸಿದ್ಧವಾದದ್ದು ಗಮನಕ್ಕೆ ಬಂದ ತಕ್ಷಣದಿಂದಲೇ ಮಾಸ್ತರಿಗೆ ಎಸಿಡಿಟಿ, ಗ್ಯಾಸ್, ಕೊಲೆಸ್ಟ್ರಾಲು, ಜೊತೆಯಲ್ಲಿ ಬಿ.ಪಿ. ಹೆಚ್ಚಾಗಿ ಇವರು ಮಾತ್ರೆ ತೆಗೆದುಕೊಳ್ಳತೊಡಗಿದರು.ಒಂದೇ ಮೇಸ್ಟ್ರು. ಒಂದೇ ಅಕ್ಕೋರು ಇರುವ ಶಾಲೆ ಸ್ಥಿತಿ, ದೇವರೆ ಗತಿ. ಸೋಮವಾರ ಕೇಂದ್ರ ಶಾಲೆಯಲ್ಲಿ ಮೀಟಿಂಗು, ಮಂಗಳವಾರ ಬೋರ್ಡು ಮೀಟಿಂಗು, ಬುಧವಾರ ಸಂತೆ, ಗುರುವಾರ ಮೇಸ್ಟ್ರಿಗೆ ಎಸಿಡಿಟಿ ಜೋರು ಅರಾಮಿಲ್ಲ. ಶುಕ್ರವಾರ ಮತ್ತೆ ಕೇಂದ್ರ ಶಾಲೆಯಲ್ಲಿ ಪುಸ್ತಕ ವಿತರಣೆ ಯಾ ಇನ್ನಾವುದೊ ಕೆಲಸ. ಶನಿವಾರ ಅರ್ಧದಿನ ಇತಿಹಾಸದ ಒಂಬತ್ತು ಪಾಠ ಎಮ್ಮೆ ಉಚ್ಚೆ ಹೊಯ್ದು ಹಾಗೇ ಒಂದೇ ಸಮನೆ ರಾಗ ಸಹಿತವಾಗಿ ನಿರ್ಭಾವದಿಂದ ಯಾರಿಗೂ ಅರ್ಥ ಆಗದ ರೀತಿಯಲ್ಲಿ ಓದಿ, ಮುಗಿಸಿದರೆ ಪೋರ್ಷನ್ ಕಂಪ್ಲೀಟು. ಇನ್ನು ಅಕ್ಕೋರು ಮೊದಲೇ ಮಳ್ಳಿ ಐ ಮೀನ್ ತಲೆ ಸರಿ ಇಲ್ಲದವರು. ನಮ್ಮಂತ ಎಡವಟ್ಟು ಹುಡುಗರನ್ನು ಕಂಟ್ರೋಲ್ ಮಾಡಲಿಕ್ಕಾಗದೆ ಬೆನ್ನು ಮುರಿದು ಕೊಡುತ್ತಿದ್ದರು. ಇವರದ್ದು ವಾರಕ್ಕೆ ಮೂರುದಿನ ರಜೆ. ಒಂದು ದಿನ ’ಮಾತ್ರೆಯನ್ನು ತಗೊಂಡಿದಿನಾ ಇಲ್ವಾ’ ಎಂದು ಮರೆತು ಎರಡೆರಡು ಬಾರಿ ಗುಳಿಗೆ ನುಂಗಿ ಜೋಮು ಹತ್ತಿ ಎಚ್ಚರನೇ ಆಗದೆ, ಎರಡು ದಿನ ಕಳೆದು ಬಿಡುತ್ತಿತ್ತು. ಒಂದಿನ ಅಕ್ಕೋರಿಗೂ ಮಾಸ್ತರಿಗೂ ಜಗಳ. ಅಕ್ಕೋರು ಮನೆಯಲ್ಲಿ , ಗುರುಜಿ ಸಂತೆಗೆ. ಉಳಿದೆರಡು ದಿನ ಅಕ್ಕೋರು ಒಂಥರಾ ಮಬ್ಬು ಅಥವಾ ಪುಲ್ ಉಲ್ಟಾ. ಹೀಗಿರುವ ಕಾಲದಲ್ಲಿ, ಹಳ್ಳಿಯ ಪ್ರೈಮರಿ ಸ್ಕೂಲು ಹುಡುಗರು ಎಂದರೆ ಮೊದಲೇ ಮಂಗ, ಅದಕ್ಕೆ ಕಳ್ಳನ್ನು ಕುಡಿಸಿ, ಮಧ್ಯೆ ಭೂತವು ಸಂಚಾರವಾಗಿ ಯದ್ವಾ ತದ್ವಾ ಭವಿಷ್ಯತಿ’ ವರಿಜನಲ್ ಮಾಸ್ಟ್ರು ಬರದೇ ಹೋದ ದಿನ. ಅಕ್ಕೋರಿಗೆ ಮೋದಕವಿದ ದಿನ. ಏಳನೇ ವರ್ಗದ ಹುಡುಗರು /ಹುಡುಗಿಯರು ಅಕ್ಕೋರು ಮಾಸ್ಟ್ರರು ಆಗುತ್ತಿದ್ದರು.ಮಾಸ್ತರು ಕೆಲಸದ ನಿಮಿತ್ತ ಹೊರಗಡೆ ನಿವಾಳಿಸಿದಾಗ, ಹುಡುಗ/ಹುಡುಗಿಯರಿಗೆ ಹೋಳಿ ಹುಣ್ಣಿಮೆ, ಓಕಳಿ, ಮಜವೆ ಮಜಾ. ಬಂಡಾರಮಕ್ಕಿ ಕಮಲ ವಿಳ್ಳೆದೆಲೆ ತರುತ್ತಿದ್ದ. ನನ್ನದು ಅಡಿಕೆ ಸಪ್ಲೈ. ಮೇಲಕೇರಿ ತಿಂಮ ಭಟ್ಟಂದು ತಂಬಾಕು, ಸುಣ್ಣ ಸರಬರಾಜು . ಮಂಜ ಶೆಟ್ಟಿ ಕೈ ಬೀಡಿ ತಂದರೆ ರಾಮ ಹೆಗಡೆ ಬೆಂಕಿಪಟ್ಟಣ ತರುತ್ತಿದ್ದ. ಕೆಳಗಿನಹಕ್ಲು ಚಂದ್ರಿಕಾ ಲಿಂಬೆಹಣ್ಣು ಮಡ್ಳೋಳಗೆ ಹಾಕಿಕೊಂಡು ಬಂದರೆ, ಮೂಲೆ ಮನೆ ಸಾವಿತ್ರಿ ಅರಮದ್ಲು ಕಾಯಿ ತರುತ್ತಿದ್ದಳು. ವೆಂಟ್ರಮಣ ಭಟ್ರ ಮಗಳು ಉಪ್ಪು, ಮೆಣಸಿನಕಾಯಿ ಜತೆಗೆ ಹುಳಿಪುಡಿ, ಹುಣಸೆ ಹಣ್ಣು ಪಟ್ಳ ಕಟ್ಟಿಕೊಂಡು ಬರುತ್ತಿದ್ದಳು. ಮತ್ತೆ ಇದೆಲ್ಲ ಕಾನೂನು ಪ್ರಕಾರ ಮನೆಯಲ್ಲಿ ಕೇಳಿಕೊಂಡು ತರುತ್ತಿದ್ದರು ಎಂದುಕೊಂಡರೆ ಶುದ್ಧ ತಪ್ಪು ಕಲ್ಪನೆ. ಎಲ್ಲವೂ ಹಿತ್ತಲ ಕಡೆಯಬಾಗಿಲ ಮೂಲಕವೇ ಕದ್ದು ತರುತ್ತಿದ್ದದ್ದು.
ಈಗಿನ ಹುಡುಗರಿಗೆ ಈ ಸೌಭಾಗ್ಯವಿಲ್ಲ. ಯಾಕೆಂದ್ರೆ ಶಾಲೆ ಬಾಗಿಲವರೆಗೆ ಅಪ್ಪ, ಅಮ್ಮ ಕೈ ಹಿಡಿದುಕೊಂಡು ಮಾಸ್ತರಿಗೆ ಒಪ್ಪಿಸಿ, ಸಂಜೆ ಮತ್ತೆ ಬಂದು ತಮಗಿರುವ ಒಂದು ಅಥವಾ ಎರಡು ಅಮೂಲ್ಯ ರತ್ನಗಳನ್ನು ಪರತ್ ಪಡೆದುಕೊಂಡು ಹೋಗುತ್ತಾರೆ.

ನಾಗರಾಜ ಮತ್ತಿಗಾರ

Tuesday, July 28, 2009

ಎದ್ದೇಳು ಮಂಜುನಾಥ ನೋಡು






ಅಪರೂಪಕ್ಕೆ ಕನ್ನಡದಲ್ಲಿ ಒಂದು ಒಳ್ಳೆಯ ಸಿನೆಮಾ ತೆರೆ ಕಂಡಿದೆ. ಚಿತ್ರದ ಹೆಸರು ಎದ್ದೇಳು ಮಂಜುನಾಥ. ನಿರ್ದೇಶಕ ಗುರುಪ್ರಸಾದ. ಕನ್ನಡಕ್ಕೆ ಸಿಕ್ಕಿದ ಒಳ್ಳೆಯ ದೃಷ್ಟಿಕೋನ ಇರುವ ಫಿಲ್ಮ್‌ ಮೇಕರ್‌ ಎನ್ನುವುದರಲ್ಲಿ ಅನುಮಾನವಿಲ್ಲ. ಚಿತ್ರದ ನಾಯಕ ಜಗ್ಗೇಶ್‌. ಇವರ ಹಿಂದಿನ ಚಿತ್ರವನ್ನು ನೆನಪಿಸಿಕೊಂಡು ಈ ಚಿತ್ರ ನೋಡಲು ಹೋದರೆ ನಿರಾಶೆಯಾಗುವುದು ಖಂಡಿತ.
ಹೀಗೂ ಒಂದು ಚಿತ್ರವನ್ನು ಮಾಡಬಹುದು ಎನ್ನುವುದಕ್ಕೆ ಈ ಚಿತ್ರ ಒಂದು ಉತ್ತಮ ಉದಾಹರಣೆ.

ಈ ಚಿತ್ರದಲ್ಲಿ ಜಗ್ಗೇಶ್‌ ಒಬ್ಬ ಶತ ಸೋಮಾರಿ, ಪ್ಲಸ್‌ ಕುಡುಕ. ಇಂತಹ ವ್ಯಕ್ತಿ ಮನೆಯಲ್ಲಿದ್ದರೆ ಏನೆಲ್ಲಾ ಭಾನಗಡಿ ಆಗಬಹುದು ಎನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ನಡೆಯುವ ಕೆಲವು ಸತ್ಯಗಳು ಇಲ್ಲಿ ಅನಾವರಣಗೊಳ್ಳುತ್ತ ಹೋಗುತ್ತವೆ.
ಚಿತ್ರದ ಬಗ್ಗೆ ಹೇಳಬೇಕಾದರೆ ಅದರ ನಾಲ್ಕಾರು ಡೈಲಾಗ್‌ಗಳನ್ನು ಹೇಳಬೇಕು.
1. ತಬ್ಲಾ ನಾಣಿ ಈ ಚಿತ್ರದಲ್ಲಿ ಕುಡುಕ. ಅವನನ್ನು ಒಂದು ಲಾಡ್ಜ್‌ನವರು ಒಂದು ಕೋಣೆಯಲ್ಲಿ ಕೂಡಿಹಾಕುತ್ತಾರೆ. ಅಲ್ಲಿಯೇ ಮಂಜುನಾಥನನ್ನು ಕೂಡಿ ಹಾಕಿರುತ್ತಾರೆ. ನಾಣಿ ಕೋಣೆಗೆ ಎಂಟ್ರಿ ಆದಾಕ್ಷಣ ನಮಸ್ಕಾರ ಯಾರೋ ಇದ್ಹಾಂಗಿದೆ ಎನ್ನುತ್ತಾನೆ. ಜಗ್ಗೇಶ್‌ ನಿಮಗೆ ಹೇಗೆ ತಿಳಿಯಿತು ಎಂದು ಕೇಳುತ್ತಾನೆ. ಇಲ್ಲಿ ನಿಮಗೆ ಕಕ್ಕ ಮಾಡಿದ ಮೇಲೆ ನೀರು ಹಾಕುವ ಅಭ್ಯಾಸ ಇಲ್ಲ ಅಂತ ಕಾಣುತ್ತೆ. ವಾಸನೆ ಬರುತ್ತಾ ಇದೆ ಎನ್ನುತ್ತಾನೆ. (ಮಂಜುನಾಥ ಸೋಮಾರಿ ಎನ್ನುವುದನ್ನು ಒಂದೇ ಮಾತಿನಲ್ಲಿ ತಿಳಿಸಿ ಕೊಡುತ್ತಾರೆ ನಿರ್ದೇಶಕರು)
2. ಮಂಜುನಾಥ: ನಾಣಿ ಅವರೇ ನಿಮಗೆ ಮದುವೆ ಆಗಬೇಕು ಎನ್ನುವ ಆಸೆ ಇಲ್ಲವೋ?
ನಾಣಿ: ಯಾರಾದ್ರೂ ಒಂದು ಲೋಟ ಹಾಲಿಗಾಗಿ ಹಸು ಸಾಕುತ್ತಾರಾ?
3. ಗಾಂಧಿನಗರದಲ್ಲಿ ಸಿನೆಮಾ ಮಾಡುವವರ ಬಗ್ಗೆ ನಾಣಿ ಮಾತನಾಡುತ್ತಾನೆ... ಯಾರೋ ಅಂದ್ರು ಕುರುಡರು ಯಾರೂಇಲ್ಲಿಯವರೆಗೆ ಸಿನೆಮಾ ಮಾಡಲಿಲ್ಲ. ನೀವು ಮಾಡಿ ಅಂತ. ನನಗೂ ಹೌದು ಅನ್ನಿಸಿತು. ಸ್ಕ್ರಿಪ್ಟ್‌ ತಯಾರಾಗಿದೆ. ನಾವು (ಕುರುಡರು) ಸಿನೆಮಾ ಮಾಡಿದ್ರೆ ನಿರ್ಮಾಪಕರು ಬೇರೆ ಭಾಷೆಯ ಸಿನೆಮಾದ ಸಿ.ಡಿ. ತಂದು ಕಾಪಿಮಾಡಿ ಅನ್ನೋಕಾಗಲ್ಲ. ಆ ಸೀನ್‌ ಕದೀರಿ, ಈ ಸೀನ್‌ ಕದೀರಿ ಅನ್ನಕ್ಕಾಗಲ್ಲ. ಬುದ್ಧಿವಂತರು ರಿಮೇಕ್‌ ಮಾಡಬಾರದ್ರಿ, ದಡ್ಡರು ಸ್ವಮೇಕ್‌ ಮಾಡಕೆ ಹೋಗಬಾರದು ಏನಂತೀರಾ?
4.ಮಂಜುನಾಥ ಸುಧಾರಿಸಬಹುದೆಂದು ಮದುವೆ ಮಾಡುತ್ತಾರೆ. ಆಗ ಅವನ ಮಾವ ಹೇಳುವ ಮಾತು. ನೀವು ಹಸಿದ ಹುಲಿ ಇದ್ಹಾಗೆ ಇದ್ದಿರಾ... ನನ್ನ ಮಗಳು ಚಿಗರೆ ಮರಿ ತರಹ. ನೋಡ್ಕೊಂಡು ಮಾಡಿ ...... ಸಂಸಾರನ ಅನ್ನುತ್ತಾನೆ .
ಅದಕ್ಕೆ ಮಂಜುನಾಥ ನಿಮ್ಮ ಮಗಳು ಹಸಿದ ಚಿಗರೆ ಮರನೇ ನಿಮ್ಮ ಹತ್ತಿರ ಹೇಳಿರಲ್ಲ ಅಷ್ಟೇ ಅನ್ನುತ್ತಾನೆ.
5. ಮಂಜುನಾಥನ ಮನೆಗೆ ನಾಣಿಯನ್ನು ಕರೆದು ಕೋಡು ಬರುತ್ತಾನೆ. ಬರುವಾಗ ಇಬ್ಬರು ಬಾರ್‌ಗೆ ಹೋಗುತ್ತಾರೆ. ನಾಣಿ ನಾನು ಬಿಯರ್‌ ಮಾತ್ರ ಕುಡಿತೀನಿ ಎಂದು ಒಂದು ದರ್ಶನ್‌ (ನಾಕೌಟ್‌ ಸ್ಟ್ರಾಂಗ್‌) ಮತ್ತೊಂದು ಉಪೇಂದ್ರ (ಯುಬಿ ಪಿಂಟ್‌) ಕೊಡು ಎನ್ನುತ್ತಾನೆ.
ಎದ್ದೇಳು ಮಂಜುನಾಥ ಮತ್ತೆ ಒತ್ತ ಹೇಳುತ್ತೇನೆ ಕನ್ನಡದಲ್ಲಿ ಇತ್ತೀಚೆಗೆ ಬಂದ ಒಂದು ಅಪರೂಪದ ಚಿತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗುರುಪ್ರಸಾದ್‌ ಮಾತ್ರ ಇಂತಹ ಸಿನೆಮಾ ತೆಗೆಯಲು ಸಾಧ್ಯವೇ ಹೊರತು ಬೇರೆಯವರಿಗೆ ಈ ಸ್ಕ್ರಿಪ್ಟ್‌ ಕೊಟ್ಟರೆ ತುಳಸಿ ನೀರು ಬಿಡಲಿಕ್ಕೆ ಅಡ್ಡಿ ಇಲ್ಲ. ಟಾಕೀಸ್‌ಗೆ ಹೋಗಿ ಒಮ್ಮೆ ಈ ಸಿನೆಮಾ ನೋಡಿ ಎಂಜಾಯ್‌ ಮಾಡಿ.

Tuesday, July 14, 2009

ಇಶ್ಶಿಶ್ಯೋ ಎನ್ನಿ ಆದರೆ ಖುಷಿ ಪಡಿ

ಹಾಸ್ಯ ಸನ್ನಿ­ವೇ­ಶ­ಗಳು ಎಲ್ಲಿ ಹ್ಯಾಗೆ ಹುಟ್ಟು­ತ್ತವೆ ಎನ್ನಲು ಸಾಧ್ಯ­ವಿಲ್ಲ. ಪ್ರತಿ­ಕ್ಷ­ಣ­ದಲ್ಲೂ ಹಾಸ್ಯ­ವಿ­ರು­ತ್ತದೆ. ದ್ವಿಅರ್ಥ ಮಾತು­ಗಳು ಹಾಗೇ ಬೇಗನೆ ನಗೆ ಬರು­ತ್ತದೆ.
ಹಳ್ಳಿ­ಯಲ್ಲಿ ಗೊತ್ತಿ­ಲ್ಲದೇ ಬಹ­ಳಷ್ಟು ಹಾಸ್ಯ ಘಟ­ನೆ­ಗಳು ನಡೆ­ಯು­ತ್ತದೆ.
ಘಟನೆ ಒಂದು...
ಸನ್ನಿ­ವೇಶ ಶ್ರಾದ್ಧದ ಮನೆ..
ಶ್ರಾದ್ಧದ ಮನೆ­ಯಲ್ಲಿ ಸಂಜೆ ಊಟದ ನಂತರ ಆ ಮನೆಯ ಅತ್ತಿ­ಗೆಯ ಹತ್ತಿರ ಬಂದ ನೆಂಟ `ಅ­ತ್ತಿಗೆ ಒಳ್ಳೆಯ ಬೋಳ­ಕಾಳು ಕಷಾಯ ಮಾಡ್ಕೊಡು. ಎಂತಕೋ ತಲೆ ನೋವು ಬಂಜು' ಎಂದ.
ಅತ್ತಿಗೆ `ಪಾಪ ತಲೆ ನೋವು ಬಂಜು ಹೇಳ್ತ' ಅಂದು ಕೊಳ್ಳುತ್ತಾ ಕಷಾಯ ಮಾಡಿ ಕೊಟ್ಟಳು.
ಆದ್ರೆ ಈ ಬಾವ ಕಷಾಯ ಕುಡಿ­ದ­ವನೇ ಇಸ್ಪೀಟ್‌ ಆಡ­ಲಿಕ್ಕೆ ಮಾಳಿ­ಗೆ­ಯನ್ನು ಎರಿದ. ಅತ್ತಿಗೆ ಮಲ­ಗುವ ಮೊದಲು ಇಸ್ಪೀಟ್‌ ಆಡು­ತ್ತಿ­ರುವ ಕ್ರೀಡಾ­ಪ­ಟ್ಟು­ಗ­ಳಿಗೆ ಚಹಾ ಕೊಡಲು ಹೋದಳು. ಅಲ್ಲಿ ನೋಡು­ತ್ತಾಳೆ ಕಷಾಯ ಕುಡಿದ ಬಾವ ಇಸ್ಪೀಟ್‌ ಆಡು­ತ್ತಿ­ದ್ದಾನೆ. ಆಶ್ಚ­ರ್ಯ­ವಾ­ಯಿತು.. ಸಹ­ಜ­ವಾ­ಗಿಯೇ ಅವಳು ಕೇಳಿ­ದಳು
`ಅರೇ ಬಾವ ಎನ್ನ ಹತ್ತಿರ ಮಲ­ಗಿ­ಕೊ­ಳ್ಳತಿ ಹೇಳಿ­ದ್ಯಲಾ.! ಇಸ್ಪೀಟ್‌ ಆಡ್ತಾ ಇದ್ಯಲಾ ಮಾರಾಯಾ?'

ಘಟನೆ ಎರಡು....
ಮದು­ವೆಯ ಮನೆ ರಾತ್ರಿ ಸಮಯ
...
ನಾಳೇ ಬೆಳ­ಗಾ­ದರೆ ಮದುವೆ . ಸಮಯ ಮೀರಿದೆ. ಎಲ್ಲರು ಮಲು­ಗುವ ಗಡ­ಬಿ­ಡಿ­ಯ­ಲ್ಲಿ­ದ್ದಾರೆ. ನಾಲ್ಕೈದು ಮಂದಿ ಹೆಂಗ­ಸ­ರಿಗೆ ಮಲು­ಗಲು ಜಾಗ ಸಿಕ್ಕುತ್ತಾ ಇಲ್ಲ.
ಸಿಟ್ಟಿ­ನಿಂದ ಗೊಣ­ಗು­ತ್ತಿ­ದ್ದಾರೆ `ಎಲ್ಲಿ ನೋಡಿ­ದರು ಮಲ­ಗುವ ಆಟವೇ ಇಲ್ಲೆ' ಎಂದು. ಹೀಗೆ ಹೇಳುತ್ತಾ ಅಡುಗೆ ಮನೆಗೆ ಹೋದರು. ಅಲ್ಲಿದ್ದ ಅಡುಗೆ ಭಟ್ಟ­ನಿಗೆ ಇವರ ಮಾತು ಕೇಳಿ­ಸಿತು. `ಅ­ವ­ನೆಂದ ಮಲ­ಗುವ ಆಟ ಆದ್ರೆ ಇಲ್ಲಿ ಜಾಗ ಇದ್ದು ಬನ್ನಿ' ಎಂದು.

ಘಟನೆ ಮೂರು..

ಚಲಿ­ಸು­ತ್ತಿ­ರುವ ಬಸ್‌...
ತಾಯಿ, ಮಗು, ಅಪ್ಪ ಮೂರು ಜನ ತಿರು­ಗಾ­ಟಕ್ಕೆ ಹೊರ­ಟಿ­ದ್ದರು. ಮಗು­ವಿಗೆ ಮೂತ್ರ­ಶಂಕೆ ಬಂಧು ತಾಯಿ ಮಗು­ವಿನ ಆರೈ­ಕೆ­ಯ­ಲ್ಲಿ­ದ್ದಳು. ಅದೆ ಸಮ­ಯಕ್ಕೆ ಬಸ್ಸು ಬಂದು ಬಿಟ್ಟಿತು. ಅಪ್ಪ ಮುಂದಿ ಬಾಗಿ­ಲಲ್ಲಿ ಬಸ್ಸು ಹತ್ತಿದ ತಾಯಿ ಮಗು ಹಿಂದಿನ ಬಾಗಿ­ಲಲ್ಲಿ ಹತ್ತಿ­ದರು.
ಹಳ್ಳಿ ಬಸ್ಸು ತುಂಬಾ ರಷ್‌ ಇತ್ತು. ಅಪ್ಪ ಎನ್ನು­ವ­ವನು ಟಿಕೆಟ್‌ ತಗೊಂಡ. ಸ್ವಲ್ಪ ದೂರ ಹೋದ ಮೇಲೆ ಎನೋ ನೆನ­ಪಾಗಿ ದೊಡ್ಡ­ದಾಗಿ ಕೂಗಿದ
`ಏ ಚೆಡ್ಡಿ ಹಾಕಿ­ಯೇನೆ' ಎಂದು ಹೆಂಡ್ತಿ ತಡ ಮಾಡ­ಲಿಲ್ಲ ನಿಮ್ಮ ಎದು­ರಿಗೆ ಹಾಕಿ­ನಲ್ರೋ' ಎಂದಳು
ಬಸ್‌­ನ­ಲ್ಲಿ­ದ್ದ­ವ­ರಿಗೆ ಆಶ್ಚರ್ಯ.. ಎನಿದು ಚೆಡ್ಡಿ ವಿಚಾ­ರ­ವನ್ನು ಹೀಗೆ ಮಾತಾ­ಡು­ತ್ತಾ­ರಲ್ಲ ಎಂದು ಕೊನೆಗೆ ನೋಡಿ­ದರೆ, ಮೂತ್ರ ಮಾಡಿ­ಸಲು ಮಗು­ವನ್ನು ಕರೆದು ಕೊಂಡು ಹೋಗಿ­ದ್ದ­ರಲ್ಲ ಮಗು­ವಿಗೆ ಚೆಡ್ಡಿ ಹಾಕಿ­ದಿಯಾ? ಎಂಬುದು ಅವರ ಮಾತಿನ ಹಿಂದಿ­ರುವ ಭಾವ.
ನಮ್ಮ ಪತ್ರಿಕಾ ವೃತ್ತಿ­ಯಲ್ಲಿ ಇಂತಹ ಹಾಸ್ಯ­ಗಳು ಬಹಳ. ಮೊದಲು ನಾನು ಪತ್ರಿಕಾ ವೃತ್ತಿ­ಯಲ್ಲಿ ಕಂಡ ಕೆಲವು ಜೋಕು­ಗ­ಳನ್ನು ಇಲ್ಲಿ ಬರೆ­ಯು­ತ್ತೇನೆ.
ಘಟನೆ ನಾಲ್ಕು......
ನಾನು ನೋಡಿ­ಕೊ­ಳ್ಳುವ ಜಿಲ್ಲೆಯ ಒಂದು ವರ­ದಿ­ಗಾರ ಒಂದು ಪೋಟೋಕ್ಕೆ ಕ್ಯಾಪ್ಷನ್‌ ಬರೆ­ದಿದ್ದ` ಈ ಊರಿನ ರೈತರ ದ್ರಾಕ್ಷಿ­ಬಿದ್ದು ಕೊಳೆ­ತು­ಹೋ­ಗಿವೆ.
ಘಟನೆ ಐದು....
ಒಂದು ಪತ್ರಿ­ಕೆ­ಯಲ್ಲಿ ಉಪ­ಸಂ­ಪಾ­ದಕ ಕೊಟ್ಟ ಹೆಡ್ಡಿಂಗ್‌ ಹೀಗಿತ್ತು `ಪ­ತಿ­ಯನ್ನು ಕೊಂದ­ವ­ಳಗೆ ಒಂಬತ್ತು ತಿಂಗಳು ಸಜೆ'
ಪೇಜ್‌ ಮಾಡು­ವ­ವ­ನಿಗೆ ಈ ಹೆಡ್ಡಿಂಗ್‌ ಸ್ವಲ್ಪ ಉದ್ದಾ­ಗಿತ್ತು ಅದ­ಕ್ಕಾಗಿ ಅವನು ಹೀಗೆ ಮಾಡಿದ `ಪ­ತಿ­ಯನ್ನು ಕೊಂದ­ವ­ಳಿಗೆ ಒಂಬತ್ತು ತಿಂಗಳು'

ಇಂತಹ ಹಲ­ವಾರು ಬಾಣ­ಗಳ ಸಂಗ್ರಹ ಬತ್ತ­ಳಿ­ಕೆ­ಯ­ಲ್ಲಿದೆ. ಇನ್ನೊಮ್ಮೆ ಸಂದರ್ಭ ಬಂದಾಗ ಹೇಳು­ತ್ತೇನೆ. ಆದ್ರೆ ಬರೆಯಲಿಕ್ಕೆ ಭಯ . ನಿಮ್ಮ ಅಭಿಪ್ರಾಯ ನೋಡಿ ಯಾರು ಬಯ್ಯದಿದ್ದರೆ ಮುಕ್ತವಾಗಿ ಹೇಳುತ್ತೇನೆ.

Monday, June 8, 2009

ಕಣ್ಣು ನೋಟ

ಕಣ್ಣಲ್ಲಿ ಕಣ್ಣಿಡಲಾಗಲಿಲ್ಲ
ನನ್ನ ಮೊದಲ ನೋಟ
ಅವಳ ನೋಟಕ್ಕೆ ಕೂಡಲಿಲ್ಲ
ಆಕೆಯ ನೋಟವೇ ಹಾಗೇ

ಹೊರಗಣ್ಣ ನೋಟ ಕೂಡಲಿಲ್ಲ
ಮನದ ಕಣ್ಣು ಕಲೆತಿವೆ?
ಮನದ ಮಾತು ತಿಳಿಯ ಬಲ್ಲಳು
ಅವಳು ನನ್ನವಳೇ??

ತಿಳಿಯ ಬಲ್ಲಳು; ಸೂಕ್ಷ್ಮ ಮನಸ್ಸು
ನನ್ನ ನೋಟಕ್ಕೆ ಅವಳ ನೋಟ ಕೂಡಿಸಬಲ್ಲಳು
ದಿನಾಲೂ “ಕೊಲ್ಲ” ಬಲ್ಲಳು ಅವಳ ನೋಟವೇ ಹಾ

Tuesday, June 2, 2009

ಮೃತ್ಯು ಕರೆ

ಮೂಲೆಯಲ್ಲಿ ಕೆಮ್ಮುತ್ತ ಕುಳಿತಿತ್ತು ಒಂದು ಜೀವ
ಆಕಾಶದೆಡೆಗೆ ಶೂನ್ಯ ದೃಷ್ಠಿಯನ್ನು ಬೀರಿ

ಬಾ.. ಎಂದು ಕರೆದರೆ
ತಿರುಗಿ ನೋಡದೆ ಹೋಗುವೆ
ಬೇಡವೆಂದಾಗ ದುತ್ತೆಂದು
ಬಂದು ನಿಲ್ಲುವೆ

ತೊಂಬತ್ತು ಸಂತ್ಸರವಾಯಿತು
ಸಾಕು ಈ ಬದುಕು
ನಿನ್ನ ಒಪ್ಪಿ ಅಪ್ಪಿ ಕೊಳ್ಳುತ್ತೇನೆ
ಬಂದು ಬಿಡು ನನ್ನಲ್ಲಿಗೆ

ಅವಳಿಗೆ ಇನ್ನೂ ಇಪ್ಪತ್ತು
ಅವನಿಗೆ ಆಗಲಿಲ್ಲ ಐವತ್ತು
ಜೀವನ ಅನುಭವಿಸುವ ಕಾಲ
ಅವರನ್ನೇ ಪ್ರೀತಿಸುತ್ತಿಯಲ್ಲ ನೀನು

ಜ ಗತ್ತಿನ ಸುಖ ಭೋಗಗಳನ್ನು ನೋಡಾಯಿತು
ಸಾಕಿನ್ನು ಭವದ ನಂಟು
ನಿನ್ನ ಬಿಗಿದಪ್ಪಿ ಕೊಳ್ಳುವೆ
ಬಂದುಬಿಡು ನನ್ನಲ್ಲಿಗೆ

ತನ್ನಷ್ಟಕ್ಕೆ ಅಂದು ಕೊಳ್ಳುತ್ತಿತ್ತು ಜೀವ..
ಕಾಲ ಬರುತ್ತಾನೆಯೇ..

Tuesday, April 21, 2009

ಇದು ಸಿನೆಮಾ ವರದಿ ಕತೆ


ಬಹಳ ಹಿಂದಿನ ಕತೆಯಲ್ಲ. ಈಗೊಂದು ವರ್ಷದ ಹಿಂದೆ. ಸಿನೆಮಾ, ಸಿನೆಮಾ ಜಗತ್ತು ಎಂದರೆ ತಲೆಯೊಳಗೆ ರಂಗುರಂಗಿನ ಕನಸುಗಳು ಬರುತ್ತಿದ್ದವು. ಅಬ್ಬಾ! ರಮ್ಯನ ಎದುರಿಂದ ನೋಡಿದರೆ ರಮ್‌ ಕುಡಿದಷ್ಟೇ ಖುಷಿಯಾಗಬಹುದೇನೋ!! ಮುಂಗಾರು ಮಳೆ ಪೂಜಾನ ನೋಡಿದರೆ ಪಾವನರಾಗುತ್ತೇವೆನೋ ಎಂದೆಲ್ಲಾ ಕಾಣುತ್ತಿತ್ತು. ಶಿವರಾಜ್‌ ಕುಮಾರ್‌, ಪುನೀತ್‌, ಮುರುಳಿ, ಕಿಟ್ಟಿ ಸಾಲು ಸಾಲಾಗಿ ಹೀರೋಗಳು ಕಣ್ಣೆದುರಿಗೆ ಬರುತ್ತಿದ್ದರು. ಆದರೆ ಅವೆಲ್ಲ ಸುಳ್ಳು, ಖಾಸಗಿ ಬದುಕೆಂಬುದು ಮೂರಾಬಟ್ಟೆಯಾಗಿ ಕೋಟಿ ಕೋಟಿ ದುಡಿದರು ಸರಿಯಾಗಿ ತಿನ್ನಲಿಕ್ಕೆ ಆಗದೆ, ಡೈಯಟ್ಟು ಪಯಟ್ಟು ಅನ್ಕೊಂಡು ಬದುಕುವ ಮಂದಿ ಎಂದು ಗೊತ್ತಾಗಿದ್ದೆ ನಾನೂ ಸಿನೆಮಾ ವರದಿಗೆ ಹೋಗತೊಡಗಿದಾಗ.
ನಾನು ಮೊದಲು ಹೋಗಿದ ಪ್ರೆಸ್‌ ಮೀಟ್‌ ಶಿವರಾಜ್‌ ಕುಮಾರ್‌ ಅಭಿನಯದ ನಂದ, ಈ ಚಿತ್ರ ಇಂದು ತೆರೆ ಕಂಡು ಸದ್ದು ಗದ್ದಲವಿಲ್ಲದೆ ಟ್ರಂಕ್‌ ಒಳಗಡೆ ಸೇರಿದೆ. ಇನ್ನೊಂದು ಪ್ರೀತಿಯ ತೇರು. ತೇರನ್ನು ಕಟ್ಟಿ ಬಹಳ ದಿನವಾದರೂ ಎಳೆಯಲು ಮಾತ್ರ ಆಗಲಿಲ್ಲ. ನಂತರ ಸುಮಾರು ಐವತ್ತು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದೆ.
ಎಲ್ಲಾ ಪತ್ರಿಕಾ ಗೋಷ್ಠಿಗಳು ಬಹುತೇಕ ಒಂದೇತರ. ನಟರು, ನಿರ್ದೇಶಕರು, ನಿರ್ಮಾಪಕರು ಬೇರೆ ಇರುತ್ತಾರೆಯೇ ಹೊರತು ಮಾತುಗಳೆಲ್ಲ ಒಂದೆಸೇಮ್‌.
ಸಾಮಾನ್ಯವಾಗಿ ನಿರ್ದೇಶಕ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತಾಡಲಿಕ್ಕೆ ಪ್ರಾರಂಭಿಸುತ್ತಾರೆ. ಇವರ ಮೊದಲ ವಾಕ್ಯವೇ ಇದೊಂದು ಡಿಫರೆಂಟ್‌ ಸ್ಟೋರಿ ಇರೋ ಚಿತ್ರ. ಐದು ಹಾಡು ನಾಲ್ಕು ಹಾಡುಗಳು ಪಕ್ಕಾ ಜಾನಪದ ಶೈಲಿಯಲ್ಲೆ ಇದೆ. ಅದಕ್ಕೆ ಮಾರ್ಡನ್‌ ಟಚ್‌ ನೀಡಿದ್ದೇವೆ. ಒಂದು ಐಟಂ ಸಾಂಗು. ಕತೆಗೆ ಸರಿಯಾಗೇ ಐಟಂ ಸಾಂಗ್‌ ಇದೆ. ಫಾರೇನ್‌ ಲೋಕೆಶನ್‌ಗೆ ಹೋಗುವ ಪ್ಲಾನ್‌ ಮಾಡಿದ್ದೇವೆ. ಮೂರು ಕೋಟಿ ಬಜೆಟ್‌. ನಿರ್ಮಾಪಕರು ನಾವು ಕೇಳಿದಕ್ಕೆ ಇಲ್ಲಾ ಎನ್ನುವುದಿಲ್ಲ ಎನ್ನುವ ಭರವಸೆ ಇದೆ ಎನ್ನುತ್ತಾರೆ.
ನಂತರ ನಾಯಕನ ಸರದಿ ಪ್ರಾರಂಭವಾಗುತ್ತದೆ. ಚಿತ್ರದ ಕತೆ ಮಾತ್ರ ಸೂಪರ್‌, ನಿರ್ದೇಶಕರು ಬಂದು ಕತೆಯನ್ನು ಹೇಳಿದರು ಖುಷಿಯಾಯಿತು. ಮದರ್‌ ಸೆಮಟಿಮೆಂಟ್‌ ಇರೋ ಸಿನೆಮಾ. ಮ್ಯಾಸೇಜ್‌ ಇದೆ. ಚಿತ್ರ ಚೆನ್ನಾಗಿ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ.
ನೆಕ್ಷ್ಟ್‌ ನಾಯಕಿ, ದಿಸ್‌ ಇಸ್‌ ಮೈ ಥರ್ಡ್‌ ಮೂವಿ. ಬ್ಯುವ್ಟಿಫೂಲ್‌ ಸ್ಟೋರಿ. ಇಷ್ಟು ಹೇಳಿ ಮೌನಕ್ಕೆ ಶರಣಾಗುವರು ಹೆಚ್ಚಿಗೆ ಮಂದಿ.ನಾದರು ಹೆಚ್ಚಿಗೆ ಪ್ರಶ್ನೆ ಏನಾದರೂ ಕೇಳಿದರೆ, ನಿರ್ದೇಶಕರು ಅವರ ಸಹಾಯಕ್ಕೆ ಬರುತ್ತಾರೆ. ನಾಲಿಗೆಯ ಮೇಲೆ ಕನ್ನಡ ಎನ್ನುವ ಅಕ್ಷರ ಮರೆಯಾಗಿ ಇಂಗ್ಲಿಷ್‌ ನಲಿದಾಡುತ್ತದೆ. ಹಾಗೇ ಹೇಳಿ ನಿರ್ದೇಶಕರು ಇವರನ್ನು ಪರಿಚಯ ಮಾಡಿ ಕೊಡುವಾಗ ಇವರು ಕನ್ನಡ ಹುಡುಗಿ ಎಂದು ಪರಿಚಯ ಮಾಡಿ ಕೊಡುತ್ತಾರೆ.
ಹದಿನೈದು ನಿಮಿಷದ ಪತ್ರಿಕಾಗೊಷ್ಠಿಗೆ ಕನಿಷ್ಠ ಮೂರು ತಾಸು ವ್ಯಯ ಮಾಡಬೇಕಾಗುತ್ತದೆ ಎನ್ನುವುದು ವಿಶೇಷ. ಯಾರಾದರೂ ಪತ್ರಕರ್ತ ನಟಿ ಅಥವಾ ನಾಯಕನ್ನು ಹೊಗಳದೆ ತೆಗಳಿದರೆ ಕಚೇರಿಗೆ ಕಾಲ್‌ ಗ್ಯಾರಂಟಿ. ಅದೇ ಒಳ್ಳೆಯದಾಗಿ ಬರೆದರೆ ಮಾತು ಆಡಿಸುವುದಿಲ್ಲ. ಇದು ಸಿನೆಮಾ ವರದಿಗೆ ಹೋದ ಅನುಭವ. ಇಷ್ಟೇ ಅಲ್ಲ. ಇನ್ನು ಇದೆ. ಮತ್ತ್ಯಾವಾಗಾದರೂ ಬರೆಯುವ.

Thursday, March 26, 2009

ವರುಣಾವತಾರ


ವರುಣ್‌ ಗಾಂಧಿ ಸಂಜಯ್‌ ಗಾಂಧಿ, ಮೇನಕಾ ಗಾಂಧಿಯ ಏಕೈಕ ಪುತ್ರ ಎನ್ನುವುದು ಗೊತ್ತು. ನೆಹರು ಕುಟುಂಬದ ಈ ಕುಡಿ ತೀರಾ ಭಿನ್ನ ಎನ್ನುವುದು ಗೊತ್ತಾಗಿದ್ದು ಮಾತ್ರ ಇತ್ತಿಚೇಗೆ.
‘ಹಿಂದೂಗಳ ಮೇಲೆ ಎತ್ತುವ ಕೈಗಳನ್ನು ಕತ್ತರಿಸಿ’, ‘ಮುಸ್ಲಿಂರನ್ನು ಹಿಡಿದು ಹಿಡಿದು ಸಂತಾನ ಹರಣ ಮಾಡಬೇಕು’ ಎನ್ನುವ ಮೂಲಕ ವಿವಾದದ ಸುಳಿಗೆ ವರುಣ್‌ ಸಿಕ್ಕಿದ ಮೇಲೆ. ಪ್ರವರ್ಧಮಾನಕ್ಕೆ ಬಂದರು ಎನ್ನಬಹುದು. ಅಲ್ಲಿಯವರೆಗೆ ಮೇನಕಾ ಗಾಂಧಿ ಮಗ ಅಂದಷ್ಟೇ ಗೊತ್ತಿತ್ತು. ಈಗ ಪ್ರಕರ ಹಿಂದೂ ವಾದಿ ಎನ್ನುವುದನ್ನು ವರಣ್‌ ಘಂಟಾ ಘೋಷವಾಗಿ ಸಾರಿದ್ದಾರೆ. ಅಪ್ಪನ ಮಗ ಎನಿಸಿಕೊಂಡಿದ್ದಾರೆ.
ವರುಣ್‌ ಗಾಂಧಿಯ ಮಾತು ಕೆಲವರಿಗೆ ಅಪಥ್ಯವಾಗಿದೆ. ವರುಣ್‌ ಅಕ್ಕ ಪ್ರಿಯಾಂಕಾ ಗಾಂಧಿ ತಮ್ಮನ ಮಾತು ಕೇಳಿ ದಿಗ್ಭ್ರಮೆಯಾಗಿದೆ. “ನನ್ನ ತಮ್ಮ ಭಗವದ್ಗೀತೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿಲಿ’ ಎಂದಿದ್ದಾರೆ. ವರುಣ್‌ ಗಾಂಧಿ ಮನಸ್ಸಿನ ಮಾತನ್ನು ಆಡಿದ್ದಾರೆ. ಸತ್ಯ ಹೇಳಿದ್ದಾರೆ. ಓಲೈಕೆಯ ಮಾತು ಅವರಿಗೆ ಬೇಡ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಆದರೆ ನಾಯಕನಾಗಲು ಹೊರಟವ ಎಲ್ಲರೆದುರಿಗೆ ಈ ರೀತಿ ಮಾತನಾಡುವುದು ತಪ್ಪು. ಮನಸ್ಸಿನ ಮಾತು ಮನಸ್ಸಿನಲ್ಲಿಯೇ ಇರಲಿ ಎನ್ನುವುದು ಹಲವರ ಅಭಿಪ್ರಾಯ.
ಇದು ಒಂದು ಕಡೆ ಇರಲಿ, ಕಾಂಗ್ರೆಸ್‌ನವರಿಗೆ ಯಾಕೆ ಮೇನಕಾ ಗಾಂಧಿ ಅವರ ಕುಟುಂಬ ವರ್ಜ್ಯ. ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಪ್ರಿಯಾಂಕಾ ವಡೇರಾ(ಗಾಂಧಿ) ಅವರನ್ನು ಇನ್ನು ಬೆಳೆಸುತ್ತಿದ್ದಾರೆ. ಅವರು ಹೇಳಿದ ತಾಳಕ್ಕೆ ಲಯ ತಪ್ಪಿದರೂ ಬಿಡದೆ ಕುಣಿಯುತ್ತಿದ್ದಾರೆ. ಇವರೆದುರು ಬೆನ್ನನ್ನು ಬಗ್ಗಿಸಿ ನೆತ್ತಿಯನ್ನು ನೆಲಕ್ಕೆ ತಾಗುವ ರೀತಿಯಲ್ಲಿ ನಿಂತು ಶರಣಾಗಿ ನಿಲ್ಲುತ್ತಿದ್ದಾರೆ. ಅಂತವರು ಇಂದಿರಾ ಗಾಂಧಿ ಎರಡನೆ ಮಗನ ಹೆಂಡತಿ, ಮಗ ಬೇಡವಾದರಲ್ಲ! ಒಂದು ರೀತಿಯ ವಿಷಾದ.
ಈ ರೀತಿಯ ಡೋಂಗಿ ವರ್ತನೆಗಿಂತ ವರುಣ್‌ ಗಾಂಧಿಯ ಮಾತೇ ಎಷ್ಟೋ ವಾಸಿ ಎನಿಸುತ್ತದೆ.
ರಾಹುಲ್‌ ಮೂರು ತಿಂಗಳಿಗೆ ತಂದೆಯನ್ನು ಕಳೆದು ಕೊಂಡು ಉತ್ತಮ ಶಿಕ್ಷಣವನ್ನು ತಾಯಿಕೊಡಿಸಿದರು. ಹಿಂದೂ ಮನಸ್ಥಿತಿಯಲ್ಲೇ ಇರುವುದು ಸೋಜಿಗವೇ ಸರಿ. ಜಾತ್ಯಾತೀತ ತತ್ವಗಳಿಗೆ ಒತ್ತು ನೀಡುವ ನೆಹರೂ ಕುಟುಂಬದವನೇ ಇವನು ಎನ್ನುವಷ್ಟು ಆಶ್ಚರ್ಯ ವರುಣ್‌ ನೋಡಿದರೆ ಆಗುತ್ತದೆ.
ಸಂಜಯ್‌ ಗಾಂಧಿ 1974-76ರ ವರೆಗೆ ವರ್ತಿಸಿದ ರೀತಿ ಇಂದಿರಾಗಾಂಧಿಗೂ ತಲೆ ನೋವಾಗಿತ್ತಂತೆ. ಅವರೇ ಒಂದು ಹಂತದಲ್ಲಿ ಸಂಜಯ್‌ ಗಾಂಧಿಯನ್ನು ದೂರವಿಟ್ಟಾಗ ನಾವು ದೂರ ಇಡುವುದು ಎನು ಮಾಹಾ? ಎನ್ನುವ ಆಲೋಚನೆಯೂ ಕಾಂಗ್ರೆಸ್‌ ನಾಯಕರಿಗೆ ಬಂದರೆ ತಪ್ಪಲ್ಲ.
ವರುಣ್‌ ವಿಚಾರಕ್ಕೆ ಬಂದಾಗ ತಂದೆಯಂತೆ ಮಗನು ಸಹ ಮುಸ್ಲಿಂರ ವಿರುದ್ಧ ಮಾತನಾಡಿದ್ದಾರೆ. ಋಣಾತ್ಮಕ ಪ್ರಚಾರವನ್ನು ಪಡೆದು ಕೊಂಡಿದ್ದಾರೆ. ಇಲ್ಲಿ ಕೆಲವು ಅಂಶಗಳನ್ನು ಈ ರೀತಿಯಲ್ಲಿ ವಿವೇಚಿಸಬಹುದೇನೋ ... . . . . . .
· ಹಿಂಸಾತ್ಮಕ ಮಾತನ್ನು ವರುಣ್‌ ಸಾರ್ವಜನಿಕವಾಗಿ ಆಡಿದ್ದು ತಪ್ಪು.
· ಕ್ರೂರತೆಯನ್ನು ಯಾರು ಒಪ್ಪುವುದಿಲ್ಲ.
· ಸಿನೆಮಾದಲ್ಲಿ ಪ್ರಾಣಿ ಹಿಂಸೆ ಮಾಡಿದರೂ ಬೊಬ್ಬೆ ಹಾಕುವ ಮೇನಕಾ ಗಾಂಧಿ ವರುಣ್‌ ಮಾತನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?
· ವರುಣ್‌ಗೆ ಇನ್ನು ಚಿಕ್ಕ ವಯಸ್ಸು.
· ರಾಹುಲ್‌ ಗಾಂಧಿಯನ್ನು ಇತರರು ಬೆಳೆಸುತ್ತಿರುವುದು ಸಹೋದರ ವರುಣ್‌ಗೆ ಕಷ್ಟವಾಗಿರಬಹುದು.
· ನನ್ನನ್ನು ನಾನೇ ಬೆಳಸಿಕೊಳ್ಳಬೇಕು ಎನ್ನುವ ಆಲೋಚನೆ ವರುಣ್‌ಗೆ ಬಂದಿರಬಹುದು.
· ವರುಣ್‌ ಮಾತಾಡಿರುವುದು ಚುನಾವಣೆಗೆ ನಿಲ್ಲಲು ಅನರ್ಹ ಎನ್ನುವಷ್ಟು ತಪ್ಪಿನ ಮಾತಲ್ಲ.
· ಚುನಾವಣಾ ಆಯೋಗದ ಸಲಹೆ ಅಗತ್ಯವಿರಲಿಲ್ಲ.
· ಮುಲಾಯಂ ಸಿಂಗ್‌ ಚುನಾವಣಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದರೂ ಚುನಾವಣೆಗೆ ನಿಲ್ಲ ಬೇಡಿ ಎನ್ನುವ ಸಲಹೆ ನೀಡಲಿಲ್ಲ.
· ಸಂಜಯ್‌ ದತ್ತ್‌ ಟಾಡಾ ಕಾಯ್ದೆಯಡಿಯಲ್ಲಿ ಬಂಧಿತನಾದರೂ ಅವನಿಗೆ ಚುನಾವಣೆಯಲ್ಲಿ ನಿಲ್ಲಲೂ ಅವಕಾಶ.
· ಶೀಬು ಸೋರೆನ್‌ ಚುನಾವಣೆಗೆ ನಿಲ್ಲಬಹುದಾರೇ ವರುಣ್‌ ನಿಂತರೆ ಏನೂ ತಪ್ಪಿಲ್ಲ.
· ಕ್ರಿಮಿನಲ್‌ಗಳನ್ನು ಸುಮ್ಮನೆ ಬೀಡುವವರು. ವರುಣ್‌ ಮಾತು ತಪ್ಪು ಎನ್ನುವುದು ಎಷ್ಟು ಸರಿ?
· ಹವಾಲಾ, ಬೋಫೋರ್ಸ, ಭ್ರಷ್ಟಾಚಾರ ಎಲ್ಲದಕ್ಕೂ ಅವಕಾಶ ನೀಡಿ, ಮೇಲ್ವರ್ಗದವರೇ ಹೆಚ್ಚಿರುವ ಕಾಂಗ್ರೆಸಿಗರಿಗೆ ವರುಣ್‌ ಮಾತು ತಪ್ಪಾಗಿ ಕಾಣುತ್ತಿದೆ.
ಒಟ್ಟಾರೆ ವರುಣ್‌ ಪ್ರಕರಣವನ್ನು ಗಮನಿಸಿದಾಗ ಮಾಡಬಾರದ ತಪ್ಪನ್ನು ವರುಣ್‌ ಮಾತಾಡಲಿಲ್ಲ. ಉದ್ರೇಕವಾಗಿ ಭಾಷಣ ಮಾಡುತ್ತಿರುವಾಗ ಎಲ್ಲಿಂದಲೋ ಈ ಮಾತುಗಳು ನುಸುಳಿರಬಹುದು. ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ ಅನ್ನಿಸುತ್ತದೆ. ಆದರೂ ವರುಣ್‌ ಮಾತನಾಡಿರುವುದು ತಪ್ಪು ಎನ್ನುವುದು ಒಂದು ಕಡೆಯಾದರೆ, ಒಳಗಡೆಯಿಂದಲೇ ಬತ್ತಿ ಇಡುವ ಬದಲು ವರುಣ್‌ ಮಾತು ಎಷ್ಟೋ ಒಳೆಯದು ಎನ್ನುವ ವಾದವು ಸರಿ ಎನ್ನಬಹುದಲ್ಲವೇ?

Tuesday, February 24, 2009

ಸ್ಲಂ ಡಾಗ್, ಪಿಂಕಿ ಮತ್ತು ಆಸ್ಕರ್


ಅಂತೂ ಭಾರ­ತೀಯ ಕಥೆ­ಯನ್ನು ಆಧ­ರಿ­ಸಿದ ಭಾರ­ತ­ದ­ಲ್ಲದ ಚಿತ್ರಕ್ಕೆ `ಆ­ಸ್ಕರ್‌' ಪುರ­ಸ್ಕಾರ ಲಭಿ­ಸಿದೆ. ಮುಂಬೈನ ಎಲ್ಲಾ ಸ್ಲಂಗ­ಳ­ಲ್ಲಿಯೂ ಹರ್ಷ­ದಿಂದ ಕುಣಿ­ದಾ­ಡಿ­ದರು. ನನಗೂ ಅತ್ಯಂತ ಖುಷಿ­ಯಾ­ದದ್ದು ಸತ್ಯ. ಒಂದು ಉತ್ತಮ ನಿರೂ­ಪ­ಣೆಯ ಸಿನೆಮಾ ಎನ್ನುವ ದೃಷ್ಠಿ­ಯಿಂದ. ಒಬ್ಬ ಭಾರ­ತೀ­ಯ­ನಾಗಿ ಆ ಸಿನೆ­ಮಾ­ವನ್ನು ನೋಡಿ­ದರೆ ಖಂಡಿತ ಬೇಸ­ರ­ವಾ­ಗು­ತ್ತದೆ.
`ಸ್ಲಂ ಡಾಗ್‌ ಮಿಲೆ­ನೀ­ಯರ್‌' ಆಸ್ಕರ್‌ ಪುರ­ಸ್ಕಾ­ರಕ್ಕೆ ಆಯ್ಕೆ­ಯಾ­ದಾಗ ಪ್ರಶಸ್ತಿ ಇದಕ್ಕೆ ಲಭ್ಯ­ವಾ­ಗು­ತ್ತದೆ ಎನ್ನುವ ಭವಿ­ಷ್ಯ­ವನ್ನು ಬಹಳ ಜನ ನುಡಿ­ದದ್ದು ಈಗ ಹಳೆಯ ಮಾತು. ಈ ಚಿತ್ರ­ಕ್ಕಿಂತ ಮೊದಲು ಲಗಾನ್‌, ಮದರ್‌ ಇಂಡಿಯಾ ಸಿನೆ­ಮಾ­ಗಳು ಆಸ್ಕರ್‌ ಪುರ­ಸ್ಕಾ­ರ­ಕ್ಕಾಗಿ ನಾಮ ನಿರ್ದೇ­ಶ­ನ­ಗೊಂ­ಡಿ­ದ್ದವು. ಆದರೆ ಸಿಗ­ಲಿಲ್ಲ. ಲಗಾನ್‌ ಅಪ್ಪಟ ದೇಶೀ ಸಿನೆ­ಮಾ­ವಾ­ಗಿತ್ತು. ನಿರ್ದೇ­ಶಕ ಭಾರ­ತೀಯ, ನಿರ್ಮಾ­ಪಕ ಭಾರ­ತೀಯ. ಬ್ರಿಟಿ­ಷರ ದಬ್ಬಾ­ಳಿಕೆ ವಿರುದ್ಧ ಭಾರ­ತೀ­ಯರು ಕ್ರಿಕೆಟ್‌ ಆಡಿ ಅವ­ರನ್ನು ಸೋಲಿ­ಸುವ ಚಿತ್ರ. ಸ್ವಾಭಾ­ವಿ­ಕ­ವಾಗಿ ಅವ­ರಿಗೆ ಬೇಸ­ರ­ವಾ­ಗಲೇ ಬೇಕು. ಅವರು ಹೇಗೆ ಆಸ್ಕರ್‌ ಪುರ­ಸ್ಕಾರ ನೀಡಿ­ಯಾರು.
ಸ್ಲಂ ಡಾಗ್‌ ವಿಚಾ­ರಕ್ಕೆ ಬಂದರೆ ವಿದೇ­ಶದ ಹಣ, ವಿದೇಶೀ ನಿರ್ದೇ­ಶಕ, ವಿದೇಶೀ ತಾಂತ್ರಕ ವರ್ಗ ಎಲ್ಲವು ವಿದೇಶೀ. ಎ ಆರ್‌ ರೆಹ­ಮಾನ್‌, ಗುಲ್ಜಾರ್‌, ರಸುಲ್‌ ಪೂಕುಟ್ಟಿ ಮತ್ತು ನಟರು ಭಾರ­ತೀ­ಯರು. ಭಾರ­ತೀಯ ವ್ಯವ­ಸ್ಥೆ­ಯನ್ನು ಅಣ­ಕಿ­ಸುವ ಸಿನೆ­ಮಾಕ್ಕೆ ಆಸ್ಕರ್‌ ಪ್ರಶಸ್ತಿ ಬಂದಿದೆ. ನಾವು ಖುಷಿ­ಯಾಗಿ ಕುಣಿದು ಸಂಭ್ರ­ಮಿ­ಸು­ತ್ತಿ­ದ್ದೇವೆ. ವೀದೇಶೀ ನಿರ್ದೇ­ಶ­ಕ­ರಿಗೆ ವಿಕಾಸ್‌ ಸ್ವರೂಪ್‌ ಅವರು ನಮ್ಮನ್ನೇ ಅಣ­ಕಿಸಿ ಕೊಂಡಿ­ರುವ `ಕ್ಯು ಆ್ಯಂಡ್‌ ಎ` ಕಾದಂ­ಬ­ರಿಯೇ ಅವರ ಕಣ್ಣಿಗೆ ಕಂಡಿ­ತಲ್ಲ. ಅದನ್ನು ಮೆಚ್ಚ­ಬೇಕು. ಭಾರ­ತೀ­ಯರ ಸಾಧ­ನೆ­ಯನ್ನು ತೋರಿ­ಸುವ ಕಾದಂ­ಬರಿ ಅವ­ರಿಗೆ ಕಾಣ­ಲಿ­ಲ್ಲ­ವಲ್ಲ ಎಂಬುದು ದುರಾ­ದೃಷ್ಟ.
ನಮ್ಮ ಹಣ­ವನ್ನು ಹೂಡದೇ ನಮ್ಮ ಸಿನೆಮಾ ಎನ್ನುವ ನಾವು ಸ್ವಾಭಿ­ಮಾನ ಕಳೆದು ಕೊಂಡಂತೆ. ಆದರೆ ವೀದೇಶಿ ಸಿನೆಮಾ ರಂಗ ನಮ್ಮ ದೇಶದ ಸಂಗೀತ, ಧ್ವನಿ ಸಂಯೋ­ಜನೆ ಮತ್ತು ನಮ್ಮ­ಲ್ಲಿಯ ನಟ­ರಿಗೆ ಚೆನ್ನಾಗಿ ಅಭಿ­ನಯ ಮಾಡಲು ಬರು­ತ್ತದೆ ಎಂದು ಪ್ರಪಂಚ ಮುಖಕ್ಕೆ ತೋರಿಸಿ ಕೊಟ್ಟ­ರಲ್ಲ ಎನ್ನು­ವುದು ಸಮಾ­ಧಾನ.
ಪಕ್ಕನೆ ನಕ್ಕ ಪಿಂಕಿ
ಈ ನಡುವೆ ಸಿeಳು ತುಟಿಯ ಪುಟ್ಟ ಹುಡು­ಗಿಯ ಕುರಿ­ತಾಗಿ ಭೋಜ್‌­ಪುರಿ ಭಾಷೆ­ಯಲ್ಲಿ ನಿರ್ಮಿ­ಸಿದ ಸ್ಮೈಲ್‌ ಪಿಂಕಿ ಶ್ರೇಷ್ಠ ಕಿರು ಚಿತ್ರ­ವೆಂದು ಆಸ್ಕರ್‌ ಪ್ರಶಸ್ತಿ ಲಭಿ­ಸಿ­ರು­ವುದು ಸಂತೋ­ಷದ ಸಂಗತಿ. ಒಂದು ಹಂತ­ದಲ್ಲಿ ಯೋಚಿ­ಸಿ­ದಾಗ ಸ್ಲಂ ಡಾಗ್‌­ಕ್ಕಿಂತ ಪಿಂಕಿ ಚಿತ್ರವೇ ಹೆಚ್ಚು ಎನ್ನಿ­ಸು­ತ್ತದೆ. ಇದೊಂದು ನೈಜ ಕಥೆ ಮತ್ತು ಅದೇ ಹುಡುಗಿ ಸ್ವತಃ ಅಭಿ­ನಯ ನೀಡಿ­ದ್ದಾಳೆ. ಮೆಗಾನ್‌ ಎನ್ನುವ ವಿದೇಶಿ ಮಹಿಳೆ ನಿರ್ಮಿ­ಸಿ­ದರೂ ಇದ­ರ­ಲ್ಲೊಂದು ಕಳ­ಕಳಿ ಕಾಣಿ­ಸು­ತ್ತದೆ. ಸತ್ಯಕ್ಕೆ ಹತ್ತಿ­ರ­ವಾ­ಗಿ­ರು­ವುದು ಇದಕ್ಕೆ ಕಾರ­ಣ­ವಾ­ಗಿ­ರ­ಬ­ಹುದು. ಏನೇ ಆಗಲಿ ಆಸ್ಕರ್‌ ಬಂದಿದೆ ಇಲ್ಲಿನ ಹಲ­ವಾರು ಪ್ರತಿ­ಭೆ­ಗಳ ಪ್ರದ­ರ್ಶನ ಆಗಿದೆ.

Saturday, February 14, 2009

ಹಗಲು ಕಳೆಯುವ ಸಮಯ


ಎಂದಿನಂತೆ ಅಂದೂ ನಾನು ಬೆಳಿಗ್ಗೆ ಆರರ ಫಸ್ಟ ಬಸ್ಸಿಗೆ ಹೊರಟಿದ್ದೆ. ದಿನಾಲೂ ಕಾಣುವ ವೆಂಕಟರಾಯರು ಅವತ್ತು ಕಾಣಲಿಲ್ಲ. ಆಶ್ಚರ್ಯ! ಐದು ವರ್ಷದದಿಂದ ಬೇಸಿಗೆ, ಮಳೆ, ಚಳಿಗಾಲದ ಪ್ರತಿದಿನವು ಅವರ ದರ್ಶನವನ್ನು ಮಾಡದೆ ನಾ ಹೋದದ್ದಿಲ್ಲ. ಅವರು ಹಾಗೇ ನಾನು ಕಾಣುವವರೆಗೆ ವಾಕಿಂಗಿಂದ ಮನೆಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಅವರ ಮನೆಗೆ ಏನೇ ಸಾಮಾನು ಸರಂಜಾಮು ಬೇಕಿದ್ದರು ನನ್ನ ಹತ್ತಿರವೇ ಹೇಳುತ್ತಿದ್ದರು, ನಾನೂ ತಂದು ಕೊಡುತ್ತಿದ್ದೆ. ನಮ್ಮಲ್ಲಿ ಒಂದು ರೀತಿಯ ಆತ್ಮೀಯತೆ. ಸ್ನೇಹ, ಪ್ರೀತಿ, ಎಲ್ಲವೂ ಇತ್ತು. ನಾನೂ ಭಾನುವಾರ ಅವರ ಮನೆಗೆ ಚಹಾ ಕುಡಿಯಲಿಕ್ಕೆ ಹೋಗುತ್ತಿದ್ದೆ. ಅಪರೂಪಕ್ಕೆ ಊಟಕ್ಕೂ.
ವೆಂಕಟರಾಯರ ಹೆಂಡತಿ ರಮಾಬಾಯಿ. ಮನೆಗೆ ಹೋದರೆ ಉತ್ತಮ ಆಧರಾತಿಥ್ಯ. ತುಂಬಾ ಹತ್ತಿರವಾಗುತ್ತಿದ್ದರು. ಇಂತಿರುವಾಗ ದಿನಾಲೂ ಕಾಣುವವರು ಕಾಣದಿದ್ದಾಗ ಎನೋ ಕಳೆದು ಕೊಂಡ ಹಾಗೇ ಅನ್ನಿಸುತ್ತದೆ. ಅದಕ್ಕಾಗಿ ತಡ ಮಾಡಲಿಲ್ಲ. ನೇರ ಅವರ ಮನೆಗೆ ಹೋದೆ. ಮೊದಲೇ ವಯಸ್ಸಾದವರು. ಗಂಡನಿಗೆ ಹೆಂಡತಿ ; ಹೆಂಡತಿಗೆ ಗಂಡ ಆಶ್ರಯ
ಅವರ ಮನೆಯೊಳಗೆ ನಾ ಕಂಡಿದ್ದೇನು! ರಾಯರು ಎಡ ಕೈಯನ್ನು ಎದೆಯ ಮೇಲೆ ಒತ್ತಿಕೊಂಡಿದ್ದಾರೆ. ಉಸಿರಾಟಕ್ಕೆ ತೊಂದರೆ ಆಗಿರುವುದು ಸ್ಪಷ್ಟ. ರಮಾಬಾಯಿ ಅವರು ಟೆನ್ಷನ್‌ ಮಾಡಿಕೊಂಡು ಕುಳಿತಿದ್ದಾರೆ. ಅಮ್ಮ , ಎನಾಯ್ತು ರಾಯರಿಗೆ ಅಂದೆ. ಎನೋಪ್ಪಾ ರಾತ್ರಿ ಇದ್ದಕ್ಕಿದ್ದ ಹಾಗೇ ಎದೆ ನೋವು ಬಂತು . ಡಾಕ್ಟ್ರಿಗೆ ಪೋನ್‌ ಮಾಡಿದೆ. ಬಂದು ಔಷಧಿ ಕೊಟ್ಟು ಹೋಗಿದ್ದಾರೆ. ಮತ್ತೇನು ಹೇಳಲಿಲ್ಲ. ನಿಮ್ಮವರು ಯಾರಾದ್ರು ಇದ್ರೆ ಬೆಳಿಗ್ಗೆ ದವಾಖಾನೆಗೆ ಕಳಿಸಿ ಎಂದಿದ್ದಾರೆ ನೀ ಸ್ವಲ್ಪ ಹೋಗಿ ಬರ್ತೀಯಾ? ಅಂದರು ರಮಾ ಬಾಯಿಯವರು .ಆಯ್ತು ಎಂದವನೆ ಹೊರಟೆ.
ಹೊರನೋಟಕ್ಕೆ ಸುಖಿಸಂಸಾರ. ಗಂಡ ಹೆಂಡತಿ ಇಬ್ಬರೇ ಇರೋದು. ಇಬ್ಬರು ರೀಟೈಡ್‌ ಟೀಚರ್ಸ್‌. ಹಣಕಾಸಿನ ತೊಂದರೆ ಎನೂ ಇಲ್ಲ. ಒಬ್ಬನೇ ಮಗ ಇರೋದು. ಹೊರ ದೇಶದಲ್ಲಿ ಇದಾನಂತೆ. ಮಗನ ಬಗ್ಗೆ ಒಂದು ದಿನಾನೂ ನನ್ನಲ್ಲಿ ಪ್ರಸ್ತಾವಿಸಿಲ್ಲ, ಈ ಐದು ವರ್ಷದಲ್ಲಿ ; ನಾನಾಗಿಯೂ ಕೇಳಲಿಲ್ಲ. ಅವರು ಯಾವತ್ತು ತಮ್ಮ ವೈಯಕ್ತಿಕ ವಿಚಾರವನ್ನು ಹೇಳಲಿಲ್ಲ ನನಗೆ ರಾಯರ ಬಗ್ಗೆ ಗೊತ್ತಿರುವುದನ್ನು ಹೇಳಿ ಹೊರಟೆ.
***************************
ವೆಂಕಟರಾಯರು ತೀರ್ಥಳ್ಳಿ ಹತ್ತಿರದ ಕೋಣಂದೂರಿನವರು. ಪ್ರಾಥಮಿಕ ಶಿಕ್ಷಣವನ್ನು ಮುಗಿದ ಕೂಡಲೇ ಊರನ್ನು ಬಿಟ್ಟವರು ಮತ್ತೆ ಊರಿನ ಕಡೆ ಮುಖವನ್ನು ಹಾಕಿದವರಲ್ಲ, ಮೈಸೂರು ಸೇರಿ, ಅಲ್ಲೇ ವಿದ್ಯಾಭ್ಯಾಸ. ಅಲ್ಲಿಯೇ ಹೈಸ್ಕೂಲ್‌ ಮೇಸ್ಟ್ರಾಗಿ ವೃತ್ತಿ ಜೀವನ ಪ್ರಾರಂಭ. ರಮಾಭಾಯಿಯವರು ನಂಜನಗೂಡಿನವರು. ರಾಯರ ಸಹೋದ್ಯಗಿ ಕೂಡಾ. ಪ್ರೀತಿಸಿ ಮದುವೆಯಾದರು ಅನ್ನುವುದಕ್ಕಿಂತ ಪರಸ್ಪರ ಪರಿಚಯ. ಒಟ್ಟಿಗೆ ಎರಡು ವರ್ಷ ಕೆಲಸ ಮಾಡಿ ರೂಢಿ. ಜೀವನ ಪೂರ್ತಿ ಒಟ್ಟಿಗೆ ಇದ್ದರೆ ಹೇಗೆ? ಎಂದು ಯೋಚಿಸಿ ಸಂಸಾರ ಪ್ರಾರಂಭಿಸಿದರು.
ಮೊದಲೇ ಇಬ್ಬರ ಒಪ್ಪಂದಮೊಂದಿತ್ತು. ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು ಎಂದು. ಅದರಂತೆ ರಾಯರ ಯೋಗವೆಂಬಂತೆ ಗಂಡು ಮಗುವೇ ಆಯಿತು. ಸದಾನಂದ ಎಂಬ ನಾಮಕರಣವು ಆಯಿತು. ತಮ್ಮನ್ನು ಸದಾ ಆನಂದದಲ್ಲಿ ಇಡಬೇಕು ಎಂಬ ಬಯಕೆಯಿಂದ. ಉತ್ತಮ ಸಂಸ್ಕಾರ ನೀಡಿದರು. ಮೊದಲೇ ಹೇಳಿ ಕೇಳಿ ಮಾಸ್ತರ್‌ ಮಂದಿ . ಮಗನ್ನು ಸ್ಟ್ರಿಕ್ಟಾಗಿ ಬೆಳಸಿದರು. ಇಂಜನಿಯರಿಂಗ್‌ ಕಲಿಸಿದರು. ಮಗ ಬುದ್ಧಿವಂತ ಕೊನೆಯ ಸೆಮಿಸ್ಟರಲ್ಲೆ ನೌಕರಿಯು ದೊರೆಯಿತು ವಿಪ್ರೋದಲ್ಲಿ. ಎರಡನೆ ವರ್ಷಕ್ಕೆ ವಿದೇಶಕ್ಕೆ ಹೋಗುವ ಯೋಗ . ರಾಯರ ಸಂತೋಷಕ್ಕೆ ಎಣೆಯಿರಲಿಲ್ಲ. ನಮ್ಮ ಕುಟುಂಬದಲ್ಲಿ ಒಬ್ಬನಾದರು ಹೊರ ದೇಶಕ್ಕೆ ಹೋಗುತ್ತಿದ್ದಾನಲ್ಲ ಎಂಬುದೊಂದೆ ಸಡಗರಕ್ಕೆ ಕಾರಣವಾಗಿತ್ತು.
ಸಮುದ್ರವನ್ನು ಉತ್ತರಿಸಿ ಹೋಗುವ ಮಗನಿಗೊಂದು ಮದುವೆ ಎಂಬುದೊಂದನ್ನು ಮಾಡಿ ಕಳಿಸಿದರೆ ತಮ್ಮ ಜವಾಬ್ದಾರಿ ಮುಗಿತು ಎಂಬ ಅನಿಸಿಕೆ. ಮಗನ ಹತ್ತಿರ ಕೇಳಲಿಲ್ಲ ನೀನು ಯಾರನ್ನಾದರನ್ನು ಮೆಚ್ಚಿದ್ದಿಯಾ ಎಂದು. ತಾವೇ ಹೆಣ್ಣೊಂದನ್ನು ನೋಡಿದರು. ಮಗನಿಗೆ ಹೇಳಬೇಕು ಎಂಬಷ್ಟರಲ್ಲಿ, ಸದಾನಂದ ಸತಿ ಸಂತಿಗೆ ಮನೆಗೆ ಅಡಿಯಿಟ್ಟ. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡರು ರಾಯರು. ಅಲ್ಲಿಂದ ಈ ಮಗ ನಮ್ಮ ಅಂಕೆಯನ್ನು ಮೀರಿ ದೂರ ಹೊರಟಿದ್ದಾನೆ ಎನ್ನುವುದನ್ನು ಮನಗಂಡರು.
ಮಗನ ಅಪ್ಪನ ಸಂಬಂದ ಮೊದಲಿಂದಲು ಅಷ್ಟಕ್ಕಷ್ಟೆ. ಮೊದಲು ಅಪ್ಪನ ಕಂಡರೆ ಮಗನಿಗೆ ಹೆದರಿಕೆ ಇತ್ತು, ನಂತರ ಅಪ್ಪನಿಗೆ ಮಗನ ಬಗ್ಗೆ ಭಯ ಪ್ರಾರಂಭವಾಯಿತು, ಕೊನೆಗಾಲಕ್ಕಾದರೂ ಮಗ ಜೊತೆಯಲ್ಲಿ ಇರುತ್ತಾನೋ ಇಲ್ಲವೋ ಎಂದು. ಆದರೆ ಅಮ್ಮನೊಂದಿಗೆ ಸದಾನಂದನ ಸಹವಾಸ ಸದಾಕಾಲವಿತ್ತು. ವಾರಕ್ಕೊಮ್ಮೆಯಾದರು ಫೋನ್‌ ಮಾಡುತ್ತಿದ್ದ.

ವೆಂಕಟರಾಯರಿಗೆ ಆರೋಗ್ಯ ಹದಗೆಟ್ಟ ದಿನವೇ ಸದಾನು ಅಮ್ಮನಿಗೆ ಕರೆ ಮಾಡಿದ್ದ. ರಮಾಬಾಯಿಯವರು ವಿಷಯವನ್ನು ತಿಳಿಸಿದರು ಅಂತಹ ಪ್ರತಿಕ್ರಿಯೆಯಿರಲಿಲ್ಲ. ಹಣದ ಬಗ್ಗೆ ಯೋಚಿಸಬೇಡ, ಒಳ್ಳೆ ಡಾಕ್ಟ್ರಿಗೆ ತೊರಿಸು. ನಾನಂತು ಬರಲಿಕ್ಕೆ ಆಗಲ್ಲ. ಯಾವುದಾದರು ಆಶ್ರಮದಲ್ಲಿ ಇರಿ. ನನ್ನ ಗೆಳೆಯರಿಗೆ ಹೇಳಿ ವ್ಯವಸ್ಥೆ ಮಾಡಿಸುತ್ತೇನೆ ಎಂದಿದ್ದಾನೆ.

ನೋಡಿದೇಯಾ, ಹೀಗಿದೆ ನಮ್ಮ ಸ್ಥಿತಿ ಎಂದ ರಮಾಬಾಯಿ ಅವರ ಕಣ್ಣಲ್ಲಿ ನೀರು ಜಿನುಗಿದ್ದು ಕಾಣುತ್ತಿತ್ತು. ನಾನು ಎನು ಮಾತಾಡದೆ ಅಲ್ಲಿಂದ ಹೊರಟೆ, ಈಗ ಚಿಂತೆ ಮಾಡುವ ಸರದಿ ನನ್ನದ್ದಾಗಿತ್ತು.
************

ಒಂದೇ ಮಗನಾಗಿ ಹುಟ್ಟಬಾರದು ಯಾಕೆಂದರೆ ನಮ್ಮ ಬಗ್ಗೆ ನಮ್ಮ ತಂದೆ ತಾಯಿಗಳು ಬಹಳ ನಮ್ಮಿಂದ ಬಯಸಿರುತ್ತಾರೆ. ನಾವು ಹೇಳಿದಂತೆ ಎಂದು ಕೇಳುತ್ತಾನೆ. ನಮ್ಮಿಷ್ಟಾನೇ ಅವನದ್ದು ಕೂಡಾ ಆಗಿರುತ್ತದೆ. ಅಡಿಯಿಂದ ಮುಡಿಯವರೆಗೂ ಅವರ ಎಣಿಕೆಯಂತೆ ನಡೆಯಬೇಕು. ಅವನಿಗೆ ನಾವು ಮಾಡುವುದು ಬೇಕಾಗಿದೆಯೋ ಇಲ್ಲವೋ ಎಂಬುದು ಬೇಡಾ. ಆದರೆ ಕೆಲವು ಅಪ್ಪ ಅಮ್ಮ ಹಾಗಲ್ಲ ಮಗ ಅವನಷ್ಟಕ್ಕೆ ಅವನು ಬೆಳೆಯಲಿ. ಅವನ ಪ್ರತಿಭೆ ಅವನೆ ಪ್ರಚುರ ಪಡಿಸಿ ಕೊಳ್ಳಲಿ, ನಾವು ಪೋಷಿಸಿದರಾಯಿತು ಎಂದಿರುತ್ತದೆ. ಆದರೆ ವೆಂಕಟ ರಾಯರು ಒಂದನೆ ಸಾಲಿನ ಅಪ್ಪ. ಅದಕ್ಕೆ ಮಗ ಅವರಂದು ಕೊಂಡಂತೆ ಮಾಡದಿದ್ದರೆ, ನಿರಾಶೆ ಸಿಟ್ಟು. ರಮಾಬಾಯಿಯವರು ಎರಡನೇ ಸಾಲಿಗೆ ಸೇರಿದ ಅಮ್ಮ . ಅದಕ್ಕೆ ಇಲ್ಲಿ ಸ್ವಲ್ಪ ವ್ಯತ್ಯಾಸ.
ಅಚ್ಯುತ ಲಕ್ಷಗಟ್ಟಲೆ ಖರ್ಚು ಮಾಡಿ ಏನೆನೆಲ್ಲ ಕಲ್ತಿದೀಯಾ. ಏನಾದರೂ ಕೆಲಸ ಮಾಡು. ಮನೆಯಿಂದ ಹೊರಬಿದ್ದು ನಿನ್ನ ಹತ್ತಿರ ಆದ ಸಾಧನೆಯನ್ನು ಮಾಡು ಎಂದು ಒಂದು ದಿನ ಅಪ್ಪ ತಮ್ಮ ಬುಡದಲ್ಲಿ ಕುಳ್ಳಿರಿಸಿಕೊಂಡು ಹೇಳಿದ್ದರು. ಅಂದು ನಾನು ಕೇಳಿದ್ದೆ ಅಪ್ಪ ನಾನು ನಿನಗಿರುವ ಒಬ್ಬನೇ ಮಗ. ನಾನು ನಿಮ್ಮನ್ನು ಬಿಟ್ಟು ದೂರ ಉಳಿಯುವುದು ಸರಿಯೇ? ಎಂದು. ಅದಕ್ಕವರು ಮಗ ಇದು ಸರಿತಪ್ಪಿನ ವಿಚಾರವಲ್ಲ. ಹೊರಗಡೆ ಉಳಿದರೆ ಜಗತ್ತಿನ ಅರಿವಾಗುತ್ತದೆ. ನೋಡು, ಇನ್ನು ಹತ್ತುವರ್ಷವಂತೂ ಮನೆ ಕಡೆ ಚಿಂತೆ ಇಲ್ಲ. ಎಂಬ ಧೈರ್ಯದ ಮಾತನ್ನಾಡಿದರು. ಆಗಲೇ ನನ್ನ ಮನಸ್ಸಿನಲ್ಲಿ : ವೃದ್ಧಾಶ್ರಮವನ್ನು ಮಾಡಬೇಕು ಎಂಬ ಯೋಚನೆ ಬಂದಿತ್ತು. ಇದನ್ನು ಅಪ್ಪನ ಹತ್ತಿರವೂ ಹೇಳಿದ್ದೆ. ಅಪ್ಪನಿಗೂ ಇದರ ಕುರಿತು ಆಸಕ್ತಿಯಿತ್ತು. ನನ್ನ ದುಡಿಮೆಯ ಆದಾಯವನ್ನು ಇದಕ್ಕೆ ಬಳಸಬೇಕೆಂಬ ಬಯಕೆ ನನ್ನದಾಗಿತ್ತು. ಅದಕ್ಕೆ ಪ್ರಯತ್ನ ಪಡುತ್ತಿದ್ದೆ. ಫೋನ್‌ ರಿಂಗಾಯಿತು. ಸದಾನಂದ! ನನ್ನ ಅಲೋಚನೆಗಳಿಗೆ ಬ್ರೇಕ್‌ ಬಿತ್ತು.

*****************

ನಾನು ಬೆಂಗಳೂರು ಸೇರುವಾಗಲೇ
ಇಪ್ಪತ್ನಾಲ್ಕು ವರ್ಷ ವಯಸ್ಸಾಗಿತ್ತು. ನಾನು ಹತ್ತನೇ ತರಗತಿಯಲ್ಲಿರುವಾಗಲೇ ನಾನೊಬ್ಬಳನ್ನು ಇಷ್ಟಪಡುತ್ತಿದ್ದೆ. ಯಾವ ಯೋಗವೋ ಏನೋ ಗ್ರಾಜ್ಯುಯೇಷನ್‌ ಮುಗಿಯುವವರೆಗೂ ಒಂದೇ ಊರಿನಲ್ಲಿ ನಾನು ಅವಳು ಕಲಿತೆವು. ನಿತ್ಯ ಸಂಪರ್ಕ ನಮ್ಮಿರ್ವರ ನಡುವೆ ಇತ್ತು. ನಾನು ಕಾಮರ್ಸ್‌ ತೆಗೆದುಕೊಂಡೆ. ಅವಳು ಸೈನ್ಸ್‌ ಆಯ್ಕೆ ಮಾಡಿಕೊಂಡಳು. ನಾನು ಬಿ.ಬಿ.ಎಂ. ಮಾಡಿದೆ. ಅವಳು ಎಂ.ಬಿ.ಬಿ.ಎಸ್‌. ನಾನು ಎಂ.ಸಿ.ಎ. ಅವಳು ಎಂ.ಡಿ. ಆದರೆ ಇಬ್ಬರೂ ಒಂದೇ ಊರಿನಲ್ಲಿ. ನನಗಂತೂ ಅವಳ ಮೇಲೆ ಪ್ರೀತಿಯಿತ್ತು. ಆತ್ಮೀಯತೆ ಇತ್ತು. ಜೀವದ ಗೆಳತಿಯನ್ನಾಗಿ ಸ್ವೀಕರಿಸಿದ್ದೆ. ಅವಳಿಗೂ ಅಷ್ಟೇ ಪ್ರೀತಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆತ್ಮೀಯತೆಯಂತೂ ಬಹಳವಿತ್ತು. ಇಬ್ಬರೂ ವೈಯಕ್ತಿಕ ವಿಷಯಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ಕೆಲಮೊಮ್ಮೆ ನನ್ನ ಕನಸನ್ನು ಅವಳೆದುರು ಬಿಚ್ಚಿಡುತ್ತಿದ್ದೆ. ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು. ಪ್ರಪೋಸ್‌ ಮಾಡುವ ಧೈರ್ಯ ಇಬ್ಬರಿಗೂ ಇರದೇ ಕೊನೆಗೆ ಹಿರಿಯರ ಸಹಕಾರ ಬೇಕಾಯಿತು.
ನಾನು ನನ್ನವಳಿಗೆ ಒಂದು ದಿನ ವೆಂಕಟರಾಯರ ಸಂಕಟದ ಕತೆ ಹೇಳಿದೆ. ನಾನೂ ಊರಿಗೆ ಹಿಂತಿರುಗುವ ವಿಷಯವನ್ನು ಅವಳಿಗೆ ತಿಳಿಸಿದೆ. ಮತ್ತು ನನ್ನ ಯೋಚನೆಯ ಕುರಿತು ತಿಳಿಸಿದ್ದೆ. ಅವಳು ಸಂಪೂರ್ಣ ಸಮ್ಮತಿಸಿದ್ದಳು. ಅಪ್ಪನನ್ನು ಕಳೆದುಕೊಂಡ ಅವಳಿಗೆ ಅವಳಮ್ಮ ಹಾಗೂ ನಾನು ಏನು ಹೇಳಿದರೂ ಅವಳ ಒಪ್ಪಿಗೆ ಗ್ಯಾರಂಟಿ.
**************

ಸದಾನಂದನ ಕಾಲ್‌ ಬಂದ ಮರುದಿನ ರಾಯರ ಮನೆಗೆ ಹೋದೆ. ಚಹಾ ಕುಡಿಯುತ್ತಿದ್ದರು ದಂಪತಿಗಳು. ನಿಮ್ಮ ಹತ್ತಿರ ಒಂದು ವಿಷಯ ಮಾತಾಡಬೇಕು.
ನಾವು ಊರಿಗೆ ಬರುವ ವೇಳೆಗೆ ಮರುಮನೆ ಮುಕ್ತಾಯ ಹಂತದಲ್ಲಿತ್ತು. ಅಪ್ಪನಿಗೂ ರಾಯರಿಗೂ ಪರಿಚಯವಾಯಿತು. ನಾಲ್ಕೇ ದಿನದಲ್ಲಿ ಐವತ್ತು ವರ್ಷದ ಸ್ನೇಹಿತರಂತೆ ನಡೆದುಕೊಳ್ಳ ತೊಡಗಿದರು. ಆಶ್ರಮದ ಮುಕ್ತಾಯ ವಾಗುವವರೆಗೂ ಇಬ್ಬರು ಸಮಾನವಾಗಿ ದುಡಿದರು. ಈ ಮಧ್ಯೆ ನನ್ನ ಮದುವೆಯ ಆಯಿತು ಸಿಂಪಲ್ಲಾಗಿ !
ವೆಂಕಟರಾಯರು ನಮ್ಮಲ್ಲಿಗೆ ಬಂದು ನಾಲ್ಕು ವರ್ಷ ಕಳೆಯುತ್ತ ಬಂದಿತ್ತು. ಆಶ್ರಮಕ್ಕೆ ಮತ್ತಷ್ಟು ಮಂದಿ ವಯೋವೃದ್ದರು ಸೇರಿದ್ದರು. ನನಗೂ ಒಂದು ಮಗುವಾಗಿತ್ತು. ಹತ್ತು ಜನ ಅಜ್ಜ, ಅಜ್ಜಿಯರ ಪ್ರೀತಿ ಅದಕ್ಕೆ ದೊರಕುತ್ತಿತ್ತು. ನಮ್ಮ ಮರುಮನೆ ಯಲ್ಲಿರುವ ವೃದ್ದರ ಕತೆಯನ್ನು ಕೇಳಿದಾಗ ನನಗನಿಸಿತು. ಇಂದು ವೃದ್ದಾಶ್ರಮ ಅನಿವಾರ್ಯವೂ ಹೌದು ಅಗತ್ಯವು ಕೂಡಾ ಮಕ್ಕಳ ಪ್ರೀತಿ ಬೇಕೆಂಬ ಹಿರಿಯರು, ಮಕ್ಕಳಿಗೆ ಹಿರಿಯರು ಹೊರೆ. ತಮ್ಮ ಕೆಲಸವೇ ನಮಗಾಗಲ್ಲ ಇವರದೊಂದು ಎನ್ನುವ ಬದಲು ವೃದ್ದಾಶ್ರಮಕ್ಕೆ ಸೇರಿಸಿ ದೂರದಿಂದಲೇ ನೀಡುವ ಎನ್ನುವ ಬಾವ ಇವರಿಗೆ. ನಾನು ತೀರ್ಮಾನಿಸಿದ್ದೆ. ಈ ಮರುಮನೆ ನಮಗೆ ಮುಂದೆ ಉಪಯೋಗಕ್ಕೆ ಬರುವಂತಹದ್ದು. ನಮ್ಮ ಮಕ್ಕಳು ಮುಂದೇ ಹೇಗಿರುತ್ತಾರೋ? ಅವರು ದೂರವಿರಲಿ. ನಾವು ಹತ್ತಿರ ವಿದ್ದು ಹೊರೆಯಾಗುವುದಕ್ಕಿಂತ ದೂರವಿದ್ದೇ ಪ್ರೀತಿ ನೀಡೋಣ ಅಲ್ವೇ?
************
ನನ್ನ ಕೂದಲು ಬೆಳ್ಳಗಾಗಿತ್ತು . ಮಗನ ಮದುವೆಯಾಗಿ ವರ್ಷ ಕಳೆದಿತ್ತು. ಬೆಳಂಬೆಳಿಗ್ಗೆ ಒಂದು ಮೆಸೇಜ್‌ ಸೆಲ್‌ಗೆ ಬಂದಿತ್ತು. ನಾನು ಸದಾನಂದ, ವೆಂಕಟರಾಯರ ಮಗ. ನಿಮ್ಮ ಆಶ್ರಮದಲ್ಲಿ ನಮಗೊಂದು ಜಾಗವಿದೆಯೇ? ಎಂದು.
-ನಾಗರಾಜ ಮತ್ತಿಗಾರ

Wednesday, January 7, 2009

ಚಂದ್ರ ದಾರಿಯ ಕಥನ


ಲೇಖ­ಕರು: ಟಿ. ಆರ್‌. ಶಿವ­ಪ್ರ­ಸಾದ್‌
ಬೆಲೆ: 120/-
ಪ್ರಥಮ ಮುದ್ರಣ: 2008
ಪ್ರಕಾ­ಶ­ಕರು: ಚಿಂತ­ನ­ಗಂಗಾ ಪ್ರಕಾ­ಶನ
ಲಲಿತ ನಿವಾಸ, ನಂ. 2036/3,
ಮಾಗ­ನೂರು ಬಡಾ­ವಣೆ, ವಿದ್ಯಾ­ನ­ಗರ, ದಾವ­ಣ­ಗೆರೆ


ಕೇರಳ ಸಮುದ್ರ ಅಂಚಿ­ನ­ಲ್ಲ­ರುವ ಅಗದಿ ಪುಟ್ಟ ಗ್ರಾಮ ತುಂಬಾ. ಇಲ್ಲಿ­ರು­ವುದು ಮೀನು­ಗಾ­ರರ ಗುಡಿ­ಸಲು. ಅಲ್ಲೊಂದು ಚರ್ಚ್‌. ರಸ್ತೆ ಸಂಪ­ರ್ಕ­ವಿಲ್ಲ. ಯಾವುದೇ ಮೂಲ ಸೌಕ­ರ್ಯವು ಇಲ್ಲ ಇಂತಹ ಕಡೆ ನಮ್ಮ­ದೇ­ಶದ ಹೆಮ್ಮೆಯ ಬಾಹ್ಯಾ­ಕಾಶ ಸಂಸ್ಥೆ ಇಸ್ರೊ ಮೊದಲ ಹೆಜ್ಜೆ­ಯನ್ನು ಇಲ್ಲಿಂ­ದಲೆ ಪ್ರಾರಂ­ಭಿ­ಸಿತು.
ಭಾರ­ತೀಯ ಬಾಹ್ಯಾ­ಕಾಶ ವಿಜ್ಞಾ­ನದ ಆವಿ­ಷ್ಕಾ­ರದ ಎಳೆ ಎಳೆ­ಯನ್ನು ಸವಿ­ವ­ರ­ವಾಗಿ ತಿಳಿ­ಸುವ ಅಪ­ರೂ­ಪದ ಪುಸ್ತಕ `ಚಂ­ದ್ರ­ಯಾನ'.
ಟಿವಿ 9 ಸುದ್ದಿ ವಾಹಿ­ನಿ­ಯಲ್ಲಿ ದೆಹಲಿ ವರ­ದಿ­ಗಾ­ರ­ರಾಗಿ ಕಾರ್ಯ­ನಿ­ರ್ವ­ಹಿ­ಸು­ತ್ತಿ­ರುವ ಟಿ.ಆರ್‌. ಶಿವ­ಪ್ರ­ಸಾದ್‌ ಸುಂದ­ರ­ವಾಗಿ ಬರೆ­ದಿ­ರುವ ಪುಸ್ತ­ಕ­ವಿದು. ಈ ಹೊತ್ತಿ­ಗೆ­ಯಲ್ಲಿ 5 ಹಂತ­ಗ­ಳಿವೆ. ಮೊದ­ಲನೆ ಹಂತ, ಸಾಧ­ನೆಯ ಹಾದಿ­ಯಲ್ಲಿ. ಇದ­ರಲ್ಲಿ ಮೊದಲ ಹೆಜ್ಜೆ, ತುಂಬಾ ತೀರ­ದಲ್ಲಿ, ಅಮೆ­ರಿಕಾ- ರಷ್ಯಾ ನಡುವೆ ಶೀತಲ ಸಮರ, ಇತಿ­ಹಾಸ ನಿರ್ಮಿ­ಸಿದ ಇಸ್ರೊ ಎನ್ನುವ ಶೀರ್ಷಿಕೆ ಅಡಿ­ಯಲ್ಲಿ ಲೇಖ­ನ­ಗಳು ಇವೆ.
ಎರ­ಡನೇ ಹಂತ ಎಂದೂ ಮುಗಿ­ಯದ ಅನಂತ ಯಾನ. ಇದ­ರಲ್ಲಿ ದೇಶ-ದೇ­ಶ­ಗ­ಳನ್ನು ಬೆಸೆವ ಚಂದ್ರ­ಯಾನ, ಚಂದ್ರ­ಯಾ­ನದ ಪ್ರಯೋಗ ಹಾಗೂ ಉದ್ದೇಶ, ಬ್ಯಾಲಾಳು ಗ್ರಾಮಕ್ಕೆ ಬಂದ ಭಾಗ್ಯ, ಶ್ರೀರಂ­ಗ­ಪ­ಟ್ಟ­ಣ­ದಿಂದ ಚಂದಿ­ರ­ನ­ವ­ರೆಗೆ, ಭಾರ­ತ­ದೆ­ಡೆಗೆ ಅಮೆ­ರಿಕಾ ಅನು­ಮಾನ, ಝಂಡಾ ಉಂಚಾ ರಹೇ ಹಮಾರಾ, ಚಂದ್ರ­ಯಾನ- ಭಾಗ 2 ಎನ್ನುವ ಲೇಖ­ನ­ಗ­ಳಿವೆ. ಮೂರನೇ ಹಂತ­ದಲ್ಲಿ ನಿಧಿ- ನೀರು- ನೆರಳು. ಇದ­ರಲ್ಲಿ ಚಂದ್ರನ ಜನ್ಮ ರಹಸ್ಯ, ಚಂದ್ರ­ನಲ್ಲಿ ಅಂತಾ­ದೇ­ನೈತಿ ?, ಚಂದ್ರನ ಮೇಲೆ ಹೀಲಿಯಂ ಎಂಬ ನಿಧಿ !, ಚಂದ್ರ­ನಲ್ಲಿ ನೀರಿ­ದೆಯೇ ?, ಚಂದ್ರನ ಮೇಲೊಂದು ಮನೆಯ ಮಾಡಿ, ಚಂದ್ರ, ಗ್ರಹ, ನಕ್ಷ­ತ್ರ­ಗಳು ಯಾರ ಆಸ್ತಿ ? ಎನ್ನುವ ಮಾಹಿ­ತಿ­ಗ­ಳಿವೆ. ನಾಲ್ಕನೇ ಹಂತ ಬಾಹ್ಯಾ­ಕಾ­ಶ­ವೆಂಬ ನಿತ್ಯ ಕೌತುಕ. ಇಲ್ಲಿ ಹೀಗೊಂದು ಚಂದ್ರನ ಪ್ರೇಮ ಪ್ರಸಂಗ, ಚಂದಿರ ತಂದಾ ಹುಣ್ಣಿಮೆ ರಾತ್ರಿ, ಅಂತ­ರಿ­ಕ್ಷ­ದಲ್ಲಿ ಅಪಾ­ಯ­ಕಾರಿ ಕಸ, ಬಾಹ್ಯಾ­ಕಾ­ಶ­ವೆಂಬ ಆಕ್ಸಿ­ಡೆಂಟ್‌ ಜೋನ್‌ ಎಂಬ ಅಧ್ಯಾ­ಗಳು ಬರು­ತ್ತವೆ. ಐದನೇ ಹಂತ ಎಲ್ಲಗೋ ಪಯಣ, ಯಾವುದೋ ದಾರಿ!. ದಿ ಗ್ರೇಟ್‌ ಮೂನ್‌ ಹೋಕ್ಸ್‌ಘ- 1835, ಚಂದ್ರನ ಮೇಲೆ ಮಾನ­ವನ ಮಹಾ­ಮೋಸ !?, ಮನು­ಕುಲ ಮರೆ­ಯ­ಲಾ­ಗದ ಪ್ರಾಣಿ, ಕೀಟ­ಗಳು, ಎಲ್ಲಿಗೋ ಪಯಣ, ಯಾವುದೋ ದಾರಿ ಎಂಬ ಲೆಖ­ನ­ಗಳ ಸಂಗ್ರ­ಹ­ಗಳು ಬರು­ತ್ತವೆ.
ಈ ಪುಸ್ತ­ಕ­ದ­ಲ್ಲಿ­ರುವ ಪ್ರತಿ­ಯೊಂದು ಹಂತವು ಅತ್ಯಂತ ಕೌತು­ಕ­ತೆ­ಯಿಂದ ಲೇಖ­ನ­ಗ­ಳನ್ನು ಓದಿ­ಕೊಂಡು ಹೋಗು­ತ್ತದೆ. ಶಿವ­ಪ್ರ­ಸಾದ್‌ ಅವರು ತಮ್ಮ ಲೇಖ­ನದ ಜೊತೆಗೆ ಪತ್ರ­ಕ­ರ್ತ­ರಾದ ವಿನಾ­ಯಕ ಭಟ್‌, ವೀರಣ್ಣ ಕಮ್ಮಾರ, ರಜನಿ ಎಂ. ಜಿ, ಚೀ.ಜ. ರಾಜೀವ್‌, ವಿಭವ್‌ ಬರೆದ ಮಾಹಿ­ತಿ­ಪೂರ್ಣ ಬರೆ­ಹ­ಗ­ಳನ್ನು ಇಟ್ಟಿ­ದ್ದಾರೆ. ಮೊದಲ ಹೆಜ್ಜೆ­ಯ­ಲ್ಲಿಯೇ ಲೇಖ­ನ­ಗಳು ಕುತೂ­ಹ­ಲ­ವನ್ನು ಕೆರ­ಳಿ­ಸುತ್ತಾ ಸಾಗು­ತ್ತದೆ. ನಮ್ಮ ದೇಶದ ವಿಜ್ಞಾ­ನಿ­ಗಳು ದನದ ಕೊಟ್ಟಿ­ಗೆ­ಯನ್ನೇ ಪ್ರಯೋ­ಗಾ­ಲ­ವಾಗಿ ಮಾಡಿ­ಕೊಂಡು ಯಶ­ಸ್ವಿ­ಯಾದ ಕತೆ­ಯನ್ನು ಓದುತ್ತ ಹೋದಂತೆ ನಮಗೆ ನಾವೇ ಹೆಮ್ಮೆ ಪಡುತ್ತಾ ಹೋಗು­ತ್ತೇವೆ. ಪ್ರತಿ­ಯೊಂದು ಲೇಖ­ನದ ಜೊತೆಗೆ ಆಸ­ಕ್ತಿ­ದಾ­ಯಕ ವಿಷ­ಯ­ಗ­ಳನ್ನು ಟಿಪ್ಸ್‌ ರೀತಿ ನೀಡುತ್ತಾ ಹೋಗಿ­ರು­ವುದು ಈ ಹೊತ್ತಿ­ಗೆಯ ವಿಶೇಷ.
ಬಾಹ್ಯಾ­ಕಾಶ ಸಂಶೋ­ಧ­ನೆ­ಗ­ಳಲ್ಲಿ ಬಲಿಷ್ಠ ರಾಷ್ಟ್ರ­ಗಳ ತೀವ್ರ ಪೈಪೋ­ಟಿ­ಯನ್ನು ಎದು­ರಿ­ಸುತ್ತಾ ನಮ್ಮ ಸಾಧ­ನೆ­ಯನ್ನು ಮಾಡುತ್ತಾ ಹೋದ ಭಾರ­ತೀಯ ವಿಜ್ಞಾ­ನಿ­ಗಳ ಸಾಧ­ನೆಯ ಹಾದಿ­ಯನ್ನು ಈ ಪುಸ್ತಕ ಸ್ಪಷ್ಟ­ಪ­ಡಿ­ಸು­ತ್ತದೆ. ಶಿವ­ಪ್ರ­ಸಾದ್‌ ಅವರು `ಚಂ­ದ್ರ­ಯಾನ'ದ ಮೂಲಕ ಬಾಹ್ಯಾ­ಕಾಶ ತಂತ್ರ­ಜ್ಞಾ­ನದ ವಿಭಿನ್ನ ಮಜ­ಲು­ಗ­ಳನ್ನು ಸ್ಪಷ್ಟ­ವಾಗಿ ತೋರಿ­ಸು­ವಲ್ಲಿ ಯಶ­ಸ್ವಿ­ಯಾ­ಗಿ­ದ್ದಾರೆ.

ನಾಗರಾಜ ಮತ್ತಿಗಾರ

(ಉದಯಾವಾಣಿ ಪುಸ್ತಕಸಂಪದದಲ್ಲಿ ಪ್ರಕಟಗೊಂಡ ಲೇಖನ)

FEEDJIT Live Traffic Feed