Sunday, November 15, 2009

ಮಾಯಾಂಗನೆಯ ಸೆರಗು ಹಿಡಿದು

i am leaving the hell. that means benglore

ನಾನು ನರಕವನ್ನು ಬಿಡುತ್ತಿದ್ದೇನೆ. ಅಂದರೆ ಬೆಂಗಳೂರಿಂದ ಹೊರಗಡೆ ಹೋಗುತ್ತಿದ್ದೇನೆ. ಇದು ಟ್ವಿಟರ್‌ ಎನ್ನುವ ಅಂತರ್ಜಾಲ ತಾಣದಲ್ಲಿ ಕಂಡ ವಾಕ್ಯ.

ನಿಜ, ಬೆಂಗಳೂರು ಸ್ವರ್ಗ ಎಂದು ತಿಳಿದು ಬಂದ ಅದೆಷ್ಟೋ ಮಂದಿಗೆ ಹೀಗೆ ಅನ್ನಿಸುತ್ತಿದ್ದರೆ ಸುಳ್ಳಲ್ಲ. ದೇವಲೋಕದ ಸ್ವರ್ಗದ ಕಲ್ಪನೆಯಲ್ಲೇ ಬೆಂಗಳೂರನ್ನು ಗ್ರಹಿಸಿ ಬಂದವರ ಸಂಖ್ಯೆ ಅಧಿಕ. ನಾನು ನನ್ನಂಥ ಅನೇಕ ಮಂದಿ ಕೆಲಸವನ್ನು ಅರಸಿ ಇಲ್ಲಿಗೆ ಬರುವಾಗ ಹೊರಲಾದಷ್ಟು ಭಾರದ ಕನಸಿನ ಮೂಟೆ ಹೊತ್ತು ಕೊಂಡೇ ಬಂದೆವು. ಆ ಕನಸಿನ ಮೂಟೆಯ ಭಾರ ಮಾತ್ರ ಇನ್ನೂ ಕಡಿಮೆಯಾಗಲಿಲ್ಲ. ವಜ್ಜೆ ತಡೆದುಕೊಳ್ಳಲಿಕ್ಕೂ ಆಗುತ್ತಿಲ್ಲ.
ಬೆಂಗಳೂರು ಬದುಕುವುದನ್ನು ಕಲಿಸುತ್ತದೆ. ಸತ್ಯ, ಆದರೆ ಜೀವನ ಅನುಭವಿಸುವುದನ್ನು ಕಲಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.
ರಾಜಧಾನಿಗೆ ಬರುವ ಪೂರ್ವದ ಕತೆಗಳನ್ನು ಸ್ವಲ್ಪ ಹೇಳಬೇಕಾಗುತ್ತದೆ. ಪದವಿಯನ್ನು ಮುಗಿಸಿದ ಆ ದಿನಗಳಲ್ಲಿ ಬೆಂಗಳೂರು ಸೇರಿದ ಅನೇಕ ಮಂದಿ ಮಿತ್ರರು ಹೇಳುತ್ತಿದ್ದರು `ಇಲ್ಲಿಗೆ ಬಾರಯ್ಯ, ಸಕತ್ತಾಗಿದೆ. ಬ್ರಿಗೇಡ್‌, ಎಂ.ಜಿ. ರೋಡ್‌ ವೀಕೆಂಡ್‌ ಮಜಾ ಮಾಡಬಹುದು. ಬೇಸರ ಆದಾಗಲೆಲ್ಲ ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ಓಡಾಡಲಿಕ್ಕೆ ಆಗುತ್ತೆ. ತಿಂಗಳ ಕೊನೆಗೆ ಸಂಬಳ. ಹಣಕ್ಕಾಗಿ ಬೇರೆಯವರನ್ನು ಕೇಳುವ ಕೆಲಸವಿರಲ್ಲ, ಎಂಬೆಲ್ಲ ಕನಸನ್ನು ಕಟ್ಟಿದರು. ಯಾವುದೋ ಹಳ್ಳಿಯ ಮೂಲೆಯಲ್ಲಿರುವ ನಾನು, ನನ್ನಂತಹ ಅನೇಕ ಮಂದಿಗೆ ಮಿತ್ರರ ಮಾತು ವಜ್ರದ ಹರಳಿನಂತೆ ಹೊಳೆಯಿತು.
ಜಾಗರೂಕನಾಗಿರುವವ ಒಂದು ಕೆಲಸ ಹುಡುಕಿ ಇಲ್ಲಿಗೆ ಬರುತ್ತಾನೆ. ಬೆಂಗಳುರು ಆದಷ್ಟು ಬೇಗನೆ ಸೇರಬೇಕು ಎಂಬ ಉಮೇದಿ ಇರುವವನು ಬಂದು ಹುಡುಕಿದರಾಯಿತು ಎಂದು ಬಸ್‌ ಹತ್ತುತ್ತಾನೆ. ಇಲ್ಲಿಗೆ ಬಂದ ಮೇಲೆ ಮಾಯಾನಗರಿಯ ವಿಲಾಸ ತಿಳಿಯುತ್ತದೆ. ಮೆಜೆಸ್ಟಿಕ್‌ಗೆ ಬಂದು `ಗೆಳೆಯನೊಬ್ಬ ಇದ್ದಾನೆ, ಅವನಿಗೆ ಫೋನ್‌ ಮಾಡುವ ಎಂದು ಕೊಯ್ನ್‌ ಬಾಕ್ಸ್‌ಗೆ ಹೋಗಿ ಕಾಲ್‌ ಮಾಡಿದರೆ `ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಯನ್ನು ಸ್ವೀಕರಸುತ್ತಿಲ್ಲ' ಎಂಬ ಅಶರೀರ ವಾಣಿ ಕೇಳ ಬೇಕಾದ ಸ್ಥಿತಿಯೂ ಬರುತ್ತದೆ. ಒಮ್ಮೆ ಕರೆ ಸ್ವೀಕಾರ ಮಾಡಿದರೆ ನಾನು ಹೊಸ್ಕೆರೆಹಳ್ಳಿಯಲ್ಲಿರುವುದು. ಇಂತ ನಂಬರ್‌ ಬಸ್‌ ಹತ್ತಿ ಬಾ, ನಾನು ಅಲ್ಲಿ ನಿನ್ನ ಪಿಕ್‌ಅಪ್‌ ಮಾಡುತ್ತೇನೆ ಅನ್ನುತ್ತಾನೆ.
`ನಮ್ಮ ರಾಜ್ಯಧಾನಿ ಬೆಂಗಳೂರು' ಎಂದು ಪ್ರಾಥಮಿಕ ಶಾಲೆಯಲ್ಲಿ ಮೇಸ್ಟ್ರು ಹೇಳಿದನ್ನು ಕೇಳಿದ ಅನುಭವವಿರುವ ಹೊಸಮುಖ ಕಪ್ಪಿಡುತ್ತದೆ. ಯಾರ ಹತ್ತಿರವಾದರೂ ಕೇಳುವ ಎಂದರೆ ಅಲ್ಲಿರುವ ಎಲ್ಲರೂ ಗಡಬಿಡಿಯಲ್ಲಿ ಓಡಾಡುತ್ತಿರುತ್ತಾರೆ. ಆದರೂ ಕೇಳಿದ ಅಂತಿಟ್ಕೋಳಿ, ಅವರೆನೋ ಅನ್ನುತ್ತಾರೆ. ಇವನಿಗೆ ಎನೋ ಕೇಳುತ್ತದೆ. ಇದು ಬೆಂಗಳೂರಿಗೆ ಬಂದಾಗ ಆಗುವ ಮೊದಲ ಅನುಭವ.
ಆದರೂ ಬೆಂಗಳೂರು ಸುಂದರ. ನಂತರ ಜ್ಞಾನೋದಯವಾಗುತ್ತ ಹೋಗುತ್ತದೆ. ಬೆಂಗಳೂರು ಎಂದರೆ ರಭಸವಾಗಿ ಹರಿಯುವ ನೀರು. ಇಲ್ಲಿನ ಸುಳಿಯಲ್ಲಿ ಜೀವನ ಕೊಚ್ಚಿ ಹೋಗುತ್ತದೆ. ನಾವು ಎಲ್ಲಿದ್ದೇವೆ ಎಂದು ಯೋಚಿಸುವ ಹೊತ್ತಿಗೆ ಎಲ್ಲಿಗೆ ಹೋಗಿ ತಲುಪಿರುತ್ತೇವೆ. ಅಂದರೆ ಇಲ್ಲಿಗೆ ಬಂದ ವ್ಯಕ್ತಿ ಬೇಗನೆ ಹಣ ಸಮಪಾದನೆ ಮಾಡಬಹುದು, ಒಳ್ಳೆಯ ಹೆಸರನ್ನು ಗಳಿಸಬಹುದು, ಕೆಟ್ಟ ಕೆಲಸ ಮಾಡಿ ಕುಖ್ಯಾತಿಯನ್ನೂ ಗಳಿಸಬಹುದು. ಬೆಳವಣಿಗೆ, ಪತನ, ಸಂಪಾದನೆ ಎಲ್ಲವೂ ಇಲ್ಲಿ ಸಾಧ್ಯ. ನೆಮ್ಮದಿಯ ಜೀವನವೊಂದನ್ನು ಬಿಟ್ಟು.
`ನನಗೆ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಮನೆ ಇತ್ತು. ಅಲ್ಲಿ ಗಲಾಟೆ ಎಂದು ಕತ್ರಿಗುಪ್ಪೆಯಲ್ಲಿ ಮನೆ ಮಾಡಿದೆ. ಈಗ ಅಲ್ಲಿಯೂ ಗೌಜು ಅದಕ್ಕಾಗಿ ಇಲ್ಲಿ ಮನೆ ಮಾಡುತ್ತಿದ್ದೇವೆ ' ಎನ್ನುವ ಮಾತನ್ನು ಉತ್ತರಹಳ್ಳಿಯಲ್ಲಿ ಮನೆಕಟ್ಟುತ್ತಿರುವ ಒಬ್ಬರ ಮಾತು. ಇಲ್ಲೇ ಹುಟ್ಟಿ ಬೆಳದವರಿಗೆ ಇಲ್ಲಿನ ವಾತಾವರಣ `ಗಲಾಟೆ' ಎಂದಾಗ ಹಳ್ಳಿಯಲ್ಲಿ ಹುಟ್ಟಿ ಬೆಳೆದವರ ಕತೆ ಎನಾಗಬಹುದು? ಅದಕ್ಕೆ ಬೆಟ್ಟದಾ ಮೇಲೊಂದು ಮನೆಯ ಮಾಡಿ ವಚನವೇ ಸಾಂತ್ವಾನ ಹೇಳುತ್ತದೆ
ಇಲ್ಲಿನ ವಾತಾವರಣ ಕಲುಷಿತ ಗೊಳ್ಳುತ್ತಿದೆ. ಮೂರು ದಿನ ಕಣ್ಮುಚ್ಚಿ ಮಳೆಹೊಯ್ದರೆ ಮಹಾನಗರಿ ತತ್ತರಿಸುತ್ತದೆ. ತಾಪ ಹೆಚ್ಚಾಗ ತೊಡಗಿದೆ. ದೂಳು ಯಥೇಚ್ಚ. ಇದು ಪ್ರಾಕೃತಿಕ ತೊಂದರೆಯಾದರೆ, ಸಮಾಜದೊಡನೆ ಬದುಕುವ ಮನುಷ್ಯ ಮನುಷ್ಯನ ಸಂಬಂಧವೇ ಹಳಸುತ್ತಿದೆ. ಪಕ್ಕದ ಮನೆಯವರ ಪರಿಚಯ ಇಲ್ಲದ ಸ್ಥಿತಿ ಇದೆ. ಎಲ್ಲರಿಗೂ ಅವರರವರ ಕೆಲಸವೇ ಮುಖ್ಯವಾಗುತ್ತಿದೆ. ಸಾವಿರ ಸಾವಿರ ಮನೆಗಳ ಮಧ್ಯೆ ಒಂಟಿ ಮನೆ. ಲಕ್ಷಾಂತರ ಜನರಿದ್ದರು ಎಕಾಂಗಿ ಎನ್ನುವ ಸ್ಥಿತಿ ಇಲ್ಲಿದೆ.
ಒಂದು ಕಡೆಯಲ್ಲಿ ರಾಜಧಾನಿಗೆ ಸಹಸ್ರದ ಲೆಕ್ಕಾಚಾರದಲ್ಲಿ ಜನರು ಬರುತ್ತಿದ್ದರೆ, ಮತ್ತೊಂದೆಡೆ ಇಲ್ಲಿಂದ ಬೇರೆಡೆ ಹೋಗಬೇಕು ಎಂದು ದಿನವೂ ಯೋಚಿಸುತ್ತ ಇಲ್ಲೇ ಇದ್ದವರಿದ್ದಾರೆ. ಹೊಟ್ಟೆಪಾಡಿಗಾಗಿ ಬಂದು ಬೇರೆಡೆ ಹೋಗಲಾರದ ಸ್ಥಿತಿಯಲ್ಲಿರುವವರು ಇಲ್ಲಿನ ಬದಲಾವಣೆಗೆ ಒಳಗೊಳಗೆ ಬಯ್ದುಕೊಳ್ಳುತ್ತಾ ಇಲ್ಲೆ ಇರಬೇಕಾಗುತ್ತದೆ. ಅಂದರೆ ಸಾವಿರ ಲೆಕ್ಕದಲ್ಲಿ ಕನಸು ಕಂಡು ಇಲ್ಲಿಗೆ ಬಂದವರು ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಇರಬೇಕಾಗುತ್ತದೆ. ಅದೇ ಇಂಜನಿಯರಿಂಗ್‌ ಕಲಿತು ಬಂದವರು ಲಕ್ಷಾಂತರ ಗಳ ಕನಸು ಕಂಡು ಬಂದವರು ನಗರದ ಹೊರವಲಯದಲ್ಲಿ ಅಥವಾ ಯಾವುದಾದರೂ ಹಳ್ಳಿಯಲ್ಲಿ ಭೂಮಿ ಖರೀದಿಸಿ ತಂಪನೆ ಜೀವನ ಸಾಗಿಸಲಿಕ್ಕೆ ಹೊರಡುತ್ತಾರೆ. ಇನ್ನೂ ಕೆಲವರು ಹೇಳುತ್ತಾರೆ ` ಇನ್ನೊಂದು ನಾಲ್ಕು ವರ್ಷ ಎಲ್ಲಿಯಾದರೂ ಹಳ್ಳಿಯಲ್ಲಿ ಸ್ವಲ್ಪ ಜಮೀನು ತೆಗೆದುಕೊಂಡು ಆರಾಮ ಇದ್ದುಬಿಡ್ತೀನಿ' ಎಂದು.
ಶೇಕಡಾ 80ಕ್ಕೂ ಹೆಚ್ಚು ಜನರಿಗೆ ಅಲ್ಲದೆ ನಮ್ಮನೆ ಅವರೆಲ್ಲ ಇಲ್ಲಿರುವುದು ಸುಮ್ಮನೆ ಅಷ್ಟೇ. ಹೀಗಾಗಿ ಬೆಂಗಳೂರಿಂದ ಹೋಗುವವರು ಹೋಗುತ್ತಾರೆ. ಬರವವರು ಬರುತ್ತಾರೆ.

Wednesday, November 4, 2009

ವೈವಾ­ಹಿಕ ಅಂಕ­ಣವು.. ಅವಿ­ವಾ­ಹಿತ ಹುಡು­ಗರು

ನನಗೆ ಇತ್ತೀ­ಚೆಗೆ ವೈವಾ­ಹಿಕ ಅಂಕಣ ನೋಡು­ವುದು ಒಂದು ಹವ್ಯಾ­ಸ­ವಾ­ಗಿದೆ. ಅಲ್ಲಲ್ಲ ಚಟವೇ ಆಗಿದೆ. ನೀವು ಉಹಿ­ಸ­ಬ­ಹುದು ಇವ­ನೇನು ಮದುವೆ ಗಂಡೇ? ನಿಜ, ಮದುವೆ ಯಾಗುವ ಹೊಸ್ತಿ­ಲ­ಲ್ಲಿ­ರುವ ಹಲ­ವಾರು ಗಂಡು ಮಕ್ಕ­ಳಲ್ಲಿ ನಾನೂ ಒಬ್ಬ. ಮುಂಚೂ­ಣಿ­ಯಲ್ಲಿ ಇಲ್ಲ­ದಿ­ದ್ದರೂ, ಸರದಿ ಸಾಲಿ­ನಲ್ಲಿ ನಿಂತಿ­ದ್ದೇನೆ. ಆದರೆ ಹೆಣ್ಣು ಸಿಗು­ವು­ದೆಂ­ದರೆ ಮಾಯಾ­ಜಿಂಕೆ ಹಿಡಿದ ಹಾಗೆ ಎನ್ನು­ವುದು ಮದು­ವೆ­ಯಾ­ಗ­ಬೇ­ಕೆಂ­ದಿ­ರುವ ಬಹು­ತೇಕ ಗಂಡು ಮಕ್ಕಳ ಅನು­ಭವ.
ಹಿಂದೊಂದು ಕಾಲ ಇತ್ತಂತೆ, ಯಾವ ಗಂಡು ಎಷ್ಟು ಮನೆಯ ಸಿರಾ (ರವೆ­ಯಿಂದ ಮಾಡುವ ಸ್ವೀಟ್‌) ತಿನ್ನು­ತ್ತಾ­ನೆಂದು. ಒಂದು ಗಂಡಗೆ ಐವತ್ತು ಜಾತ­ಕ­ದ­ವ­ರೆಗೆ ಬರು­ತ್ತಿ­ತ್ತಂತೆ. ಅಶ್ವ­ಮೇಧ ಯಾಗದ ಕುದು­ರೆಯ ಬೆನ್ನು ಹತ್ತಿ ಹೊರಟ ಯೋಧ­ನಂತೆ ಒಂದು ದಿನಕ್ಕೆ ಹತ್ತು ಹೆಣ್ಣು ಮಕ್ಕ­ಳನ್ನು ನೋಡಿ, ಹತ್ತು ಮನೆಯ ಸಿರಾ ತಿಂದು ಬರು­ತ್ತಿ­ದ್ದ­ರಂತೆ. ಆದರೆ ಕಾಲ ಬದ­ಲಾ­ಗಿದೆ. ಎಷ್ಟೋ ಜನ ಗಂಡು ಮಕ್ಕಳು ಹೆಣ್ಣು ಸಿಗದೇ ಅನಿ­ವಾ­ರ್ಯದ ಬ್ರಹ್ಮ­ಚರ್ಯ ಪಾಲಿ­ಸಿ­ದ್ದಾರೆ. ಮದುವೆ ಎಂದರೆ ಆಸೆ­ಯಾ­ದರೂ ಬೆಚ್ಚಿ­ಬೀ­ಳುವ ಸ್ಥಿತಿಗೆ ತಲು­ಪಿ­ದ್ದಾರೆ.
ನಾನೂ ಇವರ ಸಾಲಿಗೆ ಸೇರು­ವುದು ಬೇಡ ಎಂದು ಎಲ್ಲಿ­ಯಾ­ದರೂ ನನಗೆ ಹೊಂದಾ­ಣಿ­ಕೆ­ಯಾ­ಗುವ ಅಲ್ಲಲ್ಲ ಯಾವು­ದಾ­ದರೂ ಹೆಣ್ಣಿಗೆ ನಾನು ಹೊಂದಾ­ಣಿಕೆ ಯಾಗ­ಬ­ಹು­ದೆಂದು ಪ್ರತಿ ಪತ್ರಿ­ಕೆಯ ವೈವಾ­ಹಿಕ ಅಂಕಣ ನೋಡು­ತ್ತೇನೆ. ನೋಡುತ್ತಾ ಇದ್ದೇನೆ. ನನ್ನಂತೆ ಬಹಳ ಹುಡು­ಗರು ವೈವಾ­ಹಿಕ ಅಂಕಣ ನೋಡು­ತ್ತಾಂತೆ. ಕೆಲಸ ಹುಡು­ಕುವ ಮಂದಿ ಕ್ಲಾಸಿ­ಫೈಡ್‌ ನೋಡಿ­ದಂತೆ.
ಅದ­ರಲ್ಲೂ ಹವ್ಯಕ ಹುಡು­ಗರು ಒಂದು ಪತ್ರಿ­ಕೆ­ಯನ್ನು ಬಿಡದೆ ವೈವಾ­ಹಿಕ ಅಂಕಣ ನೋಡು­ತ್ತಾ­ರಂತೆ. `ಹು' ಅಥವಾ `ಕೂ' ಎಂದರೆ ಹುಡುಗಿ/ ಕೂಸು ಎಂದು ನೇರ ಜಾತಕ ಕೇಳಿ, ವಿಳಾಸ ವಿಚಾ­ರಿ­ಸುವ ಹಪ­ಹ­ಪಿ­ಕೆಗೆ ಪಾಪ ಮಾಣಿ­ಗಳು ತಲು­ಪಿ­ದ್ದಾರೆ. ಅದಕ್ಕೆ ಕಾರ­ಣವೂ ಇದೆ. ಹವ್ಯ­ಕ­ರಲ್ಲಿ ಹೆಣ್ಣು ಮಕ್ಕಳ ತೀವ್ರ ಕೊರತೆ. ಮರು­ಭೂ­ಮಿ­ಯಲ್ಲಿ ನೀರಿನ ಕೊರತೆ ಇದ್ದಂತೆ. ಅದಕ್ಕೆ ಸಿಕ್ಕಿ­ದನ್ನು ಬಿಡ­ಬಾ­ರದು ಎಂಬ ದೂ(ದು)ರಾಲೋ­ಚನೆ.
ಹಾಗಂತ ಹೆಣ್ಣು ಮಕ್ಕಳು ಇಲ್ಲ ಎಂದಲ್ಲ. ಇದ್ದ ಹೆಣ್ಣು ಮಕ್ಕಳ ಕೊರ­ತೆಯ ಸೃಷ್ಠಿ­ಯಾ­ಗಿದೆ. ಅರ್ಥ­ಶಾ­ಸ್ತ್ರದ ಪ್ರಕಾರ ಡಿಮ್ಯಾಂಡ್‌ ಹೆಚ್ಚು ಮಾಡ­ಲಿಕ್ಕೆ ವಸ್ತು­ಗ­ಳನ್ನು ಉದ್ದೇಶ ಪೂರ್ವ­ಕ­ವಾಗಿ ತಡೆ ಹಿಡಿ­ಯು­ವಂತೆ ಹವ್ಯ­ಕ­ರಲ್ಲೂ ಉದ್ದೇಶ ಪೂರ್ವ­ಕ­ವಾಗಿ ಹೆಣ್ಣು ಮಕ್ಕಳ ಕೊರ­ತೆ­ಯಾ­ಗಿದೆ.
ಈಗ ವೈವಾ­ಹಿಕ ಅಂಕಣ ವಿಚಾ­ರಕ್ಕೆ ಬರುವ...
ಬಿ.ಇ ಓದಿ­ರುವ ಸುಸಂ­ಸ್ಕೃತ ಕನ್ಯೆಗೆ ಬಿ. ಇ, ಎಂಟೆಕ್‌ ಮಾಡಿ­ರುವ ಯೋಗ್ಯ ವರ ಬೇಕಾ­ಗಿ­ದ್ದಾರೆ. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ, ಕೈತುಂಬ ಸಂಬಳ, ವಯಸ್ಸು 28 ಮೀರಿ­ರ­ಬಾ­ರದು. ಆಸ­ಕ್ತರು 94482.... ಸಂಪ­ರ್ಕ­ಸ­ಬ­ಹುದು.
ಅಲ್ಲ ಕಣ್ರಿ, 28 ನೇ ವರ್ಷಕ್ಕೆ ಎಲ್ಲ­ವನ್ನು ಸಂಪಾ­ದನೆ ಮಾಡಿ­ರುವ ಯುವಕ ಬೇಕು ಎಂದರೆ ಹ್ಯಾಗೆ ಸಾಧ್ಯ. ಯುವ­ಕ­ರಿ­ರು­ವಾ­ಗಲೇ ಸುಖದ ಸುಪ್ಪ­ತ್ತಿ­ಗೆ­ಯ­ಲ್ಲಿ­ದ್ದರೆ ಜೀವನ ಎಂಬುದು ಅಂತ್ಯ ಅಲ್ವೇನ್ರಿ? ಇರಲಿ ಬಿಡಿ. ಇದ­ಕ್ಕಿಂತ ಮಜಾ­ವೆಂ­ದರೆ ಹಳ್ಳಿ­ಯಿಂದ ಬಂದ ಒಂದು ವೈವಾ­ಹಿಕ ಮಾಹಿತಿ...ಪಿಯು­ಸಿ­ಯನ್ನು ಮೊದಲ ದರ್ಜೆ­ಯಲ್ಲಿ ಪಾಸಾದ ಕನ್ಯೆಗೆ ಯೋಗ್ಯ ವರ­ಬೇ­ಕಾ­ಗಿ­ದ್ದಾರೆ. ಮುಂದೆ ಕಲಿ­ಯುವ ಆಸಕ್ತಿ ಹೊಂದಿ­ರುವ ಈ ಕನ್ಯೆ ಮುಂದೆ ಕಲಿ­ಸುವ ಮನ­ಸ್ಸು­ಳ್ಳ­ವರು ಬೇಕು. ವರ­ನಿಗೆ ಉತ್ತಮ ಆದಾ­ಯ­ವಿ­ರ­ಬೇಕು. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ.... ಹೀಗೆ ಸಾಗು­ತ್ತದೆ ಜಾಹೀ­ರಾತು. ಎಲ್ಲ ಹೆಣ್ಣು ಮಕ್ಕ­ಳಿಗೂ ಇಂತ­ಹದೇ ವರ ಬೇಕೆಂ­ದಾರೆ ನಮ್ಮಂ­ತ­ವರ ಕತೆ ಗೋವಿಂದಾ....ಗೋವಿಂದಾ.
ಇದು ಹೆಣ್ಣು­ಮ­ಕ್ಕಳ ಒತ್ತಾ­ಯ­ವಲ್ಲ. ಅವರ ಪಾಲ­ಕ­ರಿಗೆ ಬೆಂಗ­ಳೂ­ರಿನ ಹುಚ್ಚು ಹಿಡಿದು ಬಿಟ್ಟಿದೆ. ಎಂಬ ಮಾತು ಕೇಳಿ ಬರು­ತ್ತಿದೆ. ಅಲ್ರಿ ಎಲ್ಲರೂ ಬೆಂಗ­ಳೂರು, ವಿದೇಶ ಅಂತಿದ್ರೆ ಹಳ್ಳಿ­ಗಳು ಮುದು­ಕರ ಸಂತೆ­ಯಾ­ಗು­ವು­ದ­ರಲ್ಲಿ ಸಂದೇ­ಹ­ವಿಲ್ಲ. ಇದೇ ಜಾಹೀ­ರಾತು ನೀಡಿದ ಪಾಲ­ಕರು ಕೊನೆ­ಗಾ­ಲ­ದಲ್ಲಿ ಹತ್ತಿ­ರ­ದಲ್ಲಿ ಯಾರೂ ಇಲ್ಲದೇ ಅನಾ­ಥ­ರಾ­ಗು­ವು­ದ­ರಲ್ಲಿ ಸಂದೇ­ಹವೆ ಇಲ್ಲ.
ಗಂಡು ಮಕ್ಕಳೋ ಇದೆ ಅಪ್ಪ ಅಮ್ಮನ ಒತ್ತಾ­ಯಕ್ಕೆ ನಗರ ಸೇರಿ­ರು­ತ್ತಾರೆ. ಬೆಂಗ­ಳೂ­ರಿ­ನಲ್ಲಿ ಇರುವ ಕಾರ­ಣಕ್ಕೆ ಒಂದು ಮದು­ವೆ­ಯಾ­ದರೂ ಆಶ್ಚ­ರ್ಯ­ವಿಲ್ಲ. ಮದುವೆ ಆದ ಮೇಲೆ ಮನೆ ಕಡೆ ಮುಖ ಹಾಕುವ ಮನಸ್ಸು ಇಲ್ಲದೆ ಇಲ್ಲೆ ಸೆಟ್ಲಾಗಿ ಬಿಡು­ತ್ತಾರೆ. ಮದು­ವೆಯ ಕಷ್ಟ ಏನೆಲ್ಲಾ ಬಾನ­ಗಡಿ ಮಾಡು­ತ್ತದೆ. ಮುಂದೊಂದು ದಿನ `ನಮ್ಮ ಮನೆ' ಎಂಬುದು ಇಲ್ಲದೆ ಪರಿ­ತ­ಪಿಸ ಬೇಕಾ­ಬ­ಹುದು ಅನ್ನಿ­ಸು­ತ್ತಿದೆ.
ಇಲ್ಲಿ ಯಾರ ತಪ್ಪು ಎಂದು ಹೇಳ­ಲಿಕ್ಕೆ ಆಗು­ವು­ದಿಲ್ಲ. ತಮ್ಮ ಹೆಣ್ಣು ಮಕ್ಕಳು ಸುಖ­ವಾ­ಗಿ­ರಲಿ ಎಂಬುದು ಹೆಣ್ಣು ಮಕ್ಕಳ ತಂದೆ ತಾಯಿ­ಗಳ ಆಶ­ಯ­ವಾ­ದರೆ, ತಮ್ಮ ಗಂಡು ಮಕ್ಕ­ಳಿಗೆ ಮದು­ವೆ­ಯಾಗಿ ವಂಶ ವೃದ್ಧಿ­ಯಾ­ಗಲಿ ಎಂಬುದು ಗಂಡು ಮಕ್ಕಳ ತಂದೆ ತಾಯಿ­ಗಳ ಆಶಯ. ಅಪ್ಪ- ಅಮ್ಮಂ­ದಿರ ಆಶ­ಯಕ್ಕೆ ವಿರು­ದ್ಧ­ವಾ­ಗ­ಬಾ­ರ­ದೆಂದು ಸಹಿ­ಸು­ತ್ತಿ­ರುವ ಸ್ಥಿತಿ ಮಕ್ಕ­ಳ­ದಾ­ಗಿದೆ.

FEEDJIT Live Traffic Feed