Wednesday, December 28, 2011

ಬೆಂಗಳೂರಿಗೆ ವಿದಾಯ

ಬದಲಾವಣೆಯ ಸೆಳತಕ್ಕೆ ಸಿಗುವವರಲ್ಲಿ ನಾನು ಹೊರತಲ್ಲ. ಈ ಟಿವಿ ಅನ್ನದಾತ, ಉದಯವಾಣಿ, ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಮಾಡಿದ ಕೆಲಸ, ಅಲ್ಲಿನ ಅನುಭವ ಜೀವನವನ್ನು ಕಟ್ಟಿಕೊಡುತ್ತಿದೆ. ಈಗ ರಾಜಧಾನಿ ಬೆಂಗಳೂರಿಗೆ ವಿದಾಯ ಹೇಳುತ್ತಿದ್ದೇನೆ...ಹುಬ್ಬಳ್ಳಿಗೆ ಪಯಣ ಮಾಡುತ್ತಿದ್ದೇನೆ.....
------
ಯಾವ ಊರಿಂದ ಯಾರೇ ಬರಲಿ ತನ್ನ ಒಡಲಿನಲ್ಲಿ ಬಚ್ಚಿಟ್ಟು ಸಾಕುವ ಬೆಂಗಳೂರಿಗೆ ನನ್ನ ಮನಃ ಪೂವ೯ಕ ವಂದನೆ ಮತ್ತು ಧನ್ಯವಾದ.
ಇರಲಿ ಎಂದು ಒಂದು ಮೆಲಕು....
ಬರೆಯುವ ಹವ್ಯಾಸವಿತ್ತು. ಅಚಾನಕ್ಕಾಗಿ ಈ ಟಿವಿಯ ಅನ್ನದಾತ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಬಂತು. ಬಗಲಲ್ಲಿ ಜೋಳಿಗೆ ಬಾಯಲ್ಲಿ ಕವಳ ಹಾಕಿ ಏಳು ಜಿಲ್ಲೆಯ ಬೇಸಾಯ ಮಾಹಿತಿ ಹುಡುಕುವ ಕೆಲಸದಲ್ಲಿ ತೊಡಗಿದೆ. ಎರಡು ವಷ೯, ಅದ್ಭುತ ಅನುಭವ. ಈ ಸಂದಭ೯ದಲ್ಲಿ ರಾಧಣ್ಣ(ಭಡ್ತಿ), ರಾಜಣ್ಣ( ರಾಜಶೇಖರ ಹೆಗಡೆ ಜೋಗಿನ್ಮನೆ), ವೈ.ಗ. ಜಗದೀಶ್ ಪರಿಚಯವಾಯ್ತು, ಸ್ನೇಹ ಬೆಳೆಯಿತು. ಈ ಮೂವರು ಮುಖ್ಯವಾಹಿನಿಗೆ ಬಾ ಎನ್ನುವ ಆಗ್ರಹ ಪೂವ೯ಕ ಸಲಹೆ ನೀಡಿದರು. ಆ ಸಮಯದಲ್ಲಿ ವಿಕೆ ಗೆ ಹೋದರೆ ಕೆಲಸ ಸಿಗುತ್ತಿರಲಿಲ್ಲ. ಕಾರಣ ಎಲ್ಲಿ ಕೆಲಸ ಖಾಲಿ ಇರಲಿಲ್ಲ. ಉದಯವಾಣಿಯಲ್ಲಿ ತಗೊತಾ ಇದ್ದಾರೆ ಒಂದು ಅಜಿ೯ ಹಾಕು ಎನ್ನುವುದಾಗಿ ರಾಜಣ್ಣ ಒತ್ತಾಯಿಸಿದರು. ಹಾಕಿದೆ, ಆಗ ಅಲ್ಲಿ ಡಾ. ಆರ್. ಪೂಣಿ೯ಮಾ ಸಂಪಾದಕರಾಗಿದ್ದರು. ಕೆಲಸ ಕೊಟ್ಟರು. ಅಕ್ಷರಲೋಕ ಹ್ಯಾಗಿರುತ್ತದೆ ಎಂಬ ಕಲ್ಪನೆ ಇಲ್ಲದಿರುವ ನನಗೆ ಕೆಲ್ಸ ಕೊಟ್ಟವರು ಮೇಡಂ. ಕೆಲ್ಸ ಕಲಿಸಿದರು. ಪ್ರಾಥಮಿಕ ಶಾಲೆಯಲ್ಲಿ ಹೇಳಿಕೊಡುವಂತೆ ಹೇಳಿಕೊಟ್ಟರು. ಮೇಡಂ ಅಲ್ಲೊಂದು ವಿಷಯ ಇದೆಯಂತೆ ಎಂದರೆ ಸಾಕು, ಮತ್ಯಾಕೆ ತಡ ಮಾಡ್ತೀರಿ ಹೋಗಿ ಬನ್ನಿ, ಓಡಾಟದ ಖಚು೯ ಕೊಡುತ್ತಿದ್ದರು. ಸಿನೇಮಾ ವರದಿ ಮಾಡಲು ಕಳುಹಿಸಿದರು. ಬರೆದ ಕಾಪಿ ತಿದ್ದಿದರು. ಎಲ್ಲ ತರಹದ ಕೆಲಸ ಕಲಿಸಿದರು. ಅಲ್ಲಿ ಮುಖ್ಯಸ್ಥರಾಗಿದ್ದ ಪ್ರಭುದೇವ್ ಶಾಸ್ತ್ರೀಮಠ, ಇಸ್ಮಾಯಲ್, ರಾಜಣ್ಣ, ಸಹೋದ್ಯೋಗಿಗಳಾದ ಮಲ್ಲಿಕಾಚರಣ್ ವಾಡಿ, ಗುರುಮೂತಿ೯, ರುದ್ರಣ್ಣ, ಕಂಕ ಮೂತಿ೯, ಎಚ್. ಮೂತಿ೯, ಪರಮೇಶ್ವರ್ ಗುಂಡ್ಕಲ್, ಸುರೇಶ್.ಕೆ, ರಾಜಶೇಖರಮೂತಿ೯, ಧರಣೀಶ್ ಬೂಕನಕೆರೆ, ವೀರೇಶ್ , ಮಣಿಪಾಲದಲ್ಲಿದ್ದ (ಈಗ ಹುಬ್ಬಳ್ಳಿ) ವೆಂಕಟೇಶ್ ಪ್ರಭು.....ತುಂಬಾ ಜನರಿದ್ದಾರೆ ಇವರೆಲ್ಲರಿಂದಲೂ ಕಲಿತೆ. ನನಗೆ ಗೊತ್ತಿಲ್ಲದ್ದನ್ನು ಕೇಳಿದೆ ಹೇಳಿಕೊಟ್ಟರು. ಉದಯವಾಣಿ ನನ್ನ ಪಾಲಿಗೆ ಒಂದು ರೀತಿ ಪ್ರಾಥಮಿಕ ಶಾಲೆ ತರಹ ಆಗಿತ್ತು. ಇಲ್ಲಿನ ಪ್ರತಿಯೊಂದು ವಿಭಾಗದವರು ಉತ್ತಮ ದೋಸ್ತಿಗಳಾಗಿದ್ದರು.
ಯಾವುದೋ ಸಂದಭ೯ ಬದಲಾವಣೆಗೆ ಅವಕಾಶ ಬಂತು ಕನ್ನಡಪ್ರಭಕ್ಕೆ ಸೇರಿದೆ. ಕನ್ನಡಪ್ರಭದಿಂದ ನಾನು ತುಂಬಾ ಕಲಿತೆ. ತುಂಬಾ ಬರೆದೆ. ಅಂದಿನ ಸಂಪಾದಕ ಶಿವಸುಬ್ರಹ್ಮಣ್ಯ ನನಗೆ ತುಂಬಾ ಅವಕಾಶ ಕಲ್ಪಸಿಕೊಟ್ಟರು. ಬರೆಸಿದರು..ನಾನು ಬರೆದೆ. ಮುಖಬೆಲೆ ತಂದು ಕೊಟ್ಟರು. ಎಲ್ಲಾ ತರಹದ ಕೆಲಸವನ್ನು ಮಾಡಿಸಿದರು. ಗೆಳೆಯರಾದ ರಾಮಚಂದ್ರ, ಅಜಿತ್, ಸದಾಶಿವ, ಸಿ.ಜೆ ಸೋಮಶೇಖರ್ ಸಹಕರಿಸಿದರು. ನನ್ನ ಬರವಣಿಗೆಯನ್ನು ತಿದ್ದಿದ್ದರು. ಇದು ಒಂದು ಕಡೆಯಾದರೆ ಮ್ಯಾಗಜಿನ್ ವಿಭಾಗದಲ್ಲಿದ್ದ ಡಾ. ವೆಂಕಟೇಶ್ ರಾವ್, ಚೇತನಾ ತೀಥ೯ಹಳ್ಳಿ ಅವರು ಬರಿ ಎಂದು ಬರೆಸಿದರು. ಕನ್ನಡಪ್ರಭದಲ್ಲಿ ಮತ್ತೊಮ್ಮೆ ಬದಲಾವಣೆಯಾಯಿತು. ವಿಶ್ವೇಶ್ವರ ಭಟ್ಟರು ಪ್ರಧಾನ ಸಂಪಾದಕರಾದರು. ನನ್ನ ಬರವಣಿಗೆ ಮೊದಲಿನಂತೆ ಸಾಗಿತು. ತ್ಯಾಗರಾಜ್, ರಾಧಾಕೖಷ್ಣ ಭಡ್ತಿ ನನ್ನ ಬರವಣಿಗೆಗೆ ಸಹಕರಿಸಿದರು. ಕೖಷಿಪ್ರಭದಲ್ಲಿ ನನಗೊಂದು ಅಂಕಣ ಬರೆಯಲು ಅವಕಾಶ ನೀಡಿದರು.
ಕನ್ನಡಪ್ರಭ ನನಗೆ ತುಂಬ ಕೆಲಸ ಕಲಿಸಿತು..ಇಲ್ಲಿ ತುಂಬಾ ಜನ ಗೆಳೆಯರಾದರು.ಹಿತೈಷಿಗಳಾದರು, ಸಲಹೆ ನೀಡಿದರು, ಬೈದರು, ಹೀಗಲ್ಲ ಹಾಗೇ ಎಂದರು, ಬೆನ್ನು ತಟ್ಟದರು..ಡಾ. ವಾಸುದೇವ ಶೆಟ್ಟಿ, ನಟರಾಜ್, ರೇಣುಕಾಪ್ರಸಾದ್ ಹಾಡ್ಯ,ರವಿಮಾಳೇನಳ್ಳಿ, ಗಿರೀಶ್ ಬಾಬು, ವಿಜಯಮಲಗಿಹಾಳ, ಸುಧಾಕರ್ ದಬೆ೯, ಸಂತೋಷ್ ಸಸಿಹಿತ್ಲು, ಪ್ರವೀಣ್, ಎಸ್. ವಿ. ಪದ್ಮನಾಭ, ಗಣೇಶಪ್ರಸಾದ್, ಬ್ರಹ್ಮಾನಂದ, ಕೀತಿ೯ಕೋಲ್ಗಾರ್, ಸಾಅದೀಯಾ, ಚಿತ್ರ, ಅನುರಾಧಾ, ಮೂಲಿಮನಿ, ಡಿ. ಎಂ. ಭಟ್, ಶಿವಮಾದು, ದೇವರಾಜ್, ಪ್ರಕಾಶ್, ಕೆ.ವಿ. ಪ್ರಭಾಕರ್, ರಾಘವೇಂದ್ರಭಟ್, ಪ್ರತಾಪ್, ಚೈತನ್ಯ....ತುಂಬ ಜನರಿದ್ದಾರೆ. ಎಲ್ಲರೂ ಪ್ರೀತಿಯಿಂದ ಮಾತಾಡಿದರು ಪ್ರೀತಿಯಿಂದ ಕೆಲಸ ಕಲಿಸಿದರು...
ಸೋಮಶೇಖರ್ ಪಡುಕರೆ, ಗಣಪತಿ ಅಗ್ನಿಹೋತ್ರಿ, ಉಗಮ, ಅಂಶಿ ಪ್ರಸನ್ನಕುಮಾರ್ ನನ್ನ ಲೇಖನ ಬಂದಾಗ ಮೆಚ್ಚಿ ಬೆನ್ನು ತಟ್ಟಿದರು.
ಬೆಂಗಳೂರು ಬದುಕಿನಲ್ಲಿ ಬಂದ ಎಲ್ಲರು ಕೊನೆಯವರೆಗೂ ನನ್ನೊಳಗೆ ಇರುತ್ತಾರೆ. ಉದಯವಾಣಿ, ಕನ್ನಡಪ್ರಭದ ಎಲ್ಲ ಸಿಬ್ಬಂದಿಗೂ ನಾನು ವಂದನೆಗಳು. ಪ್ರೀತಿ ಇರಲಿ.

Sunday, December 18, 2011

ಶಾಲೆ ಲಹರಿ

ಎಂತನಪ್ಪಾ ಈಗಿನ ಹುಡ್ಗ್ರು!? ಚಳಿ ಬಿಳಲಿಲ್ಲೇ ಜ್ವರ. ಬೇಸಿಗೆ ಬಿದ್ದರೆ ಉಷ್ಣ ಹೇಳಿ ಡಾಕ್ಟ್ರ ಮನೆಗೆ.ಅವ್ರಿಗೆ ದುಡ್ಡು. ಎಂತಾ ಮಾಡಲೆ ಬತ್ತು ಈಗಿನವು ಹುಟ್ಟುದೇ ಔಷಧಿಂದ. ಯಂಗವೆಲ್ಲ ಹತ್ತು ಮಕ್ಳು ಹೆತ್ತರು ಔಷಧಿಗೆ ಒಂದಿನ ಡಾಕ್ಟ್ರ ಮನೆ ಬಾಗಿಲಿಗೆ ಹೋಜ್ವಿಲ್ಲೆ. ಈಗ ಹೆರದೆ ಒಂದೆರಡು ಮಕ್ಳು ಮೂವತ್ತು ಹಡದರಾಂಗೆ ತ್ರಾಸ ಪಡ್ತ್ವಪ್ಪ. ಅವಾಗಲೆಲ್ಲ ಶಾಲೆಗೆ ಹೋದಾಗ ಐದನೇತ್ತಿ ಆರನೇತ್ತಿ ಸಕಾ೯ರಿ ದಾದ್ಯಕ್ಕ ಒಂದು ಮೈಲಿ ಹಾಕಿಕ್ಕೆ ಹೋಪದ್ದು ಬಿಟ್ರೆ ಮತ್ಯಂತದೆ ಔಷಧಿನೆ ಇಲ್ಲೇ ,ಎಲ್ಲರೂ ಬದ್ಕಿದ,ಎಲ್ಲಾರೂ ಗಟ್ಟು ಮುಟ್ಟಾಗಿದ್ದ... ಎಂಬುದಾಗಿ ತೊಂಬತ್ತ್ನಾಲ್ಕು ನೌಟಟ್. ಅಮ್ಮಮ್ಮ ಹೇಳುತ್ತಿರುವಾಗ ಅಲ್ಲಲ್ಲ.......... ವಟಗುಟ್ಟುತ್ತಿರುವಾಗ, ವಯಸ್ಸಾದ ಪ್ರಾಯದವರು ಹೇಳಿದ ಮಾತು ನೂರಕ್ಕೆ ನೂರಾ ಎರಡು ಸತ್ಯ. ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದ್ರೆ ಹಿಂದಿನವರು ಬಹಳ ಗಟ್ಟಿ. ಓಲ್ಡ್ ಮಾಡೆಲ್ ನ್ಯಾಷನಲ್ ಇಂಜಿನ್ ಇದ್ಹಾಂಗೆ ಪವರ್ ಫುಲ್. ಒಂದು ಡಜನ್ ಒಂದುವರೆ ಡಜನ್. ಎರಡು ಡಜನ್ ಮಕ್ಕಳನ್ನು ಹೆತ್ತರು. (ಹಿಂದಿನವರಲ್ಲಿ ಕೆಲವರಿಗೆ ಹಿರಿಯ ಮಗನ ಮಗ ಅವ್ನಿಗೆ ಮದುವೆಯಾಗಿ ಮಕ್ಳು ಹುಟ್ಟಿದ ಎರಡು ವರ್ಷವಾದಾಗ ಮುತ್ತಜ್ಜಿಯ ಕೊನೆ ಮಗ ಹುಟ್ಟಿದ ಪ್ರಸಂಗವು ಇದೆ-ಎಂಬುದಾಗಿ ನಮ್ಮಜ್ಜಿಯ ಹೇಳಿಕೆ) ಒಂದು ಚೂರು ಝಳುಕುತ್ತಿರಲಿಲ್ಲ. ಉದಾಹರಣೆಗೆ ನನ್ನಜ್ಜಿ. ಹತ್ತು ಮಕ್ಕಳು ಆದ್ರು ಇನ್ನು ಗಟ್ಟಿ. ಕೊಟ್ಟಿಗಿಗೆ ಹೋಗಿ ಸೆಗಣಿ ಕರಡುತ್ತಾಳೆ. ಕಣ್ಣೆದುರಿಗೆ ಕಾಣುವ ಸತ್ಯ.
ಹೌದ್ರಿ ನಮ್ಮ ಕಾಲ ಅಂದರೆ ನಾವು ಹುಟ್ಟಿರುವ ಕಾಲಘಟ್ಟ, ತೀರಾ ಇತ್ತೀಚೆಗೆ, ಕೇವಲ ಕ್ವಾಟರ್ ಶತಮಾನದ ಹಿಂದೆ. ಆಗಲೇ ಔಷಧಿ, ಟಾನಿಕ್ ಎಂಬುದೆಲ್ಲ ಪ್ರಾರಂಭವಾಗಿ ಬಿಟ್ಟಿತ್ತು. ನನ್ನ ಈಗಿನ ಲಡ್ಡಾದ ಹಾಗೂ ಕೃಷ ಆರೋಗ್ಯದ ದಷ್ಟ ಪುಷ್ಟತೆಗೆ ಅಂದಿನ ಅಂದರೆ ನಾನು ಗಭಾ೯ವಸ್ಥೆಯಲ್ಲಿರುವಾಗ ನನ್ನ ಹಡೆದವ್ವ ತೆಗೆದುಕೊಂಡಿರುವ ಟಾನಿಕ್, ಕ್ಯಾಲ್ಸಿಯಂ ಇತರೆ........ ಇತರೇ ..........ಔಷಧಿಗಳು ಕಾರಣ ಎಂಬುದರಲ್ಲಿ ದೂಸಾ೯ ಮಾತಿಲ್ಲ. ನನ್ನ ಜನ್ಮಸ್ಥಳ ಆಸ್ಪತ್ರೆಯಾದರೆ, ನನ್ನಕ್ಕಂದು ಮನೆಯ ಮಧ್ಯಭಾಗ ಮಾಳಿಗೆಯೊಳಗಾಗಿತ್ತು. ಅಕ್ಕ ತಕ್ಕ ಮಟ್ಟಿಗೆ ಗಟ್ಟಿ. ಹ್ಲಾಂ ಅಕ್ಕನ ಸುದ್ದಿ ಬಂದಾಗ ನೆನಪು ಹಿಂದಕ್ಕೆ ಓಡುತ್ತೆ. ಅದೇ ಪುನ: ಪ್ರೈಮರಿ ಸ್ಕೂಲಿಗೆ.
ಆಗ ಹೇಳಿದ್ನಲ್ಲ, ಅಮ್ಮಮ್ಮ, ಅವಳು ಅಂದಿದ್ಲಲ್ಲ ಅದೇ ಮೈಲಿಗೆ ಚುಚ್ಚುವುದು. ಆ ಪ್ರಕರಣ ಒಂದು ನೆನಪಾಗುತ್ತದೆ. ನನಗೆ ಕರೆಕ್ಟ ನೆನಪಿದೆ. ನಾನು ಒಂದನೇ ಇಯತ್ತೆನೋ ಎರಡನೇ ಇಯತ್ತೆನೋ ಆಗಿರಬೇಕು ಎಂದು ಡೌಟು, ಏನೆ ಆದ್ರು ನೆನಪು ಸತ್ಯ. ಘಟನೆ ವಿಷಯದಲ್ಲಿ ದೋಖಾ ಇಲ್ಲ.
ಆ ಸಮಯದಲ್ಲಿ ಶಾಲೆಗಳಿಗೆ ಮೈಲಿ ಚುಚ್ಚಲಿಕ್ಕಾಗಿ ಅಂದ್ರ ಲಸಿಕೆ ನೀಡಲಿಕ್ಕಾಗಿ ಗೌರ್ನಮೆಂಟ್ ನಿಯೋಜಿತರು ಬರುತ್ತಿದ್ದರು. ಅವರು ಬರುತ್ತಾರೆ ಎಂದ ಕೂಡಲೇ ಶಾಲೆಯಲ್ಲಿ ಒಮ್ಮೆಲೆ ಅನಾರೋಗ್ಯಕರ ವಾತಾವರಣ ಸೃಷ್ಠಿಯಾಗಿ ಬಿಡುತ್ತಿತ್ತು. ಬಹಳಷ್ಟು ಮಕ್ಕಳಿಗೆ ಡಿಸೆಂಟ್ರಿ ಸುರುವಾದರೆ, ಕೆಲವರಿಗೆ ನಡುಕ.....ಜ್ವರ, ಅನೇಕರಿಗೆ ಏನಾಗಿದೆ ಅಂತ ಗೊತ್ತಾಗದ ರೋಗ, ಒಟ್ಟಾರೆ ಆರಾಮಿಲ್ಲ. ಈ ಚುಚ್ಚುಮದ್ದು ಕೊಡುವವರನ್ನು ಕಂಡರೆ ಒಂಥರಾ ಭಯೋತ್ಪಾದಕರ ಸಂತನದವರು ಎಂದು ಅನಿಸಿತ್ತಿದ್ದದ್ದು ಖರೇ. ಇಂತಿಪ್ಪ ಟೈಮಲ್ಲಿ ನಾ ಸಣ್ಣಂವ. ಅಕ್ಕಂದಿರು ಅವರು ಅಕ್ಕಂದಿರು ಐ ಮಿನ್ ದೊಡ್ಡವರು. ಲಸಿಕೆ ಹಾಕಲಿಕ್ಕೆ ಬಂದಾಗ ನಮಗೆ ರಜೆ. ನಾಲ್ಕನೇ ಇಯತ್ತೆ ಮೇಲ್ಪಟ್ಟವರಿಗೆ ಸೂಜಿ ಚಿಕಿತ್ಸೆ ಅಂದ್ರೆ ಮೈಲಿಗೆ ಚುಚ್ಚುವ ಕಾರ್ಯಕ್ರಮ.
ಕೈಯಲ್ಲಿ ಕಪ್ಪು ಬಣ್ಣದ ಗುಡಾಣದಂತಹ ಬ್ಯಾಗನ್ನು ಹಿಡಿದು, ಬಿಳಿಯ ಸೀರೆ, ಅದೇ ಬಣ್ಣದ ಜಂಪರ್ ತೊಟ್ಟು, ಕೃಷ್ಣ ವರ್ಣದ ಎರಡು ಹೆಂಗಸರು ಬರುತ್ತಿದ್ದರೆ 'ರಾಮಾಯಣದ' ಶೂರ್ಪನಖಿಯ ದ್ವಿಪಾತ್ರ ನೆನಪಾಗುತ್ತಿತ್ತು. ಭಟ್ಟರಕೇರಿ ಸುಬ್ರಾಯ, ಮೇವಿನ ಹಕ್ಲು ಮಂಜುನಾಯ್ಕ, ಬೆಣ್ಣೆಗುಡ್ಡೆ ನಾಗರಾಜ ಶೆಟ್ಟಿ, ಕಕ್ತಳ್ಳಿ ಕೇಶವ ಗೌಡ, ಬೈನೆಕೊಡ್ಲು ತಿಮ್ಮಪ್ಪ ದೇವಾಡಿಗ ದಾದಿಯಮ್ಮಂದಿರನ್ನು ಕಾಣುತ್ತಲೆ ಗುರುಜಿಗೆ ಎಣ್ಣೆಹಾಕಿ ಗುಡ್ಡಹತ್ತಿ ಓಡಿದ್ದರು.
ಐದು ಮಂದಿ ನಮ್ಮ ಶಾಲೆ ಡಾನ್ಗಳು ಎನ್ನಬಹುದು. ಇವರಿಗೆ ಏಳನೇ ಇಯತ್ತೆಗೆ ಮೀಸೆ ಬಂದಿತ್ತು. ಇವರು ಐದನೇ ಇಯತ್ತೆಯಲ್ಲಿ ಒಂದನೇ ವರ್ಷ, ಎರಡನೇ ವರ್ಷ ಪೂರೈಸಿ, ಆರನೇ ತರಗತಿಯಲ್ಲಿ ಪಸ್ಟಯಿಯರ್, ಮುಗಿಸಿ ಥಡ್೯ಯಿಯರ್ ಮಾಡುವ ಆಲೋಚನೆಯಲ್ಲಿರುವಾಗ ಗುರುಜಿ ಎಳನೇತ್ತಿ ಹೋಗಿ ಸಾಯ್ರಿ. ಮದ್ವೆಯಾಗುವಾಗಿ ಹೆಣ್ಣಿನ ಮನೆಯಲ್ಲಿ ಏಳನೇ ಕ್ಲಾಸು ವರೆಗೆ ಹೋಗಿದ್ದೆ ಎಂದು ಹೇಳಲಿಕ್ಕಾದರು ಆಗುತ್ತೆ. ಕತ್ತೆಗೆ ಹೋದಾಂಗ್ಹೆ ವರ್ಷ ಹೋಯ್ದು. ಪ್ರಾರಬ್ದ್ದಗಳು ಎನ್ನುತ್ತ ಸ್ವಂತ ರಿಸ್ಕಿನ ಮೇಲೆ ಎಳನೇ ತರಗತಿ ತೇರ್ಗಡೆ ಮಾಡಿದ್ದರು, ಅಲ್ಲ......... ದೂಡಿದ್ದರು. ಇವರನ್ನು ಬೇಗನೆ ಶಾಲೆಯಿಂದ ಹೊರಗೆ ಹಾಕಬೇಕು. ತಾವಾಗಿಯೇ ಪಾಸಾಗಿ ಹೋಗುವುದಿಲ್ಲ. ಅದಕ್ಕಾಗಿ ನಾನೇ ಪಾಸು ಮಾಡಿ ಕಳಿಸುವ ಎನ್ನುವಷ್ಟು ವಿಶಾಲ ಹೃದಯ ನಮ್ಮ ಮಾಸ್ಟ್ರದ್ದಾಗಿತ್ತು.
ಅಂದ್ಹಾಗೆ, ಬಂದ ದಾದಿಯಮ್ಮಂದಿರು 'ಮಾಸ್ಟ್ರೇ ಎಲ್ಲಾ ಹುಡ್ಗರನ್ನು ಕರೆಯಿರಿ. ನಮಗೆ ಇಲ್ಲಿ ಮುಗಿಸಿ, ಹುತ್ಗಾರು ಶಾಲೆಗೆ ಹೋಗಬೇಕು ಎಂಬುದಾಗಿ ತಮ್ಮ ಹೇಳಿಕೆಯನ್ನು ಓಗೆದರು. ಗುರುಜಿ ಎಕದಂ ಅಲಟರ್್ ಆಗಿ ಸಾಯಿಲೆ ವರ್ಷಕ್ಕೊಂದು ದಿನ ಬಂದು ಬರೋದು ಗಡಿಬಿಡಿ ಮಾಡದು, ಕರ್ಮಕ್ಕೆ. ಈ ಕತ್ತೆಯಂತ ಮಕ್ಳಗೆ ಮೈಲಿ ಲಸಿಕೆನಂತೆ ಇವರ ಕರ್ಮಕ್ಕೆ. ಮನೆಲಿ ಸಮ ತಿಂತರಾ, ಉಣ್ಣುತ್ತಾರೆ. ದನ ತಿಂದ ಹಾಗೇ ತಿಂತಾರೆ. ದೆವ್ವದಂಗೆ ಇದ್ದಾರೆ ಎಂದು ಒಳ ಬಾಯಲ್ಲೆ ಹಲುಬುತ್ತ ಎಲ್ಲಾ ಮಕ್ಕಳು ಸಾಲಲ್ಲಿ ಬನ್ನಿ. ಎಲ್ಲರು ಬನ್ನಿ........ ಬನ್ನಿ ಎನ್ನುತ್ತಿರುವಾಗಲೇ ಪಂಚ ಕಮಂಗಿಗಳು ಕಾಣದೇ ಕಂಗಾಲಾಗಿ 'ಎಲ್ಲೋದ್ರು ಆದ ದರಿದ್ರದವು, ಸತ್ತೋಪಲೆ, ಯಾವ ಸುಡಗಾಡಿಗೆ ಹೋಗಿದ್ದಾರೆ ನೋ ಎನ್ನುತ್ತ ಕೆಂಡ ಮಂಡಲವಾಗಿ ಶಾಲೆಯ ಜಡಿತಟ್ಟಿಯ ಸಂದಿಗೆ ಹೋಗಿ '30' ಮಾಕರ್ಿನ ಬೀಡಿಗೆ ಬೆಂಕಿ ಹಚ್ಚಿ ಸುಡತೊಡಗಿದರು. ಇದೇ ಸಂದರ್ಭವನ್ನು ನೋಡಿ ಎರಡು ಹೆಣ್ಣು ಮಕ್ಕಳು ಶಾಲೆಯಿಂದ ಕಾಲ್ಕ್ಕಿತ್ತಿದ್ದರು.
ಅಲ್ಲಿಂದ ಕಾಲ್ಕಿತ್ತವರು ಮತ್ತಾರು ಅಲ್ಲ ನನ್ನ ಅಕ್ಕ ಮತ್ತು ಪಕ್ಕದ್ಮನೆ ಸುಮಂಗಲಕ್ಕ. ಇವರು ಶಾಲೆಯಿಂದ ನೇರವಾಗಿ ಮನೆಗೆ ಬಂದು ನನ್ನನ್ನು ಹುಡುಕ ತೊಡಗಿದರು. ನಾನು ದೊಡ್ಡಪನ್ಪ ಹಂತೆಯೊಳಗೆ ಉಪ್ಪರಿಗೆಯ ಮೇಲೆ ಇದ್ದೆ. ಅವರು ಲೆಕ್ಕ ಬರೆಯುತ್ತಿದ್ದರು. ಅಕ್ಕನಿಗೆ ಒಂದೇ ಆಲೋಚನೆ 'ನನಗಂತು ಚುಚ್ಚುತ್ತಾರೆ ಜೊತೆಯಲ್ಲಿ ಇವನಿಗೆ ಆ ಶಿಕ್ಷೆಯಾಗಲಿ' ಎಂದು ದೊಡ್ಡಪ್ಪ ಮೈಲಿ ಚುಚ್ಚೋರು ಬಂಜ. ತಮ್ಮನ್ನು ಕರಕಂಡು ಹೋಪಲೆ ಬಂಜಿ ಕಳಸು ಅವ್ನ ಎಂದು ಎಣಿ ಮೆಟ್ಟಿಲ ಮೇಲೆ ನಿಂತ್ಕೊಂಡು, ತಾನು ಬಂದ ಕಾರಣವನ್ನು ದೊಡ್ಡಪ್ಪ ಪ್ರಶ್ನೆ ಕೇಳುವುದರೊಳಗೆ ಹೇಳಿದಳು. ನಿನ್ನೆ ಯಷ್ಟೆ ಅವರಿಗೆ ನಿನ್ನ ಆಯಿ ಕರಕಂಡು ಹೋಗಿ ಇಂಜೆಕ್ಷನ್ ಹಾಕ್ಯಬಂಜು. ನೀ ಶಾಲೆಗೆ ವಾಪಾಸ್ ನಡಿ ಎಂದು ಜೋರಾಗಿಯೇ ಹೇಳಿದರು. ಅಕ್ಕ ಸುಮಂಗಲಾಕ್ಕ ಜೋಲುಮೋರೆ ಹಾಕಿಕೊಂಡು ನನ್ನ ಕಡೇ ಸಿಟ್ಟಿನ ದೃಷ್ಟಿ ಸಿಟ್ಟು ಶಾಲೆಗೆ ಹೊರಟರು.
ಅತ್ತ ಶಾಲೆಯಲ್ಲಿ ಇವರು ಹೋಗುವ ಸಮಯಕ್ಕೆ ನಾಲ್ಕೈದೆ ಜನರಿದ್ದರು. ಇವರೇ ಕೊನೆಯವರಾಗಿ ಚುಚ್ಚಿಸಿಕೊಂಡರು. ಮನೆಗೆ ಬಮದ ಅಕ್ಕ ನಾಲ್ಕು ಹೊಡೆತವನ್ನು ಮೊದಲು ನನಗೆ ಇಕ್ಕಿದಳು. ಚುಚ್ಚಿಸಿಕೊಂಡ ನೋವು ಕಡಿಮೆ ಮಾಡಿಕೊಂಡಳು. 'ತಾನು ಅಂದ್ಕೊಂಡಿರದು ಆಗೋದು ಕಷ್ಟ; ತನಗೆ ಬಂದ ಕಷ್ಟವನ್ನು ಮತ್ತೊಬ್ಬರ ಮೇಲೆ ಹೆರಲಿಕ್ಕೆ ಹೋದರೆ ತನಗೆ ಕಷ್ಟ' ಎಂಬ ಮಾತು ಹಿರಿಯರದ್ದು, ಅದು ಸತ್ಯ.
ಈಗ ಕಾಲ ಬದಲಾಗಿದೆ. ಮೈಲಿ ಚುಚ್ಚೋದು, ಹೋಗಲಿ ದಾದಿಯಮ್ಮಂದಿರನ್ನೆ ಇಂದಿನ ಮಕ್ಕಳು ನೋಡಲಿಲ್ಲ. ಶಾಲೆಗೆ ಬಂದು ಲಸಿಕೆ ಹಾಕುವ ಕಾಲ ಕಳೆದು ಹದಿನೈದು ವರ್ಷಗಳೇ ಕಳೆದು ಹೋಗಿದೆ .ಇಂದಿನವರು ನಾವು ಅನುಭವಿಸಿದ ಅರ್ಧ ಮಜಾವನ್ನು ಶಾಲಾಜೀವನದಲ್ಲಿ ಪಡೆಯುವುದಿಲ್ಲ ಎಂಬುದೊಂದೆ ಬೇಜಾರು. ಯಾವಾಗಲೂ ಈ ಮೈಲಿಯ ನೆನಪು ಉಳಿಯುವಂತಾಗಿದೆ. ಎಡಗೈ ತೋಳು ನೋಡಿದಾಗ ಮೈಲಿ ಮರೆತರು ನೆನಪಾಗುತ್ತದೆ. ಇರುವ ಮೈಲಿ ಚುಚ್ಚಿದ ಗುರತನ್ನು ಯಾ ಕಲೆಯನ್ನು ಕಂಡು.

Friday, November 11, 2011

ಕೊಳನೂದೋ...ಗೋ...


ಬೋಳು ಗುಡ್ಡದ ಅಣೆಯಲ್ಲಿ ಎರಡು ಜೀವಗಳು ಹೊರಳಾಡುತ್ತಿತ್ತು, ಒದ್ದಾಡುತ್ತಿತ್ತು. ಮೇಲಿಂದ ಮಳೆ, ಆದರೂ ಮೈಯೆಲ್ಲಾ ಬೇವರಿದೆ. ಏದುಸಿರು ಬಿಡುತ್ತಿವೆ ಅವು. ನೋವು... ಎಂಥಾ ನೋವು ಅದು? ಸುಖದ ನೋವು. ಮಾಚಿಯ ಮೈತಾಗಿದಾಗ ಶಾಕ್ ನೀಡಿದ ಅನುಭವ. ಮೊದಲ ಸುಖ, ಮೊದಲ ಸಲ ಪುರುಷತ್ವ ಪ್ರದರ್ಶನ, ಕನ್ಯೆತನ ನಾಶ. ಮಳೆಯ ಚಳಿಗೆ ನಡುಗದ ದೇಹ, ತಂಗಾಳಿಗೂ ತಣಿಯದ ಶಾಖ, ಮಳೆಯ ನೀರು ಸುರಿದರೂ ಆರದ ದಾಹ. ಅದೊಂದು ಮಧುರ ಅನುಭೂತಿ. ಮಧುವನ್ನು ಹೀರುವ ಭೃಂಗದಂತೆ ಅವಳ ದೇಹದ ಸರ್ವವನ್ನು ಹೀರಿಬಿಟ್ಟಿದ್ದ. ಮುಂದೊಂದು ದಿನ ನಾಲ್ಕು ಗೋಡೆಯ ನಡುವೆ, ಹೂ ಹಾಸಿದ ಪಲ್ಲಂಗದಲ್ಲಿ ಪವಡಿಸಿ ಅನುಭವಿಸುವ ಸುಖ ಬೋಳು ಗುಡ್ಡೆಯ ಬಿಕ್ಕೆ ಗಿಡಗಳ ನಡುವೆ ಅನುಭವಿಸಿ ಆಗಿತ್ತು. ಶಂಕರ, ಮಾಚಿ ಹಾವು ಏಣಿ ಆಟದಲ್ಲಿ ತೊಡಗಿದ್ದಾರೆ ಎಂದು ಆಕಾಶ ಕೂಗಿ ಹೇಳಿತು, ಗಾಳಿ ಮಾತಾಡಿತು.
-----
25 ವರ್ಷದ ಹಿಂದೆ ಮಳೆಗಾಲದ ನಾಲ್ಕು ತಿಂಗಳು ಅನುಭವಿಸಿದ ಅನುಭವ ಇಂದು ಬೆಂಗಳೂರಿನ ಸಹಸ್ರಾರು ಜನರ ನಡುವೆ ಕಳೆದು ಹೋಗುವಾಗ ನೆನಪಾಗುತ್ತದೆ. ಎಲ್ಲೋ ಅಡಗಿ ಕುಳಿತಿದ್ದ ಹಿಂದಿನ ನೆನಪು ಆಗಾಗ್ಗೆ ಮರುಕಳಿಸಿ ಮೂಡ್್ಆಫ್ ಮಾಡುತ್ತದೆ.
ಅವತ್ತು ಎಸ್ಸೆಸ್ಸೆಲ್ಸಿ ನಪಾಸಾಗಿ ಮನೆಯ ಮೆತ್ತಿಯ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ, 'ದನ ಕಾಯಬಹುದಂತೆ. ಯಾಕೆ ಸುಮ್ನೆ ಅತ್ತು ಕಣ್ಣೀರನ್ನು ಹಾಳು ಮಾಡಿಕೊಳ್ತೀಯಾ?' ಎಂದು ದೊಡ್ಡಪ್ಪ ವ್ಯಂಗ್ಯ ರೂಪದಲ್ಲಿ ಸಮಾಧಾನ ಮಾಡಿದ್ದರು. ಅವರ ಅಣತಿಯಂತೆ ದನಕಾಯಲು ಅಣಿಯಾಗಿಯೂ ಆಯ್ತು.
ಹೊಸ ಕರೆ ಕಟ್ಟಿದ ಸೊಪ್ಪುಕಂಬಳಿ, ಕತ್ತಿ, ಗಂಬೂಟು ಎಲ್ಲವೂ ಬಂತು.
ಮೊದಲ ದಿನ ದನಕಾಯಲು ಹೊರಟಿದ್ದು ಹೇಗಿತ್ತು ಅಂದರೆ ದಿಗ್ವಿಜಯ ಯಾತ್ರೆಗೆ ಹೊರಟ ಅರ್ಜುನನಂತೆ; ಸಡಗರದಮಿತ ಸಂಭ್ರಮದಿಂದ...
-----
ಜೋರು ಮಳೆ. ಬೋಳು ಗುಡ್ಡಗಳಲ್ಲಿ ಹಸಿರು ಚಿಗುರೊಡೆದಿದೆ. ಹತ್ತಿರ ಹತ್ತಿರ ಜಾನುವಾರುಗಳು ಮೇಯಲಿಕ್ಕೆ ಅನುಕೂಲವಾಗುವಷ್ಟು. ಯಾರೋ ನೆಟ್ಟಿದ್ದಾರೆ ಎನ್ನುವಷ್ಟು ಚೆಂದವಾಗಿ ಬೆಳೆದ ಬಿಕ್ಕೆಹಣ್ಣಿನ ಗಿಡಗಳು, ಮಳೆ ನೇರಳೆ ಗಿಡಗಳು, ಅಲ್ಲಲ್ಲಿ ಉದ್ದನೆಯ ಹುಲ್ಲಿನ ಮೇಲೆ ಬಿದ್ದ ಮಳೆ ನೀರಿನ ದೊಡ್ಡ ಹನಿ, ಗರಿ ಬಿಚ್ಚಿ ನಲಿವ ನವಿಲು, ಚಂಗನೆ ಜಿಗಿದೋಡುವ ಚಿಗರೆ ಮರಿಗಳು, ನಮ್ಮ ಮನೆಯ ದೊಡ್ಡ ಎಮ್ಮೆಯಂತೆ ಕಾಣುವ, ಆದರೆ ಹಣೆ ಚಂದ್ರಿ, ಗೊಂಡೆ ಬಾಲವುಳ್ಳ ಕಾಡೆಮ್ಮೆ... ಎಂಥ ಚೆಂದ ಪರಿಸರ?
-----
ತಲೆ ಮೇಲೆ ಕಂಬಳಿ ಕೊಪ್ಪೆ, ಹೆಗಲ ಮೇಲೆ ಬುತ್ತಿ ಕಟ್ಟಿಕೊಂಡ ಟವೆಲ್, ಒಂದು ಕೈಯಲ್ಲಿ ಕೋಲು, ಮತ್ತೊಂದು ಕೈಯಲ್ಲಿ ಕತ್ತಿ, ಬಾಯಲ್ಲಿ ಎಳೆಯ ಎಲೆ, ನಾಟಿ ತಂಬಾಕಿನೊಂದಿಗೆ ಹಾಕಿದ ಕವಳ. ಕೆಲಸ ಮತ್ತು ಹುದ್ದೆಗೆ ಸರಿಯಾದ ವೇಷಭೂಷಣದೊಂದಿಗೆ ದನವನ್ನು ಬಿಟ್ಟುಕೊಂಡು ಗುಡ್ಡದತ್ತ ಪ್ರಯಾಣ ಬೆಳೆಸಿದೆ.
ನನಗಿಂತ ಚೆನ್ನಾಗಿ ದನಗಳಿಗೆ ಗೊತ್ತಿತ್ತು ಮೇವು ಇರುವ ಜಾಗ ಯಾವುದೆಂದು. ಅದೊಂದು ರೀತಿ ಗಜಪಥ ಇದ್ಹಾಂಗೆ 'ದನಪಥ'. ಈ ದಾರಿಯಲ್ಲಿ ಸಾಗುವಾಗ ಕಾಡು ಸಿಗುತ್ತದೆ. ಮಳೆಗಾಲವೂ ಪ್ರಾರಂಭವಾಗಿತ್ತು. ಕಾಡಿನ ಒಳಗೆ ಹೋದಂತೆ ನೀರವತೆ ಹೆಚ್ಚಾಗುತ್ತಿತ್ತು. ಆ ಮೌನವನ್ನು ಸೀಳಿ ಕಪ್ಪೆಗಳ ವಟವಟ ವಟರ್, ಜೊತೆಯಲ್ಲಿ ಮಳೆ ಜಿರಳೆಯ ಜೀರ್್ರ್... ಎನ್ನುವ ಕರ್ಕಶ ಶಬ್ದ. ನನಗೊಂದು ರೀತಿಯ ಭಯ ಪ್ರಾರಂಭವಾಗಿತ್ತು. ಮನೆ ಕಡೆ ತಿರುಗೋಣವೇ..? ಸಾಧ್ಯವಿಲ್ಲ. ಮುಂದೆ ಎಷ್ಟು ದೂರ ಕಾಡಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಆದರೆ ದನಗಳಿಗೆ ಗೊತ್ತಿತ್ತು. ಅವು ಯಾವ ಅಡ್ಡಿ ಆತಂಕಗಳಿಲ್ಲದೆ ಸಾಗುತ್ತಿದ್ದವು. ಕತ್ತಲೆ ಕಾನು ಇನ್ನೇನು ಕಳೆಯುತ್ತಿದೆ ಎನ್ನುವಂತೆ ಬೆಳಕು ಜಾಸ್ತಿಯಾಗುತ್ತಿತ್ತು.
ಅಬ್ಬಾ! ಅಂತೂ ಬೋಳು ಗುಡ್ಡ ತಲುಪಿಯಾಯ್ತು. ಮತ್ತೊಂದು ಕಡೆಯಿಂದ ನಾಲ್ಕಾರು ದನಗಳು ಇತ್ತ ಕಡೆಯೇ ಬರುತ್ತಿದ್ದವು. ಅವುಗಳ ಹಿಂದೆ ಬರುತ್ತಿದ್ದ ಲಚ್ಚ. ನಿಜವಾದ ಗೋಪಾಲಕ ಅಂದರೆ ಈತನೇ!
ಲಚ್ಚನ ಬಗ್ಗೆ ಹೇಳದೆ ಮುಂದೆ ಹೋಗಲಿಕ್ಕೆ ಆಗುವುದೇ ಇಲ್ಲ. ಕಾರಣ ಈತನ ವ್ಯಕ್ತಿತ್ವ. ಜೀವಂತ ವೃತ್ತ ಪತ್ರಿಕೆ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಸುತ್ತಲ ಹತ್ತು ಊರುಗಳ ಸುದ್ದಿಯೂ ಇವನ ಚಿತ್ತ ಭಿತ್ತಿಯಲ್ಲಿ ಅಚ್ಚಾಗಿರುತ್ತಿತ್ತು. ಯಾರ ಮನೆಯ ಅಡಕೆ ತೋಟಕ್ಕೆ ಕೊಳೆ ರೋಗ ಬಂದಿದೆ? ಮಳೆಗಾಲ ಬಂದರೂ ಮಾರ್ಕೇಟಿನಲ್ಲಿ ಅಡಕೆಯನ್ನು ಯಾರು ಶಿಲ್ಕು ಇಟ್ಟಿದ್ದಾರೆ? ಯಾರು ಕಾಳುಮೆಣಸು ಹೆಚ್ಚು ಬೆಳೆಯುತ್ತಾರೆ? ಯಾರೊಂದಿಗೆ ಯಾರ ಅಫೇರ್ ಇದೆ? ಯಾವ ಮನೆ ಹುಡುಗಿ ಯಾರೊಂದಿಗೆ ಲವ್ ಮಾಡುವುದರಲ್ಲಿ ತಲ್ಲಿನಳಾಗಿದ್ದಾಳೆ? ಅಬ್ಬಬ್ಬಾ! ಒಂದಲ್ಲಾ, ಎರಡಲ್ಲಾ ಕಂತೆ ಕಂತೆ ಕತೆಗಳನ್ನು, ನಿತ್ಯ ವರ್ತಮಾನಗಳನ್ನು ಲಚ್ಚ ಲೋಚ ಲೋಚನೆ ಹೇಳಬಲ್ಲ.
ಆದರೆ ಈತ ಮಾತನಾಡುತ್ತಿರಲಿಲ್ಲ. ಅರೆ! ಇಷ್ಟೆಲ್ಲ ಹೇಳುವ ಈತನ್ಯಾಕೆ ಮಾತಾಡುತ್ತಿಲ್ಲ ಎನ್ನುತ್ತಾನೆ ಅಂದುಕೊಳ್ಳಬೇಡಿ. ಈತನಿಗೆ ಮಾತು ಸ್ಪಷ್ಟವಾಗಿ ಆಡಲಾಗುವುದಿಲ್ಲ. ತನ್ನ ಆಪ್ತರು ಎನ್ನುವವರೊಂದಿಗೆ ಮಾತ್ರ ಮಾತನಾಡುತ್ತಾನೆ; ಸಾಕು ಎನ್ನುವವರೆಗೆ. ಪಕ್ಕದ ಊರು. ಸಾತ್ವಿಕ ಮನುಷ್ಯ.
ಇದು ಇವನ ಅಡ್ರೆಸ್; ಆದರೆ ಡ್ರೆಸ್ಸಿನ ಬಗ್ಗೆ ಹೇಳಲೇಬೇಕು.
ಶಾಂತ ಸ್ವಭಾವದ ಲಚ್ಚನ ಕಂಡರೆ ಎಲ್ಲರಿಗೂ ಭಯ. ಅದರಲ್ಲೂ ಹೆಂಗಸರು ಬೆಚ್ಚಿ ಬೀಳುತ್ತಿದ್ದರು. ಶಾಲಾ ಹೆಣ್ಮಕ್ಕಳು ಲಚ್ಚನನ್ನು ಕಂಡರೆ ಪಟ್ರಾ ಬಿದ್ದು ಓಡುತ್ತಿದ್ದರು. ಇದಕ್ಕೆ ಕಾರಣ ಇವನ ಡ್ರೆಸ್ಸು. ಆಶ್ಚರ್ಯವಾಗಬಹುದು, ಆದರೂ ಸತ್ಯದ ವಿಚಾರ. ಆರಡಿ ಎತ್ತರದ ಎದ್ದಾಳು. ಮೊಳ ಉದ್ದ ಹರಡಿದ ಗುಂಗರು ಕೂದಲು; ಜೋಗಿ ಸಿನಿಮಾದಲ್ಲಿ ಶಿವಣ್ಣನ ಕೂದಲು ಇದ್ಹಾಂಗೆ. ಇಡೀ ಶರೀರಕ್ಕೆ ಒಂದೇ ಅಂಗಿ. ಅಂದರೆ ಒಳ ಉಡುಪಾಗಲಿ, ಕೆಳ ಉಡುಪಾಗಲಿ ಏನೂ ಇರುತ್ತಿರಲಿಲ್ಲ. ಅಂಗಿಯೋ ತೊಡೆಯವರೆಗೆ ಮಾತ್ರ ಇರುತ್ತಿತ್ತು. ಇದು ಹೆಂಗಸರ ಹೆದರಿಕೆಗೆ ಕಾರಣವಾದ ಏಕೈಕ ಅಂಶ!
----
ಲಚ್ಚನೊಡನೆ ನನ್ನ ದನ ಕಾಯುವ ಬದುಕು ಸಾಗಿತ್ತು. ಮೊದಮೊದಲು ನಾನು, ಲಚ್ಚ, ಇಪ್ಪತ್ತು ದನಗಳು ಮಾತ್ರ ಊರ ಸುತ್ತಲಿನ ಸಮಸ್ತ ಗುಡ್ಡಕ್ಕೆ ಒಡೆಯರು ಎಂದು ನಾನು ತಿಳಿದುಕೊಂಡಿದ್ದೆ. ಅದು ಸುಳ್ಳಾಯಿತು. ಬಂಡಾರ್ಯಕೇರಿ ತಿಮ್ಮ, ಕಂಚಿಕೊಪ್ಪ ಮಾದೇವಿ, ಬಾಳೇಗದ್ದೆ ಮಾಚಿ, ಗುಡ್ಡೇಕೊಪ್ಪ ಗೂನ ಗಣಪ... ನಮ್ಮ ಜೊತೆ ಇಷ್ಟೆಲ್ಲ ಮಂದಿ ಇದ್ದರು.
ಆಗಷ್ಟೇ ಎಸ್ಸೆಸ್ಸೆಲ್ಸಿ ಮುಗಿದ ನನಗೆ ಧ್ವನಿ ಒಡೆದಿತ್ತು. ವ್ಯಕ್ತಪಡಿಸಲಾಗದ ಭಾವನೆ. ರಾತ್ರಿ ಬೆಳಗಾಗುವುದರೊಳಗೆ ಹಾಕಿದ್ದ ಚೊಣ್ಣ ಬೀಗಿದ ಅನುಭವ, ಕೆಲವೊಮ್ಮೆ ಒದ್ದೆಯೂ ಆಗಿರುತ್ತಿತ್ತು ಅನ್ನಿ. ಅದು ಬಿಡಿ, ನಿಜವಾದ ಮಜಾ ಪ್ರಾರಂಭವಾಗಿದ್ದೆ ದನಿಗುಡ್ಡೆಯಲ್ಲಿ. ಅವತ್ತು ಲಚ್ಚ ಇಲ್ಲ; ತಿಮ್ಮ, ಮಾದೇವಿ, ಗೂನ ಗಣಪ ಯಾರು ಇನ್ನೂ ಬಂದಿರಲಿಲ್ಲ. ನಾನು ಮಾಚಿ ಇಬ್ಬರೇ.
ಎಷ್ಟು ಚೆನ್ನಾಗಿ ಕಾಣುತ್ತಿದ್ದಳು ಅವಳು ಅವತ್ತು. ಅಡಿಯಿಂದ ಮುಡಿಯವರೆಗೆ ತಾಮ್ರವರ್ಣ. ಬುಗರಿಯೆದೆ. ಅಷ್ಟಗಲದ ಕಪ್ಪನೆ ಕಣ್ಣು, 'ಬಾ ಬಾ' ಎಂದು ಕರೆಯುವಂತೆ ಭಾಸವಾಗುತ್ತಿತ್ತು. ಯಾವತ್ತೂ ಆಗದಿದ್ದ ಪುಳಕ.
ಇಷ್ಟು ದಿನ, 'ನನ್ನೊಳು ನಾ, ನಿನ್ನೊಳು ನೀ' ಎನ್ನುತ್ತಿದ್ದೆವು. ಆದರಿಂದು ನನಗೆ ಅವಳು, ಅವಳಿಗೆ ನಾನು ಒಲಿದಾಗಿತ್ತು. 'ನನ್ನೊಳು ನೀ, ನಿನ್ನೊಳು ನಾ' ಆಗಿ ಪರಿವರ್ತನೆಯಾಯಿತು. ನಮ್ಮ ಮನೆಯ ಬೆಳ್ಯಾ ಹೋರಿ, ಮಾಚಿ ಮನೆಯ ಸುಂದರಿ ದನದ ಬೆನ್ನು ಹತ್ತಿಯಾಗಿತ್ತು. ಪರಿವರ್ತನೆ ಅಂದರೆ ಇದೇ ಆಗಿರಬಹುದು ಎನ್ನುವುದಾಗಿಯೂ ನನಗೆ ಅನಿಸಿತು.
------
ಈ ನಡುವೆ ಬಿಕ್ಕೆ, ಹಣ್ಣು ನೇರಳೆ ಹಣ್ಣುಗಳ ಸವಿಯೊಂದಿಗೆ ನಾನು ಪುಸ್ತಕ ಓದುವುದನ್ನು ರೂಢಿ ಮಾಡಿಕೊಳ್ಳುತ್ತ ಬಂದೆ. ಸ್ಪೈ, ಕ್ರೈಂ, ಅನಂತರಾಮ್ ಅವರ ಪತ್ತೇದಾರಿ ಕಾದಂಬರಿಯಿಂದ ಪ್ರಾರಂಭವಾದ ಓದು, ಭೈರಪ್ಪ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಯಂಡಮೂರಿ, ತರಾಸು ಪುಸ್ತಕಗಳು ಕೈಗೆ ಸಿಕ್ಕಿದ್ದು, ಊರ ಲೈಬ್ರರಿಯಲ್ಲಿ ದೊರೆತಿದ್ದು... ಯಾವುದು ಸಿಕ್ಕಿತೋ ಅದನ್ನು ಓದಿದೆ.
ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದರೆ, ನನಗೆ ದನಿಗುಡ್ಡೆಯಲ್ಲಿ. ಅರೆ! ಎಸ್ಸೆಸ್ಸೆಲ್ಸಿ ನಪಾಸಾದ ವಿಷಯ ಓದಿ ಪಾಸು ಮಾಡಬಹುದಲ್ಲ? ಮನಸ್ಸಾಯಿತು, ಓದಲಿಕ್ಕೆ ತೊಡಗಿದೆ. ಮಾಚಿ ಮನಸ್ಸಿಂದ ಮರೆಯಾಗುತ್ತ ಸಾಗಿದಳು. ಅಕ್ಟೋಬರ್ನಲ್ಲಿ ಪರೀಕ್ಷೆ ಬರೆದೆ.
ಅಯ್ಯೋ.. ಅಮ್ಮಾ... ನಾ ಪಾಸಾದೆ....!
ನನ್ನ ಓದಿನ ಚಟ ಎಷ್ಟಾಯಿತೆಂದರೆ ತಿಮ್ಮ ಹೊಸ ಹರಟೆ ಹೇಳುವುದನ್ನು ಬಿಟ್ಟ. ಮಾದೇವಿ, ಗೂನ ಗಣಪ ದೂರದ ಆಂಟೆ ಕಡೆ ದನ ಮೇಯಲಿಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು. ತಿಮ್ಮ, ಮಾಚಿ ತಾಮ್ರಗುಂಡಿ ಹೊಳೆಗೆ ದನ ಮೈತೊಳೆಯುತ್ತ ತಮ್ಮ ಮೈಯನ್ನು ತೊಳೆದುಕೊಳ್ಳುತ್ತಿದ್ದಾರೆ ಎಂದು ಲಚ್ಚ ಆಗಾಗ್ಗೆ ಹೇಳುತ್ತಿದ್ದ. ಆಗ ನನಗೆ ಏನೇನೋ ನೆನಪಾಗುತ್ತಿತ್ತು. ಲಚ್ಚನಿಗೆ ಗೊತ್ತಿಲ್ಲದ 'ಆ' ವಿಷಯ ಹೇಳೋದು ಯಾಕೆ ಎಂದು ಸುಮ್ಮನಾಗಿ ಬಿಟ್ಟಿದ್ದೆ. ನಾನು ಓದಿದ ಪುಸ್ತಕದ ಸಾರ ಅವನಿಗೆ ಹೇಳುತ್ತಿದ್ದೆ. ಕೆಲವಷ್ಟು ಪುಸ್ತಕಗಳು ನನಗೂ ಅರ್ಥವಾಗಿರಲಿಲ್ಲ. ಅವನಿಗೋ ಎಷ್ಟು ಅರ್ಥವಾಯಿತೋ ನನಗೆ ಗೊತ್ತಾಗಲಿಲ್ಲ.
ಗುಡ್ಡದಲ್ಲಿ ಹುಲ್ಲುಗಳು ಒಣಗುತ್ತ ಬಂತು. ಕೊನೆ ಕೊಯ್ಲು ಪ್ರಾರಂಭವಾಯಿತು. ಮಾಚಿಗೆ ಮದುವೆ ಗೊತ್ತಾಯಿತು.
-----
ಜೀವನದ ಗತಿ ಬದಲಾಯಿತು. 'ಹ್ಯಾಂಗಂದ್ರು ಎಸ್ಸೆಸ್ಸೆಲ್ಸಿ ಪಾಸಾಗಿದ್ದೀಯಾ. ಮುಂದೆ ಓದು' ಎಂದು ದಕ್ಷಿಣಕನ್ನಡದ ಕಡೆ ನನ್ನನ್ನು ಕಳುಹಿಸಿದರು ಅನ್ನುವುದಕ್ಕಿಂತ ಇಲ್ಲಿದ್ದರೆ ಹಾಳಾಗುತ್ತೀಯ ಅಂತ ಅಟ್ಟಿದರು. ಹಾಸ್ಟೆಲ್, ಹೊಸ ಹುಡುಗಿಯರು, ಹೀಟ್ ವಾತಾವರಣ, ಹಾದಿ ಬೀದಿ ಓಡಾಟ. ಐದು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಆಗಾಗ್ಗೆ ರಜೆಯಲ್ಲಿ ಮನೆಗೆ, ಅಜ್ಜನ ಮನೆಗೆ. ಅಲ್ಲಲ್ಲಿ ಆಗುವ ಬಯಲಾಟ, ಕಂಪನಿ ನಾಟಕ, ಮೂಡಲಪಾಯ, ಅಂದರ್ ಬಾಹರ್, ಗುಡುಗುಡಿ, ಇಸ್ಪೀಟ್ ಎಂದು 22ರ ಪ್ರಾಯ ದಾಟಿತು.
ಮುಂದೆ ಮತ್ತೆ ಓದು. ಎಂಎ ಗ್ರಾಜ್ಯುಯೇಶನ್. ಚೆಂದುಳ್ಳಿ ಚೆಲುವೆಯರ ನಡುವೆ ಗಂಭೀರ ಪಾಠ. ದನಕಾಯುತ್ತಿರುವ ಹೆಣ್ಣು ಕಂಡರೆ ಮತ್ತದೇ ಮಾಚಿಯ ನೆನಪು. ಹೀಗೆ ಹಲವಾರು ಭ್ರಮೆಯಲ್ಲಿ ವಿದ್ಯಾರ್ಥಿ ಜೀವನ ಕಳೆದೇಹೋಯಿತು.
ಶುರುವಾಯಿತು ನೌಕರಿ ಶಿಕಾರಿ. ರಾಜಧಾನಿ ಕಡೆಗೂ ಹೋದೆ. ಕೊನೆಗೂ ಸಿಕ್ಕಿತು ಪಾರ್ಟ್ ಟೈಮ್ ಲೆಕ್ಚರರ್ ಕೆಲಸ. ಹುಡ್ಗರು 'ಮೇಷ್ಟ್ರೆ' ಅಂತ ಕರೆದರು.
ವರ್ಷಗಳು ಕಳೆದವು.
-----
ನನಗೆ ಗೊತ್ತಾಗಿತ್ತು; ನಾನು ಎಂಥ ದಿನಗಳನ್ನು ಕಳೆದು ಬಂದೆ ಅನ್ನೋದು. ಆ ದನಕಾಯುವ ದಿನಗಳು. ಪಕ್ಷಿಗಳ ಇಂಚರ, ತೊರೆ ಜುಳು ಜುಳು ನಾದ. ಮಾಚಿಯ ಮುಗ್ಧ ಪ್ರೇಮ. ಅವಳೊಂದಿಗೆ ಕಳೆದ ಪ್ರಾಯದ ಕಾಮ. ಲಚ್ಚನ ಗೆಳೆತನ. ಊರಿನ ನೆನಪಾಯಿತು. ಯಾರಿದ್ದಾರೆ ನನ್ನವರು ಅಲ್ಲಿ?
ಹುಟ್ಟಿದ ನೆಲದ ಸೆಳೆತ, ಹೊರಟೆ. ಮಿತ್ರನ ಮನೆಯಲ್ಲಿ ವಾಸ್ತವ್ಯ. ಕಾಡು ಹರಟೆ. ಅವನು ತೋಟಕ್ಕೆ ಹೋದ, ನಾನು ಊರು ತಿರುಗಲು ಹೊರಟೆ.
ಕಾಡು ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಆರೇಳು ವರ್ಷದ ಬಾಲಕಿಯೊಬ್ಬಳು ನನ್ನ ಮುಂದೆ ಬಂದಳು. ಏನೋ ಅವ್ಯಕ್ತ ಅನುಭೂತಿ. 'ಹುಚ್ಚು ಮನಸ್ಸು' ಎಂದುಕೊಂಡೆ. ಅಷ್ಟರಲ್ಲಿ ಅದೇ ಮಾಚಿ... ಹಿಂದೆ ತಿಮ್ಮ. 'ಅರೆ! ಇನ್ನೂ ಒಟ್ಟಿಗೆ ದನಕಾಯ್ತಿರಾ?' ಎಂದು ಕೇಳಬೇಕು ಎನ್ನುವಷ್ಟರಲ್ಲಿ, ಅವಳೇ ಕೇಳಿದಳು 'ಒಡಿದಿರೇ ಹ್ಯಾಂಗಿದ್ರಿ? ಇದು ನಂದೇ ಮಗಳು'.
ನನ್ನ ಮನಸ್ಸು ಓದಿದವಳಂತೆ ತಿಮ್ಮನ ತೋರಿಸಿ 'ನಮ್ಮೇಜಮಾನ್ರು' ಅನ್ನುವಷ್ಟರಲ್ಲಿ, ಮಧ್ಯ ಬಾಯಿ ಹಾಕಿದ ಅಂವ 'ಹ್ಯಾಂಗಿದ್ಲು ನಮ್ಮ ಮಗಳು? ನನ್ನಾಂಗ್ಹೆ ಅಲ್ದಾ?' ಅಂದ. ನನಗೆ ಹಾಗೆ ಕಾಣಲಿಲ್ಲ. 'ನನ್ನಾಂಗ್ಹೆ' ಅಂತ ಹೇಳಬೇಕೆನಿಸಿದರೂ, ಅವನ ಪ್ರಶ್ನೆಗೆ ಉತ್ತರ ಕೊಡುವ ಮನಸ್ಸಾಗಲಿಲ್ಲ. 'ಬರುತ್ತೇನೆ' ಎಂದು ಹೊರಟೆ. ಸತ್ಯ ನನಗೆ ಗೊತ್ತಿತ್ತು.
ಲಚ್ಚ ಎದುರಾದ. 'ಪಕ್ಕಾ ನಿಮ್ದೇ ಪಡಿಯಚ್ಚು, ಕಂಡ್ರಾ?' ಎಂದು ನಕ್ಕ. ಆಗಲೂ ಮಾತಾಡುವ ಮನಸ್ಸಾಗಲಿಲ್ಲ. ಕಣ್ಣ ಮುಂದೆ ಬೆಳ್ಯಾ ಹೋರಿ, ಸುಂದರಿ ದನ ಸುಳಿದು ಹೋದವು. ರಾಜಧಾನಿಗೆ ಹೊರಡುವ ಬಸ್ಗೆ ಟಿಕೆಟ್ ಬುಕ್ ಆಗಿತ್ತು. ಆ ದನಗಳು ಹೋಗುತ್ತಿದ್ದ ಬೆಟ್ಟಗಳು... ಮರೆಯಬೇಕು ಎಂದುಕೊಂಡು ಕಾಡುವ ನೆನಪುಗಳು... ಕೊಳನೂದೋ ಗೋವಿಂದ ಮುಪ್ಪಿಗಾಗಲಾನಂದ... ಆನಂದ... ಆನಂದ... ತೇಲಿ ಬರುತ್ತಿತು; ಮೊಬೈಲ್ ರಿಂಗ್ಟೋನ್ ರೂಪದಲ್ಲಿ, ಗೋಕುಲ ನಿರ್ಗಮನದ ಹಾಡು...

Monday, July 4, 2011

ಎಂಡೋ ನಿಷೇಧ: ಆದೇಶ, ಅಧ್ಯಯನ, ಆಪೋಶನ

<span title="Click to correct" class="transl_class" id="1">ಎಂಡೋ</span> <span title="Click to correct" class="transl_class" id="2">ನಿಷೇಧ</span>

ಕರ್ನಾಟಕದ ಎಂಡೋ ಪೀಡಿತ ಪ್ರದೇಶ ಕೊಕ್ಕಡದ ಮಹಿಳೆ ಸುಂದರಿ ಎಂಬುವವಳು ಇತ್ತೀಚೆಗೆ ಕ್ಯಾನ್ಸರ್್ನಿಂದ ಮೃತ ಪಟ್ಟರು. ಇವರ ಸಾವಿಗೆ ಎಂಡೋಸಲ್ಫಾನ್ ಸಿಂಪರಣೆಯ ದೂರಗಾಮಿ ಪರಿಣಾಮವೇ ಕಾರಣ ಎನ್ನುವುದು ಊರಿನವರ ಅಂಬೋಣ. ಅಸಹಜ ರೀತಿಯಲ್ಲಿ ಇಲ್ಲಿ ಮೃತಪಟ್ಟವರಲ್ಲಿ ಇವರೇ ಮೊದಲಿಗರಲ್ಲ. ಇದಕ್ಕೂ ಮುನ್ನ ಬಹಳಷ್ಟು ಜನರು ಇಹಲೋಕ ಯಾತ್ರೆ ಮಾಡಿದ್ದಾರೆ. ಕ್ಯಾನ್ಸರ್, ದೀರ್ಘಕಾಲಿಕ ಅಂಗವೈಕಲ್ಯ ಹೊಂದಿದವರು, ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರೂ ಇವರಲ್ಲಿ ಸೇರಿದ್ದಾರೆ. ನಿರಂತರ 18 ವರ್ಷಗಳ ಕಾಲ ಈ ಭಾಗದಲ್ಲಿ ಎಂಡೋಸಲ್ಫಾನನ್ನು ಸಿಂಪರಣೆ ಮಾಡಿರುವುದೇ ಇದಕ್ಕೆಲ್ಲ ಕಾರಣ .

ಆದರೂ ನಮ್ಮ ರಾಜ್ಯದ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳಿಗೆ ಎಂಡೋ ಕೀಟನಾಶಕವೇ ಕೃಷಿಯಲ್ಲಿನ ಸರ್ವ ರೋಗಕ್ಕೆ ಮದ್ದು. ಜೂನ್ ಮೊದಲವಾರ ದೆಹಲಿಯಲ್ಲಿ ನಡೆದ ಸಭೆಯ ವಿದ್ಯಮಾನ ಇದಕ್ಕೆ ಪುಷ್ಠಿ ನೀಡುತ್ತದೆ. ಕೇಂದ್ರ ಸರ್ಕಾರದ ಕೃಷಿ ಇಲಾಖೆ"ಎಂಡೋಸಲ್ಫಾನ್್ಗೆ ಬದಲಿ ವ್ಯವಸ್ಥೆ ಏನು?' ಎಂಬ ವಿಚಾರವಾಗಿ ಚರ್ಚಿಸಲು ಎಲ್ಲಾ ರಾಜ್ಯದ ಕೃಷಿ ಇಲಾಖೆ ಮುಖ್ಯಸ್ಥರನ್ನು ಆಹ್ವಾನಿಸಿತ್ತು. ಕರ್ನಾಟಕದಿಂದ ಭಾಗವಹಿಸಿದ್ದ ಇಲಾಖೆಯ ವ್ಯಕ್ತಿ" ನಮಗೆ ಎಂಡೋಸಲ್ಫಾನ್ ಬೇಕು' ಎಂಬ ಸಲಹೆ ನೀಡಿದರು. ವಿಪರ್ಯಾಸ ಅಂದರೆ ಇದೇ ಅಲ್ಲವೇ."ಬಹಳ ಆಸ್ಥೆ'ಯಿಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎಂಡೋಗೆ ನಿಷೇಧ ಹೇರಿದ್ದಾರೆ. ಅಂಥದರಲ್ಲಿ ಸರ್ಕಾರಕ್ಕೆ ಬೇಡವಾದದ್ದು ಇಲಾಖೆಗೆ ಬೇಕಾಗಿದೆ.

ಅದೇ ಸಭೆಯಲ್ಲಿ ಎಲ್ಲಾ ರಾಜ್ಯದವರು ಎಂಡೋ ಪರ ಮಾತಾಡಿದರೆ ಕೇರಳ ಮಾತ್ರ ವಿರೋಧಿಸಿತು. ಕೇರಳದಷ್ಟೇ ಸಮಸ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲೂ ಇದೆ. ಈ ಎಂಡೋ ಪೀಡಿತ ಪ್ರದೇಶಕ್ಕೆ ಖಂಡಿತ ದೆಹಲಿಯಲ್ಲಿ ಭಾಗವಹಿಸಿದ ಇಲಾಖೆ ಪ್ರತಿನಿಧಿ ಹೋಗಿರಲಿಕ್ಕಿಲ್ಲ. ಆಕಸ್ಮಾತ್ ಹೋಗಿದ್ದರೆ"ನಮಗೆ ಎಂಡೋ ಬೇಕು' ಎನ್ನುತ್ತಿರಲಿಲ್ಲ.

ಅಲ್ಲದೇ, ಕರ್ನಾಟಕದಲ್ಲಿ ಮಾರ್ಚ್್ನಲ್ಲೇ ಎಂಡೋಗೆ ನಿಷೇಧ ಹೇರಿದ್ದರೂ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವ ಇಲಾಖಾ ಅಧಿಕಾರಿ ಇಲ್ಲಿನ ನಿಲವನ್ನು ಮರೆತರೇ? ಈ ಸರ್ಕಾರ ಇರುವುದು ಐದೇ ವರ್ಷ, ಇವರೇನು ಮಾಡಿಯಾರು ಎಂದು ನಿರ್ಲಕ್ಷ್ಯ ಮಾಡಿದರೇ? ಅಥವಾ ಕಂಪನಿ ಜೊತೆ ಕೈ ಜೋಡಿಸಿದರೇ? ಕ್ಯಾಬಿನೆಟ್್ನಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇಲ್ಲವೇ?

ಇನ್ನು ಸರ್ಕಾರ ಎಂಡೋ ವಿಷವನ್ನು ಎರಡು ತಿಂಗಳ ಮಟ್ಟಿಗೆ ಬ್ಯಾನ್ ಮಾಡಿ, ನಂತರ ಮತ್ತೆರಡು ತಿಂಗಳು ಮುಂದುವರಿಸಿತು. ಈ ಬ್ಯಾನ್ ಎನ್ನುವುದು ಕಡತದಲ್ಲೇ ಇರುವಂತೆ ಕಾಣುತ್ತದೆ. ಯಾಕೆಂದರೆ ಯಾದಗಿರಿ ಜಿಲ್ಲೆಯಲ್ಲಿ ಎಂಡೋ ಬ್ಯಾನ್ ಪ್ರಭಾವ ಕಾಣಲಿಲ್ಲ. ಆಂಧ್ರದಿಂದ ಎಂಡೋ ಕೀಟನಾಶಕವನ್ನು ತಂದು ಉಪಯೋಗಿಸುತ್ತಿರುವುದು ಪತ್ತೆಯಾಯಿತು. ಮಾಧ್ಯಮದಲ್ಲಿ ಇದರ ಕುರಿತು ವರದಿಯೂ ಬಂತು. ಆದರೆ ಪರಿಣಾಮ ಮಾತ್ರ ಶೂನ್ಯ. ಯಾವ ಕೀಟನಾಶಕ ಅಂಗಡಿಯಿಂದಲೂ ಎಂಡೋವನ್ನು ಸರ್ಕಾರ ಹಿಂಪಡೆದ ದಾಖಲೆಗಳಿಲ್ಲ.

ಅಂದ ಹಾಗೆ, ಸುಪ್ರೀಂಕೋರ್ಟ್ ಎಂಡೋ ನಿಷೇಧ ಸಮರ್ಪಕವಾಗಿ ಹೇರುವಂತೆ ಕೇಂದ್ರ ಕೃಷಿ ಇಲಾಖೆಗೆ ಆದೇಶಿಸಿದೆ. ಅದರಂತೆ ಇಲಾಖೆಯೂ ಕೇಂದ್ರ ಕ್ರಿಮಿನಾಶಕ ಮಂಡಳಿ ಹಾಗೂ ನೋಂದಣಿ ಸಮಿತಿ (ಸಿಐಬಿಆರ್್ಸಿ) ಮತ್ತು ಸಸಿ ಸಂರಕ್ಷಣೆ ಜಾರಿ ನಿರ್ದೇಶನಾಲಯ ಸೇರಿದಂತೆ ಹಲವಾರು ಇಲಾಖೆಗಳಿಗೆ ಸೂಚನೆ ನೀಡಿತ್ತು. ಅಲ್ಲದೆ ಎಂಡೋಸಲ್ಫಾನ್ ಮಾರಾಟ ಮತ್ತು ತಯಾರಿಕಾ ಕಂಪನಿಗಳಿಗೂ ತಿಳಿಸಿತ್ತು. ಆದರೆ ಈ ಆದೇಶಕ್ಕೆ ಬೆಲೆ ಕೊಡದ ಕಂಪನಿಗಳು ತಮ್ಮ ನೋಂದಣಿ ಪ್ರಮಾಣ ಪತ್ರ ನೀಡದೆ ನಿರ್ಲಕ್ಷ್ಯ ತಾಳಿದವು. ನಂತರ ಸಿಐಬಿಆರ್್ಸಿ ತಾನೇ ವಾಪಸ್ ಪಡೆದುಕೊಂಡು ಪುನಃ ಸುಪ್ರೀಂನ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿ ಕೊಂಡಿತು.

ಎಂಡೋ ನಿಷೇಧದ ಬಗ್ಗೆ ಸುಪ್ರೀಂ ಇಂಥ ಆದೇಶ ಕೊಟ್ಟಾಗಲೂ ಕೀಟನಾಶಕವನ್ನು ಹಿಂಪಡೆಯುವ ಮನಸ್ಸು ಮಾಡಲಿಲ್ಲ. ಅಂದರೆ ತಾವು ನಿಷೇಧ ಮಾಡಿದ್ದೇವೆ ಎಂದಾಗಬೇಕು. ಔಷಧಿ ಯಥಾ ಪ್ರಕಾರ ಮಾರಾಟವಾಗುತ್ತಿರಬೇಕು ಎಂಬ ಧೋರಣೆಯೇ?

ಇನ್ನೊಂದೆಡೆ, ಎಂಡೋ ಪೀಡಿತ ಪ್ರದೇಶದ ಜನರ ಪತ್ರ ಹೋರಾಟ, ಜಾಗೃತಿ ಕಾರ್ಯ ನಡೆಯುತ್ತಿದ್ದರೂ ಅಲ್ಲಿನ ಶಾಸಕರಾಗಲಿ, ಸಂಸದರಾಗಲಿ ತುಟಿ ಬಿಚ್ಚದಿರುವುದು ಮಾತ್ರ ಸೋಜಿಗದ ಸಂಗತಿ. ಕರ್ನಾಟಕದಲ್ಲಿ ಎಂಡೋ ಬಾಧಿತರಿರುವುದು ಕೇಂದ್ರ ಸರ್ಕಾರದ ಕಣ್ಣಿಗೆ ಬೀಳಲೇ ಇಲ್ಲ. ಇದಕ್ಕೆ ಕಾರಣ ನಾವು ಕೇಂದ್ರದಲ್ಲಿ ನಮ್ಮ ಬಗ್ಗೆ ಮಾತಾಡಿ ಎಂದು ಕಳುಹಿಸಿದ ಜನಪ್ರತಿನಿಧಿಗಳು. ನಮ್ಮ ರಾಜ್ಯದ ನಾಲ್ಕು ಮಂದಿ ಸಚಿವರಿದ್ದಾರೆ. ಅದರಲ್ಲಿ ಒಬ್ಬರು ಎಂಡೋ ಬಾಧಿತ ಜಿಲ್ಲೆಯವರೇ. ಇವರು ತಮ್ಮವರಿಗೆ ಹೀಗಾಯಿತಲ್ಲ, ಇವರ ನೆರವಿಗೆ ಏನಾದರೂ ಸಹಾಯ ಮಾಡುವ ಕಳಕಳಿಯನ್ನು ತೋರಿಸಲಿಲ್ಲ. ಇಬ್ಬರು ಸಂಸದರು, ಒಬ್ಬರು ಸಚಿವರು ಇದೇ ಜಿಲ್ಲೆಯವರಿದ್ದರೂ ಈ ಸಂತ್ರಸ್ತರಿಗೆ ಕನಿಷ್ಠ ಉಪಕಾರವೂ ಆಗದಿರುವುದು ವಿಷಾದನೀಯ.

ಇನ್ನು ಬೆಳ್ತಂಗಡಿಗಿಂತ ಪುತ್ತೂರು ತಾಲೂಕಿನಲ್ಲೇ ಹೆಚ್ಚು ಮಂದಿ ಎಂಡೋ ಬಾಧಿತರಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಆದರೆ ಇಲ್ಲಿನ ಶಾಸಕರಿಗೆ ಮಾತ್ರ ಈ ವಿಚಾರ ಗೊತ್ತಿದ್ದಂತೆ ಕಾಣುವುದಿಲ್ಲ. ಇವರು ಒಂದು ದಿನವೂ ಸಂತ್ರಸ್ತರ ನೋವಿಗೆ ಸ್ಪಂದಿಸಲು ಈ ಗ್ರಾಮಗಳಿಗೆ ಬಂದ ದಾಖಲೆ ಇಲ್ಲ.

ನೂರಾರು ಮಂದಿ ಮಲಗಿದಲ್ಲೇ ಜೀವನ ಕಳೆಯುತ್ತಿದ್ದಾರೆ. ಸಾವಿರಾರು ಜನರಿಗೆ ವಿವಿಧ ಕಾಯಿಲೆಗಳು ಅಟಕಾಯಿಸಿದೆ. ಇದಕ್ಕೆಲ್ಲ ಕಾರಣ ಅವೈಜ್ಞಾನಿಕವಾಗಿ ಎಂಡೋವನ್ನು ವೈಮಾನಿಕವಾಗಿ ಸಿಂಪರಣೆ ಮಾಡಿರುವುದು ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (ಕೆಸಿಡಿಸಿ) ತಲೆಯಲ್ಲಿ ಏನಿತ್ತೋ ಏನೋ, ವಿದೇಶಗಳಲ್ಲಿ ಕೀಟನಾಶಕ ಸಿಂಪಡಿಸುವ ರೀತಿಯಲ್ಲಿ ಇಲ್ಲಿಯೂ ಹೆಲಿಕಾಪ್ಟರ್ ಬಳಸಿತು. ಕೀಟನಾಶಕದ ಮಳೆಯನ್ನೇ ಸುರಿಸಿತು. ಪ್ಲಾಂಟೇಷನ್ ಅಕ್ಕಪಕ್ಕ ಮನೆಗಳಿರುತ್ತವೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿತು.

ಎಂಡೋ ಸಿಂಪರಣೆ ಮಾಡುವಾಗ ಖುದ್ದು ಹಳ್ಳಿಗಳಿಗೆ ಹೋಗಿ ಹೀಗೊಂದು ಕೆಲಸ ಮಾಡುತ್ತಿದ್ದೇವೆ ಜಾಗೃತಿಯಲ್ಲಿರಿ ಎನ್ನುವ ಮಾತನ್ನು ಹೇಳಲಿಲ್ಲ. ಬದಲಾಗಿ ಲೋಕಲ್ ಪತ್ರಿಕೆಗಳಲ್ಲಿ ಪುಟ್ಟ ಜಾಹೀರಾತು ನೀಡಿತು. ಈ ಭಾಗದಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಅಲ್ಲದೇ ಪತ್ರಿಕೆಗಳ ಲಭ್ಯತೆಯು ಅಷ್ಟಕಷ್ಟೆ. ಈ ಜಾಹೀರಾತನ್ನು ನೀಡಿದ್ದು ಕೇವಲ ಮೂರು ವರ್ಷ ಎನ್ನುವುದು ಮಾಹಿತಿ ಹಕ್ಕಿನ ಆಧಾರದಲ್ಲಿ ಪಡೆದ ದಾಖಲೆಗಳಿಂದ ಗೊತ್ತಾಗಿದೆ. ಎರಡು ದಶಕಗಳ ಕಾಲ ಕೆಸಿಡಿಸಿ ಮಾಡಿದ ವೈಮಾನಿಕ ಸಿಂಪರಣೆಯಿಂದ ಆದ ಬಾನಗಡಿ ಮೂರು ತಲೆಮಾರಿನವರು ನೆನಪಿನಲ್ಲಿಡಬಹುದಂಥದ್ದು. ಇನ್ನು, ಹಲವಾರು ಮಂದಿ ಹಾಸಿಗೆಯಲ್ಲೇ ಇರುವಂತೆ ಮಾಡಿದ ಕೆಸಿಡಿಸಿಯ ಮೇಲೆ ಈವರೆಗೂ ಯಾರೂ ಒಂದೇ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಕೋರ್ಟ್್ಗೆ ಸಲ್ಲಿಕೆಯಾಗಲಿಲ್ಲ. ಆ ಹೋರಾಟ, ಈ ಹೋರಾಟ ಮಾಡುವ ಸಂಘಟನೆಗಳು ನಮ್ಮಲ್ಲಿ ಇವೆ. ಆದರೆ ಈ ಯಾವ ಸಂಘಟನೆಗಳಿಗೂ ಇಲ್ಲಿನ ಸಮಸ್ಯೆ ಇನ್ನು ಕಾಣದಿರುವುದು ಸೋಜಿಗದ ವಿಷಯ.

ಇವೆಲ್ಲಕ್ಕಿಂತ ಮುಖ್ಯ ಸಂಗತಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪ್ರಮುಖರು ಆಡಿದ ಮಾತು. ಎಂಡೋದಿಂದ ಮಾನವನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಕೊಡಿ ಎಂದು ಕೇಳಿದಾಗ, ತನಗೆ ಮೂರು ವರ್ಷದ ಕಾಲಾವಕಾಶ ಬೇಕು ಎಂದಿದೆ. ಆದರೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ 2005ರಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಪ್ರತಾಪ್ ಕುಮಾರ್ ಅವರು 2003 ರಿಂದ 2005ರವರೆಗೆ ಅಧ್ಯಯನ ನಡೆಸಿ ಐಸಿಎಂಆರ್್ಗೆ ವರದಿ ಸಲ್ಲಿಸಿತ್ತು. ಈ ಅಧ್ಯಯನ ವರದಿ ತಯಾರಿಸಲು ಸಾರ್ವಜನಿಕರ ಅಂದರೆ ತೆರಿಗೆ ಹಣವೇ ಅನುದಾನವಾಗಿ ಬಳಕೆಯಾಗಿದ್ದು. ಇದರ ಮೊತ್ತ ಸುಮಾರು 8 ಲಕ್ಷ ರುಪಾಯಿ.

ಅಲ್ಲ, ಐಸಿಎಂಆರ್್ನಂಥ ಸಂಸ್ಥೆಗೆ ತಾವು ತಯಾರಿಸಿಟ್ಟುಕೊಂಡ ಅಧ್ಯಯನ ಇರುವುದೇ ಗೊತ್ತಿರಲಿಲ್ಲವೇ? ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಐಸಿಎಂಆರ್್ನವರು ಪುನಃ ಮಣಿಪಾಲ ಮೆಡಿಕಲ್ ಕಾಲೇಜಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡು ಅಧ್ಯಯನ ವರದಿ ತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಎಂಡೋನಿಂದ ಪುರುಷತ್ವವೇ ನಾಶವಾಗುತ್ತದೆ ಮತ್ತು ಹುಟ್ಟುವ ಮಕ್ಕಳು ಸರಿಯಾಗಿ ಹುಟ್ಟುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ. ಇಂಥ ಗಂಭೀರ ಸಮಸ್ಯೆ ಇರುವುದು ಐಸಿಎಂಆರ್ ಅವರ ಗಮನಕ್ಕೆ ಬಂದಿಲ್ಲವೇ? ಬಂದಿದ್ದರೆ ಅಂದೇ ಅಂದರೆ ಆರು ವರ್ಷದ ಕೆಳಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿತ್ತು. ಯಾವುದಾದರೂ ಮಾಧ್ಯಮದ ಮೂಲಕ ತಿಳಿಸಬೇಕಿತ್ತು. ಆ ಕೆಲಸವನ್ನು ಮಾಡದೆ ಅಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ. ಇದು ಕಾನೂನು ಉಲ್ಲಂಘನೆ. ಮಾನವನ ಜೀವನದ ಮೇಲೆ ಆಟವಾಡುವ ಕೆಲಸವನ್ನು ಐಸಿಎಂಆರ್ ಮಾಡಿದೆ.

ಇದನ್ನೆಲ್ಲ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗಮನಿಸುತ್ತಿದ್ದಾರೆಯೇ?

ಇವರು ಗಮನಿಸಿದರೆಷ್ಟು, ಬಿಟ್ಟರೆಷ್ಟು... ಕ್ರಿಕೆಟ್ ಟೀಮ್ ಕಟ್ಟುವುದರಲ್ಲೇ ಸದಾ ಬ್ಯುಸಿಯಾಗಿರುತ್ತಾರೆ. ಇವರಿಗೆ ಜನಸಾಮಾನ್ಯರ ಸಮಸ್ಯೆಯ ಚಿಂತೆ ಕಾಡುವುದಿಲ್ಲವೇ? ಇಷ್ಟೆಲ್ಲ ಅವಾಂತರ ಮಾಡಿದ ಎಂಡೋ ಬೇಕು ಎನ್ನುವುದಾಗಿ ಇವರು ಹೇಳುತ್ತಾರೆ. ಇದರ ಹಿಂದಿನ ಸತ್ಯವೇನು?

ರಾಜಕೀಯ ವ್ಯಕ್ತಿಗಳು, ಕಂಪನಿಯವರ ಮೇಲಾಟದಲ್ಲಿ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

-ನಾಗರಾಜ ಮತ್ತಿಗಾರ

FEEDJIT Live Traffic Feed