Tuesday, July 28, 2009

ಎದ್ದೇಳು ಮಂಜುನಾಥ ನೋಡು






ಅಪರೂಪಕ್ಕೆ ಕನ್ನಡದಲ್ಲಿ ಒಂದು ಒಳ್ಳೆಯ ಸಿನೆಮಾ ತೆರೆ ಕಂಡಿದೆ. ಚಿತ್ರದ ಹೆಸರು ಎದ್ದೇಳು ಮಂಜುನಾಥ. ನಿರ್ದೇಶಕ ಗುರುಪ್ರಸಾದ. ಕನ್ನಡಕ್ಕೆ ಸಿಕ್ಕಿದ ಒಳ್ಳೆಯ ದೃಷ್ಟಿಕೋನ ಇರುವ ಫಿಲ್ಮ್‌ ಮೇಕರ್‌ ಎನ್ನುವುದರಲ್ಲಿ ಅನುಮಾನವಿಲ್ಲ. ಚಿತ್ರದ ನಾಯಕ ಜಗ್ಗೇಶ್‌. ಇವರ ಹಿಂದಿನ ಚಿತ್ರವನ್ನು ನೆನಪಿಸಿಕೊಂಡು ಈ ಚಿತ್ರ ನೋಡಲು ಹೋದರೆ ನಿರಾಶೆಯಾಗುವುದು ಖಂಡಿತ.
ಹೀಗೂ ಒಂದು ಚಿತ್ರವನ್ನು ಮಾಡಬಹುದು ಎನ್ನುವುದಕ್ಕೆ ಈ ಚಿತ್ರ ಒಂದು ಉತ್ತಮ ಉದಾಹರಣೆ.

ಈ ಚಿತ್ರದಲ್ಲಿ ಜಗ್ಗೇಶ್‌ ಒಬ್ಬ ಶತ ಸೋಮಾರಿ, ಪ್ಲಸ್‌ ಕುಡುಕ. ಇಂತಹ ವ್ಯಕ್ತಿ ಮನೆಯಲ್ಲಿದ್ದರೆ ಏನೆಲ್ಲಾ ಭಾನಗಡಿ ಆಗಬಹುದು ಎನ್ನುವುದು ತಿಳಿಯುತ್ತದೆ. ಅಷ್ಟೇ ಅಲ್ಲ, ನಮ್ಮ ಜೀವನದಲ್ಲಿ ನಡೆಯುವ ಕೆಲವು ಸತ್ಯಗಳು ಇಲ್ಲಿ ಅನಾವರಣಗೊಳ್ಳುತ್ತ ಹೋಗುತ್ತವೆ.
ಚಿತ್ರದ ಬಗ್ಗೆ ಹೇಳಬೇಕಾದರೆ ಅದರ ನಾಲ್ಕಾರು ಡೈಲಾಗ್‌ಗಳನ್ನು ಹೇಳಬೇಕು.
1. ತಬ್ಲಾ ನಾಣಿ ಈ ಚಿತ್ರದಲ್ಲಿ ಕುಡುಕ. ಅವನನ್ನು ಒಂದು ಲಾಡ್ಜ್‌ನವರು ಒಂದು ಕೋಣೆಯಲ್ಲಿ ಕೂಡಿಹಾಕುತ್ತಾರೆ. ಅಲ್ಲಿಯೇ ಮಂಜುನಾಥನನ್ನು ಕೂಡಿ ಹಾಕಿರುತ್ತಾರೆ. ನಾಣಿ ಕೋಣೆಗೆ ಎಂಟ್ರಿ ಆದಾಕ್ಷಣ ನಮಸ್ಕಾರ ಯಾರೋ ಇದ್ಹಾಂಗಿದೆ ಎನ್ನುತ್ತಾನೆ. ಜಗ್ಗೇಶ್‌ ನಿಮಗೆ ಹೇಗೆ ತಿಳಿಯಿತು ಎಂದು ಕೇಳುತ್ತಾನೆ. ಇಲ್ಲಿ ನಿಮಗೆ ಕಕ್ಕ ಮಾಡಿದ ಮೇಲೆ ನೀರು ಹಾಕುವ ಅಭ್ಯಾಸ ಇಲ್ಲ ಅಂತ ಕಾಣುತ್ತೆ. ವಾಸನೆ ಬರುತ್ತಾ ಇದೆ ಎನ್ನುತ್ತಾನೆ. (ಮಂಜುನಾಥ ಸೋಮಾರಿ ಎನ್ನುವುದನ್ನು ಒಂದೇ ಮಾತಿನಲ್ಲಿ ತಿಳಿಸಿ ಕೊಡುತ್ತಾರೆ ನಿರ್ದೇಶಕರು)
2. ಮಂಜುನಾಥ: ನಾಣಿ ಅವರೇ ನಿಮಗೆ ಮದುವೆ ಆಗಬೇಕು ಎನ್ನುವ ಆಸೆ ಇಲ್ಲವೋ?
ನಾಣಿ: ಯಾರಾದ್ರೂ ಒಂದು ಲೋಟ ಹಾಲಿಗಾಗಿ ಹಸು ಸಾಕುತ್ತಾರಾ?
3. ಗಾಂಧಿನಗರದಲ್ಲಿ ಸಿನೆಮಾ ಮಾಡುವವರ ಬಗ್ಗೆ ನಾಣಿ ಮಾತನಾಡುತ್ತಾನೆ... ಯಾರೋ ಅಂದ್ರು ಕುರುಡರು ಯಾರೂಇಲ್ಲಿಯವರೆಗೆ ಸಿನೆಮಾ ಮಾಡಲಿಲ್ಲ. ನೀವು ಮಾಡಿ ಅಂತ. ನನಗೂ ಹೌದು ಅನ್ನಿಸಿತು. ಸ್ಕ್ರಿಪ್ಟ್‌ ತಯಾರಾಗಿದೆ. ನಾವು (ಕುರುಡರು) ಸಿನೆಮಾ ಮಾಡಿದ್ರೆ ನಿರ್ಮಾಪಕರು ಬೇರೆ ಭಾಷೆಯ ಸಿನೆಮಾದ ಸಿ.ಡಿ. ತಂದು ಕಾಪಿಮಾಡಿ ಅನ್ನೋಕಾಗಲ್ಲ. ಆ ಸೀನ್‌ ಕದೀರಿ, ಈ ಸೀನ್‌ ಕದೀರಿ ಅನ್ನಕ್ಕಾಗಲ್ಲ. ಬುದ್ಧಿವಂತರು ರಿಮೇಕ್‌ ಮಾಡಬಾರದ್ರಿ, ದಡ್ಡರು ಸ್ವಮೇಕ್‌ ಮಾಡಕೆ ಹೋಗಬಾರದು ಏನಂತೀರಾ?
4.ಮಂಜುನಾಥ ಸುಧಾರಿಸಬಹುದೆಂದು ಮದುವೆ ಮಾಡುತ್ತಾರೆ. ಆಗ ಅವನ ಮಾವ ಹೇಳುವ ಮಾತು. ನೀವು ಹಸಿದ ಹುಲಿ ಇದ್ಹಾಗೆ ಇದ್ದಿರಾ... ನನ್ನ ಮಗಳು ಚಿಗರೆ ಮರಿ ತರಹ. ನೋಡ್ಕೊಂಡು ಮಾಡಿ ...... ಸಂಸಾರನ ಅನ್ನುತ್ತಾನೆ .
ಅದಕ್ಕೆ ಮಂಜುನಾಥ ನಿಮ್ಮ ಮಗಳು ಹಸಿದ ಚಿಗರೆ ಮರನೇ ನಿಮ್ಮ ಹತ್ತಿರ ಹೇಳಿರಲ್ಲ ಅಷ್ಟೇ ಅನ್ನುತ್ತಾನೆ.
5. ಮಂಜುನಾಥನ ಮನೆಗೆ ನಾಣಿಯನ್ನು ಕರೆದು ಕೋಡು ಬರುತ್ತಾನೆ. ಬರುವಾಗ ಇಬ್ಬರು ಬಾರ್‌ಗೆ ಹೋಗುತ್ತಾರೆ. ನಾಣಿ ನಾನು ಬಿಯರ್‌ ಮಾತ್ರ ಕುಡಿತೀನಿ ಎಂದು ಒಂದು ದರ್ಶನ್‌ (ನಾಕೌಟ್‌ ಸ್ಟ್ರಾಂಗ್‌) ಮತ್ತೊಂದು ಉಪೇಂದ್ರ (ಯುಬಿ ಪಿಂಟ್‌) ಕೊಡು ಎನ್ನುತ್ತಾನೆ.
ಎದ್ದೇಳು ಮಂಜುನಾಥ ಮತ್ತೆ ಒತ್ತ ಹೇಳುತ್ತೇನೆ ಕನ್ನಡದಲ್ಲಿ ಇತ್ತೀಚೆಗೆ ಬಂದ ಒಂದು ಅಪರೂಪದ ಚಿತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗುರುಪ್ರಸಾದ್‌ ಮಾತ್ರ ಇಂತಹ ಸಿನೆಮಾ ತೆಗೆಯಲು ಸಾಧ್ಯವೇ ಹೊರತು ಬೇರೆಯವರಿಗೆ ಈ ಸ್ಕ್ರಿಪ್ಟ್‌ ಕೊಟ್ಟರೆ ತುಳಸಿ ನೀರು ಬಿಡಲಿಕ್ಕೆ ಅಡ್ಡಿ ಇಲ್ಲ. ಟಾಕೀಸ್‌ಗೆ ಹೋಗಿ ಒಮ್ಮೆ ಈ ಸಿನೆಮಾ ನೋಡಿ ಎಂಜಾಯ್‌ ಮಾಡಿ.

No comments:

FEEDJIT Live Traffic Feed