Friday, July 31, 2009

ಅಂದಿನ ಪುಂಡಾಟ ಇಂದು ಅನಿಸಿದ್ದು ಹೀಗೆ

ಮನೆಯಿಂದ ಹೊರಗೆ ಬೀಳಲು ಆಸ್ಪದವಿಲ್ಲದಷ್ಟು ಮಳೆ. ’ಆಕಾಶಕ್ಕೆ ತೂತು ಬಿದ್ದಿದೆಯೋ’ ಎಂಬಂತೆ ಭಾಸವಾಗುತ್ತಿತ್ತು. ! ಅದು ಆರಿದ್ರಾ ಮಳೆ ಆರ್ಭಟ : ಇಗೊಂದು ನಾಲ್ಕೈದು ವರ್ಷದಿಂದ ಆದ್ರೆ ಮಾತ್ರ ಮಳೆಯಾಗಿತ್ತು ! ಈ ಬಾರಿ ಮಾತ್ರ ಪಕ್ಕಾ ಪಕ್ಕಾ ಆರಿದ್ರಾ ಮಳೆಯೇ ಸುರಿಯುತ್ತಿತ್ತು !! "ಮೂರ್ಖರ ಪೆಟ್ಟಿಗೆ’ ಎಂಬ ಅನ್ವರ್ಥನಾಮ ಪಡೆದು ತನಗೆ ಆ ಹೆಸರಿಟ್ಟವರನ್ನು ಬಿಡದೇ ತನ್ನ ಮುಂದೇ ಬಂದು ನಿಲ್ಲುವಂತೆ ಮಾಡಿದ ಸಮ್ಮೋಹಿನಿ ಯಾ ಮೋಹಿನಿ ರೂಪಿನ ಟಿ.ವಿ.ಯನ್ನು ನೋಡೋಣವೆಂದರೆ, ಕರೆಂಟೆಂಬ ಮಾಯಾಂಗನೆ ಒಮ್ಮೊಮ್ಮೆ ಮಾತ್ರ ಪ್ರತ್ಯಕ್ಷವಾಗಿ ಕೊನೆಯಲ್ಲಿ ಮಸುಕಾಗಿ ನಿಂತು ಮಾಯವಾಗಿತ್ತು. ಪುನಃ ದರ್ಶನ ಕೊಡದೆ ವಾರಗಳೇ ಸಂದಿದ್ದವು. ಎಂಬಿತ್ಯಾದಿ ಕಾರಣಗಳಿಂದ . . . . . . . ಯಾವ ಕಾರ್ಯಗಳನ್ನು ಮಾಡಲಾಗದೆ, ಹೆಬ್ಬಾಗಿಲಿನಲ್ಲಿ ಇರುವ ಏಕೈಕ್ ಬಾಂಕಿನ ಮಣೆಯನ್ನು ಬಿಸಿ ಮಾಡುವ ಕಾಯಕದಲ್ಲಿ ತೊಡಗಿದ್ದೆ. ಬಾಯಲ್ಲಿ ರಸಗವಳ ಮೆಲಿಯುತ್ತಿದ್ದೆ. ಅದು ಕರಗುತ್ತ ಬಂದಂತೆ, ಅಡಿಕೆ ಚೂರನ್ನು ಬಾಯಿಗೆ ಒಗೆಯುತ್ತ ಜೊತೆಯಲ್ಲಿ ತಂಬಾಕನ್ನು ಉಂಡೆ ಮಾಡಿ ಹೇಗೆಂದರೆ, ’ಘನ ಘೋರ ಸಮರ ನಡೆಯುತ್ತಿರುವಾಗ ಸೈನಿಕರು ತುಪಾಕಿಗೆ ಗುಂಡನ್ನು ತುಂಬುವ ತೆರದಿಂ ಬಾಯಿಗೆ ಒಗೆಯುತ್ತಿದ್ದೆ. ಈಡನ್ನು ಭರ್ತಿ ಮಾಡಿಕೊಳ್ಳುತ್ತಿದೆ.
ಈಂತಿಪ್ಪ ಸಮಯದೊಳ್ . . . . ಯಾಕೋ . . . . ಏನೋ . . . . ಮನಸ್ಸು ಭೂತಕಾಲದ ಬಾಲ್ಯದ ನೆನಪಿನ ಜಾಡನ್ನು ಕೆದಕಲು ಪ್ರಾರಂಭ ಮಾಡಿತ್ತು. ಎದುರಿಗೆ ಅಡ್ಡುದ್ದ ಬಿದ್ದುಕೊಂಡು ಬರೆಯುತ್ತಿದ್ದ ಅಣ್ಣಂದಿರ ಮಕ್ಕಳ ಪರದಾಟ, ಪಿಕಲಾಟ, ಹೋಮ್ ವರ್ಕ್ಸ್ ಮಾಡಿ ಮುಗಿಸಲೇ ಬೇಕೆಂಬ ಒತ್ತಡ. ಇದನ್ನೆಲ್ಲ ನೋಡುತ್ತಿರುವ ಕಾರಣದಿಂದಾಗಿಯೇ ನನ್ನ ಮನಸ್ಸು ಭೂತನ ಕಡೆಗೆ ವಾಲಿತ್ತು, ಓಡಿತ್ತು ಅಂತ ಕಾಣ್ಸುತ್ತೆ.
ಆ ನೆನಪು ಸರಿಸುಮಾರು ಇಪ್ಪತ್ತು ವರ್ಷ ರಿವರ್ಸ್‌ಗೆ ಹೋಗಿತ್ತು. ಅಂದು ನಮಗೆ ಈ ರೀತಿಯ ಪರದಾಟ, ಪಿಕಲಾಟ, ಒತ್ತಡ, . . . . . ಊಹೂಂ . . . . . ದೇವರಾಣೆ ಹಾಕಿ ಹೇಳ್ತೆನೆ, ನಾವ್ ಹ್ಯಾಂಗಪ್ಪಾ ಎಂದರೆ ಏಕ್‌ದಂ ಬಿಂದಾಸ್. ಅಂದು ಕಬ್ಬಡ್ಡಿ ಲಗೋರಿಯ ಗಮ್ಮತ್ತು ಇತ್ತು. ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ ಮೋಜಿತ್ತು. ಕಳ್ಳಾ ಪೋಲಿಸ್, ಮುಟ್ಟಾಟದ ಮಜವಿತ್ತು. ಹುಡುಗಿಯರ ಜಡೆಗೆ ಬಾಲ ಕಟ್ಟುವ ಕಿಲಾಡಿಯಿತ್ತು. ಹುಡುಗಿಯರನ್ನು ಮರ ಹತ್ತಿಸಿ ಲಂಗದೊಳಗೆ ಇಣಕುವ ಪೋಲಿತನವಿತ್ತು. ಬಿಕ್ಕೆ ಗುಡ್ಡ, ನೇರಳೆ ಮರ, ಸಂಪಿಗೆ, ಕಾಳಿಗಿಡ, ಹಲಿಗೆ ಹಣ್ಣಿನ ಮಟ್ಟಿ, ಗುಡ್ಡೆಗೇರು, ಚಳ್ಳೆಹಣ್ಣು . . . . ಒಂದೇ ಎರಡೇ ಹತ್ತು ಹಲವು ಕಾಡು ಹಣ್ಣುಗಳ ರುಚಿಯನ್ನು ನೋಡುವ ಚಪಲ ನಾಲಿಗೆಯಿತ್ತು. ಅದನ್ನು ಹುಡುಕಿ ತಿರುಗಲು ನಮ್ಮ ಕಾಲಲ್ಲಿ ನಾಯಿಗೆರೆ ಇತ್ತು. ಪ್ರಾಥಮಿಕ ಶಾಲೆಯ ಲಿಗಾಡಿ ಬದುಕಿನ ದಿನಗಳು ’ಹಸಿಗೋಡೆಯ ಮೇಲೆ ಹರಳಿಟ್ಟಂತೆ’ ಸ್ಪಷ್ಟವಾಗಿ ನೆನಪು ನನ್ನ ಚಿತ್ತ ಪಟಲದಲ್ಲಿತ್ತು.
ಆ ದಿನಗಳು
ಸುತ್ತಣ ಮೂವತ್ತಕ್ಕೂ ಹೆಚ್ಚಿಗೆ ಊರಿಗೆ ನಮ್ಮೂರ ಶಾಲೆ ಒಂದೇ. ಈ ಶಾಲೆಗೆ ಒಂದೇ ಮಾಸ್ತರು. ಹಾಗೂ ಅವರ ಹೆಂಡತಿ ಮಂಡೆ ಸರಿಯಿಲ್ಲದ ಅಕ್ಕೋರು ಯಾನೆ ಮಳ್ಳಕೊರು ಅಲಿಯಾಸ್ ಮೇಡಂ. ಗುರೂಜಿ ಅಂದರೆ ಮಾಸ್ತರು ಹೈ ಬಿ.ಪಿ. ಇರೋ ಜನ. ಅಕ್ಕೋರು ಅಮಾವಾಸ್ಯೆ ಒಂದು ರೀತಿ, ಹುಣ್ಣಿಮೆಗೆ ಒಂದು ಥರಾ ವರ್ತನೆ. ಬದಲಾವಣೆಯಾಗುತ್ತಿತ್ತು. ತಲೆ ಸರಿಯಿಲ್ಲದ ಅಕ್ಕೋರು ಗುಳಿಗೆ ಮೇಲೆ ತಲೆ ಅಲ್ಲಾಡದಂತೆ ಇಟ್ಟುಕೊಂಡಿದ್ದರು. ಅಕ್ಕೋರು ಮಳ್ಳಿ, ತಲೆ ಹಾಳಾದವಳು ಎಂಬುದು ಸುತ್ತಣ ಮೂವತ್ತು ಊರಿಗೂ ಜಗಜ್ಜಾಹಿರಾಗಿತ್ತು. ಏಕೈಕ ಧರ್ಮ ಪತ್ನಿ, ತನ್ನ ಮಕ್ಕಳ ತಾಯಿಗೆ ತಲೆ ನೆಟ್ಟಗೆ ಇಲ್ಲ ಎಂದು ಮೂವತ್ತು ಹಳ್ಳಿಯಲ್ಲಿ ಲೋಕ ಪ್ರಸಿದ್ಧವಾದದ್ದು ಗಮನಕ್ಕೆ ಬಂದ ತಕ್ಷಣದಿಂದಲೇ ಮಾಸ್ತರಿಗೆ ಎಸಿಡಿಟಿ, ಗ್ಯಾಸ್, ಕೊಲೆಸ್ಟ್ರಾಲು, ಜೊತೆಯಲ್ಲಿ ಬಿ.ಪಿ. ಹೆಚ್ಚಾಗಿ ಇವರು ಮಾತ್ರೆ ತೆಗೆದುಕೊಳ್ಳತೊಡಗಿದರು.ಒಂದೇ ಮೇಸ್ಟ್ರು. ಒಂದೇ ಅಕ್ಕೋರು ಇರುವ ಶಾಲೆ ಸ್ಥಿತಿ, ದೇವರೆ ಗತಿ. ಸೋಮವಾರ ಕೇಂದ್ರ ಶಾಲೆಯಲ್ಲಿ ಮೀಟಿಂಗು, ಮಂಗಳವಾರ ಬೋರ್ಡು ಮೀಟಿಂಗು, ಬುಧವಾರ ಸಂತೆ, ಗುರುವಾರ ಮೇಸ್ಟ್ರಿಗೆ ಎಸಿಡಿಟಿ ಜೋರು ಅರಾಮಿಲ್ಲ. ಶುಕ್ರವಾರ ಮತ್ತೆ ಕೇಂದ್ರ ಶಾಲೆಯಲ್ಲಿ ಪುಸ್ತಕ ವಿತರಣೆ ಯಾ ಇನ್ನಾವುದೊ ಕೆಲಸ. ಶನಿವಾರ ಅರ್ಧದಿನ ಇತಿಹಾಸದ ಒಂಬತ್ತು ಪಾಠ ಎಮ್ಮೆ ಉಚ್ಚೆ ಹೊಯ್ದು ಹಾಗೇ ಒಂದೇ ಸಮನೆ ರಾಗ ಸಹಿತವಾಗಿ ನಿರ್ಭಾವದಿಂದ ಯಾರಿಗೂ ಅರ್ಥ ಆಗದ ರೀತಿಯಲ್ಲಿ ಓದಿ, ಮುಗಿಸಿದರೆ ಪೋರ್ಷನ್ ಕಂಪ್ಲೀಟು. ಇನ್ನು ಅಕ್ಕೋರು ಮೊದಲೇ ಮಳ್ಳಿ ಐ ಮೀನ್ ತಲೆ ಸರಿ ಇಲ್ಲದವರು. ನಮ್ಮಂತ ಎಡವಟ್ಟು ಹುಡುಗರನ್ನು ಕಂಟ್ರೋಲ್ ಮಾಡಲಿಕ್ಕಾಗದೆ ಬೆನ್ನು ಮುರಿದು ಕೊಡುತ್ತಿದ್ದರು. ಇವರದ್ದು ವಾರಕ್ಕೆ ಮೂರುದಿನ ರಜೆ. ಒಂದು ದಿನ ’ಮಾತ್ರೆಯನ್ನು ತಗೊಂಡಿದಿನಾ ಇಲ್ವಾ’ ಎಂದು ಮರೆತು ಎರಡೆರಡು ಬಾರಿ ಗುಳಿಗೆ ನುಂಗಿ ಜೋಮು ಹತ್ತಿ ಎಚ್ಚರನೇ ಆಗದೆ, ಎರಡು ದಿನ ಕಳೆದು ಬಿಡುತ್ತಿತ್ತು. ಒಂದಿನ ಅಕ್ಕೋರಿಗೂ ಮಾಸ್ತರಿಗೂ ಜಗಳ. ಅಕ್ಕೋರು ಮನೆಯಲ್ಲಿ , ಗುರುಜಿ ಸಂತೆಗೆ. ಉಳಿದೆರಡು ದಿನ ಅಕ್ಕೋರು ಒಂಥರಾ ಮಬ್ಬು ಅಥವಾ ಪುಲ್ ಉಲ್ಟಾ. ಹೀಗಿರುವ ಕಾಲದಲ್ಲಿ, ಹಳ್ಳಿಯ ಪ್ರೈಮರಿ ಸ್ಕೂಲು ಹುಡುಗರು ಎಂದರೆ ಮೊದಲೇ ಮಂಗ, ಅದಕ್ಕೆ ಕಳ್ಳನ್ನು ಕುಡಿಸಿ, ಮಧ್ಯೆ ಭೂತವು ಸಂಚಾರವಾಗಿ ಯದ್ವಾ ತದ್ವಾ ಭವಿಷ್ಯತಿ’ ವರಿಜನಲ್ ಮಾಸ್ಟ್ರು ಬರದೇ ಹೋದ ದಿನ. ಅಕ್ಕೋರಿಗೆ ಮೋದಕವಿದ ದಿನ. ಏಳನೇ ವರ್ಗದ ಹುಡುಗರು /ಹುಡುಗಿಯರು ಅಕ್ಕೋರು ಮಾಸ್ಟ್ರರು ಆಗುತ್ತಿದ್ದರು.ಮಾಸ್ತರು ಕೆಲಸದ ನಿಮಿತ್ತ ಹೊರಗಡೆ ನಿವಾಳಿಸಿದಾಗ, ಹುಡುಗ/ಹುಡುಗಿಯರಿಗೆ ಹೋಳಿ ಹುಣ್ಣಿಮೆ, ಓಕಳಿ, ಮಜವೆ ಮಜಾ. ಬಂಡಾರಮಕ್ಕಿ ಕಮಲ ವಿಳ್ಳೆದೆಲೆ ತರುತ್ತಿದ್ದ. ನನ್ನದು ಅಡಿಕೆ ಸಪ್ಲೈ. ಮೇಲಕೇರಿ ತಿಂಮ ಭಟ್ಟಂದು ತಂಬಾಕು, ಸುಣ್ಣ ಸರಬರಾಜು . ಮಂಜ ಶೆಟ್ಟಿ ಕೈ ಬೀಡಿ ತಂದರೆ ರಾಮ ಹೆಗಡೆ ಬೆಂಕಿಪಟ್ಟಣ ತರುತ್ತಿದ್ದ. ಕೆಳಗಿನಹಕ್ಲು ಚಂದ್ರಿಕಾ ಲಿಂಬೆಹಣ್ಣು ಮಡ್ಳೋಳಗೆ ಹಾಕಿಕೊಂಡು ಬಂದರೆ, ಮೂಲೆ ಮನೆ ಸಾವಿತ್ರಿ ಅರಮದ್ಲು ಕಾಯಿ ತರುತ್ತಿದ್ದಳು. ವೆಂಟ್ರಮಣ ಭಟ್ರ ಮಗಳು ಉಪ್ಪು, ಮೆಣಸಿನಕಾಯಿ ಜತೆಗೆ ಹುಳಿಪುಡಿ, ಹುಣಸೆ ಹಣ್ಣು ಪಟ್ಳ ಕಟ್ಟಿಕೊಂಡು ಬರುತ್ತಿದ್ದಳು. ಮತ್ತೆ ಇದೆಲ್ಲ ಕಾನೂನು ಪ್ರಕಾರ ಮನೆಯಲ್ಲಿ ಕೇಳಿಕೊಂಡು ತರುತ್ತಿದ್ದರು ಎಂದುಕೊಂಡರೆ ಶುದ್ಧ ತಪ್ಪು ಕಲ್ಪನೆ. ಎಲ್ಲವೂ ಹಿತ್ತಲ ಕಡೆಯಬಾಗಿಲ ಮೂಲಕವೇ ಕದ್ದು ತರುತ್ತಿದ್ದದ್ದು.
ಈಗಿನ ಹುಡುಗರಿಗೆ ಈ ಸೌಭಾಗ್ಯವಿಲ್ಲ. ಯಾಕೆಂದ್ರೆ ಶಾಲೆ ಬಾಗಿಲವರೆಗೆ ಅಪ್ಪ, ಅಮ್ಮ ಕೈ ಹಿಡಿದುಕೊಂಡು ಮಾಸ್ತರಿಗೆ ಒಪ್ಪಿಸಿ, ಸಂಜೆ ಮತ್ತೆ ಬಂದು ತಮಗಿರುವ ಒಂದು ಅಥವಾ ಎರಡು ಅಮೂಲ್ಯ ರತ್ನಗಳನ್ನು ಪರತ್ ಪಡೆದುಕೊಂಡು ಹೋಗುತ್ತಾರೆ.

ನಾಗರಾಜ ಮತ್ತಿಗಾರ

Tuesday, July 28, 2009

ಎದ್ದೇಳು ಮಂಜುನಾಥ ನೋಡು






ಅಪರೂಪಕ್ಕೆ ಕನ್ನಡದಲ್ಲಿ ಒಂದು ಒಳ್ಳೆಯ ಸಿನೆಮಾ ತೆರೆ ಕಂಡಿದೆ. ಚಿತ್ರದ ಹೆಸರು ಎದ್ದೇಳು ಮಂಜುನಾಥ. ನಿರ್ದೇಶಕ ಗುರುಪ್ರಸಾದ. ಕನ್ನಡಕ್ಕೆ ಸಿಕ್ಕಿದ ಒಳ್ಳೆಯ ದೃಷ್ಟಿಕೋನ ಇರುವ ಫಿಲ್ಮ್‌ ಮೇಕರ್‌ ಎನ್ನುವುದರಲ್ಲಿ ಅನುಮಾನವಿಲ್ಲ. ಚಿತ್ರದ ನಾಯಕ ಜಗ್ಗೇಶ್‌. ಇವರ ಹಿಂದಿನ ಚಿತ್ರವನ್ನು ನೆನಪಿಸಿಕೊಂಡು ಈ ಚಿತ್ರ ನೋಡಲು ಹೋದರೆ ನಿರಾಶೆಯಾಗುವುದು ಖಂಡಿತ.
ಹೀಗೂ ಒಂದು ಚಿತ್ರವನ್ನು ಮಾಡಬಹುದು ಎನ್ನುವುದಕ್ಕೆ ಈ ಚಿತ್ರ ಒಂದು ಉತ್ತಮ ಉದಾಹರಣೆ.

ಈ ಚಿತ್ರದಲ್ಲಿ ಜಗ್ಗೇಶ್‌ ಒಬ್ಬ ಶತ ಸೋಮಾರಿ, ಪ್ಲಸ್‌ ಕುಡುಕ. ಇಂತಹ ವ್ಯಕ್ತಿ ಮನೆಯಲ್ಲಿದ್ದರೆ ಏನೆಲ್ಲಾ ಭಾನಗಡಿ ಆಗಬಹುದು ಎನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ನಡೆಯುವ ಕೆಲವು ಸತ್ಯಗಳು ಇಲ್ಲಿ ಅನಾವರಣಗೊಳ್ಳುತ್ತ ಹೋಗುತ್ತವೆ.
ಚಿತ್ರದ ಬಗ್ಗೆ ಹೇಳಬೇಕಾದರೆ ಅದರ ನಾಲ್ಕಾರು ಡೈಲಾಗ್‌ಗಳನ್ನು ಹೇಳಬೇಕು.
1. ತಬ್ಲಾ ನಾಣಿ ಈ ಚಿತ್ರದಲ್ಲಿ ಕುಡುಕ. ಅವನನ್ನು ಒಂದು ಲಾಡ್ಜ್‌ನವರು ಒಂದು ಕೋಣೆಯಲ್ಲಿ ಕೂಡಿಹಾಕುತ್ತಾರೆ. ಅಲ್ಲಿಯೇ ಮಂಜುನಾಥನನ್ನು ಕೂಡಿ ಹಾಕಿರುತ್ತಾರೆ. ನಾಣಿ ಕೋಣೆಗೆ ಎಂಟ್ರಿ ಆದಾಕ್ಷಣ ನಮಸ್ಕಾರ ಯಾರೋ ಇದ್ಹಾಂಗಿದೆ ಎನ್ನುತ್ತಾನೆ. ಜಗ್ಗೇಶ್‌ ನಿಮಗೆ ಹೇಗೆ ತಿಳಿಯಿತು ಎಂದು ಕೇಳುತ್ತಾನೆ. ಇಲ್ಲಿ ನಿಮಗೆ ಕಕ್ಕ ಮಾಡಿದ ಮೇಲೆ ನೀರು ಹಾಕುವ ಅಭ್ಯಾಸ ಇಲ್ಲ ಅಂತ ಕಾಣುತ್ತೆ. ವಾಸನೆ ಬರುತ್ತಾ ಇದೆ ಎನ್ನುತ್ತಾನೆ. (ಮಂಜುನಾಥ ಸೋಮಾರಿ ಎನ್ನುವುದನ್ನು ಒಂದೇ ಮಾತಿನಲ್ಲಿ ತಿಳಿಸಿ ಕೊಡುತ್ತಾರೆ ನಿರ್ದೇಶಕರು)
2. ಮಂಜುನಾಥ: ನಾಣಿ ಅವರೇ ನಿಮಗೆ ಮದುವೆ ಆಗಬೇಕು ಎನ್ನುವ ಆಸೆ ಇಲ್ಲವೋ?
ನಾಣಿ: ಯಾರಾದ್ರೂ ಒಂದು ಲೋಟ ಹಾಲಿಗಾಗಿ ಹಸು ಸಾಕುತ್ತಾರಾ?
3. ಗಾಂಧಿನಗರದಲ್ಲಿ ಸಿನೆಮಾ ಮಾಡುವವರ ಬಗ್ಗೆ ನಾಣಿ ಮಾತನಾಡುತ್ತಾನೆ... ಯಾರೋ ಅಂದ್ರು ಕುರುಡರು ಯಾರೂಇಲ್ಲಿಯವರೆಗೆ ಸಿನೆಮಾ ಮಾಡಲಿಲ್ಲ. ನೀವು ಮಾಡಿ ಅಂತ. ನನಗೂ ಹೌದು ಅನ್ನಿಸಿತು. ಸ್ಕ್ರಿಪ್ಟ್‌ ತಯಾರಾಗಿದೆ. ನಾವು (ಕುರುಡರು) ಸಿನೆಮಾ ಮಾಡಿದ್ರೆ ನಿರ್ಮಾಪಕರು ಬೇರೆ ಭಾಷೆಯ ಸಿನೆಮಾದ ಸಿ.ಡಿ. ತಂದು ಕಾಪಿಮಾಡಿ ಅನ್ನೋಕಾಗಲ್ಲ. ಆ ಸೀನ್‌ ಕದೀರಿ, ಈ ಸೀನ್‌ ಕದೀರಿ ಅನ್ನಕ್ಕಾಗಲ್ಲ. ಬುದ್ಧಿವಂತರು ರಿಮೇಕ್‌ ಮಾಡಬಾರದ್ರಿ, ದಡ್ಡರು ಸ್ವಮೇಕ್‌ ಮಾಡಕೆ ಹೋಗಬಾರದು ಏನಂತೀರಾ?
4.ಮಂಜುನಾಥ ಸುಧಾರಿಸಬಹುದೆಂದು ಮದುವೆ ಮಾಡುತ್ತಾರೆ. ಆಗ ಅವನ ಮಾವ ಹೇಳುವ ಮಾತು. ನೀವು ಹಸಿದ ಹುಲಿ ಇದ್ಹಾಗೆ ಇದ್ದಿರಾ... ನನ್ನ ಮಗಳು ಚಿಗರೆ ಮರಿ ತರಹ. ನೋಡ್ಕೊಂಡು ಮಾಡಿ ...... ಸಂಸಾರನ ಅನ್ನುತ್ತಾನೆ .
ಅದಕ್ಕೆ ಮಂಜುನಾಥ ನಿಮ್ಮ ಮಗಳು ಹಸಿದ ಚಿಗರೆ ಮರನೇ ನಿಮ್ಮ ಹತ್ತಿರ ಹೇಳಿರಲ್ಲ ಅಷ್ಟೇ ಅನ್ನುತ್ತಾನೆ.
5. ಮಂಜುನಾಥನ ಮನೆಗೆ ನಾಣಿಯನ್ನು ಕರೆದು ಕೋಡು ಬರುತ್ತಾನೆ. ಬರುವಾಗ ಇಬ್ಬರು ಬಾರ್‌ಗೆ ಹೋಗುತ್ತಾರೆ. ನಾಣಿ ನಾನು ಬಿಯರ್‌ ಮಾತ್ರ ಕುಡಿತೀನಿ ಎಂದು ಒಂದು ದರ್ಶನ್‌ (ನಾಕೌಟ್‌ ಸ್ಟ್ರಾಂಗ್‌) ಮತ್ತೊಂದು ಉಪೇಂದ್ರ (ಯುಬಿ ಪಿಂಟ್‌) ಕೊಡು ಎನ್ನುತ್ತಾನೆ.
ಎದ್ದೇಳು ಮಂಜುನಾಥ ಮತ್ತೆ ಒತ್ತ ಹೇಳುತ್ತೇನೆ ಕನ್ನಡದಲ್ಲಿ ಇತ್ತೀಚೆಗೆ ಬಂದ ಒಂದು ಅಪರೂಪದ ಚಿತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗುರುಪ್ರಸಾದ್‌ ಮಾತ್ರ ಇಂತಹ ಸಿನೆಮಾ ತೆಗೆಯಲು ಸಾಧ್ಯವೇ ಹೊರತು ಬೇರೆಯವರಿಗೆ ಈ ಸ್ಕ್ರಿಪ್ಟ್‌ ಕೊಟ್ಟರೆ ತುಳಸಿ ನೀರು ಬಿಡಲಿಕ್ಕೆ ಅಡ್ಡಿ ಇಲ್ಲ. ಟಾಕೀಸ್‌ಗೆ ಹೋಗಿ ಒಮ್ಮೆ ಈ ಸಿನೆಮಾ ನೋಡಿ ಎಂಜಾಯ್‌ ಮಾಡಿ.

Tuesday, July 14, 2009

ಇಶ್ಶಿಶ್ಯೋ ಎನ್ನಿ ಆದರೆ ಖುಷಿ ಪಡಿ

ಹಾಸ್ಯ ಸನ್ನಿ­ವೇ­ಶ­ಗಳು ಎಲ್ಲಿ ಹ್ಯಾಗೆ ಹುಟ್ಟು­ತ್ತವೆ ಎನ್ನಲು ಸಾಧ್ಯ­ವಿಲ್ಲ. ಪ್ರತಿ­ಕ್ಷ­ಣ­ದಲ್ಲೂ ಹಾಸ್ಯ­ವಿ­ರು­ತ್ತದೆ. ದ್ವಿಅರ್ಥ ಮಾತು­ಗಳು ಹಾಗೇ ಬೇಗನೆ ನಗೆ ಬರು­ತ್ತದೆ.
ಹಳ್ಳಿ­ಯಲ್ಲಿ ಗೊತ್ತಿ­ಲ್ಲದೇ ಬಹ­ಳಷ್ಟು ಹಾಸ್ಯ ಘಟ­ನೆ­ಗಳು ನಡೆ­ಯು­ತ್ತದೆ.
ಘಟನೆ ಒಂದು...
ಸನ್ನಿ­ವೇಶ ಶ್ರಾದ್ಧದ ಮನೆ..
ಶ್ರಾದ್ಧದ ಮನೆ­ಯಲ್ಲಿ ಸಂಜೆ ಊಟದ ನಂತರ ಆ ಮನೆಯ ಅತ್ತಿ­ಗೆಯ ಹತ್ತಿರ ಬಂದ ನೆಂಟ `ಅ­ತ್ತಿಗೆ ಒಳ್ಳೆಯ ಬೋಳ­ಕಾಳು ಕಷಾಯ ಮಾಡ್ಕೊಡು. ಎಂತಕೋ ತಲೆ ನೋವು ಬಂಜು' ಎಂದ.
ಅತ್ತಿಗೆ `ಪಾಪ ತಲೆ ನೋವು ಬಂಜು ಹೇಳ್ತ' ಅಂದು ಕೊಳ್ಳುತ್ತಾ ಕಷಾಯ ಮಾಡಿ ಕೊಟ್ಟಳು.
ಆದ್ರೆ ಈ ಬಾವ ಕಷಾಯ ಕುಡಿ­ದ­ವನೇ ಇಸ್ಪೀಟ್‌ ಆಡ­ಲಿಕ್ಕೆ ಮಾಳಿ­ಗೆ­ಯನ್ನು ಎರಿದ. ಅತ್ತಿಗೆ ಮಲ­ಗುವ ಮೊದಲು ಇಸ್ಪೀಟ್‌ ಆಡು­ತ್ತಿ­ರುವ ಕ್ರೀಡಾ­ಪ­ಟ್ಟು­ಗ­ಳಿಗೆ ಚಹಾ ಕೊಡಲು ಹೋದಳು. ಅಲ್ಲಿ ನೋಡು­ತ್ತಾಳೆ ಕಷಾಯ ಕುಡಿದ ಬಾವ ಇಸ್ಪೀಟ್‌ ಆಡು­ತ್ತಿ­ದ್ದಾನೆ. ಆಶ್ಚ­ರ್ಯ­ವಾ­ಯಿತು.. ಸಹ­ಜ­ವಾ­ಗಿಯೇ ಅವಳು ಕೇಳಿ­ದಳು
`ಅರೇ ಬಾವ ಎನ್ನ ಹತ್ತಿರ ಮಲ­ಗಿ­ಕೊ­ಳ್ಳತಿ ಹೇಳಿ­ದ್ಯಲಾ.! ಇಸ್ಪೀಟ್‌ ಆಡ್ತಾ ಇದ್ಯಲಾ ಮಾರಾಯಾ?'

ಘಟನೆ ಎರಡು....
ಮದು­ವೆಯ ಮನೆ ರಾತ್ರಿ ಸಮಯ
...
ನಾಳೇ ಬೆಳ­ಗಾ­ದರೆ ಮದುವೆ . ಸಮಯ ಮೀರಿದೆ. ಎಲ್ಲರು ಮಲು­ಗುವ ಗಡ­ಬಿ­ಡಿ­ಯ­ಲ್ಲಿ­ದ್ದಾರೆ. ನಾಲ್ಕೈದು ಮಂದಿ ಹೆಂಗ­ಸ­ರಿಗೆ ಮಲು­ಗಲು ಜಾಗ ಸಿಕ್ಕುತ್ತಾ ಇಲ್ಲ.
ಸಿಟ್ಟಿ­ನಿಂದ ಗೊಣ­ಗು­ತ್ತಿ­ದ್ದಾರೆ `ಎಲ್ಲಿ ನೋಡಿ­ದರು ಮಲ­ಗುವ ಆಟವೇ ಇಲ್ಲೆ' ಎಂದು. ಹೀಗೆ ಹೇಳುತ್ತಾ ಅಡುಗೆ ಮನೆಗೆ ಹೋದರು. ಅಲ್ಲಿದ್ದ ಅಡುಗೆ ಭಟ್ಟ­ನಿಗೆ ಇವರ ಮಾತು ಕೇಳಿ­ಸಿತು. `ಅ­ವ­ನೆಂದ ಮಲ­ಗುವ ಆಟ ಆದ್ರೆ ಇಲ್ಲಿ ಜಾಗ ಇದ್ದು ಬನ್ನಿ' ಎಂದು.

ಘಟನೆ ಮೂರು..

ಚಲಿ­ಸು­ತ್ತಿ­ರುವ ಬಸ್‌...
ತಾಯಿ, ಮಗು, ಅಪ್ಪ ಮೂರು ಜನ ತಿರು­ಗಾ­ಟಕ್ಕೆ ಹೊರ­ಟಿ­ದ್ದರು. ಮಗು­ವಿಗೆ ಮೂತ್ರ­ಶಂಕೆ ಬಂಧು ತಾಯಿ ಮಗು­ವಿನ ಆರೈ­ಕೆ­ಯ­ಲ್ಲಿ­ದ್ದಳು. ಅದೆ ಸಮ­ಯಕ್ಕೆ ಬಸ್ಸು ಬಂದು ಬಿಟ್ಟಿತು. ಅಪ್ಪ ಮುಂದಿ ಬಾಗಿ­ಲಲ್ಲಿ ಬಸ್ಸು ಹತ್ತಿದ ತಾಯಿ ಮಗು ಹಿಂದಿನ ಬಾಗಿ­ಲಲ್ಲಿ ಹತ್ತಿ­ದರು.
ಹಳ್ಳಿ ಬಸ್ಸು ತುಂಬಾ ರಷ್‌ ಇತ್ತು. ಅಪ್ಪ ಎನ್ನು­ವ­ವನು ಟಿಕೆಟ್‌ ತಗೊಂಡ. ಸ್ವಲ್ಪ ದೂರ ಹೋದ ಮೇಲೆ ಎನೋ ನೆನ­ಪಾಗಿ ದೊಡ್ಡ­ದಾಗಿ ಕೂಗಿದ
`ಏ ಚೆಡ್ಡಿ ಹಾಕಿ­ಯೇನೆ' ಎಂದು ಹೆಂಡ್ತಿ ತಡ ಮಾಡ­ಲಿಲ್ಲ ನಿಮ್ಮ ಎದು­ರಿಗೆ ಹಾಕಿ­ನಲ್ರೋ' ಎಂದಳು
ಬಸ್‌­ನ­ಲ್ಲಿ­ದ್ದ­ವ­ರಿಗೆ ಆಶ್ಚರ್ಯ.. ಎನಿದು ಚೆಡ್ಡಿ ವಿಚಾ­ರ­ವನ್ನು ಹೀಗೆ ಮಾತಾ­ಡು­ತ್ತಾ­ರಲ್ಲ ಎಂದು ಕೊನೆಗೆ ನೋಡಿ­ದರೆ, ಮೂತ್ರ ಮಾಡಿ­ಸಲು ಮಗು­ವನ್ನು ಕರೆದು ಕೊಂಡು ಹೋಗಿ­ದ್ದ­ರಲ್ಲ ಮಗು­ವಿಗೆ ಚೆಡ್ಡಿ ಹಾಕಿ­ದಿಯಾ? ಎಂಬುದು ಅವರ ಮಾತಿನ ಹಿಂದಿ­ರುವ ಭಾವ.
ನಮ್ಮ ಪತ್ರಿಕಾ ವೃತ್ತಿ­ಯಲ್ಲಿ ಇಂತಹ ಹಾಸ್ಯ­ಗಳು ಬಹಳ. ಮೊದಲು ನಾನು ಪತ್ರಿಕಾ ವೃತ್ತಿ­ಯಲ್ಲಿ ಕಂಡ ಕೆಲವು ಜೋಕು­ಗ­ಳನ್ನು ಇಲ್ಲಿ ಬರೆ­ಯು­ತ್ತೇನೆ.
ಘಟನೆ ನಾಲ್ಕು......
ನಾನು ನೋಡಿ­ಕೊ­ಳ್ಳುವ ಜಿಲ್ಲೆಯ ಒಂದು ವರ­ದಿ­ಗಾರ ಒಂದು ಪೋಟೋಕ್ಕೆ ಕ್ಯಾಪ್ಷನ್‌ ಬರೆ­ದಿದ್ದ` ಈ ಊರಿನ ರೈತರ ದ್ರಾಕ್ಷಿ­ಬಿದ್ದು ಕೊಳೆ­ತು­ಹೋ­ಗಿವೆ.
ಘಟನೆ ಐದು....
ಒಂದು ಪತ್ರಿ­ಕೆ­ಯಲ್ಲಿ ಉಪ­ಸಂ­ಪಾ­ದಕ ಕೊಟ್ಟ ಹೆಡ್ಡಿಂಗ್‌ ಹೀಗಿತ್ತು `ಪ­ತಿ­ಯನ್ನು ಕೊಂದ­ವ­ಳಗೆ ಒಂಬತ್ತು ತಿಂಗಳು ಸಜೆ'
ಪೇಜ್‌ ಮಾಡು­ವ­ವ­ನಿಗೆ ಈ ಹೆಡ್ಡಿಂಗ್‌ ಸ್ವಲ್ಪ ಉದ್ದಾ­ಗಿತ್ತು ಅದ­ಕ್ಕಾಗಿ ಅವನು ಹೀಗೆ ಮಾಡಿದ `ಪ­ತಿ­ಯನ್ನು ಕೊಂದ­ವ­ಳಿಗೆ ಒಂಬತ್ತು ತಿಂಗಳು'

ಇಂತಹ ಹಲ­ವಾರು ಬಾಣ­ಗಳ ಸಂಗ್ರಹ ಬತ್ತ­ಳಿ­ಕೆ­ಯ­ಲ್ಲಿದೆ. ಇನ್ನೊಮ್ಮೆ ಸಂದರ್ಭ ಬಂದಾಗ ಹೇಳು­ತ್ತೇನೆ. ಆದ್ರೆ ಬರೆಯಲಿಕ್ಕೆ ಭಯ . ನಿಮ್ಮ ಅಭಿಪ್ರಾಯ ನೋಡಿ ಯಾರು ಬಯ್ಯದಿದ್ದರೆ ಮುಕ್ತವಾಗಿ ಹೇಳುತ್ತೇನೆ.

FEEDJIT Live Traffic Feed