Monday, September 29, 2008

ಒಂದೇ ರಾತ್ರಿ, ಒಂದೇ ಪ್ರಸಂಗ, ಮೂರು ಪ್ರದ­ರ್ಶನ












ಯಕ್ಷಗಾನದಲ್ಲಿ ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಪೌರಾಣಿಕ ಪ್ರಸಂಗಗಳಿಗಿಂತ ನೂತನ ಪ್ರಸಂಗಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಆದರೆ ಪ್ರದರ್ಶನದ ವಿಧಾನದಲ್ಲಿ ಹೊಸತನವಿದ್ದರೆ ಪೌರಾಣಿಕ ಆಖ್ಯಾನಗಳಿಗೂ ಜನ ಬರುತ್ತಾರೆ ಎನ್ನುವುದಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನಕ್ಕೆ ಬಂದ ಜನಸ್ತೋಮವೇ ಸಾಕ್ಷಿ.
ಆ ದಿನ ಅಲ್ಲಿ `ಕಾರ್ತವೀರ್ಯಾರ್ಜುನ' ಆಖ್ಯಾನ ಮೂರು ಬಾರಿ ಪ್ರದರ್ಶನ ಕಂಡಿತು. ಒಂದೇ ರಾತ್ರಿಯಲ್ಲಿ ಬೇರೆ ಬೇರೆ ಕಲಾವಿದರು ಒಂದೇ ಆಖ್ಯಾನ ಪ್ರದರ್ಶಿಸುವ ಪ್ರಯೋಗ ಇದಾಗಿತ್ತು. ಹಿರಿ-ಕಿರಿಯ ಕಲಾವಿದರ ಕೂಡುವಿಕೆಯಲ್ಲಿ ಈ ಯಕ್ಷಗಾನವನ್ನು ಸಂಯೋಜಿಸಲಾಗಿತ್ತು. ಮೊದಲ ಪ್ರದರ್ಶನದಲ್ಲಿ ಸುಬ್ರಮಣ್ಯ ಚಿಟ್ಟಾಣಿ ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆ ಕಾರ್ತವೀರ್ಯನ ಪಾತ್ರವನ್ನು ನಿರ್ವಹಿಸಿದರು. ಚಿಟ್ಟಾಣಿ ಅವರು ತಮ್ಮ ವಯಸ್ಸನ್ನು ಮರೆತು `ವರವಿಲೋಚನ ಪುತ್ರನೂ ಸೆರೆಯೊಳಿರೆ' ಮತ್ತು `ಸಿಕ್ಕಿದೆಯ ಏಲೇ ದೈತ್ಯ ರಾಯ' ಪದ್ಯಕ್ಕೆ ಮೈಮರೆತು ಕುಣಿದರು. ಇವರೇ 74ರ ಪ್ರಾಯದ ಚಿಟ್ಟಾಣಿಯೋ ಎನ್ನುವ ಹಾಗೇ ಅಭಿನಯ ನೀಡಿದರು. ಇವರು ಎದುರು ರಾವಣನಾಗಿ ಬಳ್ಕೂರು ಕೃಷ್ಣಯಾಜಿ `ಖಳಕುಲೇಂದ್ರ ನಗುತ' ಎಂಬ ಪ್ರವೇಶ ಪದ್ಯದಲ್ಲಿಯೇ ಸಾಕ್ಷಾತ್‌ ರಾವಣ ಬಂದನೋ ಎಂಬ ಭಾವ ಮೂಡಿಸಿದರು.
ಕಾರ್ತವೀರ್ಯನ ದೂತನಾಗಿ ಹಳ್ಳಾಡಿ ಜಯರಾಂ ಶೆಟ್ಟಿ ಹಾಸ್ಯರಸಾಯನ ಉಣಬಡಿಸಿದರು. ವಿಭೀಷಣನ ಪಾತ್ರ ಮಾಡಿದ ಮಂಕಿ ಈಶ್ವರ ನಾಯ್ಕ ಅವರ ನೃತ್ಯ ಚೆನ್ನಾಗಿದ್ದರೂ ವಿಭೀಷಣನಂತಹ ಮುಂಡಾಸು ವೇಷದ ಗಂಭೀರ ವ್ಯಕ್ತಿತ್ವದ ಪಾತ್ರಕ್ಕೆ ಅದು ಹೆಚ್ಚಾಯಿತೇನೋ ಅನ್ನಿಸಿತು. ಕೊಳಗಿ ಕೇಶವ ಹೆಗಡೆ ಅವರ ಸುಶ್ರಾವ್ಯ ಭಾಗವತಿಕೆ ಪ್ರಸಂಗಕ್ಕೆ ಮತ್ತಷ್ಟು ರಂಗು ತುಂಬಿತು.
ಎರಡನೇ ಕಾರ್ತವೀರ್ಯನಾಗಿ ಬಂದವರು ಕಣ್ಣಿಮನೆ ಗಣಪತಿ ಭಟ್‌. ಪುಂಡು ವೇಷಕ್ಕೆ ಹೆಸರಾಗಿರುವ ಇವರಿಗೆ ರಾಜವೇಷ ಅಥವಾ ಕಿರೀಟ ವೇಷ ಅಷ್ಟು ಒಪ್ಪುವುದಿಲ್ಲ ಎಂದು ಯಾರಿಗಾದರೂ ಅನಿಸಿದರೆ ತಪ್ಪಲ್ಲ. ಆದರೂ ಅವರು ಕಾರ್ತವೀರ್ಯನ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದರು. ಭಿನ್ನ ಕುಣಿತಕ್ಕೆ ಹೆಸರಾದ ಇವರು `ಸರ್ಕಸ್‌'ಗಳು ಕಡಿಮೆ ಇದ್ದುದರಿಂದ ಪಾತ್ರ ಹಿತವೆನಿಸಿತು. ಇವರಿಗೆ ರಾವಣನಾಗಿ ಮತ್ತೋರ್ವ ಯುವ ಕಲಾವಿದ ತೋಟಿಮನೆ ಗಣಪತಿ ಹೆಗಡೆ ಅವರು ತಮ್ಮ ಸಾಮರ್ಥ್ಯಕ್ಕೆ ಮೀರಿ ಉತ್ತಮ ಅಭಿನಯ ನೀಡಲು ಪ್ರಯತ್ನಿಸಿದರು. ಆದರೆ ಇವರಿಗಿಂತ ಮೊದಲಿನ ಯಾಜಿ ರಾವಣನನ್ನು ಮರೆಸಲು ಸಾಧ್ಯವಾಗಲಿಲ್ಲ.
ದೂತನಾಗಿ ಉತ್ತಮವಾಗಿ ನಿರ್ವಹಿಸಿದ ಚಪ್ಪರಮನೆ ಶ್ರೀಧರ ಹೆಗಡೆ ಅವರ ಕುಣಿತದಲ್ಲಿ ವೈವಿಧ್ಯ ಇತ್ತು. ಮಾತಿನಲ್ಲಿ ಪಕ್ಕನೇ ನಗು ತರಿಸುವ ಚುರುಕುತನವಿತ್ತು. ರಾಘವೇಂದ್ರ ಮಯ್ಯ ಭಾಗವತಿಕೆ ಹಿತವೆನಿಸಿದರೂ ಪದ್ಯದ ಶಬ್ದಗಳು ಸ್ಪಷ್ಟವಾಗದೇ ಕಿರಿ ಕಿರಿಯೆನಿಸಿತು. ಪರಮೇಶ್ವರ ಬಂಡಾರಿ ಅವರ ಮದ್ದಳೆಯಲ್ಲಿ ಹೊಸತನವಿತ್ತು, ಸಖಿಯಾಗಿ ಶಶಿಕಾಂತ ಶೆಟ್ಟಿ ನೃತ್ಯ, ಮಾತು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಬೆಳಗಿನ ಜಾವದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಸುಂದರ ವೇಷಭೂಷಣ ಮತ್ತು ಸೃಜನಶೀಲ ಮಾತುಗಳ ಕಾರ್ತವೀರ್ಯನಾಗಿ ಗಮನಸೆಳೆದರು. ಪಾತ್ರದ ಚೌಕಟ್ಟಿನೊಳಗೇ ಹೊಸತನ ತುಂಬುವ ಅವರ ಶೈಲಿ ಆಕರ್ಷಕ. `ನೀಲ ಗಗನದೋಳು' ಪದ್ಯಕ್ಕೆ ಹೊಸ ರೀತಿಯಲ್ಲಿ ನೃತ್ಯ ಸಂಯೋಜನೆಯನ್ನು ಮಾಡಿರುವುದು ವಿಶೇಷವಾಗಿತ್ತು. ಹಡಿನಬಾಳು ಶ್ರೀಪಾದ ಹೆಗಡೆ ಅವರ ರಾವಣ, ಗತ್ತು ಮತ್ತು ಮಾತಿನಿಂದ ಜನರನ್ನು ಸೆಳೆಯಿತು. ಕ್ಯಾದಗಿ ಮಹಾಬಲೇಶ್ವರ ಅವರು ಹೊಸ ಪ್ರಸಂಗಗಳ ಹಾಸ್ಯ ಪಾತ್ರ ನಿರ್ವಹಿಸಿ ಜನರನ್ನು ಸೆಳೆಯುವುದರಲ್ಲಿ ನಿಪುಣರು. ಆದರೆ ಇಲ್ಲಿ ಅವರ ಪಾತ್ರ ಪರವಾಗಿಲ್ಲ ಎನ್ನುವಂತಿತ್ತು. ಹೆರಂಜಾಲು ಗೋಪಾಲ ಗಾಣಿಗರ ಭಾಗವತಿಗೆ ಸಾಂಪ್ರದಾಯಿಕ ಶೈಲಿಯಿಂದಾಗಿ ಖುಷಿ ನೀಡಿತು. ರಾತ್ರಿಯಿಂದ ಬೆಳಗಿನವರೆಗೆ ಕೋಟ ಶಿವಾನಂದ ಅವರ ಚಂಡೆ ವಾದನ ಪ್ರತಿಯೊಬ್ಬರ ಕುಣಿತಕ್ಕೂ ಮೆರುಗು ನೀಡಿತು.
ಈ ಪ್ರಯೋಗವೇನೋ ಉತ್ತಮ. ಆದರೆ ಒಂದೇ ಪ್ರಸಂಗವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ನೋಡುವುದು ಪ್ರೇಕ್ಷಕನ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇದೊಂದು ಸ್ಪರ್ಧೆಯ ಉತ್ಸಾಹವನ್ನು ಪ್ರೇಕ್ಷಕರಲ್ಲಿ ಮೂಡಿಸಲು ಸಾಧ್ಯವಾಗದಿದ್ದರೆ ಅದು ಏಕತಾನತೆಯಿಂದ ಬಳಲಬೇಕಾಗುತ್ತದೆ. ಇಲ್ಲದಿದ್ದರೆ 'ಕೇಳಿದ್ದನ್ನೇ ಕೇಳುವ' ದೌರ್ಭಾಗ್ಯ ಪ್ರೇಕ್ಷಕನಾಗುತ್ತದೆ! ಎನ್ನುವುದು ಮೊನ್ನೆಯ ಪ್ರದರ್ಶನದಲ್ಲಿ ಸಾಬೀತಾಯಿತು. ಆದರೂ ಹೊಸ ಪ್ರಸಂಗಗಳ ಭರಾಟೆಯಲ್ಲಿ ಇಂತಹ ಪ್ರಯತ್ನಗಳ ಮೂಲಕ ಪೌರಾಣಿಕ ಪ್ರಸಂಗಗಳನ್ನು ಚಾಲ್ತಿಯಲ್ಲಿಡುವ ಯತ್ನ ಶ್ಲಾಘನೀಯ. ಸಾಲಿಗ್ರಾಮ ಮೇಳದವರ ಜೊತೆ ಹಲವಾರು ಖ್ಯಾತ ನಟರನ್ನು ಒಂದೇ ವೇದಿಕೆಯಲ್ಲಿ ಕುಣಿಸಿದ ಹೆಗ್ಗಾರಳ್ಳಿ ಮನೋಜ್‌ ಭಟ್ಟರು ಅಭಿನಂದನಾರ್ಹರು.

Saturday, September 27, 2008

ಆಟ­ವೆಂ­ದರೆ ಹಾಗೇ..





ಯಕ್ಷಗಾನ ಅಂದರೇ ಯಾಕೋ ಏನೋ ಹಾಗೆ ಕಾಲುಗಳು ಕುಣಿಯಲಿಕ್ಕೆ ತೊಡಗುತ್ತವೆ. ಸಾಮಾನ್ಯವಾಗಿ ಎಲ್ಲಿ ಯಕ್ಷಗಾನವಾದರೂ ಹೋಗುವ ಹುಮ್ಮಸ್ಸು ಕೆಲ ಕಾಲದ ಹಿಂದೆ ಇತ್ತು. ಊರನ್ನು ಬಿಟ್ಟು ಯಾವಾಗ ಬೆಂಗಳೂರು ಸೇರಿದೆನೋ ಅಂದಿನಿಂದ ಆ ಮಜಾವೇ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಊರಿಗಿಂತ ಹೆಚ್ಚಿಗೆ ಯಕ್ಷಗಾನವಾಗಬಹುದು. ಆದರೆ ಊರಿನಲ್ಲಿ ಆಗುವ ಯಕ್ಷಗಾನದ ಗಮ್ಮತ್ತೆ ಬೇರೆ.
ನಮ್ಮದೊಂದು ಟ್ರುಪು. ಇದರಲ್ಲಿ 18 ವರ್ಷದ ಮಾಣಿಯರಿಂದ ಹಿಡಿದು 60ರ ಪ್ರಾಯದ ಯುವಕರು ಇದ್ದರು. ವಯಸ್ಸಾದವರು ಹಳೆ ಹುಲಿಗಳು. ಯಾವುದೇ ಯಕ್ಷಗಾನಕ್ಕೆ ಹೋಗಲಿ ಇವರು ಹೇಳುವುದು ಒಂದೇ ಭಸ್ಮಾಸುರ ತೋಟಿಗಿಂತ ಚಿಟ್ಟಾಣಿನೇ ಬಲ. ಚಿಟ್ಟಣಿ ಕೌರವನ ಪಾತ್ರ ಮಾಡಿದರೆ ` ಆದೋಡೆಲೆ ಸಂಜಯನೇ ನೀ ಕೇಳು' ಪದ್ಯಕ್ಕೆ ಶಿವರಾಮ ಹೆಗಡೆ ಅದ್ಭುತ ಅಭಿನಯ ನೀಡುತ್ತಿದ್ದರು ಎಂದು ಹೇಳುತ್ತಿದ್ದರು. ಇವರು ವರ್ತಮಾನದಲ್ಲಿ ಯಕ್ಷಗಾನವನ್ನು ನೋಡಿ ಭೂತಕಾಲದ ನೆನಪನ್ನು ಮೆಲುಕಾಡುತ್ತಿದ್ದರು. ಅದಕ್ಕಾಗಿಯೇ ಇವರನ್ನೂ ನಮ್ಮ ಬಳಗದಲ್ಲಿ ಸೇರಿಸಿ ಕೊಂಡಿದ್ದೇವು.
ಕುಮಟಾ, ಗೇರುಸೊಪ್ಪಾ, ಉಪ್ಪಳಿ, ಚಂದಾವರ, ಅಂಕೋಲಾ ಎಲ್ಲಿಯೇ ಆಟವಾಟಗಲಿ ನಮ್ಮ ಬಳಗ ಇದ್ದೇ ಇರುತ್ತಿತ್ತು.
ಯಕ್ಷಗಾನಕ್ಕೆ ಹೋದವರು ಬಣ್ಣದ ಮನೆಗೆ ಒಮ್ಮೆಯಾದರು ಭೇಟಿ ನೀಡುತ್ತಾರೆ. ಚೌಕಿಮನೆಗೆ ಹೋದರೆ ತಮಗೆ ಇಷ್ಟವಾದ ಕಲಾವಿದರನ್ನು ಮಾತನಾಡಿಸಿ ಕೊಂಡು ಬರುವುದು ರೂಢಿ. ಕಲಾವಿದನಿಗೂ ತಮ್ಮ ಅಭಿಮಾನಿಗಳು ಎಂಬ ಹೆಮ್ಮೆಯಿಂದ ಮಾತನಾಡಿಸುತ್ತಿದ್ದರು. ಚಿಟ್ಟಾಣಿ ಎದುರಿಗೆ `ನಿಮ್ಮ ಕೀಚಕನ ನೋಡಬೇಕು ಅಂತಾನೇ ನೂರು ಕಿಮೀ ದೂರದಿಂದ ಬಂದಿದ್ದೇವೆ ಬಹಳ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇವೆ' ಎಂದು ಹೇಳುವ ರೂಢಿಯನ್ನು ಯಕ್ಷಗಾನ ಅಭಿಮಾನಿಗಳು ಬೆಳೆಸಿ ಕೊಂಡಿದ್ದಾರೆ.
ಕಲಾವಿದರಿಗೂ ಗೊತ್ತು ಇವರು ತಮ್ಮ ಮುಖ ಸ್ತುತಿಯನ್ನು ಮಾಡುತ್ತಾರೆಂದು. ಆದರೂ ಅಭಿಮಾನಿಗಳ ಮಾತಿಗೆ ಗೌರವ ನೀಡಿ ಅಲ್ಪಸ್ವಲ್ಪ ಕುಣಿಯುತ್ತಿದ್ದರು. ಆಟದ ಬಗ್ಗೆ ಏಷ್ಟು ಹೇಳಿದರೂ ಕಡಿಮೆಯೇ.

Monday, September 22, 2008

ಗುಡಿ­ಯಾ­ದ­ರೇನು.. ಮನೆ­ಯಾ­ದ­ರೇನು



ನಿದ್ರೆ ಹೇಳುವುದೊಂದು ಇಲ್ಲದಿದ್ದರೆ ಏನಾಗುತ್ತಿತ್ತು? ಎಲ್ಲರು ಹುಚ್ಚರಾಗುತ್ತಿದ್ದರು. ನಿದ್ರೆ ಬೇಕೆ ಬೇಕು. ನಿದ್ರೆಯನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದರ ಆಲಿಂಗನವೇ ಅಂತಹದು. ಬಸ್‌, ರೈಲು, ಬಸ್‌ ಸ್ಟಾಂಡ್‌, ಕಚೇರಿ, ಮನೆಯಲ್ಲಿ ಹಾಸಿಗೆ ಮೇಲೆ ಹೀಗೆ ಎಲ್ಲಿ ಬೇಕೆಂದರೆ ಅಲ್ಲಿ ನಿದ್ರೆಯನ್ನು ಮಾಡಬಹುದು.
ರಾಜಕಾರಣಿಗಳಿಗೆ ಹಾಗಲ್ಲ ಅವರಿಗೆ ಮನೆಯಲ್ಲಿ ನಿದ್ರೆ ಮಾಡಲಿಕ್ಕೆ ಟೈಮ್‌ ಇರುವುದಿಲ್ಲ. ಅದಕ್ಕಾಗಿ ಇವರು ನಿದ್ರೆ ಮಾಡಲಿಕ್ಕೆ ಆರಿಸಿಕೊಳ್ಳುವ ಸ್ಥಳವೆಂದರೆ ಸಭೆ, ಸಮಾರಂಭ, ವಿಧಾನಸಭೆ ಕಾರ್ಯಕಲಾಪ.
ನಿದ್ರೆ ಮಾಡುವ ರಾಜಕಾರಣಿಗಳಲ್ಲಿ ನಮ್ಮ ದೇವೇಗೌಡರು ಭಾರತ ದೇಶದಲ್ಲೆ ವಿಶ್ವವಿಖ್ಯಾತರು. ಇವರು ದೇಶದ ಪ್ರಧಾನಿಯಾಗಿದ್ದಾಗಲೇ ಕಲಾಪದಲ್ಲಿಯೇ ಗೋರಕೆ ಹೊಡೆದಿದ್ದರಂತೆ. 24 ಇನ್‌ ಟು7 ರಾಜಕಾರಣ ಮಾಡುವ ಗೌಡರಿಗೆ ಎಲ್ಲೆಂದರಲ್ಲಿ ನಿದ್ರೆ ಬರುತ್ತದೆ. ಕೆಲವು ಜನ ಮಿತ್ರರು ಅಂತಾರೆ ಗೌಡ್ರು ನಿದ್ರೆ ಮಾಡ್ತಿಲ್ಲ. ದೇಶದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು.
ಆದ್ರೆ ದೇವರ ಸನ್ನಿಧಿಗೆ ಹೋದರು ಗೌಡರು ತೀವ್ರ ಯೋಚನಾ ಮಗ್ನರಾಗಿ ನಿದ್ರೆಗೆ ಜಾರುತ್ತಾರೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ.

Sunday, September 21, 2008

ಕಾಂಬ ಕುತೂಹಲ


ಅವತ್ತು ನಾನು ಕೆಲಸವಿಲ್ಲದೆ ತಾರತ್ತೆ ಮನೆಯಲ್ಲಿ ಕುಳಿತಿದ್ದೆ. ನಾಲ್ಕು ಮಕ್ಕಳು ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದರು.ಸಡನ್‌ ನಿಂತರು. ಎನ್‌ ಮಾಡ್ತಾರೆ ಇವರು, ಕಾಲಡಿಗೆ ಹಾವು ಎನಾದ್ರು ಬಂತಾ ? ಎಲ್ಲಾ ಮಕ್ಳು ಕೆಳಗೆ ನೋಡಲಿಲ್ಲ. ಏಕ್‌ದಮ್‌ ಮೇಲೆ ನೋಡಲಿಕ್ಕೆ ತೋಡಗಿದರು. ಇವರೇನು ನೋಡ್ತಾರಪ್ಪ ಎಂದು ನಾನು ಮೇಲೆ ನೋಡಿದೆ ನನಗೆ ಕಂಡಿದ್ದು ಮನೆಯ ಮಾಳಿಗೆ ಹೊರತು ಬೇರೆನು ಕಾಣಲಿಲ್ಲ. ಹೊತ್ತು ಹೋಗದೆ ಕುಳಿತಿದ್ದ ನನ್ನ ಕೈಲಿ ಕ್ಯಾಮರಾ ಇತ್ತು ತಡ ಮಾಡಲಿಲ್ಲ. ಕ್ಲಿಕ್‌ ಮಾಡಿದೆ ಒಬ್ಬರು ಒಂದೊಂದು ಸ್ಟೈಲಲ್ಲಿ ನಿಂತಿದ್ರು. ನಾವು ಚಿಕ್ಕವರಿರುವಾಗ ಹೀಗೆ, ಕಂಡ ಕಂಡದ್ದನ್ನು ಕುತೂಹಲದಿಂದ ನೋಡ್ತಾ ಇದ್ದದ್ದು ನೆನಪಾಯ್ತು. ಆಗಿನ ಕೂತುಹಲ ಮತ್ತೊಂದನ್ನು ನೋಡುವ ಆಸಕ್ತಿಯ ಕಣ್ಣಿಗೆ ಇಂದು ಪರೆ ಬರುತ್ತಿದೆಯಲ್ಲ ಎಂದು ಬೇಸರವಾಯಿತು.

ಏಸು­ಕ್ರಿ­ಸ್ತ­ನೊಂ­ದಿಗೆ ಮಾತ­ನಾ­ಡಿದ ಗೌಡರು.



ಇತ್ತೀಚೆಗೆ ಮಂಗಳೂರು ಸೇರಿದಂತೆ ಹಲವೆಡೆ ಕ್ರೈಸ್ತರ ಧಾರ್ಮಿಕ ಸ್ಥಳಗಳ ಮೇಲೆ ಬಜರಂಗಿಗಳು ದಾಳಿ ಮಾಡಿದರು. ಹಿಂದೂ ಸಂಸ್ಕೃತಿಯಲ್ಲದ ಮೂರ್ತಿ ಹಾಳು ಮಾಡುವ ಕೆಲಸ ಮಾಡಿರುವುದು ತಪ್ಪು ಎಂದು ಖಂಡಿತವಾಗಿ ಹೇಳಬೇಕು.
ಯಾವ ಘಟನೆಯು ನಮ್ಮ ಮನಸ್ಸಿನಲ್ಲಿ ಬಹಳ ದಿನ ಉಳಿಯುವುದಿಲ್ಲ. ಮರೆತು ಬಿಡುತ್ತೇವೆ. ಹಾಗೇ ಕ್ರೈಸ್ತರು ಕೂಡಾ ಕಹಿ ಘಟನೆಯನ್ನು ಮರೆಯುವ ಪ್ರಯತ್ನದಲ್ಲಿರುವಾಗ ನಮ್ಮ ರಾಜಕೀಯ ಮುಖಂಡರು ಬಿಡಲಿಕ್ಕುಂಟೆ? ಕೆದಕುತ್ತಾರೆ. ನುಸಿ ಕಚ್ಚಿದ ಮರುದಿನ ನಂಜಿನ ಮೈಯವರಿಗೆ ಇಡೀ ದಿನ ಕೆರೆತವಾಗುವಂತೆ ಇವರಿಗೂ ಅದು ತುರಿಸುತ್ತದೆ.
ವರ್ಷಕ್ಕೆ ಹದಿನೈದು ಚಂಡಿಯಾಗ, 40 ಸತ್ಯನಾರಾಯಣ ಕತೆ, 25 ದೇವಿಮಹಾತ್ಮೆ, ಎನ್ನುತ್ತಾ ಸದಾ ದೇವರ ಧ್ಯಾನದಲ್ಲಿರುವ ದೇವೆಗೌಡರಿಗೆ ಇಂತಹ ಕೆರತ ಹೆಚ್ಚಿಗೆ. ಕುಮಾರಣ್ಣನಿಗೆ ಏನಾದ್ರೂ ಸಹಿಸಕೊಬಹುದು ಬೇರೆ ಯಾರಿಗಾದ್ರೂ ಏನಾದ್ರೂ ಆದ್ರೆ ಈ ಗೌಡರಿಗೆ ತಡೆದು ಕೊಳ್ಳಲಿಕ್ಕೆ ಆಗಲ್ಲ. ಪಂಜುರ್ಲಿ ದೆವ್ವ ಇವರ ಮೈ ಮೇಲೆ ಬಂದು ಬಿಡುತ್ತದೆ.
ಮೊನ್ನೆ ಇವರು ಮಂಗಳೂರಿನ ಪ್ರಾರ್ಥನ ಮಂದಿರಕ್ಕೆ ತೆರಳಿ ಏಸು ಕ್ರಿಸ್ತನ ಹತ್ತಿರ ಆತ್ಮೀಯವಾಗಿ ಮಾತಾಡಿ ಬಂದರು ಅಂತ ಸುದ್ದಿ. ಏನಾದ್ರೂ ಏಸು ಬದುಕಿದ್ದರೆ ದೇವರಾಣೆಗೂ ಹೇಳ್ತಿದ್ದ ಗೌಡ್ರೆ ನಾಟಕ ಮಾಡಬೇಡಿ. ಇನ್ನೊಂದೆರಡು ಚಂಡಿಯಾಗ ಮಾಡಿ ಅಂತ.
ದೇವೇಗೌಡ್ರೆ ಹಾಗೆ ಎಲ್ಲದನ್ನು ಮೈಮೇಲೆ ತಗೋತಾರೆ ನಂತರ ಕೊಡುವಿ ಹಾಕುತ್ತಾರೆ. ಏಲ್ಲೋ ಓದಿದ ನೆನಪು, ಒಬ್ಬ ವಿಧವೆ ತನ್ನ ಕಷ್ಟ ತೋಡಿ ಕೊಳ್ಳಲು ವಿಧಾನಸೌಧಕ್ಕೆ ಬಂದಿದ್ದಳಂತೆ, ಮೊದಲು ಜೆ.ಎಚ್‌. ಪಟೇಲರು ಸಿಕ್ಕರಂತೆ, ಹೀಗಾಗಿದೆ ನನ್ನ ಸ್ಥಿತಿ ಸಹಾಯ ಮಾಡಿ ಎಂದರಂತೆ ಅವರು ಆಗಲಿ ಸುಧಾರಿಕೋ ಸಹಾಯ ಮಾಡ್ತೇನೆ ಎಂದರಂತೆ. ನಂತರ ನಿಧಾನಕ್ಕೆ ದೇವೇಗೌಡರು ನಿದ್ರೆಗಣ್ಣಿನಿಂದ ಕಲಾಪ ಮುಗಿಸಿ ಸೌಧದ ಮೆಟ್ಟಿಲು ಇಳಿತಾ ಇದ್ದರಂತೆ. ಎದುರಿಗೆ ಬಡ ವಿಧವೆ ಸಿಕ್ಕಳಂತೆ. ಗೌಡರ ಹತ್ತಿರ ತನ್ನ ಕಷ್ಟವನ್ನು ಹೇಳಿಕೊಂಡಳಂತೆ. ಗೌಡರು ತಡ ಮಾಡದೆ ಆ ವಿಧವೆಯ ಕೈ ಹಿಡಿದು ಗೋಳೋ ಅಂತ ಅಳಲಿಕ್ಕೆ ಪ್ರಾರಂಭ ಮಾಡಿದರಂತೆ . ಬಹಳ ದಿನದಿಂದ ತೊಳೆಯದ ಸೌಧದ ಮೆಟ್ಟಿಲು ಗೌಡರ ಕಣ್ಣಿರಿಂದ ತೊಯ್ದು ಕ್ಲೀನ್‌ ಆಯಿತಂತೆ. ಕೊನೆಗೆ ಆ ಹೆಣ್ಣು ಮಗಳೆ `ಇಲ್ಲ ಗೌಡರೆ ನೀವಿಷ್ಟು ದುಃಖಿಸ ಬೇಡಿ ನನ್ನ ಸಮಸ್ಯೆಯನ್ನು ನಾನೇ ಪರಿಹಾರ ಮಾಡಿಕೊಳ್ಳುತ್ತೇನೆ ಅಂದಳಂತೆ.
ಅಂದರೆ ಗೌಡರದ್ದು ಎಲ್ಲಾ ಕೆಲಸವು ಹೀಗೆ ಏಕ್‌ದಂ ಅಳೋದು ಕೊನೆಗೆ ಇವರನ್ನೇ ಬೇರೆಯವರು ಸಮಾಧಾನ ಮಾಡಬೇಕಾಗುತ್ತದೆ. ಏಸುನೊಂದಿಗೆ ಮಾತನಾಡಿದ್ದು ಹಾಗೇ.

FEEDJIT Live Traffic Feed