Wednesday, August 5, 2009

ಹೃದಯಂತರಾಳದ ಪ್ರೇಮಾಲಾಪ

ಯಾಕೋ, ಎನೋ, ಇತ್ತೀಚೆಗೆ ಮನಸ್ಸು ಭಾರವಾಗುತ್ತಿದೆ. ಒಂಟಿ ಎನ್ನುವ ಭಾವ. ಎಲ್ಲೋ ಒಂದು ಕಡೆ ಸಂಗಾತಿ ಬೇಕೆಂಬ ಬಯಕೆ, ರಾಜರ ಕತೆ ಬೇಡ ರಾಣಿಯರ ಕತೆಯೇ ಇಷ್ಟವಾಗುತ್ತಿದೆ. ಸುಖದ ಬಗ್ಗೆ ಆತುರ. ದೇಹದ ಸುಖಕ್ಕಿಂತ ಮನಸ್ಸು ಮನಸ್ಸು ಬೆಸೆಯುವ ಸುಖ ಬೇಕು.
ಅಂತರಂಗದ ಭಾವವನ್ನು ಬಿಚ್ಚಿಟ್ಟರೆ ಕಣ್ತುಂಬ ನೋಡುವ, ಅರ್ಥೈಯಿಸಿ ಕೊಳ್ಳುವ ಸಮಾನ ಮನಸ್ಕಳು ಬೇಕು. ಎಲ್ಲಿದ್ದಾಳೆ ಅವಳು? ಹುಡುಕಾಡಿದೆ. ಕಣ್ಣೆದುರಿಗೆ ಇದ್ದಳು, ಸಿಕ್ಕಳು, ನನಗಿಂತ ಚಿಕ್ಕವಳು, ಮಾತು ಕಡಿಮೆ, ಒಳ್ಳೆಯ ಮನಸ್ಸು. ಚೆಲುವಿ. ನನಗೆ ಕಂಡಿರುವುದು ಹಾಗೆ ಉಳಿದವರಿಗೆ ಅವಳು ಚೆಲುವೆ. ನನಗೆ ಕಂಡಿರುವುದು ಅವಳ ಬಾಹ್ಯ ಸೌಂದರ್ಯ ಒಂದೇ ಅಲ್ಲ; ಆಂತರಂಗಿಕ ಸೌಂದರ್ಯ. ನನ್ನೆದುರು ಅವಳು ಹಾಯ್ದೆರೆ ಮಿಂಚಿನ ಸಂಚಲನ ನನ್ನೊಳಗೆ. ನನ್ನ ಉನ್ಮಾದತೆಯನ್ನು ಹೊರಚೆಲ್ಲದೆ ಸ್ಥಿಮಿತದಲ್ಲಿದ್ದೆ. ದಿನಾಲೂ ಕಾಲೇಜಿನಲ್ಲಿ ಐದು ನಿಮಿಷ ಮಾತುಕತೆ. ಅದು ಉಭಯ ಕುಶಲೋಪರಿಗೆ ಸೀಮಿತವಾಗಿತ್ತು. ನನ್ನೆದುರು ಅವಳು ನಿಂತಾಗ, ಅವಳ ಗುಂಡುಗಿನ ಆ ಕಣ್ಣ ದರ್ಪಣದಲ್ಲಿ ನನ್ನ ಬಿಂಬ ಕಾಣುವಾಗ, ಆ ಬಿಂಬ ಸದಾ ನನ್ನದೇ ಆಗಿರಬೇಕೆಂಬ ಆಕಾಂಕ್ಷೆ ನನ್ನದು. ನನಗೆ ಅನ್ನಿಸಿದ್ದನ್ನು ಅವಳಿಗೆ ನೇರವಾಗಿ ಹೇಳಲಿಕ್ಕೆ ಆಗಲಿಲ್ಲ. ಅದಕ್ಕಾಗಿ ಈ ಪತ್ರ....
ಗೆಳತಿ..
ಎಲ್ಲಿಂದಲೋ ತೇಲಿ ಬರುವ ಆ ಮಗುಳು ನಗೆಯ ಅಲೆ, ನನ್ನ ಹೃದಯ ಕಡಲಿಗೆ ಅಪ್ಪಳಿಸುತ್ತಿದೆ. ನಿನ್ನ ಕಣ್ಣೆಂಬ ಕತ್ತಿ ನನ್ನ ಹೃದಯವನ್ನು, ಸೀಳಿದೆ. ಅಲ್ಲಾ ಇರಿದಿದೆ. ಆ ನಿನ್ನ ನೋಟವೇ ಹಾಗೆಂದು ಕಾಣುತ್ತದೆ. ಅದಕ್ಕೆ ಖಡ್ಗದ ಹರಿತವಿದೆ. ಸೀಳುವ ಸಾಮರ್ಥ್ಯವಿದೆ. ಅದು ಪ್ರೇಮದ ಇರಿತ. ನನಗ್ಯಾಕೋ ಇದೇ ಹಿತವೆನಿಸಲಿಕ್ಕೆ ತೊಡಗಿದೆ ಗೆಳತಿ. ಅಂದು ನೀ ನಿನ್ನ ಗೆಳೆಯರ ಬಳಗದ ನಡುವೆ ನಿಂತು ಕೊಂಡಾಗ ಅವರು ಮುಳ್ಳುಗಳ ತೆರದಿಂ ಕಂಡರೂ ನೀ ಮಾತ್ರ ಗುಲಾಬಿಯಂತೆ ಕಂಡೆ. ನಿಜ ಗೆಳತಿ ನಮಗೆ ಇಷ್ಟವಾಗುವುದೆಲ್ಲ ಸುಂದರವೆಂದು ಕಾಣುತ್ತೆ.
ಒಮ್ಮೊಮ್ಮೆ ಅನ್ಸುತ್ತೆ ಅತಿ ಕುಲವತಿ ನೀನು, ಪೃಥ್ವಿ ಪಾಲಕ ನಾನು, ಹಸನಾದ ನೆಲ ನೀನು. ಹೆಣ್ಣನ್ನು ನೆಲಕ್ಕೆ ಹೊಲಿಸುತ್ತಾರೆ. ಅಂತಹ ಭೂಮಿಯ ಒಡೆಯ ನಾನಾಗ ಬೇಕು. ಇದು ಸ್ವಲ್ಪ ಹೆಚ್ಚಾಯಿತೆನೋ ಅಲ್ವಾ? ತಲಾತಲಾಂತರದಿಂದ ಬಂದ ಭ್ರಮೆ ನಾನು ಗಂಡಸು. ನನ್ನದೇ ನಡೆಯಬೇಕೆಂದು. ತಪ್ಪಾಯಿತು. ಆದರೂ ನಿನ್ನಲ್ಲಿ ಬೇಡಿಕೊಳ್ಳುತ್ತೇನೆ. ನಿನ್ನ ಹೊಲಕ್ಕೆ ನನ್ನನ್ನೇ ಒಡೆಯನಾಗಿ ಮಾಡಿಕೋ ಗೆಳತಿ.
ನೀನಿಲ್ಲದ ಬಾಳನ್ನು ಕಲ್ಪಿಸಿಕೊಳ್ಳಲಿಕ್ಕೂ ಆಗುತ್ತಿಲ್ಲ. ಮುಂಜಾನೆ ರವಿ ಮೂಡುವ ವೇಳೆಯಲ್ಲಿ, ಚಿಲಿಪಿಲಿ ಎಂದು ಹಕ್ಕಿಗಳು ಗೂಡು ಬಿಡುವ ಕಾಲದಲ್ಲಿ, ನೀ ನಡೆದು ಬರುವ ಹಾದಿಯಲ್ಲಿ, ನನ್ನ ಹೃದಯ ಕುಸುಮವನ್ನು ಹಾಸಿರುವೆ ಡಿಯರ್‌. ನಿನ್ನ ಹೃದಯದಲ್ಲಿ ನನ್ನ ಹೃದಯ ಸೇರಿಸಿಕೋ ಒಂಚೂರು ಕೈ ನೀಡು. ಪ್ರೇಮ ಪಾಶಕ್ಕೆ ಬಿದ್ದಿರುವ ನನ್ನನ್ನು ಬಚಾವ್‌ ಮಾಡು ಸಖಿ.
ಯಾಕೆ ಇಷ್ಟು ಮೌನ ? ಮಾತನಾಡು ಮೊಗ್ಗೆ ನೀನು ಮೌನ ಒಡೆದು ನನ್ನಲ್ಲಿ ಮಾತಿನ ಮುತ್ತನ್ನು ಉದುರಿಸು. ಆ ಮುತ್ತನ್ನು ಹಿಡಿಯುವುದಕ್ಕಾಗಿ ಕೈ ಚಾಚಿ ಕಾಯುತ್ತಿದ್ದೇನೆ. ನಿನ್ನ ಮೌನಕ್ಕೆ ನನ್ನ ಕೂನಿ ಮಾಡುವ ತಾಕತ್ತಿದೆ. ಸುಮ್ಮನಿದ್ದು ಸಾಯಿಸಬೇಡ. ಸತಾಯಿಸಬೇಡ. ನನ್ನನ್ನು ಒಪ್ಪು, ಬಿಗಿದಪ್ಪು ಅನ್ನುವುದಿಲ್ಲ. ನಿನ್ನ ಸಾಂಗತ್ಯವಷ್ಟೇ ಸಾಕು.
ಗೊತ್ತಾ ಗೆಳತಿ ನಿನಗೆ? ಎಂದು ನೀನು ನನ್ನೆದೆಯ ಕದವನ್ನು ತೆಗೆದು ಒಳಬಂದೆಯೋ ಅಂದೆ ನನ್ನ ನಿದ್ದೆಯನ್ನು ಕದ್ದೆಯಲ್ಲೆ! ಕನಸಲ್ಲೂ ನಾನು ನಿನ್ನ ನೋಡಬಾರದೇನೆ? ಹ್ಞಾಂ ನೀನು ನಿದ್ದೆ ಕದ್ದದ್ದೆ ಚೊಲೋ ಆಯಿತು ಚೆಲುವೆ! ನೀನೆಂದು ನನ್ನೊಳಗೆ ಬಂದೆಯೋ ಅಂದೇ ನಾನೇ ನಿದ್ದೆ ಬಿಟ್ಟಿದ್ದೆ. ನೀನು ದಿಂಬಿಗೆ ಕೆನ್ನೆ ಅನಿಸುವಾಗ ನನ್ನನ್ನೊಮ್ಮೆ ನೆನಸಿಕೋ. ಯಾಕೆ ಗೊತ್ತಾ? ನನ್ನ ಕೋಣೆಯ ಕಿಟಿಕಿಯ ಕಂಡಿಯಲ್ಲಿ ನೀ ಬರುತ್ತೀಯಾ ಎಂದು ಕಾಯುತ್ತಾ ಕುಳಿತಿರುತ್ತೇನೆ. ನಿದ್ದೆ ಮಾಡಿ ಕನಸು ಬಿದ್ದು, ಆ ಕನಸಿನಲ್ಲಿ ನೀ ಬಂದು, ಕಣ್ಣುಬಿಟ್ಟಾಗ ನೀನಿಲ್ಲದೇ ಹೋದರೇ? ನಿರಾಶೆ. ಅದಕ್ಕೆ ಗೆಳತಿ ಕಣ್ರೆಪ್ಪೆಯನ್ನು ಮುಚ್ಚದೆ ಕುಳಿತಿರುತ್ತೇನೆ.
ಇತ್ತೀಚೆಗೆ ನನ್ನ ಗಮನಿಸಿದ್ದೀಯಾ ? ಮೊದಲೆಲ್ಲ ನಾನು ಅಶಿಸ್ತಿನ ಮುದ್ದ್ಡೆಯಾಗಿದ್ದೆ. ಮುಖದ ಮೇಲೆ ಕೂದಲು ಹುಟ್ಟಿದ ಮೇಲೆ ಬ್ಲೇಡನ್ನೇ ತಾಗಿಸದೆ ಇದ್ದ ನಾನು ಈಗ ದಿನಾಲೂ ಶೇವಿಂಗ್‌ ಮಾಡ್ತೇನೆ. ಉಡುಗೆ ತೊಡುಗೆಗಳು ಮಾರ್ಡನ್‌ ಆಗಿದೆ. ನಿನ್ನಿಂದಾಗಿಯೇ ಇವೆಲ್ಲ ಪ್ರಿಯೆ. ನಾನು ಹೇಳುವುದೆಲ್ಲ ನಿನಗೆ ನಾಟಕ, ಸಿನಿಮಾ ಡೈಲಾಗಿನಂತೆ ಕಾಣಬಹುದು. ಆದರೆ ಇದು ನನ್ನ ಒಳಗಿನ ಭಾವನೆ ಗೆಳತಿ.
ನಾನೊಂದು ರೀತಿ ನೀರಾಗಿ ಬಿಟ್ಟಿದ್ದೇನೆ. ಅದು ಪ್ರೇಮವೆಂಬ ಅಮೃತದ ನೀರು. ಯಾವ ಪಾತ್ರೆಯಲ್ಲೂ ಹಿಡಿಯುತ್ತದೆ ನೀರು. ಅದನ್ನು ನಿನ್ನ ಪಾತ್ರೆಗೆ ಹಾಕಿಕೋ. ಪ್ರೇಮ ಜ್ಯೋತಿಯನ್ನು ಬೆಳಗಿಸುವುದು ನಿನ್ನ ಕೈಯಲ್ಲಿದೆ. ಆ ಜ್ಯೋತಿಗೆ ನೀನು ಎಣ್ಣೆಯಾಗು. ನಾ ಉರಿವ ನೆಣೆಯಾಗಿರುವೆ. ನೀನಿಲ್ಲದೆ ನನಗೇನಿದೆ. ನೀ ಹೂಂ ಎಂದರೆ ಸ್ವರ್ಗ. ಅದುವೇ ನನಗೆ ಸ್ವರ್ಗ ಇಲ್ಲಾಂದ್ರೆ ನನ್ನ ಬದುಕೆಲ್ಲ ನರಕ ಗೆಳತಿ. ಕೈ ಚಾಚಿದ್ದೇನೆ. ಮಂಡಿಯೂರಿ ತಲೆ ಬಾಗಿದ್ದೇನೆ. ನಿನ್ನ ಕೋಮಲ ಕರದಿಂದ ಶಿರವನ್ನೊಮ್ಮೆ ನೇವರಿಸಿ ಕೈ ಹಿಡಿದೆತ್ತು. ಎತ್ತುತ್ತೀಯಾ? ಎತ್ತೇ ಎತ್ತುತ್ತೀಯಾ, ಬಂಡೆಯಂತಹ ಭರವಸೆಯಿಂದ ಬೇಡುವೆ ನೀಡು ನೀ ಪ್ರೇಮ ಭಿಕ್ಷೆ.
ನಿನ್ನ ಉತ್ತರಕ್ಕಾಗಿ ಕಾಯುವ ಪ್ರೇಮ ಭಿಕ್ಷು.

9 comments:

ಮೂರ್ತಿ ಹೊಸಬಾಳೆ. said...

ನಾಗರಾಜಣ್ಣ sorry ನಾಗರಾಜರೇ,
ಬ್ರಹ್ಮಚಾರಿಗಳು ಈ ರೀತಿ ಬರೆದರೆ ಮನಸ್ಸಿನ ಮೂಲೆಯಲ್ಲೆಲ್ಲೋ ಆತಂಕ ಕಾಡುತ್ತದೆ.ಆದಷ್ಟು ಬೇಗ ಅವರು ಇದನ್ನ ಓದಲಿ, ನಿಮ್ಮ ಮುಂದಿನ ಬ್ಲೊಗ್ ನಲ್ಲಿ " ಏನು ಸುಕೃತವಾ ಮಾಡಿದೆನು|ಮೀನಾಂಕ ಎಂಬುವ ಎನ್ನ ದಯದಿ ನೋಡಿದನೊ|| ಈ ನಾರಿ ಕೃಪೆಯಾದಳೆನಗೆ| ಮತ್ತಿನ್ನೇಸು ಧನ್ಯನೋ ಈಕೆ ಬಂದಳೆನ್ನೆಡೆಗೆ|| ಎಂದು ಬರೆಯುವಂತಾಗಲಿ.

ಸಾಗರದಾಚೆಯ ಇಂಚರ said...

ನಾಗರಾಜ
ನಿನ್ನ ಪ್ರೇಮ ಪತ್ರ ಆದಷ್ಟು ಬೇಗ ನಿನ್ನ ಪ್ರೆಮಿಕೆಗೆ ಸಿಗುವಂತಾಗಲಿ. ಬಲುಬೇಗ ನೀನೊಂದು ಸಿಹಿ ಸುದ್ದಿ ಕೊಡು.
ಪತ್ರ ತುಂಬಾ ಸರಳ ಹಾಗೂ ಸುಂದರವಾಗಿದೆ

ಮಾವೆಂಸ said...

ಉಹ್ಞೂ... ಅವಳು ನಿನ್ನ ಬ್ಲಾಗ್ ನೋಡದು ಅನುಮಾನ. ಹಾಗಾಗಿ ಪ್ರಿಂಟ್‌ಔಟ್ ತೆಗೆದು ಪೋಸ್ಟ್ ಮಾಡು!!!

thandacool said...

ಹೀಗೆ ಬರೆದ ಪತ್ರ. ಗಮ್ಮತ್ತಾಗಿದ್ದು ಅಂದ್ರೆ. ಬರೆದಿದಕ್ಕೆ ಖುಷಿಯಾಗ್ತು.

Ranjita said...

ಚೆನ್ನಾಗಿದೆ ..ಪತ್ರ ಬ್ಲಾಗ್ ನಲ್ಲಿ ಬರೆದಿದ್ದೀರಿ .. ನಿಮ್ಮ ಹುಡುಗಿಗೆ ಬ್ಲಾಗ್ ಲಿಂಕ್ ಕಳಿಸಿ ಕೊಡಿ :) ಗುಡ್ ಲಕ್

thandacool said...

ಯಾವ ಹುಡುಗಿಯು ಇಲ್ವಲ್ಲ????? ಯಾರಿಗೆ ಕಳುಹಿಸಲಿ....

thandacool said...
This comment has been removed by the author.
shivu.k said...

ನಾಗರಾಜ್ ಸರ್,

ಪತ್ರ ತುಂಬಾ ಚೆನ್ನಾಗಿದೆ ಮತ್ತು ಕಾವ್ಯಾತ್ಮಕವಾಗಿ ಭಾವನಾತ್ಮಕವಾಗಿಯೂ ಕೂಡಿ ಮನತಟ್ಟುತ್ತದೆ...

ಗೌತಮ್ ಹೆಗಡೆ said...

:)

FEEDJIT Live Traffic Feed