Friday, October 31, 2008
ಬಂಗಾರ ನಾಯ್ಕರ ಕೌರವನೂ ಸಿಐಡಿ ನಾಯಿಯೂ
ಹಳ್ಳಿ ಆಟದಲ್ಲಿ ಆಟದ ಜೊತೆ ಅಪಭ್ರಂಶತೆ ಹೆಚ್ಚು ಕೂಡಿರುವುದೇ ಇದಕ್ಕೆ ಕಾರಣವಾಗಿತ್ತೋ ಏನೋ. ಎಪ್ರಿಲ್, ಮೇ ತಿಂಗಳು ಹಳ್ಳಿ ಆಟಗಳಿಗೆ ಸುಗ್ಗಿ ಕಾಲ. ಸಮಾರಾಧನೆ, ಶನಿಕತೆ, ಊರಿನ ವಾರ್ಷಿಕೋತ್ಸವ ಏನೇ ಆದರೂ ಆಟ ಮಾತ್ರ ಗ್ಯಾರಂಟಿ. ಇದರಲ್ಲಿ ಮುಖ್ಯಪಾತ್ರಧಾರಿಯಾಗಿ ಸ್ವಲ್ಪ ಹೆಸರಿರುವ ಕಲಾವಿದ ಭಾಗವಹಿಸಿದರೇ ಊಳಿದ ಪಾತ್ರಗಳಿಗೆ ಹಳ್ಳಿಯ ಹೈದರೆ ಇರುತ್ತಿದ್ದರು.
ನಮ್ಮೂರ ಹತ್ತಿರ ಹಳಿಯಾಳ ಎನ್ನುವ ಊರಿದೆ. ಆ ಊರಿನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿಯೊಬ್ಬರಿದ್ದಾರೆ. ಅವರು ಆ ಊರಿನ ಮಾರಿ ದೇವಸ್ಥಾನದ ಪೂಜಾರಿಯು ಹೌದು. ಇವರಿಗೆ ಯಕ್ಷಗಾನದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾರಧಾನೆಯಲ್ಲಿ ಒಂದು ಯಕ್ಷಗಾನ ಏರ್ಪಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರವನ್ನು ಮಾಡುತ್ತಿದ್ದರು. ಸಾಮಾನ್ಯವಾಗಿ ಪ್ರತಿವರ್ಷವೂ ಗದಾಯುದ್ಧ ಪ್ರಸಂಗವೇ ಇರುತ್ತಿತ್ತು. ಕಾರಣವೆಂದರೆ ಇವರಿಗೆ ಕೌರವನ ಪಾತ್ರ ಮಾಡುವುದರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನುತ್ತಿದ್ದರು.
ಇವರ ಸಯೋಂಜನೆಯಲ್ಲಿ ಆದ ಯಕ್ಷಗಾನದಲ್ಲಿ ಇವರ ಸಮಪ್ರಾಯದವರೆ ಪಾತ್ರವನ್ನು ಮಾಡಬೇಕಿತ್ತು. ನನ್ನ ದೊಡ್ಡಪ್ಪನಿಗೂ ಒಂದು ಪಾತ್ರ ಗ್ಯಾರಂಟಿ. ಮತ್ತಿಗಾರ ಶಣ್ಣ ಹೆಗಡೆ( ದೊಡ್ಡಪ್ಪ)ರು ಸಂಜಯನ ಪಾತ್ರವನ್ನು, ಹೊಸಗದ್ದೆ ಪಿ.ವಿ ಹೆಗಡೆರು ಭೀಮನ ಪಾತ್ರವನ್ನು ಮಾಡಲೇಬೇಕು. ದಂಟಕಲ್ ಸತೀಶ್ ಹೆಗಡೆಯ ಭಾಗವತಿಕೆ ಇಲ್ಲದಿದ್ದರೆ ಬಂಗಾರ ನಾಯ್ಕರ ಪಾತ್ರ ಹೊರ ಬೀಳುತ್ತಿರಲಿಲ್ಲ.
ಆಟ ಪ್ರಾರಂಭದಿಂದಲೇ ಅಪಭ್ರಂಶತೆಯು ಪ್ರಾರಂಭ. `ಕುರುರಾಯ ಅದನೆಲ್ಲ ಕಂಡು ಸಂತಾಪದಿ ತನ್ನೇಯ ಭಾಗ್ಯವೆನುತ' ಎನ್ನುವ ಪದ್ಯದೊಂದಿಗೆ ಕೌರವನ ಪ್ರವೇಶ ಎಲ್ಲಾ ಯಕ್ಷಗಾನದಲ್ಲೂ ಆಗುತ್ತದೆ. ಆದರೆ ಬಂಗಾರ್ಯ ಅವರ ಕೌರವನ ಪಾತ್ರ ಪ್ರವೇಶವಾಗುವುದೇ `ಕುರುರಾಯ ಅದನೆಲ್ಲ ಕಂಡು ಸಂತೋಷದಿ' ಎಂದು. ಅದಕ್ಕೆ ಕಾರಣವು ಉಂಟು`ತೊಂತ್ತೊಂಬತ್ತು ಜನ ತಮ್ಮಂದಿರನ್ನು ಪಾಮಡವರು ಕೊಂದರು ತನ್ನನ್ನು ಮಾತ್ರ ಕೊಲ್ಲಲಿಕ್ಕೆ ಆಗಲಿಲ್ಲವಲ್ಲ ಎನ್ನು ಸಂತೋಷ. ಪ್ರೇಕ್ಷಕರು ಚಪ್ಪಾಳೆ ಹೊಡೆದಂತೆ ಕೌರವನ ಕುಣಿತವು ಜೋರಾಗಿ ಸಾಗುತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ` ಏನಾ ಕಪಟಿ ನೀನು ವಿದುರನ ಮನೆ ಕಡವಾರದಲೆಲ್ಲ ಹಾಲು ಹರ್ಸಿಯಂತೆ ಹೌದನಾ. ಎಂದು ತನ್ನ ಲೋಕಲ್ ಲಾಂಗ್ವೇಜ್ನಲ್ಲಿಯೇ ಅರ್ತವನ್ನು ಹೇಳುವುದು ವಿಶೇಷ. ನೀರಿನಲ್ಲಿ ಅಡಗಿರುವ ಕೌರವನನ್ನು `ಛೀಂದ್ರಪಕುಲ ಕುನ್ನಿ' ಎಂದು ಬೈದು ಕರೆದಾಗ ನೀರಿಂದ ಮೇಲೆದ್ದು ಬಂದ ಕೌರವ ತಡಮಾಡದೇ `ನಾನು ಛೀಂದ್ರಪಕುಲ ಕುನ್ನಿಯಾದರೆ ನೀನೇನು ಸಿಐಡಿ ನಾಯನಾ' ಎಂದು ಇಂಗ್ಲಿಷ್ ಬಳಕೆ ಮಾಡಿ ಯಕ್ಷಗಾನದ ಕೊಲೆಯಾಗುತ್ತದೆ. ಆದರೆ ಇದು ಹಳ್ಳಿ ಆಟವೆಂಬ ವಿನಾಯತಿ ಇದಕ್ಕಿರುತ್ತದೆ.
ಹಳ್ಳಿ ಆಟದ ಬಗ್ಗೆ ಯಥೇಚ್ಛ ಬರೆಯಬಹುದು. ಮುಂದಿನ ಕಂತಿನಲ್ಲಿ ಮತ್ತಷ್ಟು ಸೊಗಸಾದ ಹಳ್ಳಿಗರ ಅರ್ಥ ವೈಭವದ ಬಗ್ಗೆ ಹೇಳುತ್ತೇನೆ.
Saturday, October 25, 2008
ಮತಾಂತರ ಮಣ್ಣೆರಚಾಟ

Thursday, October 23, 2008
ಊರಿಗೊಂದು ಕಟ್ಟೆ: ಅಲ್ಲೊಂದಿಷ್ಟು ಕತೆ

ಊರೆಂದರೆ ಅಲ್ಲೊಂದು ಅರಳಿ ಕಟ್ಟೆ ಇರುವುದು ಸಾಮಾನ್ಯ. ಇದು ಹತ್ತಾರು ಹಳ್ಳಿಯವರು ಸಂಜೆ ಹೊತ್ತು ಕಾಲ ಕಳೆಯುವ ತಾಣ. ಇಂತಹ ಸ್ಥಳ ಇಲ್ಲದೆ ಇರುವ ಊರು ಅದು ಊರೇ ಅಲ್ಲ ಅನ್ನಬಹುದು.
ಹತ್ತಾರು ವರ್ಷಗಳ ಹಿಂದೆ ಈ `ಕಟ್ಟೆಕತೆ' ಬಹುತೇಕ ಊರುಗಳಲ್ಲಿ ಚಾಲ್ತಿಯಲ್ಲತ್ತು. ಇಂದು ಬಹಳಷ್ಟು ಊರುಗಳಲ್ಲಿ ಇದು ಬರಕಸ್ತಾಗಿದೆ. ಇದಕ್ಕೆ ಕಾರಣವು ಇದೆ. ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿರುವುದು. ಅಂದಿನ ಯುವಕರೆಲ್ಲ ಇಂದು ಮುದುಕರಾಗಿದ್ದಾರೆ. ಹತ್ತು ವರ್ಷದ ಹಿಂದೆ ಹಳ್ಳಿಗಳಲ್ಲಿ ಇದ್ದ ಕಟ್ಟಯ ಕಳೆ ಇಂದು ಕುಂದಿದೆ.
ಕಟ್ಟೆ, ಪ್ರಪಂಚದ ಎಲ್ಲಾ ವಿಷಯಗಳನ್ನು ವಿಸ್ತ್ರತವಾಗಿ, ಕುಲಂಕೂಷವಾಗಿ, ವಿಮರ್ಶಾತ್ಮಕವಾಗಿ, ವ್ಯಂಗ್ಯವಾಗಿ ಚರ್ಚೆ ಮಾಡುವ, ಹೊತ್ತು ಹೋಗದೆ, ಮನೆಯಲ್ಲಿ ಕೆಲಸ ಮಾಡದೆ ಇರುವವರೆ ಹೆಚ್ಚು ಮಂದಿ ಇರುವ ಸ್ಥಳ ಎಂದು ವ್ಯಾಖ್ಯಾನಿಸ ಬಹುದು.
ಹಬ್ಬ ಹರಿದಿನಗಳು ಬಂದರೆ ಕಟ್ಟೆಗೊಂದಷ್ಟು ಮೆರಗು ಬರುತ್ತದೆ. ಊರಿಂದ ಪರ ಊರಿಗೆ ಹೋದ ವಿದ್ಯಾವಂತ ದಡ್ಡರೆಲ್ಲ ಅಲ್ಲಿ ಸೇರುತ್ತಾರೆ. ಊರಿಗೆ ಬಂದವ ಕಟ್ಟೆಗೆ ಬರದೆ ಇರುತ್ತಾನೆಯೇ? ಬಂದೆ ಬರುತ್ತಾನೆ. ಕಟ್ಟೆಯ ಆಕರ್ಷಣೆಯೇ ಅಂದದ್ದು. ಸುತ್ತ ಹತ್ತು ಊರುಗಳ ಗಾಸಿಪ್ ಗೊತ್ತಾಗುವುದು ಅಲ್ಲಿಯೇ.
ಕಟ್ಟೆ ಪಂಚಾಯ್ತಿಯಲ್ಲಿ ಬರುವ ಕತೆಗಳ ಭಿನ್ನತೆ ಹೀಗಿರುತ್ತದೆ ಎನ್ನಬಹುದು. ಜಾರ್ಜ ಬುಷ್ ಏನೂ ಪ್ರಯೋಜನಕ್ಕೆ ಬರದೆ ಇರುವವನು. ಕ್ಲಿಂಟನ್ ಆದ್ರೆ ಮನೆಯಲ್ಲಿ ಹೆಂಡ್ತಿ ಇದ್ರು ಮೋನಿಕಾ ಗೀನಿಕಾ ಅಂತ ಮಜಾ ಮಾಡಿ ಕೊಂಡು ಇದ್ದ. ಇವನಿಗೆ ಯಾವಾಗಲೂ ಮತ್ತೊಂದು ದೇಶಕ್ಕೆ ತಾಪತ್ರಯ ಮಾಡುವ ಚಿಂತೆಯಲ್ಲಿಯೇ ಇರುತ್ತಾನೆ. ರಸಿಕತನ ಇಲ್ಲದೆ ಇರುವ ಮುಂಡೆದು. ಅದೇ ನಮ್ಮ ಪಾಟೀಲ್ರು ಅದೇ ಜೆ. ಹೆಚ್. ಪಾಟೀಲ್ರು ಹೆಣ್ಣು, ಹೆಂಡ ಇದ್ರೆ ಸಾಕಾಗಿತ್ತು ದೇಶ ಏನೇ ಆದ್ರು ತಮ್ಮ ರಸಿಕತನ ಬಿಟ್ಟವರಲ್ಲ.
ಅಲ್ಲ ಕಣಲೇ ನಮ್ಮೂರು ಎಂಎಲ್ಎ ಸಾಧಾರಣದವನಾ ಬೆಂಗಳೂರಲ್ಲಿ ಒಂದು ಹೆಣ್ಣು ಇಟ್ಟು ಕೊಂಡಿದಾನಂತೆ?
ಅದೆಲ್ಲಾ ಸಾಯ್ಲಿ ನಮ್ಮ ಪಂಚಾಯ್ತಿ ಅಧ್ಯಕ್ಷನಿಗೆ ಒಂದು ಸ್ಟೆಪ್ಣಿ ಇಟ್ಟು ಕೊಂಡಿದ್ದಾನೆ. ಕ್ಲಿಂಟನ್ ಒಂದು ನಾಲ್ಕು ಜನರನ್ನು ಇಟ್ಕೊಂಡರನು ಹೆಚ್ಚಲ್ಲ.
ಅಮೆರಿಕಾದಿಂದ ಪ್ರಾರಂಭವಾದ ಗಾಸಿಪ್ ಕತೆ ಪಂಚಾಯ್ತಿ ಅಧ್ಯಕ್ಷನವರೆಗೆ ಬರುತ್ತದೆ. ಅಲ್ಲಿಂದ ಕತೆಯ ಹಂದರ ಇಂದಿನ ವಿದ್ಯಮಾನಕ್ಕೆ ಬರುತ್ತದೆ.
ನಿನ್ನೆ ಯಕ್ಷಗಾನಕ್ಕೆ ನೀನು ಹೋಗಿದ್ಯಾ? ಹಾಳಬಿದ್ಹೊಗ್ಲಿ ಕಣ್ಣಿದೆಂತ ಸರ್ಕಸ್ಸು. ಚಿಟ್ಟಾಣಿ ಮೀರಸಲೆ ಯಾರಿಗೂ ಸಾಧ್ಯ ಇಲ್ಲ. ಆದರೆ ಸಾತ್ವಿಕ ಪಾತ್ರಕ್ಕೆ ಶಂಭುನೇ ಸೈ. ನಿನಾಸಂ ನಾಟಕ ಇದೆಯಂತೆ? ಯಾರಿಗೂ ಅರ್ಥ ಆಗದ ನಾಟಕಕ್ಕಿಂತ ಹಳ್ಳಿ ನಾಟಕನೇ ಅಡ್ಡಲ್ಲಾ.
ವಿಷಯ ಕೃಷಿಕಡೆ ಹೋರಳುತ್ತದೆ, ಅಲ್ಲಿಂದ ಕಾಲೇಜು ಹೋಗುವ ಹೆಣ್ಣು ಮಕ್ಕಳಿಂದ ಪ್ರಾರಂಭಗೊಂಡು, ಯಾವ ಹುಡುಗರ ಹಿಂದೆ ಅವಳಿದ್ದಾಳೆ ಅಥವಾ ಅವಳ ಹಿಂದೆ ಯಾವ ಜಾತಿಯ ಹುಡುಗ ಇದ್ದಾನೆ ಎನ್ನುವ ಎನ್ಕ್ವಾಯಿರಿ ನಡೆದು, ಸಾಬ್ರ ಪೈಕಿಯವನು ಇದ್ರೆ ಅವನಿಗೆ ನಾಲ್ಕು ತದಕಬೇಕು ಎನ್ನುವಲ್ಲಿಗೆ ಒಂದು ಹಂತ ಮಾತುಕತೆ ನಿಲ್ಲುತ್ತದೆ. ಅಲ್ಲಿಂದ ಒಬ್ಬೊಬ್ಬರೆ ಮನೆಕಡೆ ದಾರಿ ಹಿಡಿಯುತ್ತಾರೆ.
ಮರುದಿನ ಯಾಥಾ ಪ್ರಕಾರ ಸುದ್ದಿ, ಕತೆ, ಗಾಸಿಪ್. ಆದರೆ ಈ ಕಟ್ಟೆಯ ಆಕರ್ಷಣೆ ಮಾತ್ರ ಯಾರನ್ನು ಬಿಡುವುದಿಲ್ಲ. ಊರಿನ ಏಲ್ಲಾ ರಾಜಿಕೀಯ ಕ್ಷೇತ್ರ ಇದು. ಕಟ್ಟೆ ಸಂಸ್ಕೃತಿಯನ್ನು ಕಳೆದು ಕೊಂಡರೆ ಹಳ್ಳಿಯ ಸಂಸ್ಕೃತಿಯೇ ಕಳೆದಂತೆ ಎನ್ನಬಹುದು.
Monday, September 29, 2008
ಒಂದೇ ರಾತ್ರಿ, ಒಂದೇ ಪ್ರಸಂಗ, ಮೂರು ಪ್ರದರ್ಶನ




ಯಕ್ಷಗಾನದಲ್ಲಿ ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಪೌರಾಣಿಕ ಪ್ರಸಂಗಗಳಿಗಿಂತ ನೂತನ ಪ್ರಸಂಗಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಆದರೆ ಪ್ರದರ್ಶನದ ವಿಧಾನದಲ್ಲಿ ಹೊಸತನವಿದ್ದರೆ ಪೌರಾಣಿಕ ಆಖ್ಯಾನಗಳಿಗೂ ಜನ ಬರುತ್ತಾರೆ ಎನ್ನುವುದಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನಕ್ಕೆ ಬಂದ ಜನಸ್ತೋಮವೇ ಸಾಕ್ಷಿ.
ಆ ದಿನ ಅಲ್ಲಿ `ಕಾರ್ತವೀರ್ಯಾರ್ಜುನ' ಆಖ್ಯಾನ ಮೂರು ಬಾರಿ ಪ್ರದರ್ಶನ ಕಂಡಿತು. ಒಂದೇ ರಾತ್ರಿಯಲ್ಲಿ ಬೇರೆ ಬೇರೆ ಕಲಾವಿದರು ಒಂದೇ ಆಖ್ಯಾನ ಪ್ರದರ್ಶಿಸುವ ಪ್ರಯೋಗ ಇದಾಗಿತ್ತು. ಹಿರಿ-ಕಿರಿಯ ಕಲಾವಿದರ ಕೂಡುವಿಕೆಯಲ್ಲಿ ಈ ಯಕ್ಷಗಾನವನ್ನು ಸಂಯೋಜಿಸಲಾಗಿತ್ತು. ಮೊದಲ ಪ್ರದರ್ಶನದಲ್ಲಿ ಸುಬ್ರಮಣ್ಯ ಚಿಟ್ಟಾಣಿ ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆ ಕಾರ್ತವೀರ್ಯನ ಪಾತ್ರವನ್ನು ನಿರ್ವಹಿಸಿದರು. ಚಿಟ್ಟಾಣಿ ಅವರು ತಮ್ಮ ವಯಸ್ಸನ್ನು ಮರೆತು `ವರವಿಲೋಚನ ಪುತ್ರನೂ ಸೆರೆಯೊಳಿರೆ' ಮತ್ತು `ಸಿಕ್ಕಿದೆಯ ಏಲೇ ದೈತ್ಯ ರಾಯ' ಪದ್ಯಕ್ಕೆ ಮೈಮರೆತು ಕುಣಿದರು. ಇವರೇ 74ರ ಪ್ರಾಯದ ಚಿಟ್ಟಾಣಿಯೋ ಎನ್ನುವ ಹಾಗೇ ಅಭಿನಯ ನೀಡಿದರು. ಇವರು ಎದುರು ರಾವಣನಾಗಿ ಬಳ್ಕೂರು ಕೃಷ್ಣಯಾಜಿ `ಖಳಕುಲೇಂದ್ರ ನಗುತ' ಎಂಬ ಪ್ರವೇಶ ಪದ್ಯದಲ್ಲಿಯೇ ಸಾಕ್ಷಾತ್ ರಾವಣ ಬಂದನೋ ಎಂಬ ಭಾವ ಮೂಡಿಸಿದರು.
ಕಾರ್ತವೀರ್ಯನ ದೂತನಾಗಿ ಹಳ್ಳಾಡಿ ಜಯರಾಂ ಶೆಟ್ಟಿ ಹಾಸ್ಯರಸಾಯನ ಉಣಬಡಿಸಿದರು. ವಿಭೀಷಣನ ಪಾತ್ರ ಮಾಡಿದ ಮಂಕಿ ಈಶ್ವರ ನಾಯ್ಕ ಅವರ ನೃತ್ಯ ಚೆನ್ನಾಗಿದ್ದರೂ ವಿಭೀಷಣನಂತಹ ಮುಂಡಾಸು ವೇಷದ ಗಂಭೀರ ವ್ಯಕ್ತಿತ್ವದ ಪಾತ್ರಕ್ಕೆ ಅದು ಹೆಚ್ಚಾಯಿತೇನೋ ಅನ್ನಿಸಿತು. ಕೊಳಗಿ ಕೇಶವ ಹೆಗಡೆ ಅವರ ಸುಶ್ರಾವ್ಯ ಭಾಗವತಿಕೆ ಪ್ರಸಂಗಕ್ಕೆ ಮತ್ತಷ್ಟು ರಂಗು ತುಂಬಿತು.
ಎರಡನೇ ಕಾರ್ತವೀರ್ಯನಾಗಿ ಬಂದವರು ಕಣ್ಣಿಮನೆ ಗಣಪತಿ ಭಟ್. ಪುಂಡು ವೇಷಕ್ಕೆ ಹೆಸರಾಗಿರುವ ಇವರಿಗೆ ರಾಜವೇಷ ಅಥವಾ ಕಿರೀಟ ವೇಷ ಅಷ್ಟು ಒಪ್ಪುವುದಿಲ್ಲ ಎಂದು ಯಾರಿಗಾದರೂ ಅನಿಸಿದರೆ ತಪ್ಪಲ್ಲ. ಆದರೂ ಅವರು ಕಾರ್ತವೀರ್ಯನ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದರು. ಭಿನ್ನ ಕುಣಿತಕ್ಕೆ ಹೆಸರಾದ ಇವರು `ಸರ್ಕಸ್'ಗಳು ಕಡಿಮೆ ಇದ್ದುದರಿಂದ ಪಾತ್ರ ಹಿತವೆನಿಸಿತು. ಇವರಿಗೆ ರಾವಣನಾಗಿ ಮತ್ತೋರ್ವ ಯುವ ಕಲಾವಿದ ತೋಟಿಮನೆ ಗಣಪತಿ ಹೆಗಡೆ ಅವರು ತಮ್ಮ ಸಾಮರ್ಥ್ಯಕ್ಕೆ ಮೀರಿ ಉತ್ತಮ ಅಭಿನಯ ನೀಡಲು ಪ್ರಯತ್ನಿಸಿದರು. ಆದರೆ ಇವರಿಗಿಂತ ಮೊದಲಿನ ಯಾಜಿ ರಾವಣನನ್ನು ಮರೆಸಲು ಸಾಧ್ಯವಾಗಲಿಲ್ಲ.
ದೂತನಾಗಿ ಉತ್ತಮವಾಗಿ ನಿರ್ವಹಿಸಿದ ಚಪ್ಪರಮನೆ ಶ್ರೀಧರ ಹೆಗಡೆ ಅವರ ಕುಣಿತದಲ್ಲಿ ವೈವಿಧ್ಯ ಇತ್ತು. ಮಾತಿನಲ್ಲಿ ಪಕ್ಕನೇ ನಗು ತರಿಸುವ ಚುರುಕುತನವಿತ್ತು. ರಾಘವೇಂದ್ರ ಮಯ್ಯ ಭಾಗವತಿಕೆ ಹಿತವೆನಿಸಿದರೂ ಪದ್ಯದ ಶಬ್ದಗಳು ಸ್ಪಷ್ಟವಾಗದೇ ಕಿರಿ ಕಿರಿಯೆನಿಸಿತು. ಪರಮೇಶ್ವರ ಬಂಡಾರಿ ಅವರ ಮದ್ದಳೆಯಲ್ಲಿ ಹೊಸತನವಿತ್ತು, ಸಖಿಯಾಗಿ ಶಶಿಕಾಂತ ಶೆಟ್ಟಿ ನೃತ್ಯ, ಮಾತು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಬೆಳಗಿನ ಜಾವದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಸುಂದರ ವೇಷಭೂಷಣ ಮತ್ತು ಸೃಜನಶೀಲ ಮಾತುಗಳ ಕಾರ್ತವೀರ್ಯನಾಗಿ ಗಮನಸೆಳೆದರು. ಪಾತ್ರದ ಚೌಕಟ್ಟಿನೊಳಗೇ ಹೊಸತನ ತುಂಬುವ ಅವರ ಶೈಲಿ ಆಕರ್ಷಕ. `ನೀಲ ಗಗನದೋಳು' ಪದ್ಯಕ್ಕೆ ಹೊಸ ರೀತಿಯಲ್ಲಿ ನೃತ್ಯ ಸಂಯೋಜನೆಯನ್ನು ಮಾಡಿರುವುದು ವಿಶೇಷವಾಗಿತ್ತು. ಹಡಿನಬಾಳು ಶ್ರೀಪಾದ ಹೆಗಡೆ ಅವರ ರಾವಣ, ಗತ್ತು ಮತ್ತು ಮಾತಿನಿಂದ ಜನರನ್ನು ಸೆಳೆಯಿತು. ಕ್ಯಾದಗಿ ಮಹಾಬಲೇಶ್ವರ ಅವರು ಹೊಸ ಪ್ರಸಂಗಗಳ ಹಾಸ್ಯ ಪಾತ್ರ ನಿರ್ವಹಿಸಿ ಜನರನ್ನು ಸೆಳೆಯುವುದರಲ್ಲಿ ನಿಪುಣರು. ಆದರೆ ಇಲ್ಲಿ ಅವರ ಪಾತ್ರ ಪರವಾಗಿಲ್ಲ ಎನ್ನುವಂತಿತ್ತು. ಹೆರಂಜಾಲು ಗೋಪಾಲ ಗಾಣಿಗರ ಭಾಗವತಿಗೆ ಸಾಂಪ್ರದಾಯಿಕ ಶೈಲಿಯಿಂದಾಗಿ ಖುಷಿ ನೀಡಿತು. ರಾತ್ರಿಯಿಂದ ಬೆಳಗಿನವರೆಗೆ ಕೋಟ ಶಿವಾನಂದ ಅವರ ಚಂಡೆ ವಾದನ ಪ್ರತಿಯೊಬ್ಬರ ಕುಣಿತಕ್ಕೂ ಮೆರುಗು ನೀಡಿತು.
ಈ ಪ್ರಯೋಗವೇನೋ ಉತ್ತಮ. ಆದರೆ ಒಂದೇ ಪ್ರಸಂಗವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ನೋಡುವುದು ಪ್ರೇಕ್ಷಕನ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇದೊಂದು ಸ್ಪರ್ಧೆಯ ಉತ್ಸಾಹವನ್ನು ಪ್ರೇಕ್ಷಕರಲ್ಲಿ ಮೂಡಿಸಲು ಸಾಧ್ಯವಾಗದಿದ್ದರೆ ಅದು ಏಕತಾನತೆಯಿಂದ ಬಳಲಬೇಕಾಗುತ್ತದೆ. ಇಲ್ಲದಿದ್ದರೆ 'ಕೇಳಿದ್ದನ್ನೇ ಕೇಳುವ' ದೌರ್ಭಾಗ್ಯ ಪ್ರೇಕ್ಷಕನಾಗುತ್ತದೆ! ಎನ್ನುವುದು ಮೊನ್ನೆಯ ಪ್ರದರ್ಶನದಲ್ಲಿ ಸಾಬೀತಾಯಿತು. ಆದರೂ ಹೊಸ ಪ್ರಸಂಗಗಳ ಭರಾಟೆಯಲ್ಲಿ ಇಂತಹ ಪ್ರಯತ್ನಗಳ ಮೂಲಕ ಪೌರಾಣಿಕ ಪ್ರಸಂಗಗಳನ್ನು ಚಾಲ್ತಿಯಲ್ಲಿಡುವ ಯತ್ನ ಶ್ಲಾಘನೀಯ. ಸಾಲಿಗ್ರಾಮ ಮೇಳದವರ ಜೊತೆ ಹಲವಾರು ಖ್ಯಾತ ನಟರನ್ನು ಒಂದೇ ವೇದಿಕೆಯಲ್ಲಿ ಕುಣಿಸಿದ ಹೆಗ್ಗಾರಳ್ಳಿ ಮನೋಜ್ ಭಟ್ಟರು ಅಭಿನಂದನಾರ್ಹರು.
Saturday, September 27, 2008
ಆಟವೆಂದರೆ ಹಾಗೇ..


ಯಕ್ಷಗಾನ ಅಂದರೇ ಯಾಕೋ ಏನೋ ಹಾಗೆ ಕಾಲುಗಳು ಕುಣಿಯಲಿಕ್ಕೆ ತೊಡಗುತ್ತವೆ. ಸಾಮಾನ್ಯವಾಗಿ ಎಲ್ಲಿ ಯಕ್ಷಗಾನವಾದರೂ ಹೋಗುವ ಹುಮ್ಮಸ್ಸು ಕೆಲ ಕಾಲದ ಹಿಂದೆ ಇತ್ತು. ಊರನ್ನು ಬಿಟ್ಟು ಯಾವಾಗ ಬೆಂಗಳೂರು ಸೇರಿದೆನೋ ಅಂದಿನಿಂದ ಆ ಮಜಾವೇ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಊರಿಗಿಂತ ಹೆಚ್ಚಿಗೆ ಯಕ್ಷಗಾನವಾಗಬಹುದು. ಆದರೆ ಊರಿನಲ್ಲಿ ಆಗುವ ಯಕ್ಷಗಾನದ ಗಮ್ಮತ್ತೆ ಬೇರೆ.
ನಮ್ಮದೊಂದು ಟ್ರುಪು. ಇದರಲ್ಲಿ 18 ವರ್ಷದ ಮಾಣಿಯರಿಂದ ಹಿಡಿದು 60ರ ಪ್ರಾಯದ ಯುವಕರು ಇದ್ದರು. ವಯಸ್ಸಾದವರು ಹಳೆ ಹುಲಿಗಳು. ಯಾವುದೇ ಯಕ್ಷಗಾನಕ್ಕೆ ಹೋಗಲಿ ಇವರು ಹೇಳುವುದು ಒಂದೇ ಭಸ್ಮಾಸುರ ತೋಟಿಗಿಂತ ಚಿಟ್ಟಾಣಿನೇ ಬಲ. ಚಿಟ್ಟಣಿ ಕೌರವನ ಪಾತ್ರ ಮಾಡಿದರೆ ` ಆದೋಡೆಲೆ ಸಂಜಯನೇ ನೀ ಕೇಳು' ಪದ್ಯಕ್ಕೆ ಶಿವರಾಮ ಹೆಗಡೆ ಅದ್ಭುತ ಅಭಿನಯ ನೀಡುತ್ತಿದ್ದರು ಎಂದು ಹೇಳುತ್ತಿದ್ದರು. ಇವರು ವರ್ತಮಾನದಲ್ಲಿ ಯಕ್ಷಗಾನವನ್ನು ನೋಡಿ ಭೂತಕಾಲದ ನೆನಪನ್ನು ಮೆಲುಕಾಡುತ್ತಿದ್ದರು. ಅದಕ್ಕಾಗಿಯೇ ಇವರನ್ನೂ ನಮ್ಮ ಬಳಗದಲ್ಲಿ ಸೇರಿಸಿ ಕೊಂಡಿದ್ದೇವು.
ಕುಮಟಾ, ಗೇರುಸೊಪ್ಪಾ, ಉಪ್ಪಳಿ, ಚಂದಾವರ, ಅಂಕೋಲಾ ಎಲ್ಲಿಯೇ ಆಟವಾಟಗಲಿ ನಮ್ಮ ಬಳಗ ಇದ್ದೇ ಇರುತ್ತಿತ್ತು.
ಯಕ್ಷಗಾನಕ್ಕೆ ಹೋದವರು ಬಣ್ಣದ ಮನೆಗೆ ಒಮ್ಮೆಯಾದರು ಭೇಟಿ ನೀಡುತ್ತಾರೆ. ಚೌಕಿಮನೆಗೆ ಹೋದರೆ ತಮಗೆ ಇಷ್ಟವಾದ ಕಲಾವಿದರನ್ನು ಮಾತನಾಡಿಸಿ ಕೊಂಡು ಬರುವುದು ರೂಢಿ. ಕಲಾವಿದನಿಗೂ ತಮ್ಮ ಅಭಿಮಾನಿಗಳು ಎಂಬ ಹೆಮ್ಮೆಯಿಂದ ಮಾತನಾಡಿಸುತ್ತಿದ್ದರು. ಚಿಟ್ಟಾಣಿ ಎದುರಿಗೆ `ನಿಮ್ಮ ಕೀಚಕನ ನೋಡಬೇಕು ಅಂತಾನೇ ನೂರು ಕಿಮೀ ದೂರದಿಂದ ಬಂದಿದ್ದೇವೆ ಬಹಳ ನಿರೀಕ್ಷೆಯನ್ನು ಇಟ್ಟು ಕೊಂಡಿದ್ದೇವೆ' ಎಂದು ಹೇಳುವ ರೂಢಿಯನ್ನು ಯಕ್ಷಗಾನ ಅಭಿಮಾನಿಗಳು ಬೆಳೆಸಿ ಕೊಂಡಿದ್ದಾರೆ.
ಕಲಾವಿದರಿಗೂ ಗೊತ್ತು ಇವರು ತಮ್ಮ ಮುಖ ಸ್ತುತಿಯನ್ನು ಮಾಡುತ್ತಾರೆಂದು. ಆದರೂ ಅಭಿಮಾನಿಗಳ ಮಾತಿಗೆ ಗೌರವ ನೀಡಿ ಅಲ್ಪಸ್ವಲ್ಪ ಕುಣಿಯುತ್ತಿದ್ದರು. ಆಟದ ಬಗ್ಗೆ ಏಷ್ಟು ಹೇಳಿದರೂ ಕಡಿಮೆಯೇ.
Monday, September 22, 2008
ಗುಡಿಯಾದರೇನು.. ಮನೆಯಾದರೇನು

ನಿದ್ರೆ ಹೇಳುವುದೊಂದು ಇಲ್ಲದಿದ್ದರೆ ಏನಾಗುತ್ತಿತ್ತು? ಎಲ್ಲರು ಹುಚ್ಚರಾಗುತ್ತಿದ್ದರು. ನಿದ್ರೆ ಬೇಕೆ ಬೇಕು. ನಿದ್ರೆಯನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದರ ಆಲಿಂಗನವೇ ಅಂತಹದು. ಬಸ್, ರೈಲು, ಬಸ್ ಸ್ಟಾಂಡ್, ಕಚೇರಿ, ಮನೆಯಲ್ಲಿ ಹಾಸಿಗೆ ಮೇಲೆ ಹೀಗೆ ಎಲ್ಲಿ ಬೇಕೆಂದರೆ ಅಲ್ಲಿ ನಿದ್ರೆಯನ್ನು ಮಾಡಬಹುದು.
ರಾಜಕಾರಣಿಗಳಿಗೆ ಹಾಗಲ್ಲ ಅವರಿಗೆ ಮನೆಯಲ್ಲಿ ನಿದ್ರೆ ಮಾಡಲಿಕ್ಕೆ ಟೈಮ್ ಇರುವುದಿಲ್ಲ. ಅದಕ್ಕಾಗಿ ಇವರು ನಿದ್ರೆ ಮಾಡಲಿಕ್ಕೆ ಆರಿಸಿಕೊಳ್ಳುವ ಸ್ಥಳವೆಂದರೆ ಸಭೆ, ಸಮಾರಂಭ, ವಿಧಾನಸಭೆ ಕಾರ್ಯಕಲಾಪ.
ನಿದ್ರೆ ಮಾಡುವ ರಾಜಕಾರಣಿಗಳಲ್ಲಿ ನಮ್ಮ ದೇವೇಗೌಡರು ಭಾರತ ದೇಶದಲ್ಲೆ ವಿಶ್ವವಿಖ್ಯಾತರು. ಇವರು ದೇಶದ ಪ್ರಧಾನಿಯಾಗಿದ್ದಾಗಲೇ ಕಲಾಪದಲ್ಲಿಯೇ ಗೋರಕೆ ಹೊಡೆದಿದ್ದರಂತೆ. 24 ಇನ್ ಟು7 ರಾಜಕಾರಣ ಮಾಡುವ ಗೌಡರಿಗೆ ಎಲ್ಲೆಂದರಲ್ಲಿ ನಿದ್ರೆ ಬರುತ್ತದೆ. ಕೆಲವು ಜನ ಮಿತ್ರರು ಅಂತಾರೆ ಗೌಡ್ರು ನಿದ್ರೆ ಮಾಡ್ತಿಲ್ಲ. ದೇಶದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದು.
ಆದ್ರೆ ದೇವರ ಸನ್ನಿಧಿಗೆ ಹೋದರು ಗೌಡರು ತೀವ್ರ ಯೋಚನಾ ಮಗ್ನರಾಗಿ ನಿದ್ರೆಗೆ ಜಾರುತ್ತಾರೆ ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ.